ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಬಹಳಷ್ಟು ಮಂದಿಗೆ ಇಲ್ಲೊಂದು ಘಟನೆ ಉತ್ತರ ನೀಡುವಂತಿದೆ. ಸರ್ಕಾರಿ ಆಸ್ಪತ್ರೆ ವೈದ್ಯರ ರೋಗಿಗಳ ಮೇಲಿನ ಕಾಳಜಿ ಹಾಗೂ ವೈದ್ಯರ ಸಾಮರ್ಥ್ಯ ಬೆರಗುಗೊಳಿಸುತ್ತದೆ.
ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆದು ತಮ್ಮ ಬಳಿ ಇದ್ದ ಹಣ ಸಂಪೂರ್ಣವಾಗಿ ಖಾಲಿಯಾದರೂ ಸಹ ಗುಣಮುಖರಾಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನೊಬ್ಬನ ಹೊಸ ಬದುಕಿಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾಗಿದ್ದಾರೆ.

ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್ ರಾವ್ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು, ವೈದ್ಯರಿಗೆ ಕುಟುಂಬಸ್ಥರ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಮೂಲಕ ಕೋಮಾಸ್ಥಿತಿಯಲ್ಲಿದ್ದ ವಾಸುದೇವನಿಗೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.

ಕುಟುಂಬಸ್ಥರು ಮಾತನಾಡಿ, ನಮ್ಮ ಬಳಿ ಇದ್ದ ಜಮೀನು ಸೇರಿದಂತೆ ಎಲ್ಲವನ್ನು ಮಾರಾಟ ಮಾಡಿ ಸುಮಾರು 10 ಲಕ್ಷ ರೂ.ಗಳಿಗೂ ಹೆಚ್ಚು ಹಣ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿತ್ತು. ಆದರೂ ಸಹ ವಾಸುದೇವ ಬದುಕುವುದಿಲ್ಲ ಎಂಬ ಆತಂಕ ಎದುರಾಗಿತ್ತು. ಕೊನೆ ಘಳಿಗೆಯಲ್ಲಿ ಇಲ್ಲಿನ ತಾಲೂಕು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ಆರೈಕೆ, ಕಾಳಜಿಯೊಂದಿಗೆ ಚಿಕಿತ್ಸೆ ನೀಡಲು ಆರಂಭಿಸಿದ ನಂತರ ಹಂತ ಹಂತವಾಗಿ ಚೇತರಿಕೆ ಕಂಡಿದ್ದು, ನಿಜಕ್ಕೂ ಸರ್ಕಾರಿ ಆಸ್ಪತ್ರೆ ವೈದ್ಯರ ಸಾಮರ್ಥ್ಯ ಬೆರಗುಗೊಳಿಸಿದೆ. ಈ ಹಿನ್ನಲೆಯಲ್ಲಿ ವೈದ್ಯರ ತಂಡಕ್ಕೆ ಹಾಗೂ ಸಾಮಾಜಿಕ ಹೋರಾಟಗಾರ ಶಿವಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್ ರಾವ್ ಸೇರಿದಂತೆ ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.









Discussion about this post