ಕಲ್ಪ ಮೀಡಿಯಾ ಹೌಸ್ | ಸೊರಬ |
ಅಗ್ನಿ ಅನಾಹುತ ಸಂಭವಿಸಿದಾಗ ಕ್ಷಣದಲ್ಲಿ ಧಾಮಿಸುವ ಅಗ್ನಿ ಶಾಮಕ ದಳದ #Fire Brigade ಸಿಬ್ಬಂದಿಗೆ ಸ್ವಯಂ ರಕ್ಷಣೆಯ ಜೊತೆ ಬೆಂಕಿಯೊಂದಿಗೆ ಹೋರಾಡಿ ಜನರ ಪ್ರಾಣ ಮತ್ತು ಆಸ್ತಿಯನ್ನು ಉಳಿಸುವ ಜವಾಬ್ದಾರಿ ಇರುತ್ತದೆ ಎಂದು ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ಕೆ. ಮಹಾಬಲೇಶ್ವರ ಹೇಳಿದರು.
ಸೋಮವಾರ ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಹಮ್ಮಿಕೊಂಡ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಪ್ತಾಹ ದಿನಾಚರಣೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಅಗ್ನಿ ಶಾಮಕ ದಳದ ಹುತಾತ್ಮರ ದಿನಾಚರಣೆ ಮತ್ತು ನಿವೃತ್ತ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಗ್ನಿ ಅನಾಹುತಗಳು ಸಂಭವಿಸಿದಾಗ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸಪ್ತಾಹದ ಉದ್ದೇಶವಾಗಿದೆ. ಅವಘಡಗಳು ಸಂಭವಿಸಿದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏ.20ರವರೆಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದ ಅವರು, ಪಟ್ಟಣದಲ್ಲಿ ಎರಡು ವಾಹನಗಳಿದ್ದು, ಒಂದು ವಾಹನ ಹಾಳಾಗಿದೆ ಮತ್ತೊಂದು ಹದಿನೈದು ವರ್ಷ ತುಂಬಿದ್ದು ಬಳಸುವಂತಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ತತಕ್ಷಣಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ ಮಾತನಾಡಿ, ಅಗ್ನಿ ಅವಘಡ ಹಾಗೂ ಪ್ರವಾಹದಂತಹ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರನ್ನು ರಕ್ಷಿಸುತ್ತಾರೆ. ಅವರ ಸೇವೆ ಶ್ಲಾಘನೀಯವಾಗಿದೆ. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ಪ್ರಸ್ತುತ ಪಟ್ಟಣದ ವಾಹನ ಸೌಲಭ್ಯ ಇಲ್ಲದಿರುವುದರಿಂದ ಶಿರಸಿ, ಸಾಗರ, ಸಿದ್ದಾಪುರದಿಂದ ವಾಹನಗಳನ್ನು ಕರೆಸಬೇಕಿದೆ ಎಂದ ಅವರು, ಉತ್ತಮ ಪರಿಸರ ಮತ್ತು ಸ್ವಚ್ಛತೆಯನ್ನು ಠಾಣೆಯ ಆವರಣದಲ್ಲಿ ಕಾಯ್ದುಕೊಂಡಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿಗಳಾದ ಜಿನ್ನಪ್ಪ, ಮಂಜುನಾಥ ರಾವ್ ಹಾಗೂ ನಿವೃತ್ತ ಪ್ರಮುಖ ಅಗ್ನಿಶಾಮಕ ಆನಂದ್ ಎಸ್. ಗೌಡರ್ ಅವರನ್ನು ಸನ್ಮಾನಿಸಲಾಯಿತು.
ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ.ಎಸ್. ರಮೇಶ್, ಸಿಬ್ಬಂದಿ ವಿ. ನಾಗರಾಜ್, ಮಹೇಶ್ ಮಡಿವಾಳ, ಎಂ.ಆರ್. ಮಂಜುನಾಥ, ಪ್ರಸನ್ನಕುಮಾರ್, ಕೆ.ಎನ್. ಪ್ರಶಾಂತ್, ಎಸ್.ವಿ. ವಿನಯ ಕುಮಾರ್, ಕೆ.ಎಂ. ಅರುಣ, ಎಚ್. ನಿರಂಜನ, ಅಜಯಕುಮಾರ್, ಕೆ.ವಿ. ಮಣಿಕಂಠ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post