ಕಲ್ಪ ಮೀಡಿಯಾ ಹೌಸ್ | ಸೊರಬ |
ಇಂದಿನ ಪತ್ರಕರ್ತರಿಗೆ ಮಾದರಿಯಾಗುವ ರೀತಿಯಲ್ಲಿ ಪ್ರಮಾಣಿಕತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿರುವ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಅವರನ್ನು ಸಂತೋಷ ಹಾಗೂ ತೃಪ್ತಿದಾಯಕ ವಿಚಾರವಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜೆ.ಎಸ್. ನಾಗರಾಜ್ ಜೈನ್ ಹೇಳಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಅವರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಆದರ್ಶಪ್ರಾಯರಾಗಿರುವ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಅವರಿಗೆ ತಾಲೂಕು ಆಡಳಿತದಿಂದ ಸ್ವಾತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಕ್ಷೇತ್ರ ವಿಭಾಗದಲ್ಲಿ ಸನ್ಮಾನಿಸಿರುವುದು ಪತ್ರಕರ್ತ ಸಮೂಹಕ್ಕೆ ಸಂದ ಗೌರವವಾಗಿದೆ ಎಂದರು.
ಸುಮಾರು 22 ವರ್ಷಗಳಿಂದ ಸ್ವಾಮಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಸ್ತು ನಿಷ್ಟ ವರದಿ, ಗ್ರಾಮೀಣ ಭಾಗದ ನೂರಾರು ಸಮಸ್ಯೆಗಳನ್ನು ವಿಶೇಷ ವರದಿಗಳ ಮೂಲಕ ಬೆಳಕು ಚೆಲ್ಲುವ ಕೆಲಸ ಮಾಡಿ, ಆಡಳಿತ ಯಂತ್ರ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯನ್ನು ಹವ್ಯಾಸವನ್ನಾಗಿ ರೂಢಿಸಿಕೊಂಡು ಬೆಳೆದಿದ್ದಾರೆ. ಹಿರಿಯ ಮತ್ತು ಕಿರಿಯ ಪತ್ರಕರ್ತರೊಂದಿಗೆ ಅಜಾತಶತ್ರುವಾಗಿರುವ ಸ್ವಾಮಿ ಅವರನ್ನು ತಾಲೂಕು ಆಡಳಿತ ಗುರುತಿಸಿರುವುದು ಸ್ವಾಗತಾರ್ಹ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ, ಪತ್ರಿಕಾ ವೃತ್ತಿ ಎಂಬುದು ಅತ್ಯಂತ ಜವಾಬ್ದಾರಿಯುತ ಕ್ಷೇತ್ರವಾಗಿದೆ. ಸಮಾಜದ ನೋವು-ನಲಿವಿನ ಜೊತೆಗಿರುವ ಗ್ರಾಮೀಣ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಭದ್ರಾವತಿಯಲ್ಲಿ ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪತ್ರಿಕಾ ಕ್ಷೇತ್ರದೊಂದಿಗಿನ ನಂಟು ಪತ್ರಕರ್ತನಾಗಿ ರೂಪಿಸಿತು. ತಮ್ಮನ್ನು ತಾಲೂಕು ಆಡಳಿತ ಗುರುತಿಸಿರುವುಕ್ಕೆ ಹಾಗೂ ಆಯ್ಕೆ ಮಾಡಿದ ಸಮಿತಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಜೊತೆಗೆ ತಮಗೆ ನೀಡಿದ ಪುರಸ್ಕಾರ ತಾಲೂಕಿನ ಪತ್ರಕರ್ತರಿಗೆ ಸಲ್ಲುತ್ತದೆ ಎಂದರು.
ಪತ್ರಕರ್ತರ ಸಂಘದ ತಾಲೂಕು ಉಪಾಧ್ಯಕ್ಷ ಮುಹಮ್ಮದ್ ಆರೀಫ್, ಕಾರ್ಯದರ್ಶಿ ಟಿ. ರಾಘವೇಂದ್ರ, ಸಹ ಕಾರ್ಯದರ್ಶಿ ನೋಂಪಿ ಶಂಕರ್, ಪತ್ರಕರ್ತರಾದ ರಾಜೇಂದ್ರ ಜೈನ್, ರಾಘವೇಂದ್ರ ಭಾಪಟ್, ದತ್ತಾ ಸೊರಬ, ಮಧುಕೇಶ್ವರ, ವಿಜಯ ಗೌಳಿ ಸೇರಿದಂತೆ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post