ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸಕಲ ಶಾಸ್ತ್ರ, 64 ವಿದ್ಯೆಗಳಲ್ಲಿ ಪ್ರವೀಣರಾದ, ದುರ್ಮತಿಗಳನ್ನು ವಾದದಲ್ಲಿ ತಮ್ಮ ಸಿಂಹಗರ್ಜನೆಯಿಂದ ಓಡಿಸಿದ್ದ ಮಹಾನುಭಾವರಾದ ಶ್ರೀವಿಜಯೀಂದ್ರತೀರ್ಥರು, ಇವರ ಪೂರ್ಣಾನುಗ್ರಹ ಪಡೆದಿದ್ದ ಧೀಮಂತ ಸನ್ಯಾಸಿ ಶ್ರೀಸುಧೀಂದ್ರತೀರ್ಥ ಶ್ರೀಪಾದರು ಜಗತ್ತಿಗೆ ಅನರ್ಘ್ಯರತ್ನವನ್ನು ಕೊಡುಗೆಯಾಗಿ ನೀಡಿದ ದಿನವನ್ನು ನಗರದ ಜಯನಗರ 5ನೆಯ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 400ನೆಯ ಪಟ್ಟಾಭಿಷೇಕ ಸಂಭ್ರಮ ಮನೆ ಮಾಡಿದೆ.
ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಶ್ರೀ ಗುರುಸಾರ್ವಭೌಮರ ಅಷ್ಟೋತ್ತರ ಸಹಿತ ಸಹಸ್ರ ಕಳಶ ಕ್ಷೀರಾಭಿಷೇಕ ಹಾಗೂ ಸ್ವರ್ಣ ಸಿಂಹಾಸನದಲ್ಲಿ ರಾಯರ ಪಾದುಕಾ ಪಟ್ಟಾಭಿಷೇಕ, ಮಹಾಮಂಗಳಾರತಿ ನೆರವೇರಿತು.
ಶ್ರೀ ಮಠದಲ್ಲಿ ರಾಯರ ಬೃಂದಾವನಕ್ಕೆ ಪಂಚಾಮೃತ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಪಾದುಕೆಗಳಿಗೆ ಪುಷ್ಪವೃಷ್ಟಿಗಳಿಂದ ಪಟ್ಟಾಭಿಷೇಕದ ಪೂಜಾ ಕಾರ್ಯಕ್ರಮವು ವಿಶೇಷವಾಗಿ ನೆರವೇರಿತು.
ಶ್ರೀಮಠದ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರ ಆಚಾರ್ಯರು ಹಾಗೂ ಜಿ.ಕೆ. ಆಚಾರ್ಯರು ಶ್ರೀ ಟೀಕಾಚಾರ್ಯರ ತೈಲವರ್ಣದ ಭಾವಚಿತ್ರವನ್ನು ಅನಾವರಣಗೊಳಿಸಿದರು.
ನಿನ್ನೆ ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇಂದು ಬೆಳಗ್ಗೆ 10 ಗಂಟೆಗೆ ಪೇಜಾವರ ಮಠಾಧೀಶರಾದ ಶ್ರೀ 108 ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಲಕ್ಷ ಪುಷ್ಪಾರ್ಚನೆ ಮತ್ತು ಸಂಸ್ಥಾನ ಪೂಜೆ ನೆರವೇರಿತು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post