ಕಲ್ಪ ಮೀಡಿಯಾ ಹೌಸ್ | ಸೊರಬ |
ವೈಜ್ಞಾನಿಕ ನಾಗಾಲೋಟದಲ್ಲಿ ಕೆಲವು ಆದರ್ಶಗಳು ಮರೆಯಾಗಿವೆ. ಭಾರತೀಯ ಸಂಸ್ಕೃತಿ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಅರುಹದಿದ್ದರೆ ದೇಶದ ನೈತಿಕ ಅದಃಪತನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶ್ರೀಗಳು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ಶ್ರೀ ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆದ ರಾಜ್ಯ ಸುರಭಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಪೂರ್ವಿಜರು ಸರ್ವ ಜನಾಂಗದ ಏಳ್ಗೆಗಾಗಿ ಹಲವಾರು ಸನ್ಮಾರ್ಗಗಳನ್ನು ವ್ಯವಸ್ಥಿತವಾಗಿ ಇರಿಸಿ ಹೋಗಿದ್ದಾರೆ. ಅವರು ನೀಡಿದ ಆದರ್ಶ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಸಮಾಜದಲ್ಲಿನ ಹಲವು ವಿಧದ ಸಾಧಕರನ್ನ, ಸೇವಕರನ್ನ, ಸನ್ಮಾರ್ಗಿಗಳನ್ನು ಹುಡುಕಿ ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸುರಭಿ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ, ಇನ್ನಷ್ಟು ಇಂತಹ ಸತ್ಕಾರ್ಯ ಟ್ರಸ್ಟ್ ನಡೆಸಲಿ ಎಂದರು.

ದೇಶದ ಬೆನ್ನೆಲುಬು ರೈತ ಇಂತಹ ರೈತ ಇಂದು ಕೇವಲ ಮತಬ್ಯಾಂಕಿಗಷ್ಟೆ ಸೀಮಿತವಾಗಿದ್ದಾನೆ. ದೇಶದ ಅಭಿವೃದ್ಧಿಗೆ ಪೂರಕವಾಗುವಷ್ಟು ಭೂಮಿ ಇದ್ದರೂ ದುಡಿಯಲಾರದೆ ಪಟ್ಟಣದ ಕಡೆ ವಲಸೆ ಹೋಗುವಂತಹ ಸ್ಥಿತಿಯನ್ನು ನಮ್ಮ ಸರ್ಕಾರಗಳು ತಂದೊಡ್ಡಿವೆ. ದುಡಿಯುವ ಕೈಗಳಿಗೆ ಕೂತು ಉಣ್ಣುವಂತಹ ಸವಲತ್ತು ನೀಡಿ ಅವರನ್ನ ಸೋಮಾರಿಗಳನ್ನಾಗಿಸಿದ್ದಾರೆ. ದೇಶದ ಅನೇಕ ವಿಧದ ತಾರತಮ್ಯತೆ, ಜಾತಿ ಸಂಘರ್ಷಗಳ ನಿಯಂತ್ರಣಕ್ಕೆ ಮೊದಲು ದುಡಿಯುವ ಕೈಗಳಿಗೆ ಅವಕಾಶ, ಸೌಲಭ್ಯ ನೀಡಬೇಕು. ಮತಾಂತರ ಪಿಡುಗು ದೇಶದ ಸಂಸ್ಕೃತಿಯ ಜೊತೆಗೆ ಕೌಟುಂಬಿಕ ವಿಘಟನೆಗಳಿಗೆ ಕಾರಣವಾಗುತ್ತಿದೆ. ಇಂತಹ ಅನಿಷ್ಟ ಸಂಸ್ಕೃತಿಯನ್ನು ಹೊಡೆದೋಡಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವವೂ ಹೌದು ಎಂದರು.

ದೇಶದ ಸುವ್ಯವಸ್ಥೆಯಲ್ಲಿ ಕೃಷಿ ಸೇವೆ, ಸೇನೆಯಲ್ಲಿನ ಸೇವಕರು, ಪತ್ರಿಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಇವುಗಳ ಮೌಲ್ಯ ಕುಸಿಯದಂತೆ ನೋಡಿಕೊಳ್ಳಬೇಕು. ದೇಶ ಪ್ರೇಮ, ಸೇವಾ ಮನೋಭಾವ ಬೆಳೆಸಿಕೊಂಡು ಭವ್ಯಭಾರತದ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಎಂದರು.
ಸುರಭಿಶ್ರೀ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಚಿತ್ರನಟಿ ಉಮಾಶ್ರೀ ಭ್ರೂಣಹತ್ಯೆಯಂತಹ ಪಿಡುಗು ತೊಲಗಬೇಕು. ಹೆಣ್ಣುಮಕ್ಕಳ ಸಾಧನೆ, ಸೇವೆಯನ್ನು ಗುರುತಿಸಿ ಸಮಾಜದ ಮುಖ್ಯ ಸ್ತರಕ್ಕೆ ತರುವ ಕಾರ್ಯ ಇನ್ನಷ್ಟು ಆಗಬೇಕು. ಉಳ್ಳವರ ಸೇವೆಯ ಜೊತೆಗೆ ಉಳ್ಳದವರ ಸೇವೆಯನ್ನೂ ಪರಿಗಣಿಸಿ ಪ್ರಚುರಪಡಿಸುವಂತೆ ಸಂಘಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.

ಸುವರ್ಣ ನ್ಯೂಸ್ನ ಜಯಪ್ರಕಾಶ್ ಶೆಟ್ಟಿ, ಜಡೆ ಸಂಸ್ಥಾನ ಮಠದ ಡಾ.ಮಹಂತ ಶ್ರೀಗಳು, ದಿವಾಕರಭಾವೆ, ಚಿಕ್ಕಾವಲಿ ನಾಗರಾಜಗೌಡ, ಯೋಧ ಸದಾಶಿವಪ್ಪ, ರಜತ್ ವಿನಾಯಕ ಶೇಟ್ ಇವರುಗಳು ವಿವಿಧ ಸೇವಾ ಸಾಧನೆಯ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಸುರಭಿ ಸೇವಾಟ್ರಸ್ಟ್ ನ ಟ್ರಸ್ಟೀ ಎಸ್.ಜಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು, ಕಡೆನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಜೆ.ಶಿವಾನಂದಪ್ಪ, ಆರ್.ಸಿ.ಪಾಟೀಲ್, ವೇದಿಕೆಯಲ್ಲಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















