ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ನಗರದ ಶ್ರೀರಾಮ ಸೇವಾ ಗುಡಿಗಾರ ಸಮಾಜಾಭಿವೃದ್ಧಿ ಸಂಘ ಮತ್ತು ಅಖಿಲ ಭಾರತ ಗುಡಿಗಾರ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 18ರಂದು ಸೀತಾರಾಮಚಂದ್ರಸ್ವಾಮಿಯ 12ನೇ ವಾರ್ಷಿಕೋತ್ಸವ ಮತ್ತು ಮುಖ್ಯ ಪ್ರಾಣದೇವರ ಪುನರ್ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶೃಂಗೇರಿ ಶಾರದಾ ಪೀಠದ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿ ಮತ್ತು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳ ಆಶೀರ್ವಾದದದೊಂದಿಗೆ, ವೇ. ಬ್ರ. ಶ್ರೀನಿಧಿ ದತ್ತಾತ್ರೇಯಭಟ್ಟರು ಮತ್ತು ಸತ್ಯನಾರಾಯಣರಾವ್ ಅವರ ಅರ್ಚಕತ್ವದಲ್ಲಿ ನಾಳೆ ಪ್ರಾತಃಕಾಲದಿಂದ ಶ್ರೀದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಗಣೇಶಪೂಜೆ, ಪುಣ್ಯಾಹ, ನಾಂದಿ, ಮಾತೃಕಾ ಪೂಜೆ, ಕೌತುಕ ಬಂಧನ, ಅಧಿವಾಸ ಹೋಮ, ಆವರಣ ದೇವತಾ ಹೋಮ, ಪರಿವಾರ ದೇವತಾ ಹೋಮ, ಧ್ವಜ ಹೋಮ, ಕಲಶಾಭಿಷೇಕ, ಧ್ವಜಾರೋಹಣ, ಪೂರ್ಣಾಹುತಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಸಾಗರದ ಅಖಿಲ ಭಾರತ ಗುಡಿಗಾರ ಸಮಾಜ ಅಧ್ಯಕ್ಷ ಹರೀಶ್ ಎಲ್. ಶೆಟ್ಟಿ (ಕುಮಟಾ) ಇವರು ನೂತನ ಸಭಾಭನದಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ ರಂಗ ಪೂಜಾ, ಮಹಾಬಲಿ, ರಥಬಲಿ, ರಥಾರೋಹಣ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ ೪ಗಂಟೆಯಿಂದ ನಗರದ ಪ್ರಮುಖ ಬೀದಿಯಲ್ಲಿ ರಥೋತ್ಸವ, ಮೃಗಬೇಟೆ, ರಾಜೋಪಚಾರ, ಅವಭೃತ, ಓಕಳಿ, ಧ್ವಜಾರೋಹಣ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















