ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೂರ್ಯ ನಮ್ಮ ಬದುಕಿನ ಬಹುದೊಡ್ಡ ಸಂಕೇತ, ಬೆಳಕು ಜ್ಞಾನದ ಪ್ರತೀಕ. ಧರ್ಮ, ಕಲೆ, ಸಂಸ್ಕೃತಿ, ಖಗೋಳ ಶಾಸ್ತ್ರ ಹೀಗೆ ಎಲ್ಲ ರಂಗಗಳಲ್ಲೂ ಸೂರ್ಯನ ಪ್ರಭೆ ಪಸರಿಸಿದೆ. ವೇದಗಳು ಸೂರ್ಯ, ಚಂದ್ರರನ್ನು ಪರಮಾತ್ಮನ ಎರಡು ಕಣ್ಣುಗಳೆಂದು ವರ್ಣಿಸುತ್ತದೆ. ನಮ್ಮ ಪರಂಪರೆಯಲ್ಲಿ ಬಹು ಪವಿತ್ರವಾದ, ಶಕ್ತಿಯುತವಾದ ಮಂತ್ರವೆಂದು ಭಾವಿಸಲಾಗುವ ಗಾಯತ್ರಿ ಮಂತ್ರ ಸೂರ್ಯನ ಕುರಿತಾಗಿಯೇ ಇರುವಂತಹದು. ಸೂರ್ಯ ತೇಜೋಮಯ ಪ್ರಕಾಶಕ್ಕೆ ನಮಿಸಿ ,ಬುದ್ಧಿಯನ್ನು ಬೆಳಗಿಸುವಂತೆ, ಧೀಶಕ್ತಿಯನ್ನು ಪ್ರಚೋದಿಸುವಂತೆ ಪ್ರಾರ್ಥಿಸುವ ಮಂತ್ರವಿದು.
ರಾಮಾಯಣದ ಯುದ್ದಕಾಂಡದಲ್ಲಿ ಬರುವ ಆದಿತ್ಯ ಹೃದಯಂ ಸೂರ್ಯಸ್ತುತಿ ಮಂತ್ರ. ಅಜೇಯತ್ವದ ವರ ಪಡೆದಿದ್ದ ರಾವಣನನ್ನು ಸೋಲಿಸುವ ಬಗ್ಗೆ ರಾಮ ಯುದ್ದದ ನಡುವೆ ಚಿಂತಾಮಗ್ನನಾಗುತ್ತಾನೆ, ಅಗಸ್ತ್ಯರು ಶತೃವನ್ನು ಜಯಿಸುವ, ದ್ವಂದ್ವವನ್ನು ದಾಟುವ ಸನಾತನ ರಹಸ್ಯವನ್ನು ಈ ಸಂದರ್ಭದಲ್ಲಿ ರಾಮನಿಗೆ ಉಪದೇಶಿಸುತ್ತಾರೆ.
ರವಿಯ ಆರೋಗ್ಯ ಮಹತ್ವವೂ ಕಡಿಮೆಯೇನಲ್ಲ, ಬಿಸಿಲು ವಿಟಮಿನ್ ಡಿ ಯ ನೈಸರ್ಗಿಕ ಆಕರ. ಸೂರ್ಯೋದಯದ ಮೌನ ವೀಕ್ಷಣೆ ನಮ್ಮಲ್ಲಿ ಅಪಾರ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ.
ಸಮುದ್ರ ದಂಡೆಯ ಮೇಲಿನ ಸನ್ ಬಾತ್ ಆರೋಗ್ಯ ಆಯಾಮವನ್ನು ಹೊಂದಿದೆ. ಯೋಗಾಸನದಲ್ಲಿ ಸೂರ್ಯ ನಮಸ್ಕಾರವೆಂಬ ವಿಧವೇ ಇದೆ.
ಸೂರ್ಯನ ಉಗ್ರ ಉಷ್ಣತೆ ನಮಗೆ ತಾಗಬಾರದೆಂದು ನಿಸರ್ಗವೆ ಓಝೋನ್ ಪದರದ ರಕ್ಷಣೆ ನಿರ್ಮಿಸಿಕೊಟ್ಟಿದೆ. ಆದರೆ ನಿಸರ್ಗದ ಕೊಡುಗೆಗೆ ಮಾನವನೇ ಹಾನಿ ಮಾಡಿದ್ದಾನೆ. ಎಷ್ಟಿದ್ದರೂ ಸಾಕಾಗದ ಸುಖದ ಬೆನ್ನುಹತ್ತಿ ಬಗೆ ಬಗೆಯ ಮಾಲಿನ್ಯ ವನ್ನು ಉಂಟು ಮಾಡಿದ್ದಾನೆ .ಈ ಆಧುನಿಕ ಕಾಲದಲ್ಲಿ ಓಝೋನ್ ಪದರಕ್ಕೆ ಹಾನಿಯುಂಟು ಮಾಡದಿರುವುದು ಒಂದು ಬಗೆಯ ಸೂರ್ಯಾರಾಧನೆಯೇ.
ಪಂಚಭೂತಗಳಿಂದ ನಿರ್ಮಿತವಾದ ಈ ಪ್ರಪಂಚಕ್ಕೆ ಚೈತನ್ಯ ನೀಡುವನೇ ಸೂರ್ಯ. ಭೂಮಿಗೆ ಮಳೆ ಬೆಳೆ ಮಾರುತ ಬೆಳಗಾಗಲು, ಬೀಜ ಮೊಳಕೆಯೊಡೆಯಲು ಗಿಡ ಮರ ಬಳ್ಳಿಗಳಲ್ಲಿ ಫೋಟೋ ಸಿಂಥೆಸಿಸ್ ಪ್ರಕ್ರಿಯೆ ನಡೆಯಲು ರವಿಯೇ ಕಾರಣ.
ಸೂರ್ಯ ದೇವ ಚಕ್ಷುಗೋಚರನಾದ ಪ್ರತ್ಯಕ್ಷ ದೇವನಾದುದರಿಂದ ಈ ದೇವನಿಗೆ ದೇವಾಲಯಗಳು ಕಡಿಮೆ. ವಿಗ್ರಹಾರಾಧನೆಯಲ್ಲಿ ಕೋನಾರ್ಕನಲ್ಲಿನ ಜಗತ್ ಪ್ರಸಿದ್ದ ರಥಮಾದರಿಯ ಸೂರ್ಯದೇವಾಲಯ ಪ್ರಮುಖವಾದುದು.
ಮಾಘ ಮಾಸದ ಶುದ್ದ ಸಪ್ತಮಿಯ ದಿನ ಸೂರ್ಯನ ಜನ್ಮ ದಿನವಾದುದರಿಂದ ಅದನ್ನು ರಥ ಸಪ್ತಮಿ ಎಂದು ಆಚರಿಸುತ್ತಾರೆ. ಅಕ್ಷಯ ತೃತೀಯದಂತೆ ಅಕ್ಷಯ ಫಲನೀಡುವ ಈ ಪವಿತ್ರದಿನವನ್ನು ಅಚಲಾ ಸಪ್ತಮಿಯೆಂದು ಕರೆಯಲಾಗುತ್ತದೆ.
ಅಂದು ಸೂರ್ಯನು ತನ್ನ ರಥಕ್ಕೆ ಅರುಣನನ್ನು ಸಾರಥಿಯಾಗಿಸಿಕೊಂಡು ಗಾಯತ್ರಿ, ಬೃಹತಿ, ಉಷ್ಣಿಕ್, ಜಗತಿ, ತ್ರಿಷ್ಟಪ್, ಅನುಷ್ಟಪ್ ಹಾಗೂ ಪಂಕ್ತಿಗಳೆಂಬ ಏಳು ಛಂದಸ್ಸುಗಳನ್ನೇ ಏಳು ಕುದುರೆಯನ್ನಾಗಿ ಹೂಡಿ ಸಂಚಾರಕ್ಕೆ ಹೊರಡುತ್ತಾನೆ. ಈ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳು ಹಾಗು ವಾರದ ಏಳುದಿನಗಳನ್ನು ಸೂಚಿಸುತ್ತದೆ.
ಕಶ್ಯಪ-ಅದಿತಿ ಪುತ್ರ ಸೂರ್ಯ ಹಾಗಾಗಿ ಆದಿತ್ಯನಾದ. ಆದಿತ್ಯನ ಪತ್ನಿ ಸಂಜ್ಞಾದೇವಿ, ಈಕೆ ವಿಶ್ವಕರ್ಮನ ಮಗಳು. ಇವರ ಮಕ್ಕಳು ವೈವಸ್ವತ, ಯಮ ಮತ್ತು ಯಮುನೆ ಹಾಗೂ ಅಶ್ವಿನಿ ದೇವತೆಗಳು. ಸೂರ್ಯನ ತಾಪ ತಾಳಲಾರದ ಸಂಜ್ಞಾದೇವಿಯು ತನ್ನ ಸ್ಥಾನದಲ್ಲಿ ಛಾಯಾ ದೇವಿಯನ್ನು ಕಲ್ಪಿಸಿ ತಾನು ತನ್ನ ತಂದೆ ಮನೆಗೆ ನಿರ್ಗಮಿಸುತ್ತಾಳೆ. ಛಾಯಾ ದೇವಿಯಲ್ಲಿ ಜನಿಸಿದವರು ಸಾವರ್ಣ ಮತ್ತು ಶನೈಶ್ಚರ. ಆದಿತ್ಯನ ವಂಶದ ಚಿಕ್ಕ ಪರಿಚಯವಿದು.
ಸೂರ್ಯೋದಯದ ದೃಶ್ಯ ರಮಣೀಯತೆ ಬೆರಗಾಗಿ ನಾಡಿನ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತ್ತಿದೆ, ಚಿರನೂತನ ಚೇತನದುತ್ಸಾಹದ ನವೀನ ಜೀವನ ಚಿಮ್ಮುತ್ತಿದೆ ಎನ್ನುತ್ತಾರೆ ರಾಷ್ಟ್ರಕವಿ ಕುವೆಂಪು. ಶಾಂತಿ ರಸವೇ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರಿಯ ಬೆಳಗಲ್ಲೋ ಅಣ್ಣಾ ಎಂದವರು ಕನ್ನಡನಾಡಿನ ಪ್ರಸಿದ್ದ ಕವಿ ಬೇಂದ್ರೆ .
ಸೂರ್ಯನನ್ನು ಕುರಿತು ತಪಸ್ಸುಗೈದ ಸತ್ರಾಜಿತ, ಶಮಂತಕ ಮಣಿ ಸಂಪಾದಿಸಿಕೊಂಡು ಸಕಲ ಶ್ರೇಯಸ್ಸನ್ನು ಅನುಭವಿಸಿದ ಕಥೆ ಕೇಳಿದ್ದೇವೆ. ಸೂರ್ಯಾಂಶ ಸಂಭೂತರಾದ ಕರ್ಣ iಹಾಶೂರ. ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಕೃಷ್ಣಾರ್ಜುನರಿಗೆ ಸರಿಸಮನಾಗಿದ್ದವ. ಆದಿತ್ಯನಿಗೆ ನಮಸ್ಕರಿಸದೇ ಕರ್ಣ ಎಂದೂ ಯಾವ ಕಾರ್ಯಗಳನ್ನು ಮಾಡುತ್ತಿರಲಿಲ್ಲ .
ಪಾಂಡವರು ವನವಾಸದಲ್ಲಿದ್ದಾಗ ಯುಧಿಷ್ಟರನು ಪೂಜ್ಯರಾದ ಧೌಮ್ಯ ಋಷಿಗಳಿಂದ ಬ್ರಹ್ಮನಿಂದ ನಿರೂಪಿಸಲ್ಪಟ್ಟ ಅಷ್ಟೋತ್ತರ ಶತನಾಮರೂಪವಾದ ಸೂರ್ಯ ಸ್ತೋತ್ರವನ್ನು ಗ್ರಹಿಸಿ, ಸೂರ್ಯಾರಾಧನೆಯಿಂದ ಅಕ್ಷಯ ಪಡೆಯುತ್ತಾನೆ.
ಯಾಜ್ಞವಲ್ಕ್ಯರು ತಮ್ಮ ಗುರು ವೈಶಂಪಾಯನರಿಂದ ಶಾಪಗ್ರಸ್ತರಾಗಿ, ಅವರಿಂದ ಕಲಿತ ವಿದ್ಯೆಯನ್ನು ವಪನ ಮಾಡಿದ ನಂತರ ಸೂರ್ಯೋಪಾಸನೆಯ ಮೂಲಕ ಜ್ಞಾನಿಗಳಾಗಿ ವಾಜಸೇನೇಯ ಮಾಧ್ಯಾಂದಿನ ಎಂಬ ವೇದ ರಚಿಸುವಂತಾದರು.
ಸೂರ್ಯೋದಯದ ವೇಳೆಯಲ್ಲಿ ಸೂರ್ಯನ ಕಿರಣಗಳಿಂದ ಮಂದೇಹ ಎಂಬ ರಾಕ್ಷಸರ ಗುಂಪು ನಾಶ ಹೊಂದುತ್ತದೆ. ಅದು ಮಾತ್ರವಲ್ಲದೆ ನಮ್ಮ ಶರೀರದಲ್ಲಿನ ನಿದ್ರಾದೇವಿಯಿಂದ ಆವರಿಸಲ್ಪಟ್ಟ, ನಿದ್ರಾ, ಭಯ, ಕ್ರೋಧ, ಆಲಸ್ಯ ಇತ್ಯಾದಿಗಳು ನಾಶವಾಗುತ್ತದೆ. ತ್ರಯಿಮೂರ್ತಿ ದಿವಾಕರಃ ಎಂಬ ನಾಮಕ್ಕೆ ಸಾರ್ಥಕ ರೂಪಧಾರಿಯಾದ ಸೂರ್ಯ ನಾರಾಯಣ ಆರಾಧನೆ ಮಾಡುತ್ತ ಹೋದರೆ ನಮ್ಮ ದೇಹ ಸಂಬಂಧವಾದ ರೋಗ ಮಾತ್ರವಲ್ಲದೆ ಮನೋರೋಗವೂ ಉಪಶಮಿಸುತ್ತದೆ.
ಭಾರತದಲ್ಲಿ ಕುಷಣರಕಾಲದಲ್ಲಿ ಸೂರ್ಯೋಪಾಸನೆ ಇದ್ದದ್ದು ಇತಿಹಾಸದಿಂದ ತಿಳಿದು ಬರುತ್ತದೆ. ರುದ್ರಭಟ್ಟನು ತಾನು ಕನ್ನಡದಲ್ಲಿ ಬರೆದ ಜಗನ್ನಾಥ ವಿಜಯವೆಂಬ ಗ್ರಂಥದ ಮಂಗಲಾಚರಣೆಯಲ್ಲಿ, ರನ್ನನು ತಾನು ಬರೆದ ಗದಾಯುದ್ಧ ಕಾವ್ಯದ ಮಂಗಲಾಚರಣೆ ಮತ್ತು ದುರ್ಗಸಿಂಹನು ತನ್ನ ಪಂಚತಂತ್ರದ ಮಂಗಳಾಚರಣೆಯಲ್ಲಿ ಸೂರ್ಯನನ್ನು ಸ್ಮರಿಸಲಾಗಿದೆ.
ಸೂರ್ಯನು ಕಿರಣವು ಭೂಮಿಗೆ ತಲುಪಲು 8.3 ನಿಮಿಷಬೇಕು, ಬೆಳಕಿನ ವೇಗ 3105 ಕೆಎಂಎಸ್ ಆಗಿದೆ. ಸೂರ್ಯನು ಭೂಮಿಯ ಸಮೀಪದ ನಕ್ಷತ್ರವಾಗಿ ಸ್ವಪ್ರಕಾಶವುಳ್ಳವನಾಗಿದ್ದಾನೆ, ವೈಜ್ಞಾನಿಕವಾಗಿ ಗಾತ್ರ, ಬಣ್ಣ, ಉಷ್ಣಾಂಶ ಹೇಳಿದರೂ ಶಾಸ್ತ್ರದ ದೃಷ್ಟಿಯಿಂದ ಉದಯ, ತತ್ವ, ವೈಶಿಷ್ಟ್ಯವನ್ನು ಭಾರತೀಯರು, ಸೂರ್ಯನಾರಾಯಣನೆಂದು ಆರಾಧಿಸುವರು. ವಿಜ್ಞಾನಕ್ಕೂ ಶಾಸ್ತ್ರಕ್ಕೂ ಸಮನ್ವಯತೆಯಿದೆ. ಶಾಸ್ತ್ರವು ವಿಜ್ಞಾನವೆಂದ ಮೇಲೆ ಶಾಸ್ತ್ರಕಾರರು ವಿಜ್ಞಾನಿಗಳಂತೆ ಸಾಧನೆ ಮಾಡಿದಾಗ ನಮ್ಮ ವ್ರತ, ಹಬ್ಬಗಳ ಹಿಂದಿನ ತತ್ವ ಅರಿವಾಗುತ್ತದೆ, ಮೌಢ್ಯ ಕರಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post