ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಂತರ ಇತಿಹಾಸ ಪೂರ್ವದಿಂದಲೂ ಪಾರಂಪರಿಕವಾಗಿ ಬಂದಿರುವ ರೈತರಗ್ರಾಮೀಣ ಕ್ರೀಡೆಯಾದಂತಹ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸರ್ಕಾರ ಅನುಮತಿ ನೀಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಜನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿಯ ಜಿಲ್ಲಾ ಕಮಿಟಿ ಸದಸ್ಯ ಹಾಗೂ ಗೋ ಸಂರಕ್ಷಣಾ ಸಮಿತಿ ಅಧ್ಯಕ್ಷ ಜೆ. ಚಿದಾನಂದ ಗೌಡ ಜೇಡಗೇರಿ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ವರ್ಷವಿಡಿ ಜಮೀನಿನಲ್ಲಿ ಉಳುಮೆ ಮಾಡಿ ದೀಪಾವಳಿ ಸಂದರ್ಭದ ಬಿಡುವಿನ ವೇಳೆಯಲ್ಲಿ ವಿಷೇಶ ದೀಪಾವಳಿಯನ್ನು ಆಯೋಜನೆ ಮಾಡಿಕೊಳ್ಳುತ್ತಾರೆ. ಈ ಕ್ರೀಡೆ ತಲಾ-ತಲಾಂತರದಿಂದ ಬಂದಿದ್ದು, ಇಲ್ಲಿ ಕೇವಲ ಮನೋರಂಜನೆ ಮಾತ್ರ ಇರದೆ ಜನರ ಒಗ್ಗಟ್ಟು, ಪ್ರೀತಿ, ವಿಶ್ವಾಸ, ಸಮನ್ವಹತೆ ಸಂಪ್ರದಾಯ ಎಲ್ಲವೂ ಕೂಡಿರುತ್ತದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುವುದು ಸರಿಯಲ್ಲ ಎಂದರು.
ಅನೇಕ ದೇಶಿಯ ಹಾಗೂ ವಿದೇಶಿಯ ಕ್ರೀಡೆಗೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಕ್ರೀಡೆಯನ್ನು ನಡೆಸುತ್ತಿದೆ. ಆದರೆ, ದೇಶಕ್ಕೆ ಹಗಲು ರಾತ್ರಿ ದುಡಿದು ಅನ್ನ ನೀಡುವ ರೈತರ ಕ್ರೀಡೆಯಾದ ಹೋರಿ ಹಬ್ಬವನ್ನು ಮಾಡುವುದಕ್ಕೆ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ರೈತರು ರಸ್ತೆಯ ಇಕ್ಕೆಲಗಳಲ್ಲಿ ಹಬ್ಬವನ್ನು ಆಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನಾಹುತಗಳಾಗುತ್ತವೆ. ಆದ್ದರಿಂದ ಸರ್ಕಾರದ ವತಿಯಿಂದ ಹೋರಿ ಬೆದರಿಸುವ ಹಬ್ಬಕ್ಕೆ ಎಲ್ಲಾ ರೀರಿಯ ಅನುಮತಿಯನ್ನು ನೀಡಿ. ಹೋಬಳಿವಾರು ಹಬ್ಬದ ಆಯೋಜನೆಗೆ ಕನಿಷ್ಠ 10 ಎಕರೆ ಜಾಗ ಮಂಜೂರು ಮಾಡಿಕೊಟ್ಟು ಕ್ರೀಡಾಂಗಣ ನಿರ್ಮಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಹಬ್ಬ ನಡೆಸಲು ಸರ್ಕಾರದಿಂದ ವತಿಯಿಂದಲೇ ಎಲ್ಲಾ ರೀತಿಯ ಖರ್ಚು – ವೆಚ್ಚಗಳನ್ನು ಭರಿಸುವುದರ ಜೊತೆಗೆ ಹೋರಿ ಹಬ್ಬವನ್ನು ರಾಷ್ಟ್ರೀಯ ಹಬ್ಬವೆಂದು ಘೋಷಿಸಬೇಕು ಆಗಮಾತ್ರ ಸಾರ್ವಜನಿಕರು, ರೈತರು, ಹೋರಿಗಳಿಗೆ ಹಾಗೂ ಹಬ್ಬ ವೀಕ್ಷಿಸುವವರಿಗೂ ಯಾವುದೇ ತೊಂದರೆ ಆಗುವುದಿಲ್ಲ. ಆದ್ದರಿಂದ ಸರ್ಕಾರವು ಈ ಕೂಡಲೇ ರೈತರ ಗ್ರಾಮೀಣ ಜನಪದ ಕ್ರೀಡೆಯಾದಂತಹ ಹೋರಿ ಹಬ್ಬಕ್ಕೆ ಅವಕಾಶ ಕಲ್ಪಿಸಿ ಅನುಮತಿ ನೀಡಬೇಕು ಎಂದರು.
ಅಖಿಲ ಕರ್ನಾಟಕ ರೈತ ಜನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿಯ ಅಧ್ಯಕ್ಷ ಬಿ. ಸುರೇಶ್ ಮಾತನಾಡಿ, ರೈತರ ಗ್ರಾಮೀಣ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸರ್ಕಾರದ ವತಿಯಿಂದ ಅವಕಾಶ ಕಲ್ಪಿಸಿ ಭದ್ರತೆಯನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಡಿ. ಇಂದುಧರ, ವೀರೇಶ್ ಗೌಡ, ಭರತ, ಸುರೇಶ್, ಪಿ. ನವೀನ್, ನಾಗರಾಜ್, ಸುದರ್ಶನ್, ಶೇಕ್ರಪ್ಪ, ಸಂದೀಪ್, ವೀರಪಾಕ್ಷಪ್ಪ, ಮನೋಜ್, ನವೀನ್, ಮೂನ್ರಾಜ್, ಗಣಪತಿ, ರತ್ನಕರ, ಪಿ.ಪ್ರಕಾಶ್, ವಿ.ಪಿ. ಗೀರೀಶ್ ಗೌಡ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)

















