ಭದ್ರಾವತಿ: ವಿದ್ಯೆ ಕಲಿಸಿದ ಗುರುಗಳಿಗೆ ಹಾಗು ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವುದರಿಂದ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಕಲಿಕಾ ಸಂದರ್ಭದಲ್ಲಿ ಆಸಕ್ತಿ ವಹಿಸಿ ಕಲಿತಲ್ಲಿ ಮಾತ್ರ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗಲಿದೆ ಎಂದು ಕಾಗದ ನಗರ ಪ್ರೌಢಶಾಲೆಯ 72 ನೇ ಸಾಲಿನ ಹಳೇಯ ವಿದ್ಯಾರ್ಥಿ ಹಾಗು ಪ್ರಸ್ತುತ ಅಮೇರಿಕ ಸಿಟಿ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ್ ಬಾಬು ಹೇಳಿದರು.
ಪೇಪರ್ ಟೌನ್ ಪ್ರೌಢಶಾಲೆಯಲ್ಲಿ 1972 ನೆಯ ಸಾಲಿನ ವಿದ್ಯಾರ್ಥಿಗಳ ಅಭಿಮಾನದ ಕೊಡುಗೆ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಕಲಿಕಾ ಸಂದರ್ಭದಲ್ಲಿ ಶಿಕ್ಷಕರು ತಿಳಿಸುವ ಪ್ರತಿಯೊಂದು ವಿಷಯಗಳನ್ನು ಜೀವನದ ಪಾಠಗಳಲ್ಲಿ ಅಳವಡಿಕೊಳ್ಳುವಂತಾಗಬೇಕೆಂದರು.
ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಶಾಲೆಗಳು ಹಾಗು ಭಾಷೆ ಅವನತಿಗೆ ಕನ್ನಡಿಗರೆ ಕಾರಣರಾಗಿದ್ದಾರೆ. ಇಂದು ಆಂಗ್ಲ ಭಾಷೆ ಹೆಮ್ಮರವಾಗಿ ಬೆಳೆದುಕೊಂಡಿರುವುದರಿಂದ ಕನ್ನಡ ಕಲಿಕೆಗೆ ಅಡ್ಡಿಯಾಗಿದೆ. ಅದರೆ ಕನ್ನಡ ಭಾಷೆಯನ್ನು ಮಾತೃಭಾಷೆಯನ್ನಾಗಿಸಿಕೊಂಡು ಇತರೆ ಭಾಷೆಗಳನ್ನು ಪ್ರೀತಿಸಬೇಕಿದೆ. 1969 ನೆಯ ಸಾಲಿನಲ್ಲಿ ಪ್ರೌಢಶಾಲೆಗೆ ಸೇರಿ ನಂತರದ ದಿನಗಳಲ್ಲಿ ನಾನಾ ಕಡೆ ವಿದ್ಯಾಬ್ಯಾಸ ಹಾಗು ಕರ್ತವ್ಯದಿಂದ ನಿವೃತ್ತರಾಗಿರುವ ಅನೇಕ ಸಮಾನ ಮನಸ್ಕರರು ಇಂತಹ ವೇದಿಕೆ ರಚಿಸಿ ತಾವು ಓದಿರುವ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕೆಂದು ತೀರ್ಮಾನಿಸಿ ಶಾಲಾ ಕಟ್ಟಡ ದುರಸ್ಥಿಗೆ ಮುಂದಾಗಿ ಬಣ್ಣ ಲೇಪಿಸಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಸುಮಾರು 50 ವರ್ಷಗಳ ನಂತರ ಸಮಾನ ಮನಸ್ಕರರು ಒಂದೆಡೆ ಸೇರುವಂತಾಗಿದೆ ಎಂದು ತಮ್ಮ ಸಿಹಿ ಘಟನೆಗಳನ್ನು ಮೆಲಕು ಹಾಕಿದರು.
ಅದೇ ಶಾಲೆಯ ನಿವೃತ್ತ ಶಿಕ್ಷಕರುಗಳಾದ ಕೆ. ಲಕ್ಷ್ಮಣರಾವ್, ಎ.ಎನ್. ಪುಟ್ಟಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿದರು. ನಾನಾ ಭಾಗಗಳಿಂದ ಆಗಮಿಸಿದ್ದ ಅನೇಕ ಹಳೇಯ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿದೇಶಗಳಿಂದ ಆಗಮಿಸಿದ ಅನೇಕರು ತಮ್ಮ ವಿದ್ಯಾರ್ಥಿ ಜೀವನ ಮೆಲಕು ಹಾಕಿ ಇಂದಿನ ವಿದ್ಯಾರ್ಥಿಗಳು ಸಹ ಮಾದರಿಯಾಗಿರುವಂತೆ ಸಲಹೆ ನೀಡಿದರು. ಹಾಗು ಶಾಲೆಗೆ ಅವಶ್ಯಕವಾಗಿರುವುಗಳನ್ನು ಪೂರೈಸಲು ಕೇವಲ 72 ನೇಸಾಲಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಹಿಂದಿನ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post