ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಾಣ್ಯೇಕಾ ಸಮಲಂಕರೋತಿ ಯಾ ಸಂಸ್ಕೃತಾ ಧಾರ್ಯತೇ ಎಂಬ ಮಾತು ಸಂಸ್ಕೃತದ ಮಹತ್ವ ಹೇಳಿದರೆ, ಅದರ ಕಾರಣದಿಂದಲೇ ಪ್ರಸಿದ್ಧರಾದ ವ್ಯಕ್ತಿಯೊಬ್ಬರನ್ನು ಪರಿಚಯಿಸದೇ ಇದ್ದರೆ ಹೇಗೆ?
ಸಂಸ್ಕೃತದ ಸೆಳೆತದಿಂದಲೇ ಜನಮಾನಸದಲ್ಲಿ ಉಳಿಯುವಂತಾದ ಇವರು ನಮಗೆ ಆದರ್ಶಪ್ರಾಯರು. ಓದಿಗೆ ಸಾಧನೆಗೆ ವಯಸ್ಸಿನ ಹಂಗಿಲ್ಲ, ಸಾಧಿಸುವ ಛಲವೊಂದಿದ್ದರೆ ಯಾವುದೂ ನಮಗೆ ಅಡ್ಡಿಯಾಗುವುದಿಲ್ಲ. ಹಾದಿಯ ಮುಳ್ಳೆಲ್ಲವೂ ಹೂವಿನಂತಾಗುತ್ತದೆ. ಅದೇ ರೀತಿಯಲ್ಲಿ ಎಲ್ಲಾ ಕಲ್ಲು ಮುಳ್ಳುಗಳನ್ನು ದಾಟಿ ನಡೆಯುವ ಹಾದಿಯನ್ನು ಹೂವಿನಂತಾಗಿಸಿದ ಮಹಿಳೆಯೊಬ್ಬರ ಕುರಿತು ನಿಮಗೆ ಹೇಳಲೇಬೇಕು. ಅವರೇ ಮನು ಚವ್ಹಾಣ್ ಇವರು ಸಂಸ್ಕೃತದ ಶಿಕ್ಷಕರಾಗಿ ಶಿವಮೊಗ್ಗದಲ್ಲಿ ಎಲ್ಲರಿಗೂ ಚಿರಪರಿಚಿತರಾದವರು.


ತಮ್ಮ ಸಂಸ್ಕೃತ ಶಿಕ್ಷಣ-ಪ್ರಶಿಕ್ಷಣವನ್ನು ಮಾಯಸಂದ್ರ ತುರುವೇಕೆರೆಯಲ್ಲಿ ಪಡೆದಿದ್ದೇ ಅಲ್ಲದೇ, ಸಂಸ್ಕೃತ ಭವನದಲ್ಲಿ 2015 ರಲ್ಲಿ ನಡೆದ ವಿಸ್ತಾರಕ ವರ್ಗದಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದ ಅನೇಕ ಶಾಲೆಗಳಿಗೆ ಶಾಲಾಸು ಸಂಸ್ಕೃತ ಯೋಜನೆಯಡಿಯಲ್ಲಿ ನಗರದ ವಿವಿಧ ಶಾಲೆಯ ಮಕ್ಕಳಿಗೆ ಪಾಠವನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ. ಅದರಲ್ಲಿಯೂ ಓಪನ್ ಮೈಂಡ್ ಸ್ಕೂಲ್, ವಾಸವಿ ಸ್ಕೂಲ್,ಚಿಟ್ಟೆ ಮಾಂಟೇಸರಿ ಅಲ್ಲದೇ ವಡ್ಡಿನಕೊಪ್ಪದ ಸರ್ಕಾರಿ ಶಾಲೆಗಳಿಗೆ ತೆರಳಿ ಅಯನಂ, ಸಾರಿಣಿ ಮುಂತಾದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಅರ್ಥೈಸಿದ್ದಾರೆ. ತಮ್ಮ ಪಾಠ ಮಾಡುವ ರೀತಿಯಿಂದಲೇ ಪ್ರಸಿದ್ಧರಾದಂತಹ ಇವರು ಎಂತಹ ಮಗುವಿಗೂ ಸಂಸ್ಕೃತದ ಆಸಕ್ತಿಯನ್ನು ಹುಟ್ಟುವಂತೆ ಮಾಡುವವರಾಗಿದ್ದಾರೆ. ಸದಾ ಸಂಸ್ಕೃತದ ಚಿಂತನೆ ಆಲೋಚನೆಯಲ್ಲಿಯೇ ತೊಡಗಿರುವಂತಹ ಇವರು ತಮ್ಮ ಪತಿ, ಮಗ, ಮಗಳು ಇವರೆಲ್ಲರಿಗೂ ಸಂಸ್ಕೃತದ ಸುಗಂಧವನ್ನು ಬೀರಿದವರಾಗಿದ್ದಾರೆ. ತಮ್ಮ ಇಡೀ ಕುಟುಂಬವನ್ನೇ ಸಂಸ್ಕೃತ ಕುಟುಂಬವನ್ನಾಗಿಸಿದ್ದಾರೆ.

ನಿಸ್ವಾರ್ಥ ಸೇವೆಯಿಂದ ಸಂಸ್ಕೃತಕ್ಕಾಗಿ ದುಡಿಯುವಂತಹ ಮನು ಅವರು ನೀವು ಸಂಸ್ಕೃತ ಭವನಕ್ಕೆ ಹೋದರೆ ತಮ್ಮ ನಗು ಮೊಗದಿಂದಲೇ ಎಲ್ಲರನ್ನ ಮಾತನಾಡಿಸಿ, ಸಂಸ್ಕೃತದ ಸೆಳೆತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ತಾನೆಲ್ಲೇ ಇರಲಿ, ಅಲ್ಲಿ ಇರುವಂತಹ ಮಕ್ಕಳಿಗೂ ಹಿರಿಯರಿಗೂ ಒಂದೆರಡು ಸಂಸ್ಕೃತ ಪದವನ್ನಾದರೂ ಕಲಿಸಿ ಅವರಿಗೆ ಸಂಸ್ಕೃತ ರುಚಿಯನ್ನು ಹತ್ತಿಸುವಂತಹ ಶ್ರೀಮತಿ ಮನು ಅವರು ನಮ್ಮೆಲ್ಲರಿಗೂ ಸದಾ ಆದರ್ಶಪ್ರಾಯ. ಸಂಸ್ಕೃತದ ಶಿಕ್ಷಕಿಯಾಗಿ ಎಲ್ಲಾ ಮಕ್ಕಳ ಪ್ರೀತಿಯನ್ನು ಗಳಿಸಿದಂತಹ ಶ್ರೀಮತಿ ಮನು ಚವ್ಹಾಣ್ ಅವರು ತಮ್ಮ ಶ್ರದ್ಧೆಯ ಕಾಯಕದಿಂದಲೇ ಹೆಸರುವಾಸಿ. ಅವರು ನಡೆಸಿಕೊಡುವ ಭಗವದ್ಗೀತೆಯ ತರಗತಿಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಂಡಾಗ ಜೊತೆಗೆ ಬಾಲ ಕೇಂದ್ರದ ವಿದ್ಯಾರ್ಥಿಗಳ ವಾರ್ಷಿಕೋತ್ಸವವನ್ನು ಕಂಡಾಗ ನಿಜಕ್ಕೂ ಮನು ಭಗಿನಿ ಅತ್ಯಂತ ಉತ್ಕೃಷ್ಟ ಕಾರ್ಯವೆಸಗಿದ್ದಾರೆಂಬುದು ನಿಸ್ಸಂಶಯ. ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾದ ಮನು ಭಗಿನಿ ಜಿಲ್ಲಾ ಬ್ರಾಹ್ಮಣ ಸಂಘ ನಡೆಸುವ ವಸಂತ ವೇದ ಶಿಬಿರದಲ್ಲಿ ಎಲ್ಲ ಮಕ್ಕಳಿಗೂ ಆಚ್ಚು ಮೆಚ್ಚಿನ ಗುರುಮಾತೆ. ಇಷ್ಟೇ ಅಲ್ಲದೇ ಡಿಜಿಟಲ್ ಮಾಧ್ಯಮ ಬಳಸಿ ಎಲ್ಲರಿಗೂ ಸಂಸ್ಕೃತ ಕಲಿಸುವಲ್ಲಿ ಯಶಸ್ವಿಯಾದ ಇವರು ಅತ್ಯಂತ ಉತ್ಸಾಹದಿಂದ ತಾವಿರುವ ಜಾಗವನ್ನು ಸಂಸ್ಕೃತದತ್ತ ಸೆಳೆಯುವಲ್ಲಿ ನಿಸ್ಸಿಮರು. ಪಠಾಮಿ ಸಂಸ್ಕೃತಂ ನಿತ್ಯಂ ಧ್ಯಾಯಾಮಿ ಸಂಸ್ಕೃತಂ ಸದಾ ಎನ್ನುವ ಸಾಲುಗಳಿಗೆ ಅನ್ವರ್ಥವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಮನು ಅವರಿಗೆ ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇನ್ನಷ್ಟು ಮಕ್ಕಳು ತಮ್ಮಿಂದ ಸಂಸ್ಕೃತ ಕಲಿತು ಸಂಸ್ಕೃತ ಮಾತೆಯ ಸೇವೆ ಮಾಡುವಂತಾಗಲಿ… ಸಂಸ್ಕೃತಕ್ಕೆ ಗರಿ ಮೂಡಿಸುವಂತಾಗಲಿ ಎಂಬ ಆಶಯ ನನ್ನದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post