ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಸ್ರಾರು ಜೀವಿಗಳು ತುಂಬಿದ ಪರಿಸರದಲ್ಲಿ ಜೀವವೈವಿಧ್ಯತೆಯನ್ನು ಗುರುತಿಸುವ ಕಣ್ಣಿದ್ದರೆ ಸೋಜಿಗದ ಸಂಗತಿಗಳನ್ನು ಎಣಿಸಲಸಾಧ್ಯ. ಸೊರಬ ಐತಿಹಾಸಿಕ ಮಾತ್ರವಲ್ಲದೆ ಪರಿಸರಾತ್ಮಕವಾಗಿ ವಿಭಿನ್ನ, ಉತ್ಕೃಷ್ಟ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ಅರಣ್ಯಗಳು ಕೂಡ ಇತಿಹಾಸದಲ್ಲಿ ಮಹತ್ವ ಪಡೆದಿವೆ.
ಈಚೆಗೆ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದಲ್ಲಿ ಸೋಜಿಗದ ಕಪ್ಪೆಯೊಂದು ಕಾಣಿಸಿಕೊಂಡಿದ್ದು, ಹಲವರ ಕುತೂಹಲಕ್ಕೆ ಕಾರಣವಾಗಿದೆ. ಹಸಿರು ಬಣ್ಣ, ಮಾಸಲು ಕೆಂಪು ಕಣ್ಣುಗುಡ್ಡೆ, ಇದೇ ವರ್ಣದ ಪಾದಗಳು, ಪಾದಗಳಲ್ಲಿ ಒಂದೊಕ್ಕೊಂದು ಅಂಟಿಕೊಂಡ ಪರದೆ ಕಾಣಿಸಿದ್ದು, ಇಂತಹ ಕಪ್ಪೆಗಳನ್ನು ನೋಡದವರೆ ಹೆಚ್ಚು.
ಫೋಟೊಕ್ಕಷ್ಟೆ ಫೋಸು ನೀಡಿ ಹೋಗಿರುವ ಈ ಕಪ್ಪೆ ಮತ್ತೆ ಮಾರನೆ ದಿನ ಹುಡುಕಿದರೆ ಪತ್ತೆಯಾಗಲಿಲ್ಲ. ಈ ಬಗ್ಗೆ ಕುತೂಹಲ ತಣಿಯದ ಕಾರಣ ತಾಲ್ಲೂಕಿನ ಪರಿಸರ ಅಧ್ಯಯನಕಾರರು, ರಾಜ್ಯ ಜೀವವೈವಿಧ್ಯ ಮಂಡಳಿಯ ತಜ್ಞ ಸಮಿತಿಯ ಸದಸ್ಯರೂ ಆಗಿರುವ ಶ್ರೀಪಾದ ಬಿಚ್ಚುಗತ್ತಿಯವರನ್ನು ಸಂಪರ್ಕಿಸಿದ್ದು, ಅವರು ಇದು ಹಾರುವ ಕಪ್ಪೆ ಎಂದಿದ್ದಾರೆ.
ಎಲ್ಲ ಕಪ್ಪೆಯೂ ಹಾರುತ್ತವಲ್ಲ, ಅದೇನು ವಿಶೇಷ ಎಂದಾಗ, ಎಲ್ಲ ಕಪ್ಪೆಗಳು ಹಾರುವುದಿಲ್ಲ, ಕುಪ್ಪಳಿಸುತ್ತವೆ. ಇದು ಮರದಿಂದ ಮರಕ್ಕೆ ಹಾರುತ್ತವೆ. ಪಶ್ಚಿಮಘಟ್ಟ ಪ್ರದೇಶ, ವಿಶೇಷವಾಗಿ ಆಗುಂಬೆಯಂತಹ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಇವು ಕಾಣಿಸಿಕೊಂಡಿದ್ದು ರಾಕೋಪರಸ್ ಮಲಬಾರಿಕಸ್ ಎಂದು ಇದನ್ನ ಕರೆಯಲಾಗುತ್ತದೆ. ಅಪರೂಪಕ್ಕೆ ಸೊರಬದ ಚಂದ್ರಗುತ್ತಿ, ಉಳವಿ ಭಾಗದ ಅರಣ್ಯಗಳಲ್ಲಿ ಕಂಡಿವೆ. ಪ್ರತಿವರ್ಷ ಮಳೆ ಆರಂಭದಲ್ಲಿ ಕಾಣಿಸಿಕೊಂಡು ಆಮೇಲೆ ಕಣ್ಮರೆಯಾಗುತ್ತವೆ. ಹೆಚ್ಚಾಗಿ ಸಂತಾನಾಭಿವೃದ್ಧಿ ಕ್ರಿಯೆಗೆ ಹೀಗೆ ಈ ಕಾಲದಲ್ಲಿ ಕಾಣಿಸಿಕೊಳ್ಳುವುದಿದೆ. ಉಳಿದಂತೆ ತಂಪು ಪ್ರದೇಶದಲ್ಲಿ ಇವು ವಾಸಿಸಲಿಚ್ಛಿಸುತ್ತವೆ. ಕಪ್ಪೆಗಳು ಪರಿಸರದ ಸೂಚಿಗಳು. ವೈವಿಧ್ಯಮಯ ಕಪ್ಪೆ, ಕೆರೆಯಲ್ಲಿ ವೈವಿಧ್ಯಮಯವಾದ ದೇಸಿ ಮೀನುಗಳ ಸಂಖ್ಯೆ ಅಧಿಕವಾಗಿದ್ದರೆ ನೀರು ಮತ್ತು ವಾತಾವರಣ ಹೆಚ್ಚು ಆರೋಗ್ಯಕರ ಎಂದು ಭಾವಿಸಬಹುದು ಎಂದಿದ್ದಾರೆ.
Also read: ನವಭಾರತ ನಿರ್ಮಾಣಕ್ಕೊಂದು ಅರಿವಿನ ಸೋಪಾನ-ಬೇಸ್
ಅರಣ್ಯನಾಶ, ಅತಿಯಾದ ರಾಸಾಯನಿಕ ಬಳಕೆ ಇತ್ಯಾದಿ ಪರಿಸರ ಮಾರಕ ಚಟುವಟಿಕೆಗಳಿಂದ ಅನೇಕ ಸೂಕ್ಷ್ಮ, ಕೃಷಿ ಪೂರಕ ಜೀವಿಗಳು ಕಣ್ಮರೆಯಾಗಿದ್ದು ಹೀಗೆ ಅಪರೂಪಕ್ಕೊಮ್ಮೆ ಕಾಣಸಿಗುವ ಇಂತಹ ಅಪರೂಪದ ಪ್ರಬೇಧಗಳಿಂದ ತೃಪ್ತಿಪಡುವಂತಾಗಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post