Read - 2 minutesಕಲ್ಪ ಮೀಡಿಯಾ ಹೌಸ್ |
ಸೊರಬ |
ಐತಿಹಾಸಿಕ, ಪೌರಾಣಿಕ ಹಾಗೂ ಪೇರಲ, ನಾಗರ ಬೆತ್ತದ ಅರಣ್ಯಕ್ಕೆ ಪ್ರಸಿದ್ಧಿಯಾದ ತಾಲ್ಲೂಕು ಕುಪ್ಪೆ ಅರಣ್ಯ ಉಳಿಯಬೇಕು, ಇಲ್ಲಿನ ನದಿ ಉಗಮದ ಕಲ್ಯಾಣಿ ಪುನಶ್ಚೇತನಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನ ದ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.
ಕುಪ್ಪೆ ಅರಣ್ಯ ಪ್ರದೇಶದಲ್ಲಿ ವಿವಿಧ ಇಲಾಖೆ, ಪರಿಸರ ಕಾರ್ಯಕರ್ತರೊಂದಿಗೆ ಪರಿಸರ ದಿನದ ಅಂಗವಾಗಿ ಈಚೆಗೆ ವೃಕ್ಷಪೂಜೆ, ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿದರು.
ದಂಡಾವತಿ ನದಿ ಮೂಲದ ರಕ್ಷಣೆಗೆ ತಾಪಂ ಜೀವವೈವಿಧ್ಯ ಸಮಿತಿ ಹಾಗೂ ಗ್ರಾಪಂ ಆಡಳಿತ ಮುಂದಾಗಿದ್ದು ಶ್ಲಾಘನೀಯ, ಗ್ರಾಮಸ್ಥರು ಒಟ್ಟಾಗಿ ಇಲ್ಲಿನ ರಾಮ, ಸೀತೆ ಪರಿವಾರದ ಪ್ರಾಚೀನ ದೇವಾಲಯಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡಿದ್ದು, ಅರಣ್ಯ ಇಲಾಖೆ ಪವಿತ್ರ ವನದ ಜೊತೆಗೆ ಉಳಿದಿರುವ ಅರಣ್ಯದಲ್ಲಿ ನಾಗರ ಬೆತ್ತ ಸಸಿಗಳನ್ನು ನೆಟ್ಟು ಕಾಯ್ದುಕೊಂಡಿದೆ, ಇವೆಲ್ಲವನ್ನೂ ಕಾಯ್ದುಕೊಳ್ಳುವ ಜವಾಬ್ಧಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಪ್ರದೇಶವನ್ನು ಗ್ರಾಮಸ್ಥರು ಹಾಗೂ ಗ್ರಾಪಂ ಆಡಳಿತ ಜೈವಿಕ ಪಾರಂಪರಿಕ ತಾಣ ಎಂದು ಘೋಷಣೆ ಮಾಡಲಿರುವುದು ಸಂತಸದ ಸಂಗತಿ ಎಂದರು.
Also read: ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಐದು ಪ್ರಕರಣ ನ್ಯಾಯಾಲಯದಲ್ಲಿ ರದ್ದು
ಇರುವಕ್ಕಿ ಕೃಷಿ ವಿವಿ ಉಪಕುಲಪತಿಗಳಾದ ಡಾ.ಜಗದೀಶ್ ವೃಕ್ಷಾರೋಪಣ ನೆರವೇರಿಸಿ, ಈ ಪ್ರದೇಶದ ಜೀವವೈವಿಧ್ಯ ವರದಿ ದಾಖಲಿಸಲು ವಿವಿ ತಜ್ಞರನ್ನು ಕಳಿಸುವುದಾಗಿ ತಿಳಿಸಿದರು, ಅಪರೂಪದ ಸಸ್ಯವರ್ಗಗಳು ಇಲ್ಲಿದ್ದು ರಕ್ಷಿಸಿಕೊಳ್ಳಬೇಕು ಎಂದರು.
ಹೆಗ್ಗೋಡು ಗ್ರಾಪಂ ಕಾರ್ಯದರ್ಶಿ ರವಿ ಕಲ್ಯಾಣಿ ಅಭಿವೃದ್ಧಿಗೆ ಕ್ರಿಯಾಯೋಜನೆ ರಚಿಸಿದ್ದು, ನರೇಗಾ ಯೋಜನೆ ಮೂಲಕ ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಪರಿಸರ ತಜ್ಣ ಬಿ.ಎಂ.ಕುಮಾರಸ್ವಾಮಿ, ಕೆ.ವೆಂಕಟೇಶ್, ಜನಪದ ವೈದ್ಯ ಆನೆಗುಳಿ ಸುಬ್ಬರಾವ್, ಅನಂತರಾಮ್ ಹಾರೋಗೊಪ್ಪ, ಪ್ರಾಚೀನ ಬತ್ತ ತಳಿ ರಕ್ಷಕ ಛತ್ರಪತಿ ಗೌಡ, ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಅರಣ್ಯ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಪಿಡಿಒ, ಪರಿಸರ ಕಾರ್ಯಕರ್ತೆ ಸುಜಾತಜೋತಾಡಿ, ನಡಹಳ್ಳಿ ಶ್ರೀಧರಮೂರ್ತಿ ಗ್ರಾಮಸ್ಥರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡರು.
Discussion about this post