ಕಲ್ಪ ಮೀಡಿಯಾ ಹೌಸ್ | ಕೊಲ್ಲಂ |
ಕೊಲ್ಲಂ ಜಿಲ್ಲೆಯ ನೆಡುವತ್ತೂರು ತಾಲೂಕಿನ ನೀಲೇಶ್ವರಂನ ಮುಕ್ಕೋಣಿಮುಕ್ಕು ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ಬೆಳಿಗ್ಗೆ ಸುಮಾರು 7.15ರ ಸುಮಾರಿಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಲಾರಿಯಲ್ಲಿದ್ದ ಭಾರಿ ಪ್ರಮಾಣದ ಮರಳು ನಿಲ್ದಾಣದ ಮೇಲೆ ಉರುಳಿ ಬಿದ್ದಿದ್ದು, ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮರಳಿನಡಿ ಸಿಲುಕಿಕೊಂಡಿದ್ದರು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
Also Read>> ಮಳೆಗಾಲದ ಪ್ರಯಾಣಿಕರ ಸುರಕ್ಷತೆಗೆ ನೈಋತ್ಯ ರೈಲ್ವೆಯ ಮುನ್ನೆಚ್ಚರಿಕಾ ಕ್ರಮಗಳೇನು?
ಅಪಘಾತದಲ್ಲಿ ಹರಿಲಾಲ್ (52), ಪಾರ್ಥಿಪ್ (15) ಮತ್ತು ಅಜಯ ಕುಮಾರ್ (45) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕೊಟ್ಟಾರಕ್ಕರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಗಾಯಗಳು ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ.
ಹೇಗಾಯ್ತು ಕೊಲ್ಲಂ ದುರಂತದ ಘಟನೆ?
ಕೊಟ್ಟಾರಕ್ಕರ ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಅತಿವೇಗದಲ್ಲಿ ಬಂದ ಲಾರಿ ಮುಕ್ಕೋಣಿಮುಕ್ಕು ಜಂಕ್ಷನ್ನಲ್ಲಿ ಬೈಕೊಂದನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ರಸ್ತೆ ಬದಿಯಲ್ಲಿದ್ದ ಮನೆಯ ಗೋಡೆಗೆ ಹೊಂದಿಕೊಂಡಿದ್ದ ಬಸ್ ನಿಲ್ದಾಣಕ್ಕೆ ನೇರವಾಗಿ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಮರಳು ಸಂಪೂರ್ಣ ನಿಲ್ದಾಣದ ಮೇಲೆ ಸುರಿದಿದೆ. ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮುಂಜಾನೆ ಸಮಯವಾಗಿದ್ದರಿಂದ ಶಾಲೆ, ಕಾಲೇಜು ಹಾಗೂ ಟ್ಯೂಷನ್ಗೆ ತೆರಳುವ ವಿದ್ಯಾರ್ಥಿಗಳ ಸಂಚಾರ ಹೆಚ್ಚಾಗಿತ್ತು. ಅಪಘಾತದ ವೇಳೆ ಒಂಬತ್ತು ವಿದ್ಯಾರ್ಥಿಗಳು ಸೇರಿ ಸುಮಾರು 12 ಮಂದಿ ನಿಲ್ದಾಣದಲ್ಲಿದ್ದರು. ಕೆಲ ವಿದ್ಯಾರ್ಥಿಗಳು ಅಪಾಯವನ್ನು ಗಮನಿಸಿ ತಕ್ಷಣವೇ ಸ್ಥಳದಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಮರಳಿನಡಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟರೆ, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Also Read>> ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು | ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ಸಾಧನೆಗೆ ಮನ್ನಣೆ!
ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ, ಗಾಯಾಳುಗಳನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆ ಹಾಗೂ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ರಸ್ತೆ ಬದಿಯ ಅಂಗಡಿ ಗೋಡೆ ಹಾಗೂ ವಿದ್ಯುತ್ ಕಂಬ ಧರಾಶಾಹಿಯಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಾಡುಹಂದಿ ತಪ್ಪಿಸಲು ಯತ್ನಿಸಿದ ವ್ಯಾನ್ ಅಪಘಾತ – 15 ಮಂದಿ ಗಾಯ
ತ್ರಿಶೂರ್: ಇನ್ನು ಒಂದು ವೃದ ಮುಂದೆ ಇದೇ ರೀತಿಯ ಒಂದು ಘಟನೆ ನಡೆದಿತ್ತು. ಅದು ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಒಂದು ವಾರದ ಹಿಂದೆ ಕೇರಳದ ತ್ರಿಶೂರಿನಲ್ಲಿ ಕಾಡುಹಂದಿಯನ್ನು ತಪ್ಪಿಸಲು ಯತ್ನಿಸಿದ ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ನಡೆದಿತ್ತು.
ಜೂನ್ 14ರಂದು ರಾತ್ರಿ ಸುಮಾರು 1.30ರ ಸುಮಾರಿಗೆ ವಡಕ್ಕಂಚೇರಿ-ಕುನ್ನಂಕುಳಂ ರಾಜ್ಯ ಹೆದ್ದಾರಿಯಲ್ಲಿ ನಡೆದಿತ್ತು. ಪಾಲಕ್ಕಾಡಿನಿಂದ ಗುರುವಾಯೂರಿನತ್ತ ಸಾಗುತ್ತಿದ್ದ ವ್ಯಾನ್ ವಡಕ್ಕಂಚೇರಿ ಪ್ರದೇಶದ ಮೂಲಕ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು.
Also Read>> Model Democracy At KRCS | Student Council Election Concluded Successfully
ಪೊಲೀಸರ ಮಾಹಿತಿ ಪ್ರಕಾರ, ಅಕಸ್ಮಾತ್ ರಸ್ತೆ ಮೇಲೆ ಕಾಡುಹಂದಿ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ವಾಹನವನ್ನು ತೀವ್ರವಾಗಿ ತಿರುಗಿಸಿದ್ದಾನೆ. ಈ ವೇಳೆ ವ್ಯಾನ್ ಮೊದಲಿಗೆ ರಸ್ತೆ ಬದಿಯ ಲಾಟರಿ ಅಂಗಡಿಗೆ ಡಿಕ್ಕಿ ಹೊಡೆದಿದ್ದು, ನಂತರ ಮುಂದುವರೆದು ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು.
ಈ ಹೆದ್ದಾರಿ ಭಾಗದಲ್ಲಿ ಈ ಹಿಂದೆ ಕೂಡ ಇಂತಹ ಅಪಘಾತಗಳು ಸಂಭವಿಸಿರುವುದಾಗಿ ಅಧಿಕಾರಿಗಳು ಸೂಚಿಸಿದ್ದು, ವಿಶೇಷವಾಗಿ ರಾತ್ರಿ ವೇಳೆ ವಾಹನ ಚಾಲಕರು ಹೆಚ್ಚು ಎಚ್ಚರಿಕೆಯಿಂದ ಸಂಚರಿಸಲು ಸೂಚನೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















