ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು, ವಿಜಯವಾಣಿ ಪತ್ರಿಕೆ ಶ್ರೀಕಾಂತ ಭಟ್ ಅವರಿಗೆ ಎಸ್.ಎಚ್. ರಂಗಸ್ವಾಮಿ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಶ್ರಾಂತ ಪತ್ರಕರ್ತ ಗುಂಡೂರಾವ್ ಅವರಿಗೆ ಮಿಂಚು ಶ್ರೀನಿವಾಸ ಪ್ರಶಸ್ತಿ, ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಪತ್ರಕರ್ತ ಸಿ. ರುದ್ರಪ್ರರಿಗೆ ನಾಗೇಂದ್ರರಾವ್ ಪ್ರಶಸ್ತಿ ಹಾಗೂ ಶಿಕಾರಿಪುರದ ಹಿರಿಯ ಪತ್ರಕರ್ತ ಎಸ್. ಬಿ. ಮಠದ್ ಅವರಿಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರುಗಳಿಗೆ ನೀಡಲಾಗುವ ಕಿಡಿ ಶೇಷಪ್ಪ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ಶಿವಮೊಗ್ಗೆಯ ಹಿರಿಯ ಪತ್ರಕರ್ತರಾದ ಎಸ್. ಎಚ್. ರಂಗಸ್ವಾಮಿ, ಮಿಂಚು ಶ್ರೀನಿವಾಸ ಹಾಗೂ ಎಂ. ನಾಗೇಂದ್ರರಾವ್ ಅವರ ಹೆಸರಿನಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪರವರು ತಲಾ ಒಂದು ಲಕ್ಷ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿದ್ದು, ಜಿಲ್ಲೆ ಹಾಗೂ ಜಿಲ್ಲೆಯ ಹೊರಗಿನ ಸಾಧನೆಗೈದ ಪತ್ರಕರ್ತರಿಗೆ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಈ ದತ್ತಿನಿಧಿ ಮೂಲಕ ಹಿರಿಯ ಪತ್ರಕರ್ತರ ಹೆಸರನ್ನು ಶಾಶ್ವತವಾಗಿಸಿದ ಶಾಸಕ ಈಶ್ವರಪ್ಪರವರಿಗೆ ಸಂಘವು ಸದಾ ಅಭಾರಿಯಾಗಿದೆ ಎಂದರು.
ಈ ಪ್ರಶಸ್ತಿಗಳನ್ನು ಮಂಗಳೂರಿನ ಪುರಭವನದಲ್ಲಿ ಮಾರ್ಚ್ 7 ಹಾಗೂ 8ರಂದು ನಡೆಯುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 35ನೆಯ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಮಾರ್ಚ್ 8ರಂದು ಪ್ರದಾನ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಈ ಪ್ರಶಸ್ತಿ ಪುರಸ್ಕೃತರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದರು.
ರಾಜ್ಯ ಕಾರ್ಯಕಾರಿ ಸದಸ್ಯ ಎನ್. ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ.ಟಿ. ಅರುಣ್, ದೀಪಕ್ ಸಾಗರ್ ಇದ್ದರು.
ಪರಿಚಯ
ಶ್ರೀಕಾಂತ್ ಭಟ್: ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ರಾಜಕೀಯ ವಿಭಾಗದಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ರಾಂತ ಶಿಕ್ಷಕರ ಶೇಷಾದ್ರಿ ಭಟ್, ಅನ್ನಪೂರ್ಣ ದಂಪತಿಗಳ ಪುತ್ರರಾದ ಇವರು, ಶಿವಮೊಗ್ಗ ಸಮೀಪದ ಮತ್ತೂರು ಸರ್ಕಾರಿ ಶಾಲೆ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ. ಜೆಪಿಎನ್ ಕಾಲೇಜಿನಲ್ಲಿ ಪಿಯುಸಿ, ಬಳಿಕ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಲ್ಲಿ ಬಿಬಿಎಂ ಶಿಕ್ಷಣ ಪಡೆದವರು.
ಹೊಸದಿಗಂತ ಮತ್ತು ನಾವಿಕ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಇವರು, ಬಳಿಕ 12 ವರ್ಷ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪ ಸಂಪಾದಕ, ವರದಿಗಾರ, ಪ್ರಧಾನ ವರದಿಗಾರ ಹುದ್ದೆ, ವಿಶ್ವವಾಣಿಯಲ್ಲಿ ಒಂದೂವರೆ ವರ್ಷ ಜವಾಬ್ದಾರಿ ನಿರ್ವಹಿಸಿ, ಇದೀಗ ಪ್ರಸ್ತುತ ಎರಡೂವರೆ ವರ್ಷದಿಂದ ವಿಜಯವಾಣಿಯ ರಾಜಕೀಯ ವಿಭಾಗದಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕಾ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಂಪ್ಯೂಟರ್ ಆಪರೇಟರ್, ಪ್ರೂಫ್ ರೀಡರ್ ಆಗಿ ಪತ್ರಿಕೋದ್ಯಮ ಪ್ರವೇಶ. ಬಳಿಕ ವರದಿಗಾರ, ಉಪ ಸಂಪಾದಕ, ಹಿರಿಯ ವರದಿಗಾರ, ಪ್ರಧಾನ ವರದಿಗಾರ, ವಿಶೇಷ ಪ್ರತಿನಿಧಿವರೆಗೆ ಹಂತಹಂತವಾಗಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಮಾಜಿ ಶಾಸಕರ ನಕಲಿ ಮೆಡಿಕಲ್ ಬಿಲ್ ಹಗರಣ, ವಿಟಿಯು ವಿಶ್ರಾಂತ ಕುಲಪತಿ ಫೇಕ್ ಬಯೋಡೇಟಾ ಪ್ರಕರಣ, ಲೋಕೋಪಯೋಗಿ- ಜಲ ಸಂಪನ್ಮೂಲ ಇಲಾಖೆಯ ವಿವಿಧ ಹಗರಣ ಬಯಲಿಗೆಳೆದು ತನಿಖೆ ಆಗುವಂತೆ ಮಾಡಿದ್ದು, ಸರ್ಕಾರದ ಬಡ್ತಿ ರಾದ್ಧಾಂತದ ಮೇಲೆ ಸರಣಿ ವರದಿ ಮೂಲಕ ಬೆಳಕು ಚೆಲ್ಲಿದ್ದು, 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ರಾಜಕೀಯ ವಿಶ್ಲೇಷಣೆ ವರದಿಗಳು ಇವರ ಪ್ರಮುಖ ಸಾಧನೆಗಳು.
ದೀರ್ಘಾವಧಿಗೆ ಶಿಕ್ಷಣ ವರದಿಗಾರಿಕೆ, ನಂತರ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವರದಿಗಾರಿಕೆಯಲ್ಲಿಯೂ ಗಮನಸೆಳೆದಿರುವ ಇವರು, ಪ್ರಸ್ತುತ ರಾಜಕೀಯ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಕೃಪಾ ಓರ್ವ ಕರ್ನಾಟಕ ಶಾಸ್ತ್ರೀಯ ಸಂಗೀತಜ್ಞೆ, ಪುತ್ರಿ ಮಹತಿ ಭಟ್ ಉದಯೋನ್ಮುಖ ಪ್ರತಿಭೆ.
ಗುಂಡೂರಾವ್: ಮೂಲತಃ ಶಿಕಾರಿಪುರದವರು. ಮುಂಬೈನ ಪತ್ರಿಕೋದ್ಯಮ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವ ಗುಂಡೂರಾವ್ ಅವರು, ಸುದೀರ್ಘವಾದ 33 ವರ್ಷಗಳ ಕಾಲ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕಾರ್ಯನಿರ್ವಹಿಸಿ, ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ, ವಿಶೇಷ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕೀಯ ಮಂಡಳಿಯ ಸಲಹೆಗಾರರಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಶಿವಮೊಗ್ಗೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ತಂದೆ ಎನ್. ಸಿ. ಹುಚ್ಚೂರಾವ್ ರವರು ಕೂಡಾ 1962 ರಿಂದ 1984ರವರೆಗೆ ಶಿಕಾರಿಪುರದಲ್ಲಿ ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಪತ್ರಿಕೆಗೆ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ವತಿಯಿಂದ ನಡೆಸಲಾದ ಯುದ್ಧದ ವರದಿಗಾರಿಕೆ ಕುರಿತ ತರಬೇತಿಯಲ್ಲಿಯೂ ಪಾಲ್ಗೊಂಡಿದ್ದ ಇವರು, ಸಾಗರದ ಹೆಗ್ಗೋಡಿನ ನೀನಾಸಂನಲ್ಲಿಯೂ ಕೂಡಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ ಪಾಲ್ಗೊಂಡು ಚಲನಚಿತ್ರ ವರದಿಗಾರಿಕೆಯ ಸೂಕ್ಷ್ಮತೆಗಳನ್ನೂ ಸಹ ಕರಗತ ಮಾಡಿಕೊಂಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತಾಗಿ ಇವರ 13 ಅಂಕಣ ಬರಹಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಆಂಗ್ಲ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಇವರು ನಿರಂತರ ಅಧ್ಯಯನಶೀಲರು. ರಷ್ಯಾ, ಜರ್ಮನಿ, ಸ್ವಿಡ್ಜರ್’ಲ್ಯಾಂಡ್, ಫ್ರಾನ್ಸ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿರುವ ಇವರು, ಪ್ರಸ್ತುತ ಶಿವಮೊಗ್ಗೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಪತ್ನಿ ಬಿ. ಉಷಾ ಪ್ರಸಿದ್ಧ ವೀಣಾ ವಾದಕಿಯಾಗಿದ್ದಾರೆ.
ಸಿ. ರುದ್ರಪ್ಪ: ಮುಂಬೈನ ಕೆ.ಸಿ. ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ನಂತರ ಮುಂಬೈನ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ತರಬೇತಿ ಪಡೆದ ನಂತರ ನಾಡಿನ ಪ್ರಮುಖ ದಿನಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಆರಂಭದಲ್ಲಿ ಶಿವಮೊಗ್ಗದಲ್ಲಿ ದಿ ಎಕನಾಮಿಕ್ ಟೈಮ್ಸ್ನಲ್ಲಿ ಅರೆಕಾಲಿಕ ವರದಿಗಾರರಾಗಿ ಕಾರ್ಯನಿರ್ವಹಿಸಿದ ಇವರು, ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ, ಉದಯವಾಣಿ, ಉದಯ ಟಿ.ವಿಯ ಸ್ಥಾನಿಕ ಸಂಪಾದಕರಾಗಿ, ವಿಜಯ ಕರ್ನಾಟಕದ ಪ್ರಧಾನ ವರದಿಗಾರರಾಗಿ, ಜನಶ್ರೀ ಟಿವಿ ಮತ್ತು ಸುವರ್ಣ ನ್ಯೂಸ್ ಸಂಪಾದಕರಾಗಿ, ನ್ಯೂಸ್ 18ನ ಸಲಹೆಗಾರರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಮೂವತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು 1992 ರಲ್ಲಿ ಮುಖ್ಯಮಂತ್ರಿ ಎಸ್. ಬಂಗಾರಪ್ಪರನವರ ಬಜೆಟ್ ಭಾಷಣ ಸೋರಿಕೆ ಕುರಿತು ಸಾಕ್ಷಾತ್ ವರದಿ ಮಾಡಿದ್ದರು. 1999ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದಯ ಟಿ.ವಿ.ಯಲ್ಲಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಯಿಲಿ ಹಾಗೂ ಸಿ. ಬೈರೇಗೌಡರೊಂದಿಗೆ ಒಂದೇ ವೇದಿಕೆಯಲ್ಲಿ ಸಂವಾದ ನಡೆಸಿದ್ದರು. 1992ರಲ್ಲಿ ಬೆಂಗಳೂರಿನಲ್ಲಿ ಕಾವೇರಿ ಬಂದ್ ವರದಿ ಮಾಡಲು ತೆರಳುತ್ತಿದ್ದಾಗ ಇವರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿತ್ತು. ಪೊಲೀಸ್ ಕಮಿಷನರ್ ರಾಮಲಿಂಗಂ ಪಥ ಸಂಚಲನ ಮೂಲಕ ಇವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಇವರ ವೃತ್ತಿ ಜೀವನದ ಮರೆಯಲಾಗದ ಘಟನೆ.
ಎಸ್.ಬಿ. ಮಠದ್: ಎಸ್.ಬಿ. ಮಠದ್ ಎಂದೇ ಹೆಸರಾದ ಸಚ್ಚಿದಾನಂದ ಬಸವಲಿಂಗಯ್ಯ ಮಠದ್ರವರು ಮೂಲತಃ ಹಿರೇಕೆರೂರಿನವರು. ಶಿಕಾರಿಪುರದಲ್ಲಿ ಸರ್ವಜ್ಞ ವಾರ ಪತ್ರಿಕೆಯನ್ನು ಪ್ರಾರಂಭಿಸಿ, ಆ ಮೂಲಕ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ಮಾಡಿದವರು.
ಯಂಕಟಪ್ಪರವರು ಶಿಕಾರಿಪುರದ ಶಾಸಕರಾಗಿದ್ದ ಸಂದರ್ಭದಲ್ಲಿ ಕೂಲಿಗಾಗಿ ಕಾಳು ಯೋಜನೆಯಡಿಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆಳೆದ ಹಿರಿಮೆ ಕೂಡಾ ಇವರದ್ದು. ಇವರ ನಿಷ್ಪಕ್ಷಪಾತದ ವರದಿಯಿಂದಾಗಿ ಯಂಕಟಪ್ಪರವರ ಅಧಿಕಾರಕ್ಕೆ ಚ್ಯುತಿಯಾಗಿತ್ತು ಎಂದರೆ, ಇವರ ಪತ್ರಿಕೋದ್ಯಮದ ಭಾಷೆಯ ತೀಕ್ಷ್ಣತೆಯನ್ನು ಅರ್ಥ ಮಾಡಿಕೊಳ್ಳಬಹುದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಂಗಳೂರಿನ ಪ್ರಕಟವಾಗುತ್ತಿದ್ದ ಕಹಳೆ ಪತ್ರಿಕೆಯನ್ನು ಶಿಕಾರಿಪುರದಲ್ಲಿ ಮರು ಮುದ್ರಣ ಮಾಡಿ ಹಂಚಿದ್ದಲ್ಲದೇ ತುರ್ತು ಪರಿಸ್ಥಿತಿಯ ಕರಾಳ ಮುಖದ ಬಗ್ಗೆ ಅರಿವನ್ನು ಮೂಡಿಸಿದವರಲ್ಲಿ ಮಠದ್ ಅಗ್ರಗಣ್ಯರು.
ಸರ್ವಜ್ಞ ಪತ್ರಿಕೆಯನ್ನು ತಮ್ಮ ಕುಟುಂಬದ ಭಾಗವಾಗಿ ಬೆಳೆಸಿದ್ದ ಇವರು, ಅದಕ್ಕಾಗಿ ಸಾಕಷ್ಟು ತ್ಯಾಗವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ಎಲ್ಲ ರೀತಿಯ ನೋವನ್ನೂ ಅನುಭವಿಸಿದ್ದಾರೆ. ಆದಾಗ್ಯೂ ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ಅಮಿಷಕ್ಕೆ ಒಳಗಾಗದೇ, ನಂಬಿಕೊಂಡ ತತ್ವ ಸಿದ್ಧಾಂತಗಳಿಗೆ ರಾಜಿ ಮಾಡಿಕೊಳ್ಳದೇ ಸರ್ವಜ್ಞಪತ್ರಿಕೋದ್ಯಮದ ಜೊತೆ ಜೊತೆಯಲ್ಲಿಯೇ ಶಿಕಾರಿಪುರ ಭಾಗಕ್ಕೆ ರೈಲಿನ ವ್ಯವಸ್ಥೆಯಾಗಬೇಕು ಎಂದು ಹೋರಾಟಕ್ಕೆ ನಾಂದಿ ಹೇಳಿದವರು.
ಓರ್ವ ಪ್ರಾಮಾಣಿಕ ಪತ್ರಕರ್ತ ಹೇಗೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎಂಬುದಕ್ಕೆ ಎಸ್.ಬಿ. ಮಠದ್ ಒಂದು ಉದಾಹರಣೆ.
Get in Touch With Us info@kalpa.news Whatsapp: 9481252093
Discussion about this post