ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶ್ರೀಗುರು – ಬೆಳದಿಂಗಳು
ಇಂದು ಆಷಾಢ ಶುದ್ಧ ಹುಣ್ಣಿಮೆ ; ವ್ಯಾಸ ಹುಣ್ಣಿಮೆ-ವ್ಯಾಸ ಮಹರ್ಷಿಗಳು ಹುಟ್ಟಿದ ದಿನ. ತನ್ನ ತೀಕ್ಷ್ಣ ಕಿರಣಗಳಿಂದ ನಭವನ್ನೆಲ್ಲವ ಬೆಳಗುವ ಸೂರ್ಯನನ್ನು ವೀಕ್ಷಿಸುವುದೆಂತು? ಅವನನರಿವುದೆಂತು? ಭುವಿಯೊಡನೆ ತಾನೂ ಸೂರ್ಯನನ್ನು ಪ್ರದಕ್ಷಿಣೆಗೈಯುತ್ತಾ, ಅವನ ತಾಪದ ಕಿರಣಗಳನ್ನು ಶೀತಲ ಕಿರಣಗಳಾಗಿಸಿದ ಚಂದಮಾ. ಅಮಾವಾಸ್ಯೆಯಂದು ಇಲ್ಲವಾಗಿ, ತನ್ನ ಸತತ ಸಾಧನೆಯ ಮೂಲಕ `ಚೌತಿಯ ದರ್ಶನ’, ಅಷ್ಟಮೀ ದರ್ಶನಗಳ ನೀಡುತ್ತಾ, ಷೋಡಶಾ ಕಲಾಪೂರ್ಣವಾಗಿ, ಸಂಪೂರ್ಣವಾಗಿ, ಶುಭ್ರತೆ, ನಿರ್ಮಲತೆಗಳನ್ನು ಬಿಂಬಿಸುವ ಚಂದ್ರ -`ಸಾಧು ಹೃದಯ ಸದೃಶ’. ನಿರ್ಮಲ, ನಿಶ್ಚಲ, ಶಾಂತ, ರಾಗದ್ವೇಷಾದಿರಹಿತ ಕಮನೀಯ `ಶ್ರೀಗುರು’ವಿನ ಹೃದಂiiದಂತೆ. ನೀಲಾಕಾಶವನಲ್ಲೆವ ಬೆಳಗುವ `ಚಂದಮಾ’, ಹದಿನಾರು ಮೆಟ್ಟಿಲುಗಳ ಗಿರಿಯನೇರಿ ಹದಿನಾರು ಕಲೆಗಳಿಂದ ಪೂರ್ಣವಾಗಿ, ಗಿರೀಶ್ವರನನ್ನು ದರ್ಶಿಸಿ, ತನ್ನ ಸೌಮ್ಯ, ಶಾಂತ, ಶೀತಲ ಕಿರಣಗಳಿಂದ ಗಿರೀಶ್ವರಿನಿಗೆ ಹಾಲಭಿಷೇಕ ಗೈಯ್ದು ಅವನ ತೋಯ್ಸಿದ, ಅವನ ನೊಲಿಸಿಕೊಂಡು ಅವನ ಸಿರಿ ಮುಡಿಯನೇರಿದ. ಕೋಟ್ಯಾನುಕೋಟಿ ನಕ್ಷತ್ರಗಳು ನಭವನ್ನೆಲ್ಲವ ಬೆಳಗುತ್ತಿದ್ದರೂ, ಚಂದಮನಿಲ್ಲದ ಆಗಸ ನೀರಸವೇ! ಕತ್ತಲೆಯೇ! ದಿಗಂತವನೆಲ್ಲವ ಬೆಳಗುವ ಶಕ್ತಿ ಶಶಿಗಳಲ್ಲದೇ ಇನ್ನಾರಿಗಿದೆ? ಶಂಕರನನ್ನು ಶಶಿಯಲ್ಲಿ ಕಾಣು! ಶ್ರೀಹರಿಯನ್ನು `ಶ್ರೀಗುರು’ವಿನಲ್ಲಿ ಕಾಣು!
ವ್ಯಾಸರು ಜನಿಸಿದ ದಿನದಂದು, ನಮ್ಮ ಮನೋನಯನವನ್ನು ತೆರೆಯಿಸಿದ ಎಲ್ಲಾ ಗುರುಗಳನ್ನು ನೆನೆದು, ಹುಣ್ಣಿಮೆಯ ಬೆಳದಿಂಗಳಲ್ಲಿ ಮಿಂದು, ಅವರು ಹಚ್ಚಿದ ಜ್ಞಾನದ ಬೆಳಕಿನಲ್ಲಿ ನಡೆದು, ಈ ಜೀವನದಲ್ಲಿಯೇ ಪೂರ್ಣ ಜೀವನವನ್ನು ನಡೆಸಿ- ಅಸತೋ ಮಾ ಸದ್ಗಮಯ| ತಮಸೋ ಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ | ಅಸತ್ತಿನಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಸಾಗುವ. ನಮ್ಮ ವೈಯುಕ್ತಿಕ ಜೀವನದ ಆಗು ಹೋಗುಗಳಿಗೆ ಸ್ಪಂದಿಸದೆ, ಇತರರ ಜೀವನದ ಆಗು ಹೋಗುಗಳಿಗೆ ಸ್ಪಂದಿಸುತ್ತಾ, ಪರಿಪೂರ್ಣ ಜೀವನದೆಡೆಗೆ ಸಾಗುವ. ಇತರರನ್ನು ನಮ್ಮೊಡನೆ ಕಡದೊಯ್ಯುವ, ಸಹಬಾಳ್ವೆ ನಡೆಸುವ.
ಶ್ರೀ ಗುರು -`ರಾಮಾಯಣ’
ಅಮಾವಾಸ್ಯೆಯ ಅಂಧಕಾರದಿಂದ ಹುಣ್ಣಿಮೆಯ ಬೆಳಕಿನೆಡೆಗೆ ಸಾಗುವ ಸಾಧಕ ಹತ್ತು ದಿನಗಳನ್ನು ಕಳೆದು ಹನ್ನೊಂದನೆಯ ದಿನಕ್ಕೆ ಕಾಲಿಸಿರಿದ್ದಾನೆ. ದಶ ದಿಕ್ಕುಗಳಿಗೆ ದಿಕ್ಕೆಟ್ಟು ಓಡುವ ದಶರಥಗಳನ್ನು ಏಕಕಾಲದಲ್ಲಿ ನಿಯಂತ್ರಿಸುವ ಸಾಮರ್ಥ್ಯವನ್ನು ಪಡೆದ ದಶರಥನ ಪುತ್ರನಾಗಿ, ಕತ್ತಲೆಯ ಪ್ರತಿರೂಪವಾದ ದಶಕಂದರನನ್ನು ನಿಗ್ರಹಿಸಲು ಶ್ರೀರಾಮನೆಂಬೋ ಚಂದ್ರೋದಯ- ಚೈತ್ರ ಶುದ್ಧ ನವಮಿಯಂದೇ! ರಾವಣನೆಂಬ ಅಂಧಕಾಸುರ, ರಾಮನ ಕಣ್ಣಿನ ಬೆಳಕಾದ, ಅವನ ಜೀವನ ಸಂಗಾತಿಯಾದ, ಕ್ಷಮಾ, ಧೈರ್ಯ, ಶಾಂತಿಗಳ ಪ್ರತಿರೂಪವಾದ ಜಾನಕಿಯನ್ನು ಅಪಹರಿಸಿದ. ಕತ್ತಲೆ ಬೆಳಕುಗಳ ಘೋರ ಯುದ್ಧ ನಡೆಯುತ್ತದೆ.
ರಾವಣನ ಸಾರಥಿಯು ತನ್ನೊಡೆಯನ ಪ್ರಾಣ ರಕ್ಷಣೆಗಾಗಿ ರಥವನ್ನು ರಣರಂಗದಿಂದ ದೂರ ಒಯ್ದು ಕಾರಣ ಶ್ರೀ ರಾಮ ರಾವಣರ ಸಂಗ್ರಾಮದಲ್ಲಿ ಅನಿರೀಕ್ಷಿತ ವಿರಾಮ ಒದಗಿತ್ತು. ರಣ ರಂಗದ ರಣ ಬಿಸಿಲಿನಲ್ಲಿ ಪ್ರಾಣ ಸಖಿ ಸೀತೆಯ ವಿರಹದಿಂದ ಗತ ಪ್ರಾಣನಾಗಿದ್ದ ಶ್ರೀರಾಮ. ಈ `ರಾವಣನೆಂತು ಎದುರಿಸಲಿ! ನನ್ನ ಕಣ್ಣಿನ ಬೆಳೆಕ ನೆಂತು ಪಡೆಯಲಿ !’ ಎಂದು ಚಿಂತಿಸುತ್ತ ಬಸವಳಿದು ಬೆಂಡಾಗಿ ಬೀಸುತ್ತಿದ್ದಾನೆ. ಜಯೋಪಾಯವನ್ನು ಕಾಣದೆ ಚಿಂತಾಕ್ರಾಂತನಾಗಿದ್ದಾನೆ. ಆಗ ಗುರುವಿನ ರೂಪದಲ್ಲಿ ಬೆಳಕಿನ ರೂಪದಲ್ಲಿ ಅಗಸ್ತ್ಯೆ ಮಹರ್ಷಿಗಳು ಆಗಮಿಸಿ: `ರಾಮ ರಾಮ ಮಹಾಬಾಹೋ! ‘`ವತ್ಸಾ$$!’ ಎಂಬುದಾಗಿ ತನ್ನ ಹೆಸರನ್ನು ವಾತ್ಸಲ್ಯದಿಂದ ಕೂಗಿದ, ತನ್ನ ಪರಾಕ್ರಮದ ಅರಿವನ್ನು ಮೂಡಿಸಿದ ಅಗಸ್ತ್ಯರ ಪಾದಗಳನ್ನು ತನ್ನ ಕಂಬನಿಗಳಿಂದ ತೊಳೆದು, ಅವರ ಹೃದಯವನ್ನು ತೋಯ್ಸಿದ.ತನ್ನ ಕಣ್ಣಿನ ಬೆಳಕನ್ನು ಪಡೆಯುವ ಪರಿಯನ್ನು ಅರುಹಿರಿ ಎಂದು ಅಂಗಲಾಚಿದ ರಾಮನಿಗೆ, ದಯಾರ್ದ್ರ ಹೃದಯರಾದ ಅಗಸ್ತ್ಯರು `ಆದಿತ್ಯ ಹೃದಯ’ ಮಂತ್ರೋಪದೇಶ ನೀಡುತ್ತಾರೆ. ಶ್ರದ್ಧಾಭಕ್ತಿಗಳೇ ಮೂರ್ತಿವೆತ್ತಂತ್ತಿರುವ ಶ್ರೀರಾಮ ಆದಿತ್ಯ ಹೃದಯವನ್ನು ಜಪಿಸಿ, ಮನನ ಗೈಯ್ದು, ಮಂತ್ರಶಕ್ತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಆತ್ಮಸ್ಥೈರ್ಯದಿಂದ ಒಳಬೆಳಕು ಕಂಡು ಮಹಾ ತೇಜನಾದ ರಾಘವ.
`ನಷ್ಟ ಶೋಕೋ$ಭವತ್ತದಾ’ : ಅಶೋಕನಾದ; ರಾಮನ ನೆನೆಪಿನಿಂದಾಗಿ ಅಶೋಕಳಾದ ಜಾನಕಿಯ ಬಂಧನವನ್ನು ಬಿಡಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. `ತ್ರಿರಾಚಮ್ಯ ಶುಚಿರ್ಭೂತ್ವ | ಧನುರಾದಾಯ ವೀರ್ಯವಾನ್ |ರಾವಣ ಸಂಹಾರದ ನಿಮಿತ್ತ ಧನಸ್ಸನ್ನು ಹೆದೆ ಏರಿಸುವ ಮೊದಲು, `ಅಪಾಂಮಿತ್ರ:’ ಸೂರ್ಯನಿಗೆ ಮಿತ್ರನಾದ ಜನಲವನ್ನು ಅಂಗೈಯಲ್ಲಿ ಸ್ವೀಕರಿಸಿ, ರಾಮ ಮೂರು ಸಲ ಆಚಮನ ಗೈಯ್ದು ಶುಚಿಯಾದ. ಯುದ್ಧಕಾರ್ಯ ಅವನಿಗೆ ಮಡಿಯ ಕೆಲಸ; ಪವಿತ್ರವಾದ ಕೆಲಸ. ಯುದ್ಧವೆಂಬುದು ಉಗ್ರವಾದ ಕರ್ತವ್ಯ. ಹಗುರವಾದ ಆಟವಲ್ಲ ಮನಸ್ಸು ಬಂದಂತೆ ಹಿಡಿದು ಹೊಡೆಯ ತಕ್ಕದ್ದಲ್ಲ. ಯುದ್ಧವು ಒಂದು ಧರ್ಮ ಕ್ರಿಯೆ.ಅದು ದೊಡ್ಡ ಗಾಯಕ್ಕೆ ಬೇಕಾಗುವ ಶಸ್ತ್ರ ಚಿಕಿತ್ಸೆಯ ಹಾಗೆ. ಭಯಂಕರ ಹೌದು! ಆದರೆ ಶುಭಂಕರ. ಧರ್ಮಜ್ಞನಾದ ಶ್ರೀರಾಮ ಧನುರ್ಧಾರಿಯಾದ. ದೇವತೆಗಳ ಮಧ್ಯದಲ್ಲಿದ್ದ ಸೂರ್ಯನು ಶ್ರೀರಾಮನನ್ನು ಆನಂದದಿಂದ ನೋಡುತ್ತಾ ರಾಮನನ್ನು ಹುರಿದುಂಬಿಸಿದ.
`ನಿಶಿಚರಪತಿ ಸಂಕ್ಷಯ’: `ಕತ್ತಲೆಯಲ್ಲಿ ಚಲಿಸುವ ರಾವಣನ ಅಂತ್ಯ ಸಮೀಪಿಸಿದೆ’ ನಿನ್ನ ಹೃದಯದ ಬೆಳಕನ್ನು ಉದ್ದೀಪನಗೊಳಿಸಿ, ಅವನ ಅಂತ್ಯಗೊಳಿಸು! ಕತ್ತಲೆಯನ್ನು ಸೀಳು! ನಿನ್ನ ಕಣ್ಣಿನ ಬೆಳಕಾದ ಸೀತೆಯನ್ನು ಪಡೆ!’ ಎಂಬ ಸೂರ್ಯ ಸಾಕ್ಷಾತ್ಕಾರದ ನುಡಿ ರಾಮನನ್ನು ಮುನ್ನಡೆಸಿತ್ತು.ಗುರುವಿನಿಂದ ಅನುಗ್ರಹಿಸಲ್ಪಟ್ಟು ಮುನ್ನಡೆದ ಶ್ರೀರಾಮ! ಆತ್ಮಸಾಕ್ಷಾತ್ಕಾರಗೊಂಡು ದೈವತ್ವಕ್ಕೇರಿದ!
ಶ್ರೀ ಗುರು – `ಇರುವೆ’
ಸಾಲಾಗಿ ಶಿಸ್ತಿನ ಸಿಪಾಯಿಗಳಾಗಿ ಒಂದು ಇನ್ನೊಂದಕ್ಕೆ ಏನನ್ನೋ ಉಸುರುತ್ತಾ, ಸಹಾಯ ನೀಡುತ್ತಾ ಉತ್ಸಾಹ ಸಂಭ್ರಮಗಳಿಂದ ಸಕ್ಕರೆಯ ಕಣವನ್ನು ಸಾಗಿಸುತ್ತಿರುವ ಶ್ರೀ ಗುರು -`ಇರುವೆ’ಯಲ್ಲಿ ತಮ್ಮ ಇರವನ್ನು ಗುರುತಿಸಿಕೊಂಡರು `ವರ್ಧಮಾನ’ರು. ಸ್ವಯಂ ದೀಕ್ಷೀತರಾಗಿ ಸೃಷ್ಟಿಯಲ್ಲಿನ ಜೀವಜಂತುಗಳನ್ನೇಲ್ಲಾ ಪ್ರೀತಿಸತೊಡಗಿದರು. ಅಹಿಂಸಾ ವ್ರತಿಗಳಾಗಿ ಮೈತ್ರೀಭಾವದಿಂದೊಡಗೂಡಿ, ವೈರತ್ವವನ್ನು ತೊರೆದು ಮಹಾವೀರರಾದರು ಶ್ರೀ ಗುರು-ವರ್ಧಮಾನರು.
ಶ್ರೀ ಗುರು – `ಭಿಕ್ಷೆ’
`ಪ್ರೀತಿಯಿಂದ ನೀಡಿದ ಭಿಕ್ಷೆಯನೆಂತು ನಿರಾಕರಿಸಲಿ?’! ಭಿಕ್ಷೆಯ ಸ್ವೀಕರಿಸಿ ಅಸ್ವಾಸ್ಥ್ಯನಾದ ಬುದ್ಧ! ಅರಿಯ ಬೇಕಾದುದೆಲ್ಲವ ಅರಿತು; ಮೈಗೂಡಿಸಿಕೊಳ್ಳಬೇಕಾದುದೆಲ್ಲವ ಮೈಗೂಡಿಸಿಕೊಂಡು; ತಿಳಿಯ ಹೇಳಬೇಕಾದುದೆಲ್ಲವ ತಿಳಿಯ ಹೇಳಿ, ಎಂಬತ್ತು ವರ್ಷಗಳ ಪರಿಪೂರ್ಣ ಜೀವನ ನಡೆಸಿ ಹುಣ್ಣಿಮೆಯ ಚಂದ್ರನಂತಾದ `ಭಗವಾನ್ ಬುದ್ಧ!’- ವೃಕ್ಷಗಳ ನೆರಳಿನಲ್ಲಿ ಹುಲ್ಲಿನ ಹಾಸಿನ ಮರಣ ಶಯ್ಯಯಲ್ಲಿ ಹುಣ್ಣಿಮೆಯೆಂದು! ತನ್ನ ಅಗಲಿಕೆ ತನ್ನ ಶಿಷ್ಯನಾದ ಆನಂದದಲ್ಲಿ ಅಮಾವಾಸ್ಯೆಯಾಗಬಾರದೆಂದು, ಹುಟ್ಟು ಅನಿರೀಕ್ಷಿತ; ಸಾವು ನಿಶ್ಚಿತ; ಸಾವಿಗೇಕೆ- ಅಗಲಿಗೇಕೆ ದುಃಖ ?ಸಾವಿಲ್ಲದ ಮನೆಯ ಸಾಸುವೆಯ ತರಲಾದೀತೆ?!ಅಪರಿಹಾರಕವಾದ ಸಮಸ್ಯೆಗಳನ್ನು ಎದುರಿಸುವ ಎದೆಗಾರಿಕೆ ನಿನ್ನದಾಗಲಿ! ಆನಂದ! ನಿನಗೆ ನೀನೇ ಬೆಳಕು !ಸತ್ಯವನೆದುರಿಸು! ಸತ್ಯದ ಹಾದಿ ಕತ್ತಲೆಯ ಕಿರಿದಾದ ಎರಿಕೆಯ ಹಾದಿ. ಅದರಲ್ಲಿ ನೀನೋರ್ವನೇ ಚಲಿಸಬೇಕು; ನಾ ಬರುವಂತಿಲ್ಲ! ಆನಂದ! ನಿನಗೆ ನೀನೇ ಬೆಳಕು !ನಾ ನಿನ್ನ ನಗಲಿದರೂ ನನ್ನ ವಾಣಿ ನಿನ್ನಲಿ ಅಣುರಣಿಸಲಿ !ಶಿಷ್ಯ ಮುನ್ನಡೆದಂತೆಲ್ಲಾ ಅವನ ಹಿಂದೆ ಹಿಂದೆಯೇ ಅವನನ್ನು ಹಿಂಬಾಲಿಸುತ್ತಾ, ಅವನ ನೆರಳಿನಂತೆ ಅವನನುಸರಿಸುತ್ತಾ ತನ್ನ ಶಿಷ್ಯನೂ ತನ್ನಂತಾಗಲು `ಬುದ್ಧ’ ನಂತಾಗಲು ಭಗವಾನ್ ಬುದ್ಧ ಅನುವು ಮಾಡಿದ, ಕೋಟಿ ಬುದ್ಧರನ್ನು ಸೃಷ್ಟಿಸಿದ , ಬುದ್ಧಂ ಶರಣಂ ಗಚ್ಚಾಮಿ
ಶ್ರೀ ಗುರು -`ತ್ಯಾಗ’
ನನ್ನ ಓದು; ನನ್ನ ಬರಹ; ನನ್ನ ಕೈ ಚಳಕ; ನನ್ನ ವಿದ್ಯೆ; ನನ್ನ ಬುದ್ಧಿ; ಸುಳ್ಳನ್ನಾಡದೆ, ಕಳ್ಳತನವೆಸೆಗದೆ, ಇನ್ನೊಬ್ಬರ ಮನವ ನೋಯಿಸದೆ ಬೆವರ ಸುರಿಸಿ ಧರ್ಮ ಮಾರ್ಗದಲ್ಲಿಯೇ ಅರ್ಥಸಂಪಾದಿಸಿದೆ. ಆದರೂ! ಪರಿಪೂರ್ಣ ಜೀವನದ ತೃಪ್ತಿ, ಶಾಂತಿ, ಸಮಾಧಾನವಿಲ್ಲವಲ್ಲ! ಏನೋ ಕೊರತೆ! ಏನೋ ಅತೃಪ್ತಿ! ನನ್ನ ಮನವ ಕಿತ್ತು ತಿನ್ನುತ್ತಿದೆಯೆಲ್ಲಾ ಏಕೆ ಸ್ವಾಮಿ!?
`ನೀನು ನಿನ್ನ ನೆರೆಯವನನ್ನು ನೋಡಿದೆಯಾ?! ಅವನ ಕಷ್ಟ ಸುಖಗಳಿಗೆ ಸ್ಪಂದಿಸಿದೆಯ?! ನಿನ್ನ ಕಲಿಕೆ ನಿನ್ನನಾವರಿಸಿದ ಪರಿಸರದ ಮೇಲೆ ಯಾವ ರೀತಿ ಪರಿಣಮಿಸಿದೆ?! ನಿನ್ನ ಶಾಂತಿ ನಿನ್ನ ತ್ಯಾಗವನ್ನು ಅವಲಂಬಿಸಿದೆ!
`ತ್ಯಾಗೇನೈಕೇನ ಆಮೃತತ್ವ ಮಾಶುಃ !’`ಅಮೃತತ್ವ: ಮನಸ್ಸಿನ ಶಾಂತಿ ಸಮಾಧಾನಗಳು ತ್ಯಾಗದಿಂದ ಮಾತ್ರ. `ತ್ಯಾಗ’: `ಅಹಂ’ನ ತ್ಯಾಗ ತನ್ನ ತನದ ತ್ಯಾಗದಿಂದ ಮಾತ್ರ ಅಮೃತತ್ವ. ಎರಡು ಸಾವಿರ ವರ್ಷಗಳ ಹಿಂದೆ ಜಗತ್ತಿನ ಹಿತಕ್ಕಾಗಿ ಜನಗಳ ಮನ ಪರಿವರ್ತನೆಗಾಗಿ ತನ್ನ ಶರೀರವನ್ನೇ ಶಿಲುಬೆಗೇರಿಸಿಕೊಂಡು ತ್ಯಾಗದಿಂದ ಅಮೃತತ್ವ ಪಡೆದ ಶ್ರೀ ಗುರು – ಏಸು ಕ್ರಿಸ್ತ.
ಶ್ರೀ ಗುರು – `ಆಚಾರ್ಯತ್ರಯರು’
ಏಕಂ ಸತ್ವಿಪ್ರಾಃ ಬಹುಧಾವದಂತಿ!
ಸತ್ಯ ಒಂದೆಯಾದರು ಅದನ್ನು ನೋಡುವ ದೃಷ್ಟಿ ಬೇರೆ, ಅದನ್ನರಿವ ಪರಿ ಬೇರೆ, ಅದನ್ನು ಸೇರುವ ದಾರಿ ಬೇರೆ.ಪ್ರಭು! ಶರೀರಭಾವದಿಂದ ಈ ಅಶಾಶ್ವತವಾದ ಶರೀರವನ್ನೇ ನಾನೆಂದೆಣಿಸಿ, ದೇಹ ಬುದ್ಧಿಯಿಂದ ಸ್ವಾರ್ಥಿಯಾಗಿ ಸುಖ ದುಃಖವೆಂಬ ದ್ವಂದ್ವದಲ್ಲಿ ವಿಲವಿಲನೆ ಒದ್ದಾಡಿ ಮೃತ್ಯುವಿನ ದವಡೆಯಲ್ಲಿ ಸಿಲುಕಿ ನಾಶಹೊಂದುವ ನಾನು-ನೀನು ಬಹುದೂರ! ನಿನ್ನನ್ನರಿಯೇ ! ನಿನ್ನ ಕಾಣಲರಿಯೇ! ನಿನ್ನ ಅಸ್ಥಿತ್ವದ ಬಗ್ಗೆ ಶ್ರದ್ಧೆ ಭಕ್ತಿ. ನಿನ್ನ ಸ್ಮರಣೆಯಿಂದಾಗಿ ನಾನಿನ್ನ ದಾಸ! ನೀನು ಈಶ! ನಾನು ಪಶು! ನೀನು ಪಶುಪತಿ! ಇದುವೇ `ದ್ವೈತಭಾವ’.
ಪ್ರಭು! ನಾನು ಜೀವವೆಂಬ ಭಾವದಿಂದ ಆಶಾತ್ವತವಾದ ಶರೀರದಲ್ಲಿ ಬಂಧಿಯಾಗಿ ಸಂಕೋಲೆಗಳಿಂದ ಬಿಗಿಯಲ್ಪಟ್ಟ ಖೈದಿಯಂತಾದಾಗ ನಾನಿನ್ನ ಅಂಶ.ನೀನು ಅನಂತ ಸಮುದ್ರದಂತೆ; ನಾನಾದರೋ ಅದರಿಂದ ಏಳುವ ಬೀಳುವ ಅಲೆಯಂತೆ. `ನೀನು ಸಿಂಧು!’ ನಾನಾದರೋ ಬಿಂದು; ನೀನು ಮಹಾದೇವ-ಮಹಾಬೆಳಕು; ನಾನಾದರೋ ನಿನ್ನನರಿತು ನಿನ್ನ ಬೆಳೆಗಲು ಮುಂದಾದ ಕಿರು ಹಣತೆ. ನಾನಿನ್ನ ಅಂಶ; ನಾ ನಿನ್ನವ; ನೀ ನನ್ನವನಲ್ಲ; ಅಲೆಗಳು ಸಮುದ್ರಕ್ಕೆ ಸೇರಿದುವೇ ಹೊರತು ಸಮುದ್ರ ಅಲೆಗಳಿಗೆ ಸೇರಿಲ್ಲ- `ಇದು ವಿಶಿಷ್ಟಾದ್ವೈತಭಾವ’.
ಪ್ರಭು! ನಾನು ಶರೀರವಲ್ಲ; ಶರೀರದಲ್ಲಿ ಬಂದಿಯಾದ ಜೀವವಲ್ಲ; ನಾನು ಜಗದ್ವ್ಯಾಪಕ ಆತ್ಮ ತತ್ವ; ಜಗದಾಕರ್ಷಣ ಶಕ್ತಿಯಾದ ವಿಷ್ಣು ತತ್ವ ಎಂಬ `ಸತ್ಯ, ಜ್ಞಾನ, ಅನಂತ’ ಎಂಬ ಅರಿವು ನನ್ನಲ್ಲಿ ನೀನು ನನ್ನಲ್ಲಿ; ನಮ್ಮಿಬ್ಬರಲ್ಲಿ ಅಂತರವೆಲ್ಲಿ; ನಾನೇ ನೀನು ನೀನೇ ನಾನು’ `ಅಹಂ ಬ್ರಹ್ಮಾಸ್ಮೀ’ `ತತ್ವ ಮಸಿ’- ಆ ತತ್ವವೇ ನಾನು; `ಪ್ರಜ್ಞಾನಂ ಬ್ರಹ್ಮ’- ಆ ಅರಿವೆ ಗುರು; ಸರ್ವಂ ಖಿಲ್ವದಂ ಬ್ರಹ್ಮ – ಎಲ್ಲವೂ ಪರತತ್ವದಿಂದ ಆವರಿಸಲ್ಪಟ್ಟಿದೆ. `ಸರ್ವಭೂತೇಷು ಚಾತ್ಮಾನಂ’-ಎಲ್ಲಾ ಜೀವ ಜಂತು ಗಿಡ ಮರ ಪಶು ಪಕ್ಷಿಗಳಲ್ಲಿ ಚೈತನ್ಯವಾಗಿ ಆ ಪರಮಾತ್ಮ.`ಸಹಸ್ರ ಶೀರ್ಷ ಪುರುಷಃ| ಸಹಸ್ರಾಕ್ಷ ಸಹಸ್ರಪಾತ್’| ಅನಂತ ತಲೆಗಳು, ಅನಂತ ಕಂಗಳು, ಅನಂತ ಪಾದಗಳು, `ಚೀಮಲೋ ಬ್ರಹ್ಮಲೋ’ಇರುವೆಯಿಂದ ಬ್ರಹ್ಮದವರೆಗೆ ಇರುವ ಜೀವ ರಾಶಿಗಳ ಕಂಗಳ ಬೆಳಕು ಅವನೇ, ಕಾಲ್ಗಳ ಶಕ್ತಿ ಅವನೇ! `ಸೂತ್ರ ಮಣಿಗಣೈರ್ರ್ಇವ’! ಹೊರಗಣ್ಣಿಗೆ ಈ ಜಗತ್ತು, ಈ ಜೀವನ ಎಲ್ಲವು ಬಿಡಿ ಬಿಡಿಯಾಗಿ ಕಂಡು ಬಂದರೂ, ಅಂತದೃಷ್ಟಿಗೆ ಮಣಿಗಳನ್ನೆಲ್ಲಾ ಬಂಧಿಸಿರುವ ದಾರದಂತೆ ಆ ವಿಷ್ಣು. ವಿಷ್ಣು ವನರಿಯಲು ವಿನಯತೆ ಬೇಕು! ದಾಸನಾಗಬೇಕು ಈಶನನರಿಯಲು ! ಅಹಂ ನೀಗಬೇಕು! ನಾನು ಹೋದರೆ ಹೋದೇನು!
`ತ್ವಯಿ ಮಯಿ ಅನ್ಯತ್ರ ವಿಷ್ಣುಃ’ ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿ ಒಬ್ಬನೇ ವಿಷ್ಣು `ಮಮೈವಾಂಶೋ ಜೀವಲೋಕೇ ಜೀವ ಭೂತ ಸನಾತನಃ’ ಭಗವದಂಶದಿಂದ ಜೀವ ಲೋಕವೆಲ್ಲಾ ವೆಂದಾದಾಗ ಮೇಲೆಲ್ಲಿ ಕೀಳಿಲ್ಲ; ಪರಸ್ಪರ ಅರಿತು ಸಹಬಾಳ್ವೆ ನಡೆಸಿದಾಗ ದುಃಖವೆಲ್ಲಿ ದುಮ್ಮಾನವೆಲ್ಲಿ; ಎಲ್ಲವೂ ಆನಂದಮಯ; ಚಿದಾನಂದ ರೂಪಃ ಶಿವೋಹಂ ಶಿವೋಹಂ!. ಆಚಿತ್ಶಕ್ತಿಯ ಸ್ವರೂಪವನರಿಯಲು ಸಾಧಕ – ಆಚಾರ್ಯ ತ್ರಯರಾದ ಶ್ರೀ ಮಧ್ವಾಚಾರ್ಯರು, ಶ್ರೀರಾಮಾನುಜಚಾರ್ಯರು, ಶ್ರೀ ಶಂಕರರ ಮಾರ್ಗದರ್ಶನದಲ್ಲಿಯೇ ನಡೆದು ಮುಂದುವರೆಯಬೇಕು. ದೈತ, ವಿಶಿಷ್ಟಾದ್ವೈತ, ಅದ್ವೈತ-ಸತ್ಯದ ಹಾದಿಯ ಕವಲುಗಳು. ಯಾವುದೇ ಹಾದಿಯಲ್ಲಿ ನಡೆದರು ಶ್ರದ್ಧೆ, ಭಕ್ತಿನಿಷ್ಟೆಗಳೇ ಮೂಲ ಸಾಮಗ್ರಿಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post