ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಭಾಷೆಯನ್ನು ಜೀವಂತ ಉಳಿಸಿ ಬೆಳೆಸುವಲ್ಲಿ ಇಂದಿಗೂ ಯಕ್ಷಗೇಯ, ಗಾಯನ ಸಕ್ರಿಯವಾಗಿದೆ. ನಮ್ಮ ನೆಲೆಯ ಸಂಸ್ಕೃತಿ, ಸಾಹಿತ್ಯ, ಪುರಾಣಗಳು ಇಂದು ಜನಮಾನಸದಲ್ಲಿ ಉಳಿಯಲು ಇವುಗಳ ಪಾತ್ರ ಪ್ರಧಾನವಾಗಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಧುರಾಯ ಜಿ. ಶೇಟ್ ಹೇಳಿದರು.
ತಾಲ್ಲೂಕು ಉಳವಿ ಭಾರ್ಗವ ನಾಡಿಗ್ ಕುಟುಂಬದ ಆತಿಥ್ಯದಲ್ಲಿ ಅವರ ಮನೆಯ ಅಂಗಳದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು, ತಾಲ್ಲೂಕು ಕಾರ್ಯನಿರತ ಪರ್ತಕರ್ತರ ಸಂಘ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಮಚಿ ಯಕ್ಷಕಲಾಬಳಗದ ವತಿಯಿಂದ ನಡೆದ ಗದಾಪರ್ವ ತಾಳಮದ್ದಳೆಯಲ್ಲಿ ಎಂ.ಕೆ. ಭಟ್ ಕೌರವನಾಗಿ, ಶಂಕರನಾರಾಯಣ ಹೊಸಕೊಪ್ಪ ಸಂಜಯನಾಗಿ, ಉಳಿದ ಪಾತ್ರದಾರಿಗಳಾಗಿ ಲಿಂಗದಹಳ್ಳಿ ವಿಶ್ವನಾಥ ಪಟೇಲ್, ಇಡುವಾಣಿ ಗಣಪತಿ, ರವಿಶಂಕರ್, ರಾಮಮೂರ್ತಿ, ಅರುಣ, ಹಿಮ್ಮೇಳದಲ್ಲಿ ಅಮಚಿ ಮಹಬಲಗಿರಿ ಭಾಗವತಿಕೆ, ಮೂಡುಗೋಡು ಮಹಬಲೇಶ್ವರ ಚಂಡೆವಾದನ, ಮಂಜುನಾಥ ಗುಡ್ಡೆದಿಂಬ ಮದ್ದಳೆ ವಾದಕರಾಗಿ ಪಾಲ್ಗೊಂಡಿದ್ದರು.
ಇದೇ ಕಾರ್ಯಕ್ರಮದಲ್ಲಿ ಈಚೆಗೆ ನಿಧನರಾದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸೊರಬದ ಸೈಯದ್ ಅನ್ಸರ್,ಸಾಗರದ ಪ್ರಕಾಶ ಕಮ್ಮಾರ್, ಆನವಟ್ಟಿ ನಾವೆಂ ಬೋಡ್ಕೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತ ಕಲಾವಿದ ಸೈಯದ್ ಅನ್ಸರ್ ಕುಟುಂಬದ ನೆರವಿಗೆ 5 ಸಾವಿರ ರೂ. ನೀಡುವ ಮೂಲಕ ಪುರಸಭೆ ಸದಸ್ಯ ಪ್ರಸನ್ನ ಶೇಟ್ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.
ಬಣ್ಣದ ಬಾಬು, ಡಾ.ಎಂ.ಕೆ.ಭಟ್, ಪಾಣಿರಾಜಪ್ಪ, ಡಿ.ಮಂಜುನಾಥ್, ಭಾರ್ಗವ ನಾಡಿಗ್ ಮೊದಲಾದವರು ಸೈಯದ್ ಅನ್ಸರ್ ಕುರಿತು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮ ಆಯೋಜಿಸಿದ ನಿವೃತ್ತ ಶಿಕ್ಷಕ ಎಸ್.ಎಂ.ನಾಡಿಗ್ ದಂಪತಿಗಳಿಗೆ ವೇದಿಕೆ ವತಿಯಿಂದ ಗೌರವಿಸಲಾಯಿತು.
ವೇದಿಕೆ ಅಧ್ಯಕ್ಷ ಎಸ್. ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಕಜಾಪ ತಾ. ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಡಾ. ಎಂ. ಕೆ. ಭಟ್, ಪಾಣಿರಾಜಪ್ಪ, ತಾಕನಿಪಸಂ ಅಧ್ಯಕ್ಷ ಯು. ಎಂ. ನಟರಾಜ್, ಹಿರಿಯ ಪತ್ರಕರ್ತ ಬಿ.ಎನ್.ಸಿ. ರಾವ್, ಗೌರಮ್ಮ ಎಸ್. ಭಂಡಾರಿ, ಕಜಾಪ ಮಹಿಳಾ ಘಟಕದ ಸುಜಾತಾ ಜೋತಾಡಿ, ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಡಮನೆ, ಗುರುಮೂರ್ತಿ ಗುಡಿಗಾರ್, ಮಂಜಪ್ಪ ಟಿ., ರೇವಣಪ್ಪ ಬಿದರೆಗೆರೆ, ಹಾಲೇಶ ನವುಲೆ, ಸವಿತಾಭಟ್, ಮಹೇಶ್ ಕಟ್ಟಿನಕೆರೆ, ಎಸ್.ಆರ್.ಕುಮಾರಸ್ವಾಮಿ, ರಾಘುಬಾಪಟ್, ವೆಂಕಟೇಶ ಮೂಡುಗೋಡು, ಗುಡವಿ ನಟರಾಜಗೌಡ, ರಾಜುಗೌಡ, ಸುರೇಶ ಬರಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post