ಕಲ್ಪ ಮೀಡಿಯಾ ಹೌಸ್
ಸೊರಬ: ಹೋರಾಟಕ್ಕೂ ಸೈ, ಜನ ಸೇವೆಗೂ ಜೈ ಎನ್ನುತ್ತಿರುವ ಯುವ ಹೋರಾಟ ಸಮಿತಿಯ ಕಾರ್ಯಕರ್ತರು ಈ ಹಿಂದಿನಿಂದಲೂ ರಕ್ತದಾನ ಶಿಬಿರ, ಹಲವು ಜನಪರ ಹೋರಾಟಗಳು, ಮುಕ್ತಿ ವಾಹನ ಸೇವೆ ಹಾಗೂ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿತ್ತು. ಇದೀಗ ಕೊರೋನಾ ಸಂಕಷ್ಟದಕ್ಕೆ ಸಿಲುಕಿರುವ ಪಟ್ಟಣದ ಬಡ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸುವ ತಯಾರಿಯಲ್ಲಿದ್ದಾರೆ.

ಹೌದು. ಸೊರಬ ಪಟ್ಟಣದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಯಾವುದೇ ರಾಜಕೀಯ ಪಕ್ಷ ಮತ್ತು ರಾಜಕಾಣಿಗಳ ಮುಖಂಡತ್ವ ಪಡೆಯದೆ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿರುವ ‘ಯುವ ಹೋರಾಟ ಸಮಿತಿಯ ಕಾರ್ಯಕರ್ತರು’ ಪಟ್ಟಣ ವ್ಯಾಪ್ತಿಯಲ್ಲಿರುವ ಬಡ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ಗಳನ್ನು ಮನೆ ಮನೆಗೆ ತಲುಪಿಸುವ ಸಿದ್ಧತೆ ಕೈಗೊಂಡಿದ್ದಾರೆ.

ಯುವ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಭಂಡಾರಿ ನೇತೃತ್ವದಲ್ಲಿ ಕಿಟ್ಗಳ ತಯಾರಿ ನಡೆಯುತ್ತಿದ್ದು, ಹಲವಾರು ದಾನಿಗಳು ಸ್ವಯಂ ಪ್ರೇರಿತರಾಗಿ ಅಕ್ಕಿ, ಬೇಳೆ, ಶೇಂಗಾ, ಟೀಪುಡಿ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ, ತೆಂಗಿನಕಾಯಿ, ಪೇಸ್ಟ್, ಸೋಪು ಸೇರಿದಂತೆ ಅನೇಕ ದೈನಂದಿನ ಬಳಕೆಯ ದಿನಸಿಗಳನ್ನು ಸಮಿತಿಗೆ ನೀಡಿದ್ದಾರೆ.

ದಿನಸಿ ವಸ್ತುಗಳ ಕಿಟ್ ತಯಾರಿಯಲ್ಲಿ ಜಿ. ಕೆರಿಯಪ್ಪ, ಸಂತೋಷ್, ಸಂಜೀವ್ ಆಚಾರ್, ಅಣ್ಣಪ್ಪ ಗುಡಿಗಾರ್, ರವಿ ಗುಡಿಗಾರ್, ಸುಬ್ರಹ್ಮಣ್ಯ ನೆಮ್ಮದಿ, ಅಂಕುಶ್ ಗುಡಿಗಾರ್, ಕೌಶಿಕ್ ಗುಡಿಗಾರ್, ಶ್ರೀರಾಮ್ ಬಿಳಗಿ ಸೇರಿದಂತೆ ಮತ್ತಿತರರು ತೊಡಗಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















