ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದಾದ್ಯಂತ 75ನೆಯ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಹಲವು ಕಡೆಗಳನ್ನು ವಿಭಿನ್ನ ರೀತಿಯಲ್ಲಿ ಸಂಭ್ರಮಿಸಲಾಗಿದ್ದು, ಇಂತಹ ಸಾಲಿಗೆ ತಾಲೂಕಿನ ಕೆರೆಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೂ ಸಹ ಸೇರಿದ್ದಾರೆ.

ತಾಲೂಕಿನ ಕೆರೆಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು 75 ವರ್ಷ ತುಂಬಿದ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಅವರು ಕಲಿತ ಕೆರೆಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿನೂತನ ಧ್ವಜಕಟ್ಟೆ ನಿರ್ಮಿಸಿ ಮಾದರಿಯಾಗಿದ್ದಾರೆ.
ಶಾಲೆಯ ಅಂದ ಹೆಚ್ಚಿಸುವ ಜೊತೆಗೆ ಶಿಕ್ಷಣ ನೀಡಿದ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬರೋಬ್ಬರಿ 1 ಲಕ್ಷ ರೂ. ಮೊತ್ತವನ್ನು ಹತ್ತಾರು ಹಳೆಯ ವಿದ್ಯಾರ್ಥಿಗಳು ಭರಿಸಿ ಪ್ರಸಕ್ತ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಬಯಸುತ್ತಾರೆ. ಆದರೆ, ಬಹಳಷ್ಟು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಗುಣಮಟ್ಟದಿಂದ ಕೂಡಿವೆ. ನಾವು ಓದಿದ ಈ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಅವಕಾಶವಾಗಬೇಕು.
75ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ವಿಶೇಷವಾಗಿ ಅಷ್ಟ ಭುಜ ದ್ವಜ ಸ್ತಂಭ ನಿರ್ಮಾಣ ಮಾಡಲು ನಿರ್ಧರಿಸಲಾಯಿತು.
-ನಾಗರಾಜ ಡಿ. ಶೇಟ್
ಶಾಲಾಭಿವೃದ್ಧಿ, ಉಸ್ತುವಾರಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಇದೇ ಸಂದರ್ಭದಲ್ಲಿ 250 ಊಟದ ತಟ್ಟೆಗಳನ್ನು ಕೊಡುಗೆ ನೀಡಿದ್ದಾರೆ.
ಧ್ವಜಕಟ್ಟೆಗೆ ಸಹಕರಿಸಿದ ಹಳೆ ವಿದ್ಯಾರ್ಥಿಗಳಾದ ನಾಗರಾಜ ಡಿ. ಶೇಟ್, ಮಧು ಎಸ್., ರಜಿತ್ಗೌಡ, ಸರ್ಫರಾಜ್, ಜಹೀರ್ ಅಹ್ಮದ್, ಬಿ.ರಮೇಶ್, ಎಸ್.ವಿ. ವಿನಾಯಕ, ಕೆ.ಎಂ. ಕೃಷ್ಣಮೂರ್ತಿ, ಬಿ.ವಿ. ನಿರಂಜನಕುಮಾರ್, ಮಾಧವ ದೀಕ್ಷಿತ್, ಟಿ.ಎನ್. ಅರುಣಕುಮಾರ್, ರೂಪ ಎಂ. ಪಾಟೀಲ್, ಡಿ.ಎಂ. ಬಾಲಚಂದ್ರ, ಎನ್.ಎನ್. ರಮೇಶ್, ಮುಖ್ಯಶಿಕ್ಷಕ ವೀರಭದ್ರ ಗೌಡ, ಶಿಕ್ಷಕ ಪಿ.ಬಿ. ರಾಜಶೇಖರ ಅವರುಗಳಿಗೆ ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಅಭಿನಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















