ಕಲ್ಪ ಮೀಡಿಯಾ ಹೌಸ್ | ಸೊರಬ |
ಉದ್ರಿ ಗ್ರಾಮದ ಸುತ್ತ ಇರುವ ಐತಿಹಾಸಿಕ ಕೋಟೆಯ ಕಂದಕ ಗ್ರಾಮಕ್ಕೆ ಅಕ್ಷಯ ಜಲಪಾತ್ರೆಯಂತಿದೆ. ಪಾರಂಪರಿಕ ಕೆರೆ, ಕಂದಕ ಮುಚ್ಚಿ ನಾಶಮಾಡುವುದು ಬೇಡ. ಇಲ್ಲಿನ ಹಸಿರು ವನದ ನಡುವೆ ಇರುವ ಬನಶಂಕರಿ ದೇವಾಲಯ, ಇನ್ನಿತರ ಪ್ರಾಚೀನ ಗುಡಿ ಗೋಪುರ, ರೈತ ಜೀವನಾಡಿ ಕೆರೆ ಸುತ್ತಲಿನ ಅರಣ್ಯ ಉಳಿದರೆ ಉದ್ರಿ ಸದಾ ಸಮೃದ್ಧಿಯಲ್ಲಿರುತ್ತದೆ ನಿರ್ಲಕ್ಷ್ಯ ಬೇಡ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.
ತಾಲ್ಲೂಕು ಉದ್ರಿ ಗ್ರಾಮದ ಆಯುಷ್ ಆಸ್ಪತ್ರೆಯ ಗಿಡಮೂಲಿಕೆಗಳ ವನ ವೀಕ್ಷಣೆ ನಡೆಸಿ ಗ್ರಾಪಂ ಗೆ ಭೇಟಿ ನೀಡಿದ ಅವರು ಗ್ರಾಪಂ ಅಧಿಕಾರಿಗಳು, ಸದಸ್ಯರು, ಗ್ರಾಮಸ್ಥರೊಂದಿಗೆ ಮಾತನಾಡಿದರು.
ಇಲ್ಲಿನ ಆಯುಷ್ ಆಸ್ಪತ್ರೆಯ ವೈದ್ಯ ಮಹೇಶ್ ಅವರ ನಿಸ್ಪೃಹ ಕಾಳಜಿ, ಕ್ರಿಯಾಶೀಲತೆಯಿಂದಾಗಿ ಅಪರೂಪದ ಅನೇಕ ವನ ಮೂಲಿಕೆಗಳು ರಕ್ಷಣೆಯಾಗಿದೆ. ರೂವಾರಿ ವೈದ್ಯರು ಹಾಗೂ ರಕ್ಷಣೆಗೆ ಕೈಜೋಡಿಸಿದ ಗ್ರಾಮಸ್ಥರು ಸ್ತುತ್ಯಾರ್ಹರು ಎಂದು ಶ್ಲಾಘಿಸಿ, ಈ ವನ ಗ್ರಾಮದ ರೈತರ ಹಿತ್ತಲಿಗೆ ವಿಸ್ತಾರವಾಗಬೇಕು ಎಂದರು.
Also read: ಜುಲೈ 3-8ರವರೆಗೆ ಆರ್ಟ್ ಆಫ್ ಲಿವಿಂಗ್ ನಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜೀವವೈವಿಧ್ಯ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿಯವರ ನೇತೃತ್ವದಲ್ಲಿ ಅಗಸ್ಟ್ ಮೊದಲ ವಾರದಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಂಡು ಹಸಿರು ಉತ್ಸವ ನಡೆಯಲಿದ್ದು, ವನಸ್ಪತಿ ಅಧ್ಯಯನ, ವೃಕ್ಷಜಾಥ, ಪವಿತ್ರವನ ನಿರ್ಮಾಣ, ಕಾಡಿನೆಡೆಗೆ ಹೆಜ್ಜೆ, ಕಾನು ಹಬ್ಬ ಉತ್ಸವ ನಡೆಸಲು ಗ್ರಾಮಸ್ಥರು ಈ ವೇಳೆ ನಿರ್ಣಯ ಕೈಗೊಂಡರು.
ಶ್ರೀಪಾದ ಬಿಚ್ಚುಗತ್ತಿ ಸೊರಬ ತಾಲ್ಲೂಕಿನ ಹಸಿರು ಕಾರ್ಯಪ್ರಗತಿ, ಗುರಿಯ ಕುರಿತು ವಿವರಿಸಿ ಬಿಳಾಗಿ ಜೀವವೈವಿಧ್ಯ ಕೆರೆ ಹೂಳು ತೆಗೆದು ಪುನಶ್ಚೇತನ ಗೊಳಿಸಲು ಗ್ರಾಪಂ ಆಡಳಿತಕ್ಕೆ ಕೋರಿದರು.
ಪರಿಸರ ತಂಡ ಡಿವೈಆರ್ಎಫ್ಒ ರಾಘವನ್ ಮತ್ತು ಸಿಬ್ಬಂದಿ ಸಂಗಡ ಯಲವಾಟ ಹೊನ್ನೆ ಮರದ ಕಾಡಿಗೆ ತೆರಳಿ ಕಾನು ಅಭಿವೃದ್ಧಿ ರಕ್ಷಣೆ ಕುರಿತು ನಿರ್ಧಾರ ಕೈಗೊಂಡಿತು.
ವರದಿ: ಮಧುರಾಮ್, ಸೊರಬ
ಗ್ರಾಪಂ ಪಿಡಿಒ ಹೋಮೇಶ್, ವೈದ್ಯಾಧಿಕಾರಿ ಎಂ.ಕೆ. ಮಹೇಶ್, ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ, ಗ್ರಾಮ ಪ್ರಮುಖರಾದ ಸುರೇಂದ್ರ ಗೌಡ, ನಂದೀಶ್, ಬಷೀರ್ ಸಾಬ್, ಸದಾಪಾಟೀಲ್, ಅಂಬರೀಶ್, ಶಿವಮೂರ್ತಿ ಪಾಟೀಲ್, ಅಭಿಷೇಕ್, ಭೀಮಪ್ಪ, ಮಹೇಶ್ ಗೌಡ, ಲಿಂಗರಾಜ್, ದರ್ಶನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post