ಕಲ್ಪ ಮೀಡಿಯಾ ಹೌಸ್
ಸೊರಬ: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ತವ್ಯದಲ್ಲಿ ತೊಡಗಿರುವ ಕೋವಿಡ್ ವಾರಿಯರ್ಸ್ಗಳು, ಮುಂಚೂಣಿ ಕಾರ್ಯಕರ್ತರು, ಮಾಧ್ಯಮದವರು ಕೊರೋನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಚಿಕಿತ್ಸೆಗೆ ಅನುವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಮೀಸಲಿಡಬೇಕು ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್ ಆಗ್ರಹಿಸಿದ್ದಾರೆ.
ಕೋವಿಡ್ ಸೋಂಕಿತರಿಗಾಗಿ ಜಿಲ್ಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಾಧ್ಯಮದವರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಯವರಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ, ಆಮ್ಲಜನಕವಿಲ್ಲದೇ ಹಾಗೂ ಚಿಕಿತ್ಸಾ ಸೌಲಭ್ಯಗಳಿಲ್ಲದೇ ಪರದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಕೋವಿಡ್ ವಾರಿಯರ್ಸ್ಗಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸೌಕರ್ಯ ಒದಗಿಸಬೇಕು ಎಂದಿದ್ದಾರೆ.
ತಾಲ್ಲೂಕು ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಆಗಮಿಸಿದ ವೇಳೆಯಲ್ಲಿ ಆನವಟ್ಟಿ ಮತ್ತು ಸೊರಬದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದಾಗಿ ತಿಳಿಸಿದ್ದರು. ಭರವಸೆ ನೀಡಿ ಸುಮಾರು ಎರಡು ವಾರಗಳು ಕಳೆದರು ಕೋವಿಡ್ ಕೇರ್ ಸೆಂಟರ್ ತೆರೆಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಗಮನ ನೀಡಬೇಕು. ಊರ ಹೊರಗಿರುವ ಶಾಲಾ-ಕಾಲೇಜ್ಗಳನ್ನು ಕೋವಿಡ್ ಸೆಂಟರ್ಗೆ ಬಳಸಿಕೊಂಡರೆ ಅನುಕೂಲವೂ ಆಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೇ ಹಂತದ ಅಲೆಯು ಎಲ್ಲಾ ವಯೋಮಾನದವರಲ್ಲಿ ಕಂಡು ಬರುತ್ತಿರುವುದು ಆತಂಕದ ವಿಷಯವೇ ಸರಿ. ಈಗಾಗಲೇ ಆರೋಗ್ಯ ಸಚಿವರು 18 ರಿಂದ 44 ವಯೋಮಾನದವರಿಗೂ ಸಹ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿರುವುದು ಸ್ವಾಗತಾರ್ಹ ವಿಷಯ. ಆದರೆ, ಕೋವಿಡ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಲು ತಿಳಿಸಿರುವುದು ಅವೈಜ್ಞಾನಿಕ ವಿಷಯವಾಗಿದೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಕಾಡುತ್ತದೆ. ಕೆಲ ಗ್ರಾಮಗಳಲ್ಲಿ ನೆಟ್ವರ್ಕ್ ತಲುಪುವುದೇ ಇಲ್ಲ. ಮೊಬೈಲ್ ಬಳಸದೇ ಇರುವ ಜನತೆಯೂ ಸಾಕಷ್ಟಿದೆ. ಆದ್ದರಿಂದ ಮನೆಮನೆಗೆ ಬಂದು ಲಸಿಕೆ ನೀಡುವುದನ್ನು ಅಭಿಯಾನದಂತೆ ಮಾಡವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಬೇಕು ಎಂದು ಒತ್ತಾಯಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post