ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಣ್ಣ ಮಕ್ಕಳಿಗೆ ಶಿಕ್ಷಕರೆಂದರೆ ದೇವರು. ಶಿಕ್ಷಕರೆಂದರೆ ಸರ್ವಜ್ಞರು. ಮನೆಯಲ್ಲಿ ಹೆತ್ತವರು ಹೇಳಿದ್ದನ್ನೂ ಮಾಡದ ಮಕ್ಕಳು ಪ್ರೆûಮರಿ ಶಾಲೆಯ ಟೀಚರ ಮಾತಿಗೆ ರೋಬೊಟ್ನಂತೆ ಬದಲಾಗುತ್ತಾರೆ. ಅಲ್ಲಿ ಗೌರವವೂ ಇರುತ್ತದೆ. ಭಕ್ತಿ ಪ್ರೀತಿಯೂ ಇರುತ್ತದೆ. ಹಾಗಾದರೆ ಇದು ಹಳಿ ತಪ್ರೋದು ಎಲ್ಲಿ? ಕಾಲೇಜಿನಲ್ಲಿ ಪಾಠ ಹೇಳಿಸಿಕೊಳ್ಳೋ ಮಕ್ಕಳು ಶಿಕ್ಷಕರಿಗೆ ಒಂದು ಶುಭಾಶಯದ ಮಾತು ಹೇಳದಷ್ಟು ಬದಲಾಗೋದು ಯಾಕೆ?
ಹಿಂದೆಲ್ಲ ಕೋಲಿನಿಂದ ಹೊಡೆದು ಕಲಿಸುತ್ತಿದ್ದರು. ಪ್ರತಿ ಶಿಕ್ಷಕನ ಈ ಕ್ರಮದ ಹಿಂದೆ ಇದ್ದುದು ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ಕೊಡಬೇಕು. ಆತ ಬುದ್ಧಿವಂತನಾಗಬೇಕು ಎಂಬುದು ಮಾತ್ರವಾಗಿತ್ತು. ಈಗ ಕೋಲು ಬಿಡಿ, ಕೈಯಿಂದ ಹೊಡೆದರೂ ಅದರಲ್ಲಿ ಸಲ್ಲದ ವಿವಾದ ಸೃಷ್ಟಿಯಾಗಿ ಊರು ಉರಿಯುವ ಸಾಧ್ಯತೆಯೂ ಇದೆ. ಒಂದೇಟು ಬಿಗಿಯದೆ ಮಾತಿನ ಮೂಲಕ ಹಿತೋಪದೇಶ ನೀಡಿದರೂ ಶಿಕ್ಷಕ ರಾತ್ರಿ ಸರಿಯಾಗಿ ನಿದ್ರೆ ಮಾಡೋದಿಲ್ಲ. ಕೇಳಿಸಿಕೊಂಡ ವಿದ್ಯಾರ್ಥಿ ಮನೆಯಲ್ಲಿ ಎಂಥ ಬಣ್ಣ ಬಳಿದು ಇದನ್ನು ವರ್ಣಿಸಿರಬಹುದು? ಆತನ ಮನೆಯವರು ಬಂದು ಗಲಾಟೆ ಮಾಡಬಹುದೇ ಅದು ಪೊಲೀಸ್ ಠಾಣೆ ಮೆಟ್ಟಿಲೇರಿತೇ ಇಂದಥ ಭೀತಿ ಪ್ರತಿಯೋರ್ವ ಶಿಕ್ಷಕರನ್ನೂ ಸದಾ ಕಾಡುತ್ತಿದೆ.
ಈ ಹಿಂದೆ ಕೆಲವರಾದರೂ ಗೌರವ ಕೊಡುವ ವಿದ್ಯಾರ್ಥಿಗಳಿದ್ದರು, ವರ್ಷದ ಕೊನೆಯ ದಿನದಲ್ಲಿ ಪಾದ ಮುಟ್ಟಿ ಆಶೀರ್ವಾದ ಬೇಡಿದವರೂ ಇದ್ದಾರೆ. ಶಿಕ್ಷಕರ ದಿನದಂದು ಪ್ರೀತಿಯ ಮಾತಿನಲ್ಲಿ ಶುಭ ಕೋರಿದವರಿದ್ದಾರೆ. ಒಂದು ಗ್ರೂಪ್ ಫೋಟೋ ತೆಗೆಸಿ ಫ್ರೇಮ್ ಹಾಕಿಸಿಕೊಟ್ಟವರಿದ್ದಾರೆ. ಬರಬರುತ್ತಾ ಅಂತರ ಅಪರಿಚಿತರಂತಾಗುತ್ತಿದೆ. ಗೌರವ ಅನಾಥವಾಗುತ್ತಿದೆ. ಹೀಗಾಗಲು ನಿಜಕ್ಕೂ ಕಾರಣವೇನು ಎಂಬ ಪ್ರಶ್ನೆಗೆ ಸುಲಭದಲ್ಲಿ ಉತ್ತರ ಸಿಗೋದು ಕಷ್ಟ.
ಗುರುವನ್ನು ದೇವರಿಗೆ ಸಮಾನವಾಗಿ ಕಾಣುತ್ತಿದ್ದವರು ನಮ್ಮ ಹಿರಿಯರು. ಅಂಥದೊಂದು ಸಂಸ್ಕೃತಿಯಲ್ಲಿ ಬೆಳೆದು ಬಂದವರು ಭಾರತೀಯರು. ಹಾಗಿರುವಾಗ ಒಂದು ಕಾಲದ ದೇವರನ್ನು ಇಂದು ತುಚ್ಛವಾಗಿ ಕಾಣುವಂಥ ಬದಲಾವಣೆಯಾಗಲು ಕಾರಣ ನಮ್ಮ ಶಿಕ್ಷಣವೇ ಅಥವಾ ಮನೆಮಂದಿಯ ಅತಿಯಾದ ಸ್ವಾಭಿಮಾನವೇ? ಇಲ್ಲಾ ಮಕ್ಕಳ ಮೇಲಿನ ಅತಿಯಾದ ಪ್ರೀತಿಯೇ? ನಾವಿಂದು ಸಂಸ್ಕಾರ ಭರಿತ ಶಿಕ್ಷಣ ಕೊಡಿ ಎಂದರೆ ಅದು ಶಿಕ್ಷಣದ ಕೇಸರೀಕರಣ ಎಂದು ಹೇಳುತ್ತೇವೆ. ಆದರೆ ಹಿಂದೆಲ್ಲ ಒಂದು ಸುಂದರ ಸಮಾಜಕ್ಕೆ ಭದ್ರ ಅಡಿಪಾಯ ಆಗುತ್ತಿದ್ದ ನಮ್ಮ ಮಕ್ಕಳು ಇಂದು ಭಾವನೆಯಿಲ್ಲದ ರೋಬೋಟ್ ಆಗಲು ಕಾರಣ ನಮ್ಮ ಬದಲಾದ ಪಾಶ್ಚಾತ್ಯ ಶಿಕ್ಷಣ ಕ್ರಮ ಮತ್ತು ವರ್ತನೆ ಎಂದು ಹೇಳಿದರೆ ತಪ್ಪಾಗದೇನೋ?
ಸಮಾಜ ಎಷ್ಟೇ ಬದಲಾಗಿದ್ದರೂ ಈಗಲೂ ಶಿಕ್ಷಕರು ತಮ್ಮ ವಿದ್ಯಾರ್ಥಿಯ ಹಿತವನ್ನೇ ಬಯಸುತ್ತಿರುತ್ತಾರೆ. ಎಲ್ಲೋ ಕೆಲವು ಕೆಟ್ಟ ಉದಾಹರಣೆ ಸಿಗಬಹುದಾದರೂ ಬಹುತೇಕ ಶಿಕ್ಷಕರು ತರಗತಿಗೆ ಹೋದಾಗ ಎಲ್ಲವನ್ನೂ ಮರೆತು ಆದರ್ಶ ಶಿಕ್ಷಕರಾಗಿತ್ತಾರೆ. ಎಲ್ಲ ನೋವು, ದುಗುಡ ಮರೆತು ಪಾಠದ ಕಡೆಗೆ ಗಮನ ಹರಿಸುತ್ತಾರೆ. ವಿದ್ಯಾರ್ಥಿಯ ಹಿತಕ್ಕೆ ತನ್ನ ಆದ್ಯತೆ ಎಂದು ಭಾವಿಸುತ್ತಾರೆ. ತಾನೋರ್ವ ಉತ್ತಮ ಪ್ರಜೆಯನ್ನು ರೂಪಿಸಲು ಕಾರಣನಾದರೆ ಅದನ್ನು ಜೀವಮಾನವಿಡೀ ನೆನಪಲ್ಲಿಟ್ಟುಕೊಳ್ಳಬಹುದು. ಆತ ನನ್ನ ವಿದ್ಯಾರ್ಥಿ ಎಂದು ಎದೆತಟ್ಟಿ ಹೇಳಬಹುದು ಎಂದು ಭಾವಿಸುತ್ತಾರೆ.
ಆದರೆ ಪ್ರಾಯದ ಕೈಗೆ ಬುದ್ಧಿಯನ್ನು ಕೊಡುವ ನಮ್ಮ ಮಕ್ಕಳು ಮಾತ್ರ ಶಿಕ್ಷಕರನ್ನು ಕಡೆಗಣಿಸುತ್ತಿರುತ್ತಾರೆ. ಇದನ್ನು ನೈತಿಕ ದಿವಾಳಿತನ ಎಂದು ಹೇಳಬೇಕೋ, ಬೌದ್ಧಿಕ ದಿವಾಳಿತನ ಎನ್ನಬೇಕೋ ತಿಳಿಯುತ್ತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರನ್ನು ಅಗೌರವದಿಂದ ನೋಡಲು ಕಾರಣವಾಗುವ ಮೂಲ ಅವರ ಮನೆಯಲ್ಲಿದೆಯೋ ಅಥವಾ ಅವರ ಒಡನಾಟದಲ್ಲಿದೆಯೋ? ಅಂತೂ ಅವರಿಗೆ ತಿಳಿ ಹೇಳುವವರ ಕೊರತೆ ಇದೆ ಎಂಬುದಂತು ಸತ್ಯ. ಶಿಕ್ಷಕರ ಬಗ್ಗೆ ಮನೆಯಲ್ಲಿ ಗೌರವದ ಭಾವನೆಯಿದ್ದರೆ, ಶಿಕ್ಷಕರ ಬಗ್ಗೆ ಮನೆಯಿಂದ ಉತ್ತಮ ಪಾಠ ಮಕ್ಕಳಿಗೆ ಸಿಕ್ಕಿದರೆ, ಶಿಕ್ಷಕರ ಬಗ್ಗೆ ಸಮಾಜದ ಭಾವನೆ ಬದಲಾದರೆ ಖಂಡಿತವಾಗಿಯೂ ಮಕ್ಕಳು ಬದಲಾಗಲು ಸಾಧ್ಯ. ಮಕ್ಕಳಲ್ಲಿ ಈ ನಿಟ್ಟಿನಿಲ್ಲಿ ನೈತಿಕತೆಯನ್ನು ಉದ್ದೀಪನಗೊಳಿಸಸುವ ಅಗತ್ಯ ಕಂಡುಬರುತ್ತಿದೆ.
ಗುರು-ಶಿಷ್ಯರ ನಡುವಿನ ಹಿಂದಿನ ಪವಿತ್ರ ಸಂಬಂಧ ಅದೇ ಘನತೆ ಮತ್ತು ಗೌರವದಿಂದ ಮತ್ತೆ ಸೆಟೆದು ನಿಂತರೆ ಅದರ ಲಾಭ ಇಡೀ ಸಮಾಜಕ್ಕೆ ಆಗಲಿದೆ. ಆ ಮೂಲಕ ದೇಶದ ಒಳಿತಿಗೂ ನಾಂದಿ ಹಾಡಲು ಸಾಧ್ಯ. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಇಂಥದ್ದೊಂದು ಬದಲಾವಣೆ ಅಗತ್ಯ. ಶಿಕ್ಷಕರ ಬಗ್ಗೆ ಬಹುತೇಕ ವಿದ್ಯಾರ್ಥಿಗಳಿಗಿರುವ ಕೇವಲ ಭಾವನೆ ದೂರವಾಗಲು ಮನೆಯೊಂದಲೇ ಕ್ರಮ. ಪ್ರಯತ್ನ ಆರಂಭವಾಗಬೇಕಿದೆ. ಅದು ಸಮಾಜದ ಮೂಲಕ ಮತ್ತಷ್ಟು ವಿಸ್ತಾರಗೊಳ್ಳುವುದು ಅಗತ್ಯ. ಇಂಥ ಕ್ರಮದಲ್ಲಿ ಒಂದು ಸುಸಂಸ್ಕೃತ ಮತ್ತು ಶಿಸ್ತಿನ ಜೀವನ ಮತ್ತು ಸಮಾಜ ನಿರ್ಮಾಣವಾಗುವುದರ ಗುಟ್ಟುಇದೆ.
ಈಗಿನ ಮಕ್ಕಳು ಬುದ್ಧಿವಂತರು ನಿಜ. ಅವರ ಬುದ್ಧಿವಂತಿಕೆಗೆ ಹೊಸ ಹೊಳಪು ನೀಡಲು ಸಮರ್ಥರಿರುವ ಶಿಕ್ಷಕರ ಬಗೆಗಿನ ಸರಕಾರ ಮತ್ತು ಸಮಾಜದ ನಿಲುವು ಮತ್ತು ಭಾವನೆ ಬದಲಾಗಬೇಕಾಗಿದೆ. ಭವಿಷ್ಯದ ಸಮಾಜ ರೂಪಿಸುವ ಶಿಕ್ಷಕರು ಸುಭದ್ರ ದೇಶದ ಅಡಿಪಾಯದ ಆಧಾರಕಲ್ಲು ಎಂಬ ವಾಸ್ತವವನ್ನು ಮಕ್ಕಳಿಗೆ ಮತ್ತು ಸಮಾಜಕ್ಕೆ ತಿಳಿಹೇಳುವ ಪ್ರಯತ್ನ ಎಲ್ಲ ಕಡೆಯಿಂದಲೂ ಆದಾಗ ಅದು ದೇಶದ ಹಿತಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯ ಎಂಬುದು ನಿಸ್ಸಂಶಯ ಸಂಗತಿ.
ಉಪನ್ಯಾಸಕ ಹುದ್ದೆಯಿಂದ ಹಂತ ಹಂತವಾಗಿ ಏರಿ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ಅಲಂಕಸಿದರೂ ಜೀವನದುದ್ದಕ್ಕೂ ಶಿಕ್ಷಕರಾಗಿಯೇ ಉಳಿದು ಬೋಧನೆಯಲ್ಲಿ ಸುಖವನ್ನು ಕಂಡುಕೊಂಡಿದ್ದ ಭಾರತರತ್ನ ಡಾ.ಎಸ್. ರಾಧಾಕೃಷ್ಣರನ್ನೂ, ಅವರ ಸಾಧನೆಯನ್ನೂ ಸ್ಮರಿಸಿಕೊಳ್ಳುವ ದಿನ ಅದು. ಅವರು ನಿಜ ಅರ್ಥದಲ್ಲೂ ಬೋಧಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಅದೆಷ್ಟು ಪ್ರೀತಿಯಿತ್ತು ಎಂದರೆ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ತನ್ನ ಪ್ರೊಫೆಸರ್ ಸ್ಥಾನಕ್ಕೆ ಚ್ಯುತಿ ತರುವುದಿಲ್ಲವೆಂದರೆ ಮಾತ್ರವೇ ತಾನು ರಷ್ಯಾ ದೇಶಕ್ಕೆ ರಾಯಭಾರಿಯಾಗಿ ತೆರಳುವೆನೆಂದು ನೆಹರು ಅವರಿಗೆ ತಾಕೀತು ಮಾಡಿಯೇ ಅವರಿಂದ ಆ ಒಪ್ಪಿಗೆಯನ್ನು ಪಡೆದೇ ಹೋಗಿದ್ದರು. ಇಂಥವರಿಂದ ಎಷ್ಟು ಮಂದಿ ಸಿಗುತ್ತಾರೆ?
ಮಿಖಾಯಿಲ್ ಗೋರ್ಬಚೇವ್ ತಮ್ಮ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ಮೇಲೆ ತಮ್ಮ ಹಿಂದಿನ ಪ್ರಾಧ್ಯಾಪಕ ವೃತ್ತಿಗೇ ಮರಳಿರೆಂದು ಎಂದೋ ಓದಿದ ನೆನಪು. ಭಾರತದಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಾಧ್ಯಕ್ಷರಾಗಿದ್ದರೂ, ತಮ್ಮ ಶಿಕ್ಷಣ ಪ್ರೀತಿಯನ್ನೂ, ಮಕ್ಕಳಲ್ಲಿ ಬೆರೆಯುವುದನ್ನೂ ಎಂದೂ ಬಿಟ್ಟಿರಲಿಲ್ಲ. ರಾಜಕಾರಣದಲ್ಲಿ ಪರಮೋನ್ನತ ಸ್ಥಾನ ಸಿಕ್ಕಿದರೂ ತಮ್ಮ ವೃತ್ತಿ ಪ್ರವೃತ್ತಿಯನ್ನು ಮೆರೆಯುವರೇ ನಮಗಿಂದು ಆದರ್ಶವಾಗಬೇಕಿದೆ. ಅಧಿಕಾರ ಬದುಕಿನ ಏಣಿಯಲ್ಲಿ ಒಂದು ಹಂತ ಮಾತ್ರ. ಅದು ನಶ್ವರ, ಅದು ಕರ್ತವ್ಯ ನಿರ್ವಾಹದ ಸ್ಥಾನ ಎಂದು ಭಾವಿಸುವವರು ನಮಗಿಂದು ಮಾದರಿಯಾಗಬೇಕಿದೆ. ಅಂಥವರಲ್ಲಿ ಡಾ. ರಾಧಾಕೃಷ್ಣನ್ ಒಬ್ಬರು.
ಅಪರಿಚಿತ ಲೋಕಕ್ಕೆ ಪ್ರಪ್ರಥಮವಾಗಿ ಪ್ರವೇಶಿಸುವ ಮಗುವಿನ ಮನಸ್ಸು ಕಳವಳ, ಕಾತರ, ದಿಗಿಲಿನಿಂದ ತುಂಬಿರುತ್ತದೆ. ಕೆಲವು ಮಕ್ಕಳು ಶಾಲೆಗೆ ಹೋಗುವಾಗ ಅಳಬಹುದು, ರಂಪ ಮಾಡಬಹುದು, ಪಾಲಕರಿಂದ ಎಳೆಯಿಸಿಕೊಂಡು, ತಳ್ಳಿಸಿಕೊಂಡು ಹೋಗಬಹುದು. ಒಟ್ಟಿನಲ್ಲಿ ಶಾಲೆ ಅನ್ನುವುದು ಮಗುವಿಗೆ ಹೊಸ ಪ್ರಪಂಚ. ಅಂತಹ ಸಂದರ್ಭದಲ್ಲಿ ಮಗುವಿಗೆ ಶಿಕ್ಷಕರಿಂದ ಮುಖ್ಯವಾಗಿ ಸಿಗಬೇಕಾದದ್ದು ಪ್ರೀತಿ, ಮಮತೆ, ವಾತ್ಸಲ್ಯ, ಸ್ನೇಹ, ವಿಶ್ವಾಸ. ದಪ್ಪ ಶರೀರದ, ಮುಗುಳ್ನಗುವಿಲ್ಲದ, ಮುಖ ಗಂಟಿಕ್ಕಿಕೊಳ್ಳುವ, ಗದರಿ ಮಾತನಾಡುವ ಶಿಕ್ಷಕ ಶಿಕ್ಷಕಿಯಿದ್ದರಂತೂ ಕೇಳುವುದೇ ಬೇಡ. ಆ ಮಗುವಿಗೆ ಅದೊಂದು ಭಯಾನಕ ತಾಣವಾಗಿ ಹೋಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಶಿಕ್ಷಕರದ್ದೇ ಆಗಿರುತ್ತದೆ.
ಒಬ್ಬ ವ್ಯಕ್ತಿಯ ರಚನಾ ಪ್ರಕ್ರಿಯೆಯಲ್ಲಿ ಅಥವಾ ಒಂದು ಸಮಾಜವನ್ನು ರಚಿಸುವಲ್ಲಿ ಅಥವಾ ದೇಶ, ಜಗತ್ತನ್ನು ರಚಿಸುವಲ್ಲಿ ಒಬ್ಬ ಶಿಕ್ಷಕನ ಪಾತ್ರವು ಬಹಳ ಮಹತ್ವದ್ದು. ಮಕ್ಕಳ ಸಾಮರ್ಥ್ಯವನ್ನು ಹೆಚ್ಚುಸುವ ಪ್ರಕ್ರಿಯೆಯಲ್ಲಿ ಮತ್ತು ನಿರ್ದಿಷ್ಟ ವಿಷಯದ ಬಗ್ಗೆ ಆಸಕ್ತಿಯನ್ನು ಬೆಳೆಸುವಲ್ಲಿ ಖಂಡಿತವಾಗಿಯೂ ಶಿಕ್ಷಕರಿಗೆ ದೊಡ್ಡ ಪಾತ್ರವಿದೆ. ಅನೇಕ ಮಕ್ಕಳಿಗೆ ಒಂದು ವಿಷಯವನ್ನು ಯಾವ ಶಿಕ್ಷಕರು ಹೇಳಿಕೊಡುತ್ತಿದ್ದಾರೆ ಎನ್ನುವುದು ಅವರು ಆ ವಿಷಯವನ್ನು ಇಷ್ಟಪಡುತ್ತಾರೋ ಅಥವಾ ದ್ವೇಷಿಸುತ್ತಾರೋ ಎನ್ನುವುದನ್ನು ನಿರ್ಧರಿಸುತ್ತದೆ ಮತ್ತು ಆ ವಿಷಯವು ಆ ಶಿಕ್ಷಕನೊಂದಿಗೆ ಗುರುತಿಸಲ್ಪಡುತ್ತದೆ. ಶಿಕ್ಷಕರು ಸ್ಥೂರ್ತಿ ನೀಡುವಂಥವರಾಗಿದ್ದರೆ, ಆ ವಿಷಯವು ಇದ್ದಕ್ಕಿದ್ದಂತೆ ಆಸಕ್ತಿದಾಯಕ ಆಗುತ್ತದೆ.
ರಚನಾ ಪ್ರಕ್ರಿಯೆಯಲ್ಲಿರುವ ಮಾನವತೆಯ ಭಾಗವಾಗಿರುವ ಮಕ್ಕಳೊಂದಿಗೆ ನೀವು ಕೆಲಸ ಮಾಡುವಾಗ, ಅವರನ್ನು ಹೇಗೆ ಬೆಳೆಸುವಿರಿ ಎನ್ನುವುದು ನಿಮ್ಮ ಕೈಯಲ್ಲಿದೆ. ಇನ್ನೊಂದು ಜೀವವನ್ನು ಸಕಾರಗೊಳಿಸುವುದು ಒಂದು ಅದ್ಭುತವಾದ ಭಾಗ್ಯ-ಮನುಷ್ಯರಿಗೆ ಸಿಗುವ ಮಹಾನ್ ಹೊಣೆಗಾರಿಕೆ ಮತ್ತು ಪುಣ್ಯಗಳಲ್ಲೊಂದು. ಹಾಗಾಗಿ, ಇಂತಹ ವಿಶೇಷ ಹಕ್ಕನ್ನು ನೀವು ಯಾರಿಗಾದರೂ ಒಪ್ಪಿಸಿದರೆ, ಅವರಲ್ಲಿ ಅತ್ಯುನ್ನತವಾದ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಸದ್ಭಾವನೆಯಿರುವುದು ಅತೀ ಮುಖ್ಯ.
ಬೋಧನೆ ಇಂದು ಹಿಂದೆಂದಿಗಿಂತಲೂ ಸವಾಲಿನದು. ವಿದ್ಯಾರ್ಥಿಗಳನ್ನು ಮೊಬೈಲ್, ಲ್ಯಾಪ್ಟಾಪ್, ಐ ಪ್ಯಾಡ್ಗಳು ಸೆಳೆದಿವೆ! ವಾಟ್ಸಪ್, ಇಯರ್ ಫೋನ್, ಸೆಲ್ಫಿಯ ಗುಂಗಿನಿಂದ ತರಗತಿಯ ತನ್ಮಯತೆಯತ್ತ ಅವರನ್ನು ಮರಳಿಸುವುದು ಹರಸಾಹಸವೇ. ಇಲ್ಲಿ ಇನ್ನೊಂದು ತೊಡರು ಸವಾಲಿಗೆ ತುಪ್ಪ ಸುರಿದಂತೆ ಎದುರಾಗಬಹುದು.
ವಿದ್ಯಾರ್ಥಿಗಳು ತಮಗೆ ಅಸ್ಥೆಯಿರುವ ವಿಷಯವನ್ನು ಆರಿಸಿಕೊಂಡಿರುವುದಿಲ್ಲ. ಕಲಿಕೆ ತಮ್ಮ ಮುಖ್ಯ ಆದ್ಯತೆಯಲ್ಲ, ಪಾಠ ಹೇಳುವುದು ಶಿಕ್ಷಕರ ಜವಾಬ್ದಾರಿಯಷ್ಟೆ ಎಂಬ ನಿಲುವು ಅವರದು. ಅವರು ಕಲಿಯಲು ಹಪಹಪಿಸುವವರೇ. ಆದರೆ ಬಹುಶಃ ಉಪಾಧ್ಯಾಯರ ಬೇರೊಂದು ರೀತಿಯ ಬೋಧನೆಯನ್ನವರು ನಿರೀಕ್ಷಿಸುತ್ತಾರೆ. ಅಂಥ ಶಿಷ್ಯರಿಗೂ ಶಿಕ್ಷಕರು ಪಾಠ ಮಾಡಬೇಕು. ಸದ್ಯ ಪಠ್ಯಕ್ರಮ(ಸಿಲಬಸ್) ಮುಗಿಸಿದರಾಯ್ತು ಎನ್ನುವ ನಿಟ್ಟುಸಿರಿನೊಂದಿಗೆ ಬೋಧಿಸುವುದರಿಂದ ಶಿಕ್ಷಣದ ಧ್ಯೇಯೋದ್ದೇಶಗಳು ಮೂಲೆಗುಂಪು. ಪರೀಕ್ಷೆಯಲ್ಲಿ ಅಂಕ ಗಳಿಕೆಯೇ ಯಶಸ್ಸು ಎನ್ನುವ ಮನಃಸ್ಥಿತಿಯಿಂದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಪೋಷಕರು ಹೊರಬರಬೇಕು.
ಶಿಕ್ಷಕರಲ್ಲಿ ಜ್ಞಾನದ ಆಳವಿದ್ದರೆ ಸಾಲದು. ಅದನ್ನು ವೈವಿಧ್ಯಮಯವಾಗಿ ಅಭಿವ್ಯಕ್ತಿಸುವ ಕೌಶಲ್ಯವಿರಬೇಕು. ತಾನು ಇಂಥದ್ದನ್ನು ವಿವರಿಸಲಾರೆನು ಎಂದರೆ ತನಗೇ ಅದು ಅರ್ಥವಾಗಿಲ್ಲ ಎಂದಾಗುತ್ತದೆ! ತಮ್ಮ ವಿದ್ಯಾರ್ಥಿಗಳನ್ನು ಅರ್ಥೈಸಿಕೊಳ್ಳುವ ದಕ್ಷತೆ ಹೊಂದಿದ ಶಿಕ್ಷಕರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಿಮ್ಮ ಭಾವನೆ ಹೇಗೆ, ಅನುಭವ ಹೇಳಿ, ನಿಮಗೇಕೆ ತರಗತಿ ಶಿಕ್ಷೆ ಎನ್ನಿಸುವುದು, ಯಾವುದು ಏಕೆ ಮನನವಾಗುತ್ತಿಲ್ಲ, ಸಂದೇಹವಿದ್ದರೆ ಚರ್ಚಿಸೋಣ ಮುಂತಾಗಿ ಶಿಕ್ಷಕರು ಸಂವಾದಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸದಿದ್ದರೆ ತರಗತಿ ಸುಗಮವಾಗದು. ತರಗತಿ ಕಳೆಗಟ್ಟುವುದು ಕಲಿಸಿ – ಕಲಿಯುವ ಬೋಧಕರಿಂದ, ಕಲಿತು – ಕಲಿಸುವ ವಿದ್ಯಾರ್ಥಿಗಳಿಂದ. ಸ್ವಾರಸ್ಯವೆಂದರೆ ಉತ್ತಮ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಂತೆಯೇ ಕಲಿಯುತ್ತಾರೆ. ಅದಕ್ಕೆ ತಕ್ಕಂತೆ ತಮ್ಮ ಬೋಧನಾ ವಿನ್ಯಾಸವನ್ನು ಮಾರ್ಪಡಿಸಿಕೊಳ್ಳುತ್ತಾರೆ. ತರಗತಿಯನ್ನು ವಿದ್ಯಾರ್ಥಿಗಳು ಆನಂದದಿಂದ ಅನುಭವಿಸುವಂತೆ ನಿಭಾಯಿಸುತ್ತಾರೆ. ಶಿಕ್ಷಕರ ಅನುಭೂತಿಯೆಂದರೆ ಅವರು ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳ ದೃಷ್ಟಿಕೋನದಲ್ಲಿ ಎಲ್ಲ ಶೈಕ್ಷಣಿಕ ಆಗುಹೋಗುಗಳನ್ನು ಗ್ರಹಿಸುವುದು. ಅವರದ್ದೇ ಅರಿವು, ಅನುಭವ, ಮೌಲ್ಯ, ಬಲದಿಂದ ಶಿಕ್ಷಕರ ಕೌಶಲ್ಯ ಪ್ರವರ್ಧಿಸುತ್ತದೆ. ಶಿಕ್ಷಕರು ಪ್ರಸ್ತುತ ದಿನಮಾನಗಳ ಆಗುಹೋಗುಗಳಿಗೆ ಸ್ಪಂದಿಸುತ್ತಲೇ ಅಧ್ಯಾಪನ ನಿರ್ವಹಿಸಬೇಕು. ಸನ್ನಡತೆ, ಸಚ್ಛಾರಿತ್ರ್ಯ ಜ್ಞಾನಕ್ಕಿಂತಲೂ ಹಿರಿಯ ಮೌಲ್ಯವೆನ್ನುವುದು ಸರ್ವದಾ ಶಿಕ್ಷಕರ ಮನಸ್ಸಿನಲ್ಲಿರಬೇಕು.
(ವಿವಿಧ ಮೂಲಗಳಿಂದ)
Get In Touch With Us info@kalpa.news Whatsapp: 9481252093
Discussion about this post