ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ಶ್ಲಾಘನೀಯವಾದದ್ದು ಎಂದು ನಿವೃತ್ತ ಶಿಕ್ಷಕಿ ವಿನೋದಾ ಅರ್ಚಕ್ ಹೇಳಿದರು.
ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಪ್ರೌಢಶಾಲೆಯಲ್ಲಿ 1994 ಮತ್ತು 1995 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದಂತಹ ಮುಕ್ತ ಮನಸ್ಸಿನ ಸ್ಪೂರ್ತಿ ಸ್ನೇಹಿತರ ಬಳಗದವರಿಂದ ಸೋಮವಾರದಂದು ಆಯೋಜಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಷೇಶ ಅರ್ಥ ನೀಡುತ್ತಿರುವುದು ಸಂತಸದ ವಿಷಯ, ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದಾಗ ಮಾತ್ರ ಗುರುಶಿಷ್ಯರಲ್ಲಿ ಬಾಂಧವ್ಯ ಹುಟ್ಟಿಕೊಳ್ಳುತ್ತದೆ. ಅದು ಶಿಷ್ಯಂದಿರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸಲು ಮೂಲ ಕಾರಣವಾಗುತ್ತದೆ. ಜನತೆಯ ಪ್ರೀತಿವಿಶ್ವಾಸ ಎಂದಿಗೂ ಅಜರಾಮರ, ಆದರೆ ಗುರುಶಿಷ್ಯರ ನಡುವಿನ ಪ್ರೀತಿ ವಿಶ್ವಾಸವೆ ಇಂದು ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮವೇ ಗುರುಶಿಷ್ಯರ ಸಮಾಗಮಕ್ಕೆ ಮೂಲ ಕಾರಣ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತಿ ಮುಖ್ಯ ಶಿಕ್ಷಕರಾದ ವಿ.ಬಿ ಮಡಿವಾಳ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿದ ಸ್ಫೂರ್ತಿ ಸ್ನೇಹಿತರ ಬಳಗದ ಅಧಕ್ಷೆ ವೀಣಾ ಶಶಿಧರ್ ಹೆಗಡೆ ಮಾತನಾಡಿ, ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುವುದರ ಬಗ್ಗೆ ನಮಗೆ ಮಾರ್ಗದರ್ಶನ ನೀಡಿದವರು ನಮ್ಮ ಶಿಕ್ಷಕರು, ತಮ್ಮ ಎಲ್ಲಾ ನೋವು, ದುಃಖ ಮರೆತು ವಿದ್ಯಾರ್ಥಿಗಳಿಗಾಗಿ ನಗು ನಗುತ್ತಾ ವಿದ್ಯೆ ನೀಡುವಂಥ ಶಿಕ್ಷಕರ ಕಾರ್ಯ ಮಹತ್ವವಾಗಿದ್ದು ಎಂದರು. ಹಾಗೂ ನಮ್ಮೆಲ್ಲ ಸ್ನೇಹಿತರು ಸೇರಿ ಈ ಒಂದು ಗುರುವಂದನಾ ಕಾರ್ಯಕ್ರಮವನ್ನು ನಡೆಸಿದ್ದು ನಮ್ಮೆಲ್ಲರಿಗೂ ಸಂತಸವಾಗಿದೆ ಎಂದರು.
ವಿದ್ಯಾರ್ಥಿಗಳ ಮೊಗದಲ್ಲಿ ಸಂತಸದ ಹೊನಲು: ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿ ನಡೆದುಕೊಂಡು ಬಂದಂತಹ ಅನಿಸಿಕೆಗಳನ್ನು ಹಂಚಿಕೊಂಡರು. ಹಲವು ವರ್ಷಗಳ ನಂತರ ನಡೆದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆಮಾಡಿತ್ತು. ಸ್ನೇಹ ಸಮ್ಮಿಲನ ಕಾರ್ಯಕ್ರಮ, ಭಾವ ಸಮ್ಮಿಲನ ಕಾರ್ಯಕ್ರಮವಾಗಿಯೂ ಗಮನ ಸಳೆಯಿತು. ಸ್ನೇಹಿತರೊಂದಿಗೆ ವಿಚಾರ ವಿನಿಮಯ, ಕ್ರೀಡೆ, ಮನೋರಂಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದವು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ತಮ್ಮ ಬಾಲ್ಯದ ನೆನಪಿನೊಂದಿಗೆ ಭಾವುಕರಾದರು. ಮಧುರ ನೆನಪುಗಳೊಂದಿಗೆ ಸಂಭ್ರಮಿಸಿದರು.
Also read: ಒಂದೇ ಸಮುದಾಯಕ್ಕೆ ಎಲ್ಲ ಧಾರೆ ಎರೆದು, ಇತರರನ್ನು ಕಡೆಗಣಿಸಿದ್ದಿರಿ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ
ನಿವೃತ್ತಿ ಶಿಕ್ಷಕರಾದ ವಿ.ಬಿ ಮಡಿವಾಳ, ವಿನೋದಾ ಅರ್ಚಕ್, ಕೆ.ವಿ ನಾಗರಾಜ್, ಬಿ.ಸಿ ನಾರಾಯಣ ರಾವ್, ನಿರ್ಮಲಮ್ಮ ಕೋಂ ಕನ್ನೇಶ್ವರ, ಬಸವರಾಜ್ ಸುಳ್ಳಳ್ಳಿ, ಬಸವಂತಪ್ಪ ಎನ್., ಯಶವಂತಪ್ಪ ಹೆಚ್.ಕೆ, ಸುರೇಂದ್ರ ಗೌಡ್ರು, ಫಕೀರಪ್ಪ ಹೊಸೂರು, ಸರೋಜಮ್ಮ ಕೋಂ ಪಾಂಡ್ಯಪ್ಪ, ಹಾಗೂ ಶಾಲೆಯ ಈಗಿನ ಮುಖ್ಯ ಶಿಕ್ಷಕ ಆರ್ ಶಶಿಕುಮಾರ್, ಇವರುಗಳಿಗೆ ವಿದ್ಯಾರ್ಥಿಗಳಿಂದ ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು.
ಅಲ್ಲದೇ ತಮ್ಮನ್ನೆಲ್ಲ ಅಗಲಿದ ಹಾಗೂ ಪಾಠ ಕಲಿಸಿದ ಶಿಕ್ಷಕರಾದ ಶಿವಪ್ಪ ಮಾಸ್ತರ್ ಹಾಗೂ ಕನ್ನೇಶ್ವರಪ್ಪ ಮಾಸ್ತರ್ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸ್ಫೂರ್ತಿ ಸ್ನೇಹ ಸಮ್ಮಿಲನ ಸಮಿತಿಯ ಉಪಾಧ್ಯಕ್ಷರಾದ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮೈನಾವತಿ, ಖಜಾಂಚಿ ಸಿರಿದೇವಿ, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಜೆ.ಎಸ್.ನಾಯ್ಕ್, ಹಳೆಯ ವಿದ್ಯಾರ್ಥಿಗಳಾದ ದಿನೇಶ್ ಅಂಚೆ, ದೇವರಾಜ್, ಶರತ್ ನಾಯಕ್, ವಿಶ್ವನಾಥ ಕಾಮತ್, ಗೋಪಿ, ನಟರಾಜ್, ಸೇರಿದಂತೆ 95 ನೇ ಸಾಲಿನ ಸ್ಫೂರ್ತಿ ಬಳಗದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















