ಕಲ್ಪ ಮೀಡಿಯಾ ಹೌಸ್
ಅಯ್ಯ ಎಂದೆರೆ ಸ್ವರ್ಗ ಎಲವೋ ಎಂದರೆ ನರಕ.
ಆಚಾರವೇ ಸ್ವರ್ಗ, ಅನಾಚಾರವೇ ನರಕ.
ದಯವೇ ಧರ್ಮದ ಮೂಲವಯ್ಯ
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ.
ಮುತ್ತಿನಂಥ ಮಾತುಗಳು : ಇವನ್ನು ನುಡಿದವರು ಬಸವಣ್ಣನವರು.
ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡುವೆ ಬಡವನಯ್ಯಾ; ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ ಕೂಡಲಸಂಗಮದೇವ ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ಹೀಗೆ 900 ವರ್ಷಗಳ ಹಿಂದೆಯೇ ನಮ್ಮ ಸಮಾಜದಲ್ಲಿ ಇಂದೂ ಅಗತ್ಯವಾಗಿರುವ ಸುಧಾರಣೆಯನ್ನು ಕಂಡುಕೊಂಡು ಆಚರಣೆಗೆ ತರಲು ಪ್ರಯತ್ನಿಸಿದ, ಧರ್ಮವನ್ನು ಕರ್ಮಕಾಂಡದಿಂದ ಬಿಡುಗಡೆ ಮಾಡಿ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ, ಕನ್ನಡದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾದ ವಚನಗಳನ್ನು ಪ್ರಚಾರ ಮಾಡಿದ ಮಹಾಧೀಮಂತರಾದ, ಸ್ವಾರ್ಥವನ್ನು ಸಂಪೂರ್ಣವಾಗಿ ತ್ಯಜಿಸಿ ಶರಣರ ಸೇವೆಗಾಗಿ ದಾನ-ದಾಸೋಹವನ್ನು ನಡೆಸಿದ, ಭಕ್ತ ಭಂಡಾರಿ ಬಸವಣ್ಣನವರು ಕನ್ನಡಿಗರಿಗೆ ಚಿರವಂದ್ಯರು.
ಕನ್ನಡ ನೆಲದ ವೇಲೆ ಪ್ರಥಮ ಸಮಾಜೋಧಾರ್ಮಿಕ ಆಂದೋಲನವೊಂದು ಹನ್ನೆರಡನೆಯ ಶತಮಾನದಲ್ಲಿ ಜರುಗಿತು. ಈ ಆಂದೋಲನದ ನೇತಾರ ಬಸವಣ್ಣನವರು.
ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು; ಮತ್ತು ತಮ್ಮ ಪರಿಸರವನ್ನು ಉದಾತ್ತೀಕರಿಸುವ ಯುಗ ಪುರುಷರು. ಈ ಎರಡನ್ನೂ ಸಾಧಿಸುವ ಮೂಲಕ ಬಸವಣ್ಣನವರು ಕೇವಲ ಮಹಾಪುರುಷರಾಗಿ ಉಳಿಯದೆ, ಯುಗ ಪುರುಷರಾಗಿಯೂ ಬೆಳೆದಿದ್ದಾರೆ. ಸಾಮಾನ್ಯವಾಗಿ ಯುಗುಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಒಂದು ಹೊಸ ತಿರುವು ತಂದುಕೊಡುತ್ತಾರೆ. ಬಸವಣ್ಣನವರು ಇಂಥ ಎಲ್ಲ ಕ್ಷೇತ್ರಗಳಿಗೂ ಹೊಸ ತಿರುವು ಕೊಟ್ಟ ಕಾರಣ, ಅವರನ್ನು ಜಗತ್ತು ಕಂಡ ಒಬ್ಬ ಅಪರೂಪದ ಸಮಗ್ರ ಯುಗುಪುರುಷ ನೆಂದು ಗುರುತಿಸಲಾಗುತ್ತಿದೆ.
ಬಸವಣ್ಣನವರ ಬಾಳು ಸತತ ಸಾಧನೆಯ ಸೋಪಾನ. ಅಂದಿನವರೆಗೆ ಸಮಾಜದಲ್ಲಿ ಹೆಪ್ಪುಗಟ್ಟಿದ್ದ ಅಮಾನವವೀಯತೆ ಮೌಢ್ಯದ ಕತ್ತಲೆಯನ್ನು ಬಸವಣ್ಣನವರು ಮತ್ತು ಇತರ ಶರಣರು ತಮ್ಮ ಪ್ರಖರ ವ್ಯಕ್ತಿತ್ವದ ಕಿರಣಗಳಿಂದ ಹೊರದೂಡುವ ಬೆಳಕಿನ ಆಶಾಕಿರಣವಾದರು. ಮಾನವ ಮಹಾದೇವನಾಗುವುದು ಬೇಡ, ಲೋಕೋಪಕಾರಿ ಕಲ್ಯಾಣಿಯಾದರೆ ಸಾಕು. ಅಂತಾಗಿಸಲು ಮಾನವ ಮೊದಲು ಇಲ್ಲಿ ಸಲ್ಲುವ ಕಾರ್ಯ ನೆರವೇರಿಸಬೇಕು. ಭೂಮಿಯ ಮೇಲೆ ಸ್ವರ್ಗ-ನರಕಗಳಿವೆ ಎಂದರು.
ಬಸವಣ್ಣನವರು ಹುಟ್ಟುವ ಹೊತ್ತಿಗೆ ಕರ್ನಾಟಕದ ಧಾರ್ಮಿಕ ಕ್ಷೇತ್ರವನ್ನು ಅಗ್ರಹಾರ ಸಂಸ್ಕೃತಿ, ದೇವಾಲಯ ಸಂಸ್ಕೃತಿಗಳು ಆಳುತ್ತಿದ್ದವು. ಅಗ್ರಹಾರ ಸಂಸ್ಕತಿಯು ಮೂಲತಃ ಧಾರ್ಮಿಕವಾಗಿ ಕರ್ಮನಿಷ್ಠ, ಸಾಮಾಜಿಕವಾಗಿ ವರ್ಣಬೇಧ ನಿಷ್ಠವಾದುದು. ಈ ದೇವಾಲಯ ಸಂಸ್ಕೃತಿ ಇದೇ ದಾರಿಗೆ ಹೊರಳಿದ್ದರೂ, ಮೂಲತಃ ಅದು, ಧಾರ್ಮಿಕವಾಗಿ ಭಕ್ತಿನಿಷ್ಠ, ಸಾಮಾಜಿಕವಾಗಿ ವರ್ಣಬೇಧ ನಿರಾಕರಣ ನಿಷ್ಠವಾದುದು. ಹೀಗಾಗಿ ಹುಟ್ಟು ಹೋರಾಟಗಾರನಾದ ಬಸವಣ್ಣನವರು ತನ್ನ ಎಳೆಯ ವಯಸ್ಸಿನಲ್ಲೆ ಸ್ಥಗಿತ ಮೌಲ್ಯದ ಅಗ್ರಹಾರ ಸಂಸ್ಕೃತಿಯನ್ನು ತೊರೆದು, ಚಲನಶೀಲ ಮೌಲ್ಯದ ದೇವಾಲಯ ಸಂಸ್ಕೃತಿಯ ನೆಲೆಯಾಗಿದ್ದ ಕೂಡಲ ಸಂಗಮಕ್ಕೆ ಬಂದರು. ಇದು ಅವರ ಜೀವನದಲ್ಲಿ ಕರ್ಮದಿಂದ ಧರ್ಮಕ್ಕೆ ದಾಟಿಬಂದ ಕಾಲಘಟ್ಟವಾಗಿದೆ.
ವ್ಯಕ್ತಿ ಅಂಗಭಾವವನ್ನು ನೀಗಿ ಲಿಂಗ ಭಾವವನ್ನು ಅಳವಡಿಸಿಕೊಳ್ಳ ಬೇಕೆಂದು ಶರಣಸಿದ್ಧಾಂತ ಕೇಂದ್ರ ಆಶಯ.ವ್ಯಕ್ತಿತ್ವದ ಒಳಪದರಿನಲ್ಲಿ ವಿಕಾರಗಳಿರುವಂತೆ ಸಮಾಜದ ಒಳರಚನೆಯಲ್ಲಿಯೂ ಸಭ್ಯತೆಯ ಸೋಗಿನಲ್ಲಿ ವಿಕೃತ ಆಚರಣೆಗಳು ನಿರ್ಮಾಣವಾಗಿರುತ್ತವೆ.
ಇದರಿಂದಾಗಿ ಸಮಾಜದ ಜೀವನವು ಅಶುದ್ಧವಾಗುತ್ತದೆ. ಭಾರತದಲ್ಲಿ ಇದರ ಶುದ್ಧೀಕರಣದ ಕಡೆಗೆ ಬಹುಶಃ ಬೌದ್ಧಧರ್ಮವನ್ನು ಬಿಟ್ಟರೆ, ವೀರಶೈವೇತರ ಯಾವುದೇ ಧರ್ಮಗಳು ಮೊದಲಿನಿಂದಲೂ ಗಮನ ಕೊಡಲಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ತತ್ವಚಿಂತನೆ ಪ್ರಾರಂಭವಾದುದು ಸಮಾಜದಲ್ಲಲ್ಲ; ಅಡವಿಯಲ್ಲಿ, ಆಶ್ರಮದಲ್ಲಿ. ಅಲ್ಲಿಯ ಮುನಿಗಳಿಗೆ ವ್ಯಕ್ತಿಗತ ಸಮಸ್ಯೆಗಳನ್ನು ಅಂದರೆ ತಮ್ಮೊಳಗಿನ ಮಾನಸಿಕ ವಿಕಾರಗಳನ್ನು ದೂರಗೊಳಿಸಿಕೊಳ್ಳುವುದೇ ಮುಖ್ಯವಾಗಿದ್ದಿತು. ಕಾಲಕ್ರಮದಲ್ಲಿ ಅರಣ್ಯ ಜೀವನಕ್ಕೆ ಬದಲು ಗ್ರಾಮಜೀವನ ಅಸ್ತಿತ್ವಕ್ಕೆ ಬಂದು, ವ್ಯಕ್ತಿಗತ ಸಮಸ್ಯೆಗಳೊಂದಿಗೆ ಸಮಾಜಗತ ಸಮಸ್ಯೆಗಳು ಉದ್ಭವಿಸಿದರೂ, ಭಾರತದಲ್ಲಿ ಹಳೆಯ ವ್ಯಕ್ತಿಪರ ಚಿಂತನ ಕ್ರಮವೇ ಮುನ್ನಡೆದು, ಸಮಾಜಪರ ಚಿಂತನ ಕ್ರಮ ಉಪೇಕ್ಷಿತವಾಯಿತು.
ಇದರಿಂದ ಭಾರತೀಯರು ವೈಯಕ್ತಿಕವಾಗಿ ಸಬಲರು, ಸಾಮಾಜಿಕವಾಗಿ ದುರ್ಬಲರು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಶರಣರು ಸಬಲ ಸಮಾಜಕ್ಕಾಗಿ ಬುದ್ಧನಿಗಿಂತ ಹೆಚ್ಚು ವೈeನಿಕವಾಗಿ ವಿಚಾರಿಸಿ, ವ್ಯಕ್ತಿ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣಕ್ಕಾಗಿಯೂ ಶ್ರಮಿಸಿದರು. ಈ ಉಭಯ ಕಲ್ಯಾಣಗಳನ್ನು ಲಿಂಗ ವ್ಯಸನ, ಜಂಗಮ ಪ್ರೇಮವೆಂದು ಬಸವಣ್ಣನವರು ಕರೆದಿದ್ದಾರೆ. ಸೋಹಂ ಎಂದೆನಿಸಿದೆ, ದಾಸೋಹಂ ಎಂದೆನಿಸಯ್ಯ ಎಂದು ಹೇಳಿ ಜಂಗಮ ದಾಸೋಹ ತತ್ವಕ್ಕೆ ಅವರು ಮಾದರಿ ಎನಿಸಿದ್ದಾರೆ. ಬಸವಣ್ಣನವರ ಮಾನವ ಪ್ರೇಮದ ಮಹತ್ಕಾರ್ಯಗಳಲ್ಲಿ ಸ್ತ್ರೀ ಸಮಾನತೆಯೂ ಪ್ರಮುಖವಾದುದು. ಸ್ತ್ರೀಯರಿಗೆ ಆರ್ಥಿಕ, ಸಾಮಾಜಿಕ ಸಮಾನತೆಯ ಜೊತೆಗೆ ಬೌದ್ಧಿಕ ಹಾಗು ಆಧ್ಯಾತ್ಮಿಕ ತತ್ವeನದ ಸಮಾನತೆಯನ್ನು ಒದಗಿಸಿದರು ಅದಕ್ಕೆ ಮುಕ್ತಾಯಕ್ಕ , ಅಕ್ಕ ಮಹಾದೇವಿಯರೇ ಉದಾಹರಣೆ.
ಬಸವಣ್ಣನವರು ಸನ್ಯಾಸಿಯಾಗಿರಲಿಲ್ಲ; ಮಠಾಧಿಪತಿಯಾಗಿರಲಿಲ್ಲ; ಕಾವಿಧಾರಿಯಾಗಿರಲಿಲ್ಲ; ಸಂಸಾರಿಯಾಗಿ ಲೌಕಿಕದಲ್ಲಿದ್ದು ಅಪ್ರತಿಮ ವಿಶ್ವಗುರುವಾಗಿ ಅಲೌಕಿಕ ಬೆಳಕು ಬೆಳಗಿದರು. ಮನುಕುಲದ ಸರ್ವಾಂಗೀಣ ಅಭ್ಯುದಯವೇ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಅಥವಾ ಬಸವಧರ್ಮದ ಮಹೋನ್ನತ ಗುರಿಯಾಗಿತ್ತು. ತಾನು ಮಾಡುವ ಕಾಯಕದಲ್ಲೇ ಕೈಲಾಸ ಕಾಣುವ ಧನ್ಯತೆ. ಇದು ಅವರು ಕಾಯಕಕ್ಕೆ ನೀಡಿದ ಪರಮೋಚ್ಛ ಪ್ರಾಧಾನ್ಯತೆ.
ನಮ್ಮ ದೇಶದ ಸಂವಿಧಾನ ಜಾತ್ಯಾತೀತ ಎಂದು ಘೋಷಣೆ ಮಾಡಿದ್ದರೂ ಶಾಲೆಗೆ ಪ್ರಥಮ ಪ್ರವೇಶ ಮಾಡುವ ಮಗು ಪ್ರವೇಶ ಪತ್ರದಲ್ಲಿ ಜಾತಿಯ ಬಗ್ಗೆ ಬರೆಯಬೇಕು, ಇದು ಪ್ರಸ್ತುತ ಪ್ರಜಾತಂತ್ರದ ಅಣಕವೆಂದೇ ಹೇಳಬಹುದು.
ಇಂತಹ ಮಹಾನ್ ವ್ಯಕ್ತಿ ನೀಡಿದ ಸಂದೇಶ ಹಾಗು ನಡೆದುಕೊಂಡ ರೀತಿ ಸೂರ್ಯ-ಚಂದ್ರ ಇರುವರೆಗೂ ಅನುಕರಣೀಯವಾಗಿದೆ. ಸ್ವಾರ್ಥವೇ ಪ್ರಧಾನವಾಗಿರುವ ಇಂದಿನ ಆಧುನಿಕ ಯುಗದಲ್ಲಿ ಸತ್ಯ, ಶಾಂತಿ, ಅಹಿಂಸೆ, ಪ್ರೀತಿ, ಸ್ನೇಹ, ನಂಬಿಕೆ, ಸಹಕಾರ, ಸೌಹಾರ್ದತೆಗಳು ಕಣ್ಮರೆಯಾಗಿವೆ. ಪರಸ್ಪರ ದ್ವೇಷ, ಅಸೂಯೆಯ ಜ್ವಾಲಾಮುಖಿ ಹೊಗೆ ಕಾರುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಿಗೆ ಬಸವಣ್ಣನವರ ಸಂದೇಶಗಳು ಮಾರ್ಗದರ್ಶಿ ಸೂತ್ರಗಳಾಗಲಿವೆ.
ಸಮಾಜ ಶುದ್ಧವಾಗುವುದೆಂದರೆ ಸಮಾಜಲ್ಲಿ ಸಮಾನತೆಯನ್ನು ತರುವುದು. ಈ ಸಾಮಾಜಿಕ ಸಮಾನತೆಗೆ ಮೂಲವಾದುದು ಆರ್ಥಿಕ ಸಮಾನತೆಯೆಂಬುದನ್ನು ಅರಿತಿದ್ದ ಬಸವಣನವರ್ಣು, ಅರ್ಥಮಂತ್ರಿ (ಫೈನಾನ್ಸ್ ಮಿನಿಸ್ಟರ್) ಆಗಿದ್ದುದು ಒಂದು ಯೋಗಾಯೋಗ. ಬಸವಣ್ಣನ ಈ ಅರ್ಥತತ್ವಕ್ಕೆ ಎರಡು ಮಗ್ಗಲುಗಳುಂಟು. ಒಂದು ಕಾಯಕ (ಶ್ರಮ) ಇನ್ನೊಂದು ದಾಸೋಹ (ವಿತರಣೆ). ಕಾಯಕ ಮಾಧ್ಯಮದಿಂದ ಗಳಿಸಬೇಕು. ದಾಸೋಹ ಮಾಧ್ಯಮದಿಂದ ಬಳಸಬೇಕು ಎಂಬ ಸೂತ್ರದ ಆದರ್ಶದಲ್ಲಿ ಕಲ್ಯಾಣರಾಜ್ಯ ಕಟ್ಟುವುದು ಮಂತ್ರಿ ಬಸವಣ್ಣನವರ ಧ್ಯೇಯವಾಗಿತ್ತು. ಭಾರತೀಯ ಪರಂಪರೆಯಲ್ಲಿ ಧರ್ಮವೀರನೆನಿಸುವ ಬಸವಣ್ಣ, ಅದನ್ನೂ ಮೀರಿದ ಮಹಾಪುರುಷನೆಂದು ಈ ಎಲ್ಲ ಚಿಂತನೆಗಳು ವ್ಯಕ್ತಪಡಿಸುತ್ತದೆ. ಅವನು ಈ ಚಿಂತನೆಗಳಿಗೆ ಸಮರ್ಥ ವಾಹಕವಾಗಿ ಬಳಸಿದ್ದು ವಚನಗಳನ್ನು ಬಸವಣ್ಣನವರು ಸಾಂಪ್ರದಾಯಿಕತೆಗಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವವನ್ನು ಕೊಟ್ಟರು. ಅವುಗಳ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು.
ಅವರು ಸಾರಿರುವಂತೆ ದೇವರ ದೃಷ್ಟಿಯಲ್ಲಿ ಮೇಲು-ಕೀಳುಗಳಿಲ್ಲ. ಅವು ಮಾನವ ನಿರ್ಮಿತವಾದವುಗಳು. ಮೇಲು-ಕೀಳುಗಳು ಹುಟ್ಟಿನಿಂದ ಉಂಟಾದವುಗಳಲ್ಲ. ಅದು ಅವರವರ ಯೋಗ್ಯತೆಯ ಮೇಲೆ ಉಂಟಾಗುತ್ತದೆ.
ಉಚ್ಛವರ್ಗದಲ್ಲಿ ಹುಟ್ಟಿದವನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಇತರರನ್ನು ಹಿಂಸಿಸುವ ಕಾರ್ಯದಲ್ಲಿ ತೊಡಗಿದರೆ, ಹೊಲಸು ತಿನ್ನುವ ಚಪಲವನ್ನು ಬಳಸಿಕೊಂಡರೆ ಅವನನ್ನು ಹೊಲೆಯನೆಂದೇ ಪರಿಗಣಿಸಬೇಕು. ಕೀಳು ಜಾತಿಯಲ್ಲಿ ಹುಟ್ಟಿದವನೊಬ್ಬ ಸಾತ್ವಿಕ ಜೀವನ ನಡೆಸಿ ದಿವ್ಯ ಜೀವನ ಸಿದ್ಧಿಯನ್ನು ಪಡೆದರೆ ಅವನನ್ನೂ ಉಚ್ಚ ಕುಲದವನೆಂದೇ ಕಾಣಬೇಕು.
ಎಲ್ಲಾ ಧರ್ಮಗಳಿಗೂ ದಯವೇ ಮೂಲವಾಗಬೇಕು. ಯಾವ ಧರ್ಮವೂ ನಿರ್ದಯತೆಯನ್ನು ಬೋಧಿಸುವುದಿಲ್ಲ. ಅಕಸ್ಮಾತ್ ಅಂಥ ಯಾವುದಾದರೂ ಧರ್ಮಿವಿದ್ದರೆ ಅದು ಪರಮಾತ್ಮನಿಗೆ ಒಪ್ಪಿಗೆಯಾದ ಧರ್ಮವೇ ಅಲ್ಲ. ಮಾನವನ ಎಲ್ಲ ಚಟುವಟಿಕೆಗಳಿಗೆ ದಯವೇ ಆಧಾರವಾಗಬೇಕು. ಎಲ್ಲ ಪ್ರಾಣಿಗಳಲ್ಲಿ ದಯೆಯನ್ನು ತೋರಿಸುವುದೇ ಧರ್ಮದ ಮೂಲ ಸೂತ್ರವಾಗಬೇಕು. ಇದು ಬಸವಣ್ಣನವರ ಅಮೃತವಾಣಿ.
ಬಸವಣ್ಣನವರದು ಬಹುಮುಖೀ ವ್ಯಕ್ತಿತ್ವ. ಭಕ್ತಿ ಭಂಡಾರಿಗಳು, ಶ್ರಮ ಗೌರವವನ್ನು ಎತ್ತಿ ಹಿಡಿದು ಕಾಯಕ-ದಾಸೋಹ ತತ್ವಗಳ ಮೂಲಕ ನಾವು ಮಾಡುವ ಕೆಲಸವನ್ನು ಆಧ್ಯಾತ್ಮಿಕರಿಸಿದರು. ಅಸ್ಪಶ್ಯತೆಯನ್ನು ನಿವಾರಿಸಲು ಅವರಿಟ್ಟ ದಿಟ್ಟ ಹೆಜ್ಜೆ ಇತಿಹಾಸದಲ್ಲಿ ಒಂದು ಅಚ್ಚಳಿಯದ ಅಧ್ಯಾಯ.
ಮಹಾತ್ಮಾ ಬುದ್ಧನ ವೈಚಾರಿಕತೆ, ಜಿನನಾದ ಮಹಾವೀರರ ದಯೆ ಅಹಿಂಸೆ, ಜೀಸಸ್ ಕ್ರೈಸ್ತರ ಕ್ಷಮೆ-ಶಾಂತಿ, ಪ್ರವಾದಿ ಮಹಮ್ಮದ್ಪೈಗಂಬರ್ರ ಧೈರ್ಯ-ಸಾಹಸ ಮಹಾನುಭಾವ ಬಸವಣ್ಣನವರಲ್ಲಿ ಏಕತ್ರಿತಗೊಂಡಿದ್ದವೆಂಬುದು ಸತ್ಯವಾದ ಮಾತಾಗಿದೆ. ಅವರು ನುಡಿದಂತೆ ನಡೆದುದಲ್ಲದೆ ಅಂತಹ ಏಳನೂರು ಎಪ್ಪತ್ತು ಅಮರ ಗಣಂಗಳನ್ನು ಆ ಕಾಲದಲ್ಲಿ ಕಲ್ಯಾಣದಲ್ಲಿ ತಯಾರು ಮಾಡಿದುದು ಹಿಂದೆ ನಡೆಯಲಾರದ ಮುಂದೆಯೂ ಸಾಧ್ಯವಾಗದ ಅತ್ಯಗಾಧ ಸಂಗತಿಯಾಗಿವೆ.
ಬಸವಣ್ಣ ನವರು ಪ್ರಯೋಗಶೀಲ, ಚಲನಶೀಲ, ಲೋಕದ ಡೊಂಕ ತಿದ್ದಲು ಹೊರಡುವ ಜನನಾಯಕನ ಧಾಟಿಯಲ್ಲಿ ಅವನ ವಚನ ಇರುವುದಿಲ್ಲ. ಅಲ್ಲಿ ಸಂತನ ನಮ್ರತೆಯಿದೆ, ಸಿದ್ಧಾಂತದ ಭಾರಕ್ಕೆ ಬದಲಾಗಿ ಜೀವನಪ್ರೇಮದ ಹೂ ಹಗುರತೆಯಿದೆ. ಆತ ಲೋಕವನ್ನು ತಿದ್ದುವ ಮುನ್ನ ತಮ್ಮ ತಮ್ಮ ಅಂತರಂಗವನ್ನು ತಿದ್ದಿಕೊಳ್ಳುವ ಕುರಿತು ಹೇಳುತ್ತಾನೆ. ಅಂತರಂಗದೊಳಕ್ಕಿಳಿದು ಅಂತರ್ಮುಖವಾಗಿ ಒಳಗೊಂದು ಪ್ರಚಂಡ ಬದಲಾವಣೆಯನ್ನು ಸಾಧ್ಯ ವಾಗಿಸಿಕೊಳ್ಳಬೇಕೆನ್ನುತ್ತಾರೆ. ಹೊರಗೆ ಆಗಬೇಕೆಂದು ಬಯಸುವ ಕ್ರಾಂತಿ ಮೊದಲು ನಮ್ಮ ನಮ್ಮೊಳಗೆ ಆಗಬೇಕೆಂದು ಆತನ ಕನಸು.
ಅಂತರಂಗವನ್ನು ಸಮೃದ್ಧಗೊಳಿಸುತ್ತಾ ಬೆಳೆಯುವ ಹಸಿವು ಬಸವಣ್ಣನಲ್ಲಿದೆ. ಸಮಸ್ತ ಲೋಕದ ಕತ್ತಲೆಯನ್ನು ಕಳೆಯುವ ಬಹು ದೊಡ್ಡ ಹಂಬಲ ಬಸವಣ್ಣನದು. ಆಗ ಅಲ್ಲೆಲ್ಲ ಬೆಳಗು ಮಾತ್ರ ನಿತ್ಯ ಸತ್ಯವಾಗುತ್ತದೆ. ಅಂಥ ಅಖಂಡ ಬೆಳಕಿನ ಹಂಬಲ ಅನುಭವಿಗಳಿಗೆಲ್ಲ ಸಹಜವಾದುದು ಬರೀ ಬೆಳಕೇ ಎಲ್ಲೆಡೆ ತುಂಬಿರುವಾಗ ಬೆಳಕಿಗೆ ಬೆಳಗೇ ಸಿಂಹಾಸನದಲ್ಲಿ .ದ್ವೈತ ಭಾವವೇ ಅಳಿದ ಮೇಲೆ ಕೂಟದ ಹಂಗಾದರೂ ಏಕೆ? ಅಲ್ಲಿ ಬೆಳಗು ಬೆಳಗನ್ನೇ ಕೂಡಬೇಕಷ್ಟೇ! ಬೆಳಗು ಬೆಳಗನ್ನು ಬೆರೆಯುವ ಬೆರಗನ್ನು ಆ ಬೆಳಕಿನ ಭಾವವೇ ಆದ ಕೂಡಲ ಸಂಗಯ್ಯನೇ ಬಲ್ಲ – ಇಂಥ ಅರಿವಿನಾಚೇ ಏನೂ ಇಲ್ಲ. ಬಸವಣ್ಣ ಅಲ್ಲಿಯವರೆಗೂ ಸುಳಿದೆಗೆದು ಬೆಳೆದು ನಿಂತಿದ್ದಾನೆ.
ಶರಣರು ಭಾವನೆಗಳನ್ನು ಕಲಾತ್ಮಕಗೊಳಿಸಲು ಹೊರಟ ಕವಿಗಳಲ್ಲ. ಬದುಕನ್ನು ಕಲಾತ್ಮಕಗೊಳಿಸಲು ಹೋರಾಡಿದ ಸಂತರು. ಒಂದು ಸಾಹಿತ್ಯಕೃತಿಯ ಅಧ್ಯಯನವೆಂಬುದು ಅಲ್ಲಿ ಹುದುಗಿರುವ ವ್ಯಕ್ತಿಶೋಧ, ಸಮಾಜಶೋಧ, ಮೌಲ್ಯಾದರ್ಶ ಶೋಧ ಮತ್ತು ಸೌಂದರ್ಯ ಶೋಧವಾಗಿದೆ. ಈ ನಾಲ್ಕೂ ನೆಲೆಗಳ ಅಧ್ಯಯನಕ್ಕೆ ವಸ್ತುವಾಗುವ ಶಕ್ತಿ ಬಸವಣ್ಣನವರ ವಚನಗಳಲ್ಲಿದೆ. ವಚನ ಸಾಹಿತ್ಯದಲ್ಲಿ ಪ್ರಾಸ – ಛಂದಸ್ಸುಗಳಿಗೆ ಪ್ರಾಮುಖ್ಯ ಅಲ್ಲ. ಅನುಭವ ಅನುಭಾವಗಳೇ ಇಲ್ಲಿ ಮುಖ್ಯ. ಪದ ಸೌಂದರ್ಯಕ್ಕಿಂತ ಭಕ್ತಿಭಾವದ ಆವಿರ್ಭಾವವೇ ಅಗತ್ಯ. ಅವರ ವಚನಗಳು ಕುಸುಮದ ಕುಡಿಗಳು, ವೈಚಾರಿಕ ವಜ್ರದ ಕಿಡಿಗಳು.
ಈ ಎಲ್ಲ ಚಿಂತನೆಗಳ ಹಿಂದೆ ಸ್ಥಾವರಕ್ಕಿಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ಸಿದ್ದಾಂತ ಸದಾ ಸ್ಪಂದಿಸುತ್ತಿರುತ್ತದೆ. ಈ ತತ್ವದ ಮೇರೆಗೆ ಬಸವಣ್ಣನವರ ವಚನ; ಆಶಯದಲ್ಲಿರುವಂತೆ ಆಕೃತಿ ಯಲ್ಲಿಯೂ ಜಂಗಮತತ್ವವನ್ನು ಪಡೆಯಿತು. ಹೀಗಾಗಿ ಅವರ ವಚನಗಳದು ತುಂಬಾ ಸರಳ ಶಿಲ್ಪ. ಸರಳವೆಂದರೂ ಅಲ್ಲಿ ಸಂಕೀರ್ಣತೆಯಿದೆ. ವಾಚ್ಯವೆಂದರೂ ಅಲ್ಲಿ ಧ್ವನಿಯಿದೆ. ಏನು ಹೇಳಬೇಕೆಂಬ ಆಶಯ ಉತ್ಕಟವಾದಾಗ ಹೇಗೆ ಹೇಳಬೇಕೆಂಬ ಆಕೃತಿ ತಾನಾಗಿಯೇ ಅಚ್ಚು ಕಟ್ಟುತನ ಪಡೆಯುತ್ತದೆ. ಈ ಆಕೃತಿ ಸೌಂದರ್ಯಕ್ಕೆ ಮಾದರಿಯಾಗಿದೆ ಬಸವಣ್ಣನವರ ಬರವಣಿಗೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post