ಸೊರಬ: ಸಿದ್ಧರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿನ ರೂ ಐವತ್ತು ಸಾವಿರ ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲವನ್ನೂ ಮನ್ನಾ ಮಾಡಿದ್ದು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್ಗಳಲ್ಲಿನ ಸಾಲಮನ್ನಾ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದರು.
ಬಂಗಾರಧಾಮದಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಬಹಿರಂಗ ಸಭೆಯಲ್ಲಿ ಜೆ.ಡಿ.ಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪನವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ತಮ್ಮ ತಂದೆ ಬಂಗಾರಪ್ಪನವರನ್ನು ಉಟ್ಟಬಟ್ಟೆಯಲ್ಲೇ ಮನೆಯಿಂದ ಹೊರ ಹಾಕಿದ್ದಲ್ಲದೇ ಈಗ ಮತ್ತೊಮ್ಮೆ ಸುದೀರ್ಘವಾಗಿ ಭೂಮಿಯನ್ನೇ ನಂಬಿ ಬದುಕುತ್ತಿರುವ ಬಡ ರೈತರ ಪರ ಕಾಳಜಿ ವಹಿಸಿ ಭೂಮಿ ಹಕ್ಕು ನೀಡಿದ ಹಿರಿಯ ವ್ಯಕ್ತಿ ಕಾಗೋಡು ತಿಮ್ಮಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಶಾಸಕ ಕುಮಾರ್ ಬಂಗಾರಪ್ಪನವರಿಗೆ ಶೋಭೆ ತರುವುದಿಲ್ಲ ಎಂದರು.
ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕ್ರಿಯಾಶೀಲ ವ್ಯಕ್ತಿ ಮಧುಬಂಗಾರಪ್ಪನವರಾಗಿದ್ದು, ತಂದೆ ಬಂಗಾರಪ್ಪನವರ ಹಾದಿಯಲ್ಲೇ ಮುನ್ನಡೆಯುತ್ತಿರುವ ಯುವ ರಾಜಕಾರಣಿಯಾಗಿದ್ದಾರೆ, ಜಿಲ್ಲೆಯ ಸಮಗ್ರ ನೀರಾವರಿಗಾಗಿ, ಬಗರ್ಹುಕುಂ ರೈತರ ಪರವಾಗಿ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನವನ್ನು ಸೆಳೆದಿದ್ದು, ಇದರ ಫಲವಾಗಿ ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ ಅನೇಕ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆತಂತಾಗಿದೆ. ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿರುವುದು ಬೇಸರ ತಂದಿದೆ ಎಂದ ಅವರು ಯಾವುದೇ ಹೋರಾಟದ ಹಿನ್ನೆಲೆ ಇಲ್ಲದವರನ್ನು ಗೆಲ್ಲಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನಾನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡಬೇಕೆಂಬ ಆಸೆ ಬಂಗಾರಪ್ಪನವರು ಕಂಡಿದ್ದರು. ಅವರ ಆಸೆ ಈಡೇರಿದೆ. ನಮಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ, ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ನನ್ನ ಮೇಲೆ ನಂಬಿಕೆಯಿಟ್ಟು ಕಾಂಗ್ರೆಸ್ನವರು ಅಧಿಕಾರ ನೀಡಿದ್ದಾರೆ. ನಂಬಿಕೆಗೆ ದ್ರೋಹವಾಗದ ರೀತಿಯಲ್ಲಿ ಜನಸಾಮಾನ್ಯರ ಪರವಾದ ಸರ್ಕಾರ ನೀಡುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲವನ್ನೂ ಮನ್ನಾ ಮಾಡಿದ್ದು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್ಗಳಲ್ಲಿನ ಸಾಲಮನ್ನಾ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ತಡೆದುಕೊಳ್ಳಲಾಗುತ್ತಿಲ್ಲ, ಇಲ್ಲ ಸಲ್ಲದ ಆರೋಪ, ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಅವರ ಟೀಕೆಗಳಿಗೆ ಈಗ ಉತ್ತರ ನೀಡುವುದಿಲ್ಲ. ಇನ್ನು ಹದಿನೈದು ದಿನಗಳೊಳಗಾಗಿ ಅವರಿಗೆ ಉತ್ತರ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಬಿ.ಸಿ. ಪಾಟೀಲ್, ಮಧುಬಂಗಾರಪ್ಪ, ಮಾಜಿ ಶಾಸಕ ಕೋನರೆಡ್ಡಿ, ಪ್ರಮುಖರಾದ ಶಶಿಭೂಷಣ್ ಹೆಗ್ಡೆ, ರಾಜು ಎಂ ತಲ್ಲೂರು. ಇನಾಯತ್ ಉಲ್ಲಾ ಭಟ್ಕಳ, ಅಲ್ತಾಫ್, ಹಬೀಬ್, ಜೆ. ಶಿವಾನಂದಪ್ಪ, ಹೆಚ್. ಗಣಪತಿ, ಕೆ. ಮಂಜುನಾಥ್, ಕೆ.ಪಿ. ರುದ್ರಗೌಡ, ಚೌಟಿ ಚಂದ್ರಶೇಖರ ಪಾಟೀಲ್, ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post