ಕಲ್ಪ ಮೀಡಿಯಾ ಹೌಸ್ | ಸೊರಬ |
ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವಿಪರೀತ ಕಲ್ಲು ಗಣಿಗಾರಿಕೆ ಕಾರ್ಯ ನಡೆಯುತ್ತಿದ್ದು. ಮಳೆತರುವ ರಕ್ಷಿತ ಅರಣ್ಯವೂ ಸೇರಿದಂತೆ ಕಾಡುಮೃಗಗಳ ಆವಾಸಕ್ಕೂ ಸಂಚಾಕಾರ ತಂದಿದೆ. ಗಣಿಗಾರಿಕೆಯ ದುಷ್ಪರಿಣಾಮ ನೇರ ಇಲ್ಲಿನ ಜನತೆಯ ಮೇಲೆ ಬೀರಿದ್ದು ಹಲವು ಕಾಯಿಲೆ ಕಸಾಲೆಗೆ ತುತ್ತಾಗಿದ್ದಾರೆ ಎಂದು ಬಸ್ತಿಕೊಪ್ಪ ಗ್ರಾಮಸ್ಥರು ತಹಶೀಲ್ದಾರರ ಗಮನಕ್ಕೆ ತಂದರು.
ಚಂದ್ರಗುತ್ತಿ ಹೋಬಳಿಯ ಬಾಡದ ಬಯಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮನವಿ ನೀಡಿದ ಗ್ರಾಮಸ್ಥರು, ಗಣಿಗಾರಿಕೆಯ ಸಮಸ್ಯೆ ಕುರಿತು ಜಿಲ್ಲಾಧಿಕಾರಗಳು, ಗಣಿಗಾರಿಕೆ ಇಲಾಖೆ ಅಧಿಕಾರಿಗಳು, ರಾಜ್ಯ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶಿಸರ, ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿಯ ಶ್ರೀಪಾದ ಬಿಚ್ಚುಗತ್ತಿ ಗಮನಕ್ಕೆ ತಂದಿದ್ದು, ಖುದ್ದು ಜಿಲ್ಲಾಧಿಕಾರಿಗಳು ಆಗಮಿಸಿ ಜನರಿಗೆ ಮಾರಕವಾಗದಂತೆ ಲೀಜ್ ಅವಧಿ ತನಕ ಗಣಿ ನಿಯಮದಂತೆ ನಡೆಸಲು ಗಣಿದಾರರಿಗೆ ಸೂಚಿಸಿದ್ದರು. ಮತ್ತೆ ಯಾವುದೇ ಹೊಸ ಗಣಿಗಾರಿಕೆ ನಡೆಸಲು ಅಸಮ್ಮತಿ ಸೂಚಿಸಿದ್ದರೂ ಇದೇ ಸನಂ 24ರಲ್ಲಿ ಮತ್ತೋರ್ವರಿಗೆ ಗಣಿಗಾರಿಕೆ ನಡೆಸಲು ಸರ್ಕಾರ ಆದೇಶ ನೀಡಿದ್ದು ಇಲ್ಲಿನ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿದಂತಾಗಿದೆ ಅಷ್ಟೆ ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಇನ್ನೂಂದೆಡೆ ಸಂಪೂರ್ಣ ನಾಶ ಪಡಿಸುವ ಅವೈಜ್ಞಾನಿಕ ಸಂವಿಧಾನ ಬಾಹಿರ ಯೋಜನೆಗೆ ಮುಂದಾಗಿದ್ದು ನಮಗೆ ತೀವ್ರ ಬೇಸರ ತಂದಿದೆ. ಇಂತಹ ಯೋಜನೆಗಳನ್ನು ಉಗ್ರವಾಗಿ ಖಂಡಿಸುತ್ತಿದ್ದು ತೀವ್ರ ಹೋರಾಟಕ್ಕೆ ಅಣಿಯಾಗುವುದು ಅನಿವಾರ್ಯವಾಗಿದೆ ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾ ಮೋಹನ್ ಭಸ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಬಾಡದಬೈಲು ಗ್ರಾಮಸ್ಥರ ಬೇಡಿಕೆಯಂತೆ ಆಶ್ರಯ ನಿವೇಶನಕ್ಕೆ ಈಗಾಗಲೇ ಜಾಗವನ್ನು ಪರಿಶೀಲಿಸಿದ್ದೇವೆ, ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಇಲ್ಲಿ ಸಾಧ್ಯವಿರುವ ಎಲ್ಲಾ ಸಮಸ್ಯೆಗಳಿಗೂ ಇಲ್ಲಿಯೇ ಪರಿಹಾರ ನೀಡುತ್ತೇವೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಯನ್ನು ಕಳುಹಿಸಿ ಇತ್ಯರ್ಥ ಮಾಡಲಾಗುವುದು ಎಂದರು.
Also read: ಹರಿಪಾದ ಸೇರಿದ ಖ್ಯಾತ ಪಂಡಿತ್ ಶ್ರೀ ಜಯತೀರ್ಥಾಚಾರ್ಯ ಮಳಗಿ
ಸುಮಾರು 9 ರಷ್ಟು ಅರ್ಹ ಫಲಾನುಭಾವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯ ಮಾಶಾಸನ ಆದೇಶ ಮಂಜುರಾತಿ ಪತ್ರವನ್ನು ವಿತರಿಸಿದರು. ಗ್ರಾಮಸ್ಥರು ಹಲವು ಸಮಸ್ಯೆಗಳ ಕುರಿತು 173 ರಷ್ಟು ಮನವಿ ಸಲ್ಲಿಸಿದರು. ನಂತರ ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದರು.
ಬಸ್ತಿಕೊಪ್ಪ ಗ್ರಾಮದಲ್ಲಿ ವ್ಯವಸ್ಥಿತ ಮೂಲಭೂತ ಅವಶ್ಯಕತೆಗಳ ಕೊರತೆ ಕಾಣಿಸಿಕೊಂಡಿದೆ. ಆ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಚಂದ್ರಗುತ್ತಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ ಇದೇ ವೇಳೇ ತಹಶಿಲ್ದಾರರ ಗಮನಕ್ಕೆ ತಂದರು.
ಗ್ರಾ.ಪಂ ಅಧ್ಯಕ್ಷ ರತ್ನಾಕರ ಎಂ.ಪಿ, ಉಪಾಧ್ಯಕ್ಷ ಲಕ್ಷ್ಮಿ ಚಂದ್ರಪ್ಪ, ಸದಸ್ಯ ತಿರುಪತಿ, ಚಂದ್ರಗುತ್ತಿ ನಾಡಕಚೇರಿ ಉಪತಹಶೀಲ್ದಾರ್ ವಿಎಲ್ ಶಿವಪ್ರಸಾದ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಂದ್ರಪ್ಪ, ಮಾಜಿ ಗ್ರಾಂ.ಪಂ. ಉಪಾಧ್ಯಕ್ಷ ಪ್ರದೀಪ್, ತಾಪಂ ಸಹಾಯಕ ನಿರ್ದೇಶಕ ಶ್ರೀ ರಾಮ್, ಕೃಷಿ ಅಧಿಕಾರಿ ಶಂಕರ್, ಆರೋಗ್ಯ ಇಲಾಖೆ ಅಧಿಕಾರಿ ಸಾಹುಕಾರ್, ಸೇರಿದಂತೆ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂ ವಿಭಾಗ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಧಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















