ಕಲ್ಪ ಮೀಡಿಯಾ ಹೌಸ್
ಸೊರಬ: ಜನಪ್ರತಿನಿಧಿಗಳು ಜನಪರವಾಗಿ ಆಡಳಿತ ನೀಡುವಲ್ಲಿ ಒತ್ತು ನೀಡಬೇಕು. ಆದರೆ, ಶಾಸಕ ಕುಮಾರ್ ಬಂಗಾರಪ್ಪ ಅವರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ಪಟ್ಟಣದ ಕಾನಕೇರಿ ಬಡಾವಣೆಯ ಸರ್ವೆ ನಂ.113ರಲ್ಲಿ ಜುಲೈ 16ರಂದು ಪುರಸಭೆ ಹಾಗೂ ತಾಲ್ಲೂಕು ಆಡಳಿತವು ನಿರ್ಮಾಣ ಹಂತದ ಕಟ್ಟಡವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ, ತೆರವುಗೊಳಿಸಲು ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ, ಮಾಧ್ಯಮ ಪ್ರಕಟಣೆ ನೀಡಿ ಕ್ರಮ ಕೈಗೊಳ್ಳುವ ಬದಲು ಶಾಸಕರ ಅಣತಿಯಂತೆ ವರ್ತಿಸುತ್ತಿರುವ ಅಧಿಕಾರಿಗಳ ನಡೆ ಖಂಡನಾರ್ಹ, ಮಾಜಿ ಮುಖ್ಯ ಮಂತ್ರಿಎಸ್. ಬಂಗಾರಪ್ಪ ಅವರು ಕಾನಕೇರಿ ಬಡಾ ವಣೆಯ ಸರ್ವೆ ನಂ 113ರಲ್ಲಿ ವಾಸಿಸುತ್ತಿರುವ ಸುಮಾರು 2 ಸಾವಿರ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಆಶ್ರಯ ನೀಡಿದ್ದರು. ಆದರೆ ಕುಮಾರ್ ಬಂಗಾರಪ್ಪ ಈ ಹಿಂದೆಯೂ ಶಾಸಕರಾಗಿದ್ದಾಗ ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆಗ ನಮ್ಮ ತಂದೆ ಬಂಗಾರಪ್ಪನವರು ಬಡವರ ಪರವಾಗಿ ನಿಂತು ರಕ್ಷಣೆ ನೀಡಿದ್ದರು. 2017ರಲ್ಲಿ 94ಸಿಸಿ ಅಡಿಯಲ್ಲಿ ಅಕ್ರಮ, ಸಕ್ರಮ ಯೋಜನೆಯಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಆರ್ಥಿಕವಾಗಿ ದುರ್ಬಲರಿಗೆ ನಾನೇ ಸ್ವತಃ ಪಾವತಿಸಿ ನಿವೇಶನಕ್ಕೆ ಹಕ್ಕು ಪತ್ರ ದೊರಕಿಸಿಕೊಟ್ಟಿದ್ದೆ ಎಂದರು.
ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಬೆಂಬಲಿಗರೊಂದಿಗೆ ಆಕಾಶ್ ಅವರಿಗೆ ಸೇರಿದ ನಿರ್ಮಾಣ ಹಂತದ ಮನೆಯೊಳಗೆ ನುಗ್ಗಿ ಅವರನ್ನು ನಿಂದಿಸಿದ್ದಲ್ಲದೇ ಪೊಲೀಸ್ ಠಾಣೆಗೆ ಕರೆದೊಯ್ದು ಕಟ್ಟಡ ತೆರವುಗೊಳಿಸಿದ್ದು, ಅವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಕಟ್ಟಡದ ಧ್ವಂಸಕ್ಕೆ ಕೈ ಹಾಕಿರುವ ಶಾಸಕರ ಮನೆಯೂ ಇಲ್ಲಿಯೇ ಇದೆ. ಈ ಮನೆಗೆ ನನ್ನ ಅವಧಿಯಲ್ಲಿ ಹಕ್ಕುಪತ್ರ ನೀಡಿದ್ದೇನೆ ಎಂದರು.
ಧ್ವಂಸಗೊಳಿಸಿದ ಕಟ್ಟಡವನ್ನು ಪರಿಶೀಲಿಸಿದ ಮಧು ಬಂಗಾರಪ್ಪ ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮುಖಾ೦ತರ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಜಿ ಪಂ ಸದಸ್ಯರಾದ ಶಿವಲಿಂಗಗೌಡ, ವೀರೇಶ್ ಕೊಟಗಿ, ಎಚ್. ಗಣಪತಿ, ಆರ್. ಶ್ರೀಧರ್ ಹುಲ್ಲಿಕೊಪ್ಪ ತಬಲಿ ಬಂಗಾರಪ್ಪ, ರಾಜಶೇಖರ ಕುಪ್ಪಗಡ್ಡೆ, ಎಂ.ಡಿ. ಶೇಖರ್, ಪರಶುರಾಮ ಸಣಬೈಲ್, ಫಯಾಜ್ ಅಹಮದ್, ಅತಿಕುರ್ ರಹಮಾನ್, ನಾಗರಾಜ್, ಡಿಎಸ್ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post