ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್’ನಿಂದದ ಸ್ಪರ್ಧಿಸಿರುವ ಅಣ್ತಮ್ಮಾಸ್ (ಸಹೋದರ) ರನ್ನು ಜನತೆ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ HDKumaraswamy ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡರ ಪರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಎಸ್. ಬಂಗಾರಪ್ಪನವರು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಇರುವ ಏಕೈಕ ವ್ಯಕ್ತಿ ನೀನು ಎಂದು ಹೇಳಿ, ನಿನಗೆ ನಾನು ಶಕ್ತಿ ತುಂಬಲು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಬೇಕೆಂದು ಹೇಳಿ ಜೆಡಿಎಸ್ ಸೇರ್ಪಡೆಗೊಂಡಿದ್ದರು. ನಂತರದಲ್ಲಿ ನನ್ನ ಮಗನನ್ನು (ಮಧು ಬಂಗಾರಪ್ಪ) ನಿನ್ನ ಮಡಿಲಿಗೆ ಹಾಕಿದ್ದೇನೆ ಎಂದು ಹೇಳಿದ್ದರು. ನನ್ನಿಂದ ಏನೂ ಅಪಚಾರವಾಗಿಲ್ಲ. ಬಂಗಾರಪ್ಪನವರು ಬದುಕಿದ್ದರೆ ಮಗನ ಏಳಿಗೆಗೆ ಏನು ಶಕ್ತಿ ತುಂಬುತ್ತಿದ್ದರೋ ಅದಕ್ಕೂ ಮಿಗಿಲಾಗಿ ಶಕ್ತಿ ತುಂಬುವ ಪ್ರಯತ್ನ ಮಾಡಿ ಅವರನ್ನು ರಾಜ್ಯ ಮಟ್ಟದಲ್ಲಿ ಬೆಳೆಸುವ ಪ್ರಯತ್ನ ಮಾಡಿದ್ದೇನೆ. ಎಸ್. ಬಂಗಾರಪ್ಪನವರು ಬದುಕಿದ್ದಾಗ ಜನಪ್ರತಿನಿಧಿಯಾಗದ ಅವರು ಅವರ ಮರಣಾ ನಂತರದಲ್ಲಿ ಜೆಡಿಎಸ್’ನಿಂದ ಶಾಸಕರಾಗಿ ಆಯ್ಕೆಯಾಗಿ ಜೆಡಿಎಸ್’ಗೆ ಮೋಸ ಮಾಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದರು.
ಮುಂದೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಅದನ್ನು ತಪ್ಪಿಸಲು ಬಿಜೆಪಿ ಕಾಂಗ್ರೆಸ್’ನಿಂದ ಸಾಧ್ಯವಿಲ್ಲ. ಈ ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಸೊರಬ ತಾಲೂಕಿನ ಸಮಗ್ರ ನೀರಾವರಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಲಾಗಿದೆ. ರೈತರ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆಯ ಮೂಲಕ ರೈತ ಪರ ಯೋಜನೆಗಳನ್ನು ಜಾರಿಗೊಳಿಸಲು ನಿಮ್ಮೆಲ್ಲರ ಆಶೀರ್ವಾದ ಬೇಕು. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಬರೀ 2.5 ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಪಂಚರತ್ನ ಎನ್ನುವ ಐದು ಯೋಜನಗಳನ್ನು ಬಡವರಿಗಾಗಿ ಜಾರಿಗೊಳಸಿ ಸ್ವತಂತ್ರವಾಗಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂದು 18 ತಿಂಗಳು ಸತತ ದುಡಿದಿದ್ದೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಮಾತನಾಡಿ, ನಾನು ಗೆದ್ದರೆ ನೀವೆಲ್ಲರೂ ಗೆದ್ದಂತೆ. ನಾನು ಗೆದ್ದರೆ ಬೆಂಗಳೂರಿನಲ್ಲಿ ಕೂರುವವನಲ್ಲ. ಇದೇ ಹಳ್ಳಿಯಲ್ಲಿದ್ದುಕೊಂಡು ಕ್ಷೇತ್ರದ ಜನತೆಯ ಸೇವೆ ಮಾಡುತ್ತೇನೆ. ಇದೊಂದು ಬಾರಿ ತಮಗೆ ಅವಕಾಶ ನೀಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್.ಕುಮಾರ್, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಶಿವಪ್ಪ ಎಂ. ದ್ವಾರಹಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಕೆ. ತತ್ತೂರು, ಅಜೀಜ್ ಸಾಬ್, ಬಸವರಾಜ ಕಾತುವಳ್ಳಿ, ಶಿವಾನಂದ ಹಿರೇಮಾಗಡಿ, ಪಕ್ಕೀರಪ್ಪ ವೃತ್ತಿಕೊಪ್ಪ, ಹಾಲೇಶ ತೆವರತೆಪ್ಪ, ಬಿಳಕಿ ನಾಗರಾಜಗೌಡ, ಸುನೀಲ್ ಹಂಚಿನಮನೆ, ಆನಂದ ದ್ಯಾವಾಸ ಮೊದಲಾದವರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post