ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಗುರುವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ | ದುಲರ್ಭ: ಸ ಗುರುರ್ಲೋಕೇ ಶಿಷ್ಯ ಚಿತ್ತಾಪಹಾರಕಃ ॥
ಲೋಕದಲ್ಲಿ ಶಿಷ್ಯರ ಹಣವನ್ನು ಅಪಹರಿಸುವ ಗುರುಗಳು ಬಹಳ ಇದ್ದಾರೆ. ಆದರೆ ಅವರ ಮನಸ್ಸನ್ನು ಸೆಳೆಯುವಂಥ ಗುರುಗಳು ಲೋಕದಲ್ಲಿ ದುರ್ಲಭರು ಎಂಬ ಸುಭಾಷಿತಕ್ಕೆ ಅನ್ವರ್ಥವಾದ ಗುರುವು ನಮ್ಮೊಂದಿಗಿದ್ದರು ಎನ್ನುವುದೇ ಅತ್ಯಂತ ಹೆಮ್ಮೆಯ ಸಂಗತಿ.
ಅವರು ಬೇರಾರೂ ಅಲ್ಲ ಇತ್ತೀಚಿಗೆ ತಮ್ಮ ವಯೋಸಹಜ ಅನಾರೋಗ್ಯದಿಂದ ನಮ್ಮನ್ನು ಅಗಲಿದ (8-3-26) ಕನ್ನಡ ಪಂಡಿತರೆಂದೇ ಎಲ್ಲರಿಂದ ಕರೆಸಿಕೊಳ್ಳುತ್ತಿದ್ದ ಶ್ರೀ ಎಂ. ಎಸ್ ನಾಗರಾಜ್ ರಾವ್. ಶ್ರೀಯುತರು ಜನಿಸಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪದ ಮಾಣಿಕನ ಹಳ್ಳಿಯಲ್ಲಿ. ಅವರ ಕಾರ್ಯಕ್ಷೇತ್ರ ಉಡುಪಿ ಜಿಲ್ಲೆಯ ಶಂಕರನಾರಾಯಣ. ತಮ್ಮ ನಿವೃತ್ತಿಯ ನಂತರ ನೆಲೆನಿಂತದ್ದು ಶಿವಮೊಗ್ಗದಲ್ಲಿ.
ನನ್ನ ಗೆಳತಿಯಾದ ಪದ್ಮಿನಿಯ ಮಾವನವರಾದ ಕಾರಣಕ್ಕೆ ಅವರಿಂದ ಪರಿಚಯವಾಗಿ ಅವರ ಕುರಿತು ಕೇಳಿದಾಗ ಯೋಗ ಗುರುಗಳು ಹಾಗೂ ನಿವೃತ್ತ ಕನ್ನಡ ಅಧ್ಯಾಪಕರು ಎಂದಷ್ಟೇ ತಿಳಿದಿತ್ತು. ಆದರೆ ಅವರ ಮರಣದ ನಂತರ ಅವರ ಶಿಷ್ಯ ಸಮೂಹವು ಕಳಿಸಿದ ವಿದಾಯದ ಮೆಸೇಜ್ ಗಳು, ಗುರುಗಳಿಗೆ ಸಲ್ಲಿಸಿದ ನುಡಿ ನಮನಗಳಿಂದ ಪ್ರೇರೇಪಿತಳಾಗಿ ಈ ಲೇಖನ ಬರೆಯ ತೊಡಗಿದೆ.
ಕನ್ನಡ ಸಾಹಿತ್ಯದ ಪರಿಮಳವನ್ನು ಹರಡಿದ, ಜ್ಞಾನವನ್ನು ದೀಪದಂತೆ ಹಚ್ಚಿದ, ಯೋಗ ಶಿಕ್ಷಣದ ಮೂಲಕ ಶರೀರ ಸ್ವಾಸ್ಥ್ಯ ವನ್ನೂ ಕಾಪಾಡಿದ ಶ್ರೀ ಎಂ. ಎಸ್ ನಾಗರಾಜ್ ಅವರು ಕೇವಲ ಅಧ್ಯಾಪಕರಾಗಿರಲಿಲ್ಲ ಒಂದು ಪ್ರೇರಣಾ ಶಕ್ತಿಯಾಗಿದ್ದರು, ಮೌಲ್ಯಗಳ ಪ್ರತಿರೂಪವಾಗಿದ್ದರು. ಕನ್ನಡ ಭಾಷೆಯ ಮೆಲುಕು ಹಾಕುವಂತೆ ಮಾಡುವ ಅವರ ಬೋಧನಾ ಶೈಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತ ಗುರುತು ಮೂಡಿಸಿತ್ತು. ಪಾಠವನ್ನು ಬೋಧಿಸುವಾಗ ಅವರು ನೀಡಿದ ಉದಾಹರಣೆಗಳು, ಸಾಹಿತ್ಯದ ಸೊಗಸು ಮತ್ತು ಜೀವನದ ತತ್ತ್ವಗಳನ್ನು ಸೇರಿಸಿದ ಅವರ ಶೈಲಿ ಎಲ್ಲರಿಗೂ ಅಪಾರ ಮೆಚ್ಚುಗೆಯನ್ನು ಗಳಿಸಿತ್ತು.
ಅವರ ಸೃಜನಶೀಲತೆ ಸಾಹಿತ್ಯದಲ್ಲಿ ಮಾತ್ರವಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ಗೋಚರಿಸಿತು. ಕವನ, ಲೇಖನ, ಉಪನ್ಯಾಸ—ಯಾವ ಕ್ಷೇತ್ರದಲ್ಲೇ ಆಗಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತೇಜಿಸಿ, ಜೀವನದ ದಾರಿಯನ್ನು ತೋರಿಸುವಲ್ಲಿ ಅವರು ನಿಜವಾದ ಮಾರ್ಗದರ್ಶಕರಾಗಿದ್ದರು.
ಯೋಗಗುರುವಿನ ಹುದ್ದೆಯಲ್ಲಿ ಅವರು ಸಾವಿರಾರು ಮಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಪರಿಚಯಿಸಿದರು. “ಯೋಗವೇ ಜೀವನ” ಎಂಬ ಸಂದೇಶವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು. ಅವರ ಮಾರ್ಗದರ್ಶನದಲ್ಲಿ ಹಲವರು ದೈಹಿಕ ಹಾಗೂ ಮಾನಸಿಕ ಶಾಂತಿಯನ್ನು ಕಂಡುಕೊಂಡಿದ್ದಾರೆ.ಅವರ ವ್ಯಕ್ತಿತ್ವದಲ್ಲಿ ಸರಳತೆ, ಶಿಸ್ತು, ವಿನಯ ಮತ್ತು ಆಧ್ಯಾತ್ಮಿಕತೆ ಒಂದಾಗಿ ಬೆರೆತು ಕಾಣಿಸುತ್ತಿತ್ತು. ಅವರು ಬದುಕಿದ ರೀತಿ, ಮಾತನಾಡಿದ ಮಾತುಗಳು, ನಡೆದುಕೊಂಡ ದಾರಿ ಎಲ್ಲವೂ ವಿದ್ಯಾರ್ಥಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಆದರ್ಶವಾಗಿತ್ತು.
ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವಾದರೂ, ಅವರು ಬಿತ್ತಿದ ಜ್ಞಾನ ಬೀಜಗಳು ಅನೇಕ ಪೀಳಿಗೆಗಳಿಗೆ ಫಲ ನೀಡುತ್ತವೆ. ಅವರ ವಿದ್ಯಾರ್ಥಿಗಳು, ಅವರ ಬೋಧನೆಗಳಿಂದ ರೂಪುಗೊಂಡ ಮೌಲ್ಯಗಳು, ಅವರ ಸಾಹಿತ್ಯ ಎಲ್ಲವೂ ಅವರ ಜೀವಂತ ಸ್ಮಾರಕಗಳಾಗಿ ಉಳಿಯುತ್ತವೆ. ಶಾರೀರಿಕವಾಗಿ ಅವರು ದೂರವಾದರೂ, ಅವರ ಚಿಂತನೆಗಳು, ಅವರ ಆದರ್ಶಗಳು, ಎಲ್ಲರ ಹೃದಯಗಳಲ್ಲಿ ಸದಾ ಪ್ರತಿಧ್ವನಿಸುತ್ತಲೇ ಇರುತ್ತವೆ. ಅವರ ಜೀವನ ನಮಗೆ “ಗುರು ಎಂದರೆ ಕೇವಲ ಬೋಧಿಸುವವನು ಅಲ್ಲ; ಜೀವನವನ್ನು ರೂಪಿಸುವವನು.”ಎಂಬ ಸಂದೇಶ ನೀಡುತ್ತವೆ.
ನಾಗರಾಜ್ ರಾವ್ ಅವರು ಪಾಠ ಮಾಡುತ್ತಿದ್ದ ಶೈಲಿ ಎಲ್ಲರಿಗೂ ಅನುಕರಣ ಯೋಗ್ಯ. ಅವರ ಬೋಧನೆಯಲ್ಲಿ ಗಾಢತೆ ಇತ್ತು, ಜೀವನದಲ್ಲಿ ಶಿಸ್ತು ಇತ್ತು. ಕನ್ನಡದ ಅಕ್ಷರಗಳಿಗೆ ಆತ್ಮ ತುಂಬಿ, ಸಾಹಿತ್ಯಕ್ಕೆ ಜೀವ ತುಂಬಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೊಸ ಕನಸುಗಳನ್ನು ಬೆಳೆಸಿದವರು ಅವರು. ಅನೇಕ ಶಿಷ್ಯರಿಗೆ ಅವರು ಕಲಿಸಿದ ಪಾಠಗಳು ಕೇವಲ ಅಕ್ಷರಗಳಲ್ಲ — ಅವು ಬದುಕಿನ ದಿಕ್ಕು ತೋರಿಸಿದ ದೀಪಗಳು.
ಸೃಜನಶೀಲತೆಯ ಹರಿವು ಅವರೊಳಗೆ ಸದಾ ಜಲಧಾರೆಯಂತೆ ಹರಿಯುತ್ತಿತ್ತು. ಪದಗಳಲ್ಲಿ ಭಾವನೆ ಮೂಡಿಸುವ ಕಲೆ ಅವರಿಗೆ ಸಹಜವಾಗಿತ್ತು. ಅವರು ಬರೆದ ಪ್ರತಿಯೊಂದು ಸಾಲು, ಹೇಳಿದರು ಪ್ರತಿಯೊಂದು ಮಾತು, ಬದುಕಿದ ಪ್ರತಿಯೊಂದು ಕ್ಷಣ ಇತರರಿಗೆ ಒಂದು ಸಂದೇಶ.
ಕೇವಲ ಕನ್ನಡ ಪಾಠ ಅಷ್ಟೇ ಅಲ್ಲದೇ ಅವರು ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಯೋಗ ಗುರುವೂ ಆಗಿದ್ದರು.ಯೋಗವನ್ನು ಕೇವಲ ವ್ಯಾಯಾಮವಲ್ಲ, ಜೀವನದ ಸಾಧನೆ ಎಂದು ಸಾರಿದವರು ಅವರು. ಅವರ ಶಾಂತ ಸ್ವಭಾವ ಮತ್ತು ಆತ್ಮನಿಷ್ಠೆ ಅನೇಕರಿಗೆ ದಾರಿದೀಪವಾಯಿತು.
ಒಬ್ಬ ಗುರು ಹೋಗಬಹುದು, ಆದರೆ ಅವರಿಂದ ಬೆಳಗಿದ ದೀಪಗಳು ಎಂದಿಗೂ ನಂದುವುದಿಲ್ಲ.
ಅವರು ಬಿತ್ತಿದ ಜ್ಞಾನ, ಬೆಳೆಸಿದ ಮೌಲ್ಯಗಳು, ಮೂಡಿಸಿದ ಪ್ರೇರಣೆ—ಇವುಗಳು ಸದಾ ನಮ್ಮೊಳಗೆ ಬೆಳಕಾಗಿಯೇ ಉಳಿಯುತ್ತವೆ. ಅವರನ್ನ ಕುರಿತು ಬರೆಯುವಾಗ ನೆನಪಾದ ಈ ಶ್ಲೋಕ –
ದುರ್ಲಭಂ ತ್ರಯಮೇತತ್ ದೈವಾನುಗ್ರಹಹೇತುಕಮ್ । ಮನುಷ್ಯತ್ವಂ ಮುಮುಕ್ಷತ್ವಂ ಮಹಾಪುರುಷಸಂಶ್ರಯಃ |
ದೈವಕೃಪೆಯಿಂದ ಮಾತ್ರ ಒದಗುವ ಮೂರು ಅಂಶಗಳಲ್ಲಿ ಮೊದಲನೆಯದು ಮಾನವ ಜನ್ಮ, ಎರಡನೆಯ ಸತ್ಯವನ್ನು ಅರಿಯುವ ಅಭಿಲಾಷೆ, ಮೂರನೆಯದು ಮಹಾಪುರುಷರನ್ನು ಗುರುವಾಗಿ ಹೊಂದುವುದು.” ನಿಜಕ್ಕೂ ಇದು ದೈವಕೃಪೆಯೆ ಸರಿ. ಅದರಂತೆ ನಾಗರಾಜ್ ರಾವ್ ಅವರ ಶಿಷ್ಯತ್ವ, ಸಾಂಗತ್ಯವೂ ಕೂಡ ದೈಕೃಪೆಯೇ.
ಕೇವಲ ಪಾಠ ಬೋಧನೆಗೆ ಸೀಮಿತವಾಗಿರದ ಅವರ ಜೀವನ ಅದು ಒಂದು ಸಾಧನೆ, ಒಂದು ತಪಸ್ಸು. ಕನ್ನಡ ಭಾಷೆಯ ಮೇಲಿನ ಅವರ ಅಪಾರ ಪ್ರೀತಿ, ಸಾಹಿತ್ಯದ ಮೇಲಿನ ಆಸಕ್ತಿ ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿ ಅವರನ್ನು ವಿಶಿಷ್ಟ ವ್ಯಕ್ತಿತ್ವವನ್ನಾಗಿ ರೂಪಿಸಿತು. ಅವರು ಕಲಿಸಿದ ಪಾಠಗಳು ಕೇವಲ ಪುಸ್ತಕಗಳಲ್ಲಿ ಉಳಿಯಲಿಲ್ಲ, ಜೀವನದ ಮಾರ್ಗದರ್ಶನವಾಗಿ ರೂಪಾಂತರಗೊಂಡವು.
ಯೋಗದ ಮೂಲಕ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವ ದಾರಿಯನ್ನು ಅವರು ಅನೇಕರಿಗೆ ತೋರಿಸಿದರು. ಅವರ ಸರಳತೆ, ಶಿಸ್ತು ಮತ್ತು ಆಧ್ಯಾತ್ಮಿಕತೆ ಎಲ್ಲರಿಗೂ ಪ್ರೇರಣೆಯಾಗಿತ್ತು.
ಇಂತಹ ಗುರುಗಳು ಶಾರೀರಿಕವಾಗಿ ನಮ್ಮೊಳಗಿಲ್ಲದಿದ್ದರೂ, ಅವರ ಬೋಧನೆಗಳು, ಮೌಲ್ಯಗಳು ಮತ್ತು ಆಶಯಗಳು ಸದಾ ನಮ್ಮ ಜೊತೆ ಇರುತ್ತವೆ. ಅವರು ಬೆಳಗಿಸಿದ ಜ್ಞಾನ ದೀಪವು ಎಂದಿಗೂ ನಂದುವುದಿಲ್ಲ.
ಅವರ ಅಗಲಿಕೆ ಶಿಕ್ಷಣ ಲೋಕಕ್ಕೆ ಅಪಾರ ನಷ್ಟ. ಆದರೆ ಅವರ ಸ್ಮೃತಿ ಮತ್ತು ಸಾಧನೆಗಳು ಸದಾಕಾಲ ಜೀವಂತವಾಗಿರುತ್ತವೆ. ಇವರ ಈ ಎಲ್ಲ ಕಾರ್ಯಗಳಿಗೆ ಅವರ ಬಾಳಸಗಾತಿಯಾದ ಶ್ರೀಮತಿ ಕುಸುಮ ಅವರ ಬೆಂಬಲ ಕೂಡ ಅಷ್ಟೇ ಇತ್ತು ಅವರೂ ಸಹ ಉತ್ತಮ ಯೋಗ ಪಟು. ಇವರಿಬ್ಬರೂ ಸೇರಿದರೆ ಯೋಗದ ಜ್ಞಾನ ಭಂಡಾರವೇ ಜೊತೆಗಿದ್ದಂತೆ ಭಾಸವಾಗುತ್ತದೆ ಎಂದು ಅವರ ಬೀಗರಾದ ಶ್ರೀಮತಿ ಮಂಗಳಾ ವೆಂಕಟರಮಣ ಅವರು ಹೇಳುತ್ತಿದ್ದರು.
ಅಂತಹ ಜ್ಞಾನಯೋಗಿಗೆ ನಮ್ಮ ಹೃದಯಪೂರ್ವಕ ನಮನಗಳನ್ನು ಈ ನುಡಿನಮನದ ಮೂಲಕ ಸಲ್ಲಿಸುತ್ತಿದ್ದೇನೆ. ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ದೊರೆಯಲಿ. ಹಾಗೂ ಆ ನೋವು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೂ ಅವರ ಅಪಾರ ಶಿಷ್ಯರಿಗೂ ಭಗವಂತ ಕರುಣಿಸಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















