ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಮಾರ್ಚ್ 20ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶಕ್ಕೆ ತಾಲೂಕಿನ ರೈತರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ. ಭಾಸ್ಕರ್ ಬರಗಿ ಕರೆ ನೀಡಿದರು.
ತಾಲೂಕಿನ ಉಳವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ವಿವಿಧ ರೈತಪರ ಸಂಘಟನೆಗಳ ವತಿಯಿಂದ ಜಾಥಾ ನಡೆಸಿ, ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತ ವಿರೋಧಿ ಧೋರಣೆ ಅನುಸರಿಸಿಸುತ್ತಿವೆ. ಕಾರ್ಪೋರೇಟ್ ಸಂಸ್ಥೆಗಳಿಗೆ ತೃಪ್ತಿಪಡಿಸುವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿರುವುದು ಖಂಡನೀಯ. ದೆಹಲಿಯಲ್ಲಿ ಸುಮಾರು 100 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರನ್ನು ಕೇಂದ್ರ ಬಿಜೆಪಿ ಸರ್ಕಾರ ಕನಿಷ್ಟ ಅಹವಾಲನ್ನು ಸ್ವೀಕರಿಸುವ ಸೌಜನ್ಯ ತೋರುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಉಳುವವನೇ ಹೊಲದ ಒಡೆಯ ಹಕ್ಕನ್ನು ಕಿತ್ತು ಉಳ್ಳವರಿಗೆ ಭೂಮಿ ನೀಡುವಂತೆ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ರೈತರನ್ನು ಜೀತಕ್ಕೆ ತಳ್ಳಲು ಹೊರಟಿರುವ ಸರ್ಕಾರಗಳ ನಡೆ ಖಂಡನೀಯ. ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚ್ ವತಿಯಿಂದ ನಡೆಯಲಿರುವ ಸಮಾವೇಶಕ್ಕೆ ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯದುವೀರ್ ಸಿಂಗ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಅನೇಕ ರೈತ ಮುಖಂಡರು ಪಾಲ್ಗೊಳ್ಳಲಿದ್ದು, ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಹೋರಾಟ ನೇತೃತ್ವ ವಹಿಸಿದ್ದಾರೆ. ತಾಲೂಕಿನಿಂದ ರೈತರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪಾಲ್ಗೊಳ್ಳುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳ ಹಿಂಪಡೆಯಲು ಒಗ್ಗಟ್ಟಿನಿಂದ ಆಗ್ರಹ ಮಾಡಬೇಕಿದೆ ಎಂದರು.
ಯುವ ಮುಖಂಡ ರವಿ ಬರಗಿ ಜಾಥಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಉಳವಿ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಶಿಗ್ಗಾ ಗ್ರಾಪಂ ಅಧ್ಯಕ್ಷ ಪ್ರಭಾಕರ ಶಿಗ್ಗಾ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ ಹೆಗಡೆ, ಬಿಎಸ್ಎನ್ಡಿಪಿ ಜಿಲ್ಲಾಧ್ಯಕ್ಷ ನಾಗರಾಜ ಕೈಸೋಡಿ, ಪ್ರಮುಖರಾದ ಜಗದೀಶ ಕುಪ್ಪೆ, ಜಯಪ್ರಕಾಶ ಚಿಮಣೂರು, ರಮೇಶ್ ಹಾಲಗಳಲೆ, ಗಣಪತಿ, ಗಣಪತಿ ಹೊಸೂರು, ಶೇಖರಪ್ಪ, ಕುಮಾರ್, ಚೌಡಪ್ಪ ಕೈಸೋಡಿ, ಮಂಜು ಭೈರೇಕೊಪ್ಪ, ಚನ್ನಪ್ಪ ಕಾನಹಳ್ಳಿ, ಅಣ್ಣಪ್ಪ ವೃತ್ತಿಸಾಲು, ಪುಟ್ಟರಾಜ ಭೈರೆಕೊಪ್ಪ, ವಿಜಯ ಹೆಗ್ಗೋಡು, ಮಂಜು ಹೆಗ್ಗೋಡು ಸೇರಿದಂತೆ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post