ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನಾ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಮೇ. 10ರಂದು ಬೆಳಗ್ಗೆ 6ರಿಂದ ಕಠಿಣ ಕರ್ಫ್ಯೂ ವಿಧಿಸಲಾಗುವುದು. ಅನಗತ್ಯ ತಿರುಗಾಡುವ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕಠಿಣ ಕೊರೋನಾ ಕರ್ಫ್ಯೂ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಶನಿವಾರ ತಹಶೀಲ್ದಾರ್ ಶಿವಾನಂದ ರಾಣೆ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿವಿಧ ಇಲಾಖೆಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಜನರಿಗೆ ತೊಂದರೆಯಾಗದಿರಲು ಅಗತ್ಯ ವಸ್ತುಗಳ ಖರೀದಿ ಮಾಡಲು ಬೆಳಗ್ಗೆ 6ರಿಂದ 10ರವರೆಗೆ 4ತಾಸು ಅವಕಾಶ ಕಲ್ಪಿಸಲಾಗಿದೆ. ಪಟ್ಟಣದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗುವುದು. ಆದರೆ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವವರಿಗೆ, ಸರ್ಕಾರಿ ನೌಕರರಿಗೆ, ಕೊರೋನಾ ವಾರಿಯರ್ಸ್ಗಳಿಗೆ ಮತ್ತು ತುರ್ತು ಸೇವೆಯ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೋನಾ ಹರಡುವಿಕೆಯ ಸರಪಳಿಯನ್ನು ತುಂಡರಿಸುವುದು ಕ್ಲೋಸ್ಡೌನ್ ಕರ್ಫ್ಯೂ ಪ್ರಮುಖ ಉದ್ದೇಶವಾಗಿದೆ. ಕೆಲವರು ಅಗತ್ಯ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ಅನಾಗತ್ಯವಾಗಿ ಸಂಚರಿಸುವುದು ಸಹ ಗಮನಕ್ಕೆ ಬಂದಿರುತ್ತದೆ. ಪಟ್ಟಣಕ್ಕೆ ನೆರೆಯ ಗ್ರಾಮಗಳಿಂದ ಯಾವುದೇ ಉದ್ದೇಶವಿಲ್ಲದೆ ವಾಹನಗಳು ಆಗಮಿಸುವುದಕ್ಕೆ ನಿರ್ಬಂಧಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಪಟ್ಟಣದ ಜನತೆಯು ಸಹ ಅಗತ್ಯವಸ್ತುಗಳನ್ನು ಕೊಳ್ಳಲು ದ್ವಿಚಕ್ರ ಮತ್ತು ಕಾರು-ಜೀಪುಗಳನ್ನು ಬಳಸದೆ ಸಮೀಪದಲ್ಲಿನ ಅಂಗಡಿಗಳಲ್ಲಿ ನಡೆದುಕೊಂಡೇ ಹೋಗಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಶಿವಾನಂದ ರಾಣೆ ಮಾತನಾಡಿ, ಕೊರೋನಾ ಎರಡನೇ ಅಲೆ ಅತ್ಯಂತ ಪ್ರಭಲವಾಗಿದ್ದು, ಸರ್ಕಾರದ ಆದೇಶದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಅನಗತ್ಯವಾಗಿ ಅಂತರ್ ಜಿಲ್ಲಾ ಸಂಚಾರಕ್ಕೆ ನಿಬಂಧವಿಸಲಾಗಿದೆ. ತಾಲ್ಲೂಕು ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಹಾವೇರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅಗಸನಹಳ್ಳಿ, ಬಾರಂಗಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹರೀಶಿ, ಸಂಪಗೋಡು, ಬಾಡದಬೈಲು, ಅಂದವಳ್ಳಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗುವುದು ಎಂದರು.
ಸಭೆಯಲ್ಲಿ ಉಪ ತಹಶೀಲ್ದಾರ್ ಚನ್ನಕೇಶವ, ಶಿರಸ್ತೇದಾರ್ ಎಸ್. ವಿಜಯಕುಮಾರ್, ತಾಲ್ಲೂಕು ಕಚೇರಿ ಸಿಬ್ಬಂದಿ ಚಂದ್ರಶೇಖರ್, ಬಿ.ಜೆ. ವಿನೋದ್, ಗ್ರಾಮ ಲೆಕ್ಕಾಧಿಕಾರಿ ಯಶವಂತ್ ರಾಜ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post