ಕಲ್ಪ ಮೀಡಿಯಾ ಹೌಸ್
ಸೊರಬ: ರಾಜ್ಯ ಮತ್ತು ಕೇಂದ್ರದಲ್ಲಿ ಬ್ಯುಸಿನೆಸ್ ಜನತಾ ಪಕ್ಷ ಆಡಳಿತದಲ್ಲಿದ್ದು, ಬಡವರ ಬಗ್ಗೆ ಕಾಳಜಿ ಇಲ್ಲದೇ ಕೇವಲ ಕಾರ್ಪೋರೇಟ್ ಸಂಸ್ಥೆಗಳಿಗೆ ಮಣೆಹಾಕುತ್ತಿರುವುದರಿಂದ ಭವಿಷ್ಯದಲ್ಲಿ ದೇಶ ಅಧೋಗತಿಗೆ ತೆರಳಲಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಂಗಾರಧಾಮದಲ್ಲಿ ಮಂಗಳವಾರ ಆನವಟ್ಟಿ ಮತ್ತು ಸೊರಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ದೇಶದ ಸ್ವಾತಂತ್ರ್ಯದಿಂದ ಹಿಡಿದು ಏಳು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕೊಡುಗೆ ಸಾಕಷ್ಟಿದೆ. ಬಡವರ ಮತ್ತು ಶೋಷಿತರ ಪರವಾಗಿ ಅನೇಕ ಯೋಜನೆಗಳು ಹಾಗೂ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಜನತೆಯ ಹಿತ ಕಾಯುವಲ್ಲಿ ಕಾಂಗ್ರೆಸ್ ಮುಂಚೂಣಿಯಾಗಿ ಕಾರ್ಯನಿರ್ವಹಿದ್ದು, ಪ್ರಸ್ತುತ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವ್ಯಾಪಾರಿ ದೃಷ್ಟಿಯಿಂದಲೇ ನೋಡುತ್ತಿದೆ. ನಾಡಿನ ಸಂಪತ್ತನ್ನು ಹರಾಜು ಹಾಕಲು ಹೊರಟಿರುವ ಕ್ರಮ ಸಲ್ಲದು. ಕೇಂದ್ರ ಸರ್ಕಾರ ಮಂಡಿಸಲು ಉದ್ಧೇಶಿಸಿದ್ದ ವಿದ್ಯುತ್ ವಿದೇಯದ ತಿದ್ದುಪಡಿ ಕಾಯ್ದೆಯು ಮಂಡನೇಗೂ ಮುನ್ನವೇ ಜನತೆಯಿಂದಲೇ ವಿರೋಧ ವ್ಯಕ್ತವಾಗುತ್ತಿರುವುದನ್ನು ಮನಗಂಡು ಹಿಂದೆ ಸರಿದಿದ್ದಾರೆ. ಇಂತಹ ಜನ ವಿರೋಧಿ ಕಾಯ್ದೆ ಮಂಡಿಸುವ ಪೂರ್ವದಲ್ಲಿಯೇ ಬಿದ್ದಿರುವುದು ಜನ ಶಕ್ತಿಗೆ ಹೆದರಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದರು.
ತಾವು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಮಾನಸಿಕವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೆನು. ಆದರೆ, ಕೊರೋನಾ ಮತ್ತಿತರರ ಸಮಸ್ಯೆಗಳಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ವಿಳಂಭವಾಯಿತು. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಸಾಕಷ್ಟು ಜವಾಬ್ದಾರಿಗಳಿದ್ದು, ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮತ್ತು ಬಿಜೆಪಿಯ ಜನವಿರೋಧಿ ಆಡಳಿತದಿಂದ ಜನತೆ ಬೇಸತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ದುಡಿದು ಬದುಕುವ ವರ್ಗಕ್ಕೆ ಭೂಮಿಯನ್ನು ಕೊಡಿಸುವ ಮಹತ್ವದ ಕಾರ್ಯ ಮಾಡಿದ್ದರು. ಅವರು ಊಟ ಮಾಡಿದ ಮನೆಯವರ ಬಗರ್ಹುಕುಂ ಭೂಮಿಯನ್ನೇ ವಜಾಗೊಳಿಸುತ್ತಿರುವ ಹಾಲಿ ಶಾಸಕರು ಬಂಗಾರಪ್ಪನವರ ಮಗನಾಗಿ ಇಂತಹ ಕೆಲಸಕ್ಕೆ ಕೈ ಹಾಕಿರುವುದು ತಂದೆಗೆ ಮಾಡಿದ ಅವಮಾನವೇ ಸರಿ ಎಂದು ಬೇಸರಿಸಿದ ಅವರು, ಪಟ್ಟಣದ ಸರ್ವೆ ನಂ. 113ರಲ್ಲಿ ಕಟ್ಟಿದ ಮನೆಗಳನ್ನು ತೆರವು ಮಾಡಲು ಬಿಡುವುದಿಲ್ಲ. ಜೊತೆಗೆ ಬಗರ್ಹುಕುಂ ಮತ್ತು ಅರಣ್ಯ ಹಕ್ಕು ಸಾಗುವಳಿದಾರರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಇದಕ್ಕೊ ಮೊದಲು ಯುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನ ಗಡಿ ಭಾಗ ಛತ್ರದಹಳ್ಳಯಿಂದ ಬೈಕ್ ರ್ಯಾಲಿ ಮೂಲಕ ಮಧು ಬಂಗಾರಪ್ಪ ಅವರನ್ನು ಪಟ್ಟಣಕ್ಕೆ ಬರಮಾಡಿಕೊಂಡರು, ನಂತರ ಪಟ್ಟಣದ ಪ್ರಮುಖ ವೃತ್ತ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್ ಮಾತನಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಕರುಣಾಕರ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣವರ್, ಮುಖಂಡರಾದ ಎಚ್. ಗಣಪತಿ, ಎಂ.ಡಿ. ಶೇಖರ್, ಕೆ.ವಿ. ಗೌಡ, ರಾಜಶೇಖರ ಕುಪ್ಪಗಡ್ಡೆ, ಕೆ. ಮಂಜುನಾಥ್, ಜೆ. ಪ್ರಕಾಶ್, ಜಯಶೀಲಗೌಡ, ಹಬೀಬುಲ್ಲಾ ಹವಾಲ್ದಾರ್, ನಾಗರಾಜ ಚಿಕ್ಕಸವಿ, ನಾಗರಾಜ ಚಂದ್ರಗುತ್ತಿ, ಮಾರ್ಯಾಪ್ಪ ಬೆನ್ನೂರು, ಪರಶುರಾಮ ಸಣ್ಣಬೈಲ್, ಕಲ್ಲಪ್ಪ ಚಿತ್ರಟ್ಟಹಳ್ಳಿ, ಪುರಸಭೆ ಸದಸ್ಯರಾದ ಶ್ರೀರಂಜನಿ, ಡಿ.ಎಸ್. ಪ್ರಸನ್ನಕುಮಾರ್, ಆಫ್ರೀನಾ, ಸುಲ್ತಾನ ಬೇಗಂ ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post