ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ |
ಮನ್ಮನೋಭೀಷ್ಟವರದಂ ಸರ್ವಾಭೀಷ್ಟಫಲಪ್ರದಮ್|
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್||
ಶ್ರೀಪುರಂದರದಾಸರು #SriPurandaradasaru ಕನ್ನಡ ನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷೆಗೆ ವಿಶಿಷ್ಟವಾದ ಗೇಯತೆಯನ್ನು ತಂದುಕೊಟ್ಟ ಮಹಾಮಹಿಮರು.
ಶ್ರೀಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಡ. ಪೂರ್ವ ಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿ ನಾರಾಯಣ #NavakotiNarayana ಎಂಬ ಇವರ ಪ್ರಶಸ್ತಿಯಲ್ಲಿ ಅವರ ಅಗಾಧ ಸಂಪತ್ತಿನ ಹಿರಿಮೆಯನ್ನು ಕಾಣಬಹುದು.
ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ಧರಾಗಿದ್ದ ಇವರು, ಅನಂತರ ಸರ್ವಸ್ವ ದಾನಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ. ನವಕೋಟಿ ಎನ್ನಿಸಿದ ಮಹಾಲಕ್ಷ್ಮಿಯನ್ನು ತೊರೆದು ಅವಳ ಪತಿಯಾದ ನಾರಾಯಣನನ್ನು ಆರಾಧಿಸಿದ್ದು ಇವರ ಅಮೋಘಸಾಧನೆ. ಕೇವಲ ಮಹಾಲಕ್ಷ್ಮಿಯ ಉಪಾಸನೆ ಅನರ್ಥಕರ. ನಾರಾಯಣನ ಉಪಾಸನೆಯೇ ತಾರಕ ಎಂಬ ಭಗವದ್ಗೀತೆಯ #Bhagavdgeeta ಹನ್ನೆರಡನೆಯ ಅಧ್ಯಾಯದ ನಿರೂಪಣೆಗೆ ಇವರ ಜೀವನ ನಿದರ್ಶನ.

ಶ್ರೀವ್ಯಾಸರಾಜರಂತಹ #SriVyasarajaru ವಿದ್ವನ್ಮಣಿಗಳ ಸಂಪರ್ಕ ಇವರನ್ನು ಮಧ್ವ ಸಿದ್ಧಾಂತದ #Madhwamatha ವಿಶ್ವರೂಪದರ್ಶನಕ್ಕೆ ಅಣಿಯಾಗಿಸಿತು. `ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬೇಡಿ ಬಿಟ್ಟು ಕೆಡಬೇಡಿ’ ಎಂಬ ಇವರ ಸಂದೇಶ ಜಿಜ್ಞಾಸುಗಳ ಪಾಲಿಗೆ ಅಮೃತಧಾರೆ.
Also Read>> ಜೈನ ನಿರ್ವಾಣ ಉತ್ಸವ ವೇದಿಕೆ ಕುಸಿತ | 7 ಮಂದಿ ಸಾವು | 40ಕ್ಕೂ ಅಧಿಕ ಜನರಿಗೆ ಗಾಯ
ವಿಜಯನಗರವೆನ್ನಿಸಿದ ಹಂಪಿ ಇವರ ಹರಿದಾಸ ಜೀವನದ ಮುಖ್ಯ ಕಾರ್ಯಕ್ಷೇತ್ರ. ದಶಕಗಳ ಕಾಲದ ಹಂಪಿಯ ಸಂಪರ್ಕ ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ.
ಪುರಂದರದಾಸರ ದೇಶ ಸಂಚಾರದ ವೈಖರಿಯೂ ಅಗಾಧವಾದುದು. ಸಮಗ್ರ ಭರತ ಖಂಡವನ್ನೇ ಅವರು ಸಂಚರಿಸಿದ್ದುದಕ್ಕೆ ಅವರ ಕೃತಿಗಳಲ್ಲಿಯೇ ಸಾಕ್ಷ್ಯ ದೊರೆಯುತ್ತದೆ. ಅವರ ಸಂಚಾರ ಕೇವಲ ತೀರ್ಥ ದರ್ಶನವಾಗದೇ ತೀರ್ಥಮಹಿಮೆಯ ಪ್ರಸಾರ ಕಾರ್ಯವೂ ಆಗಿನಕಾರ್ಯವೆನ್ನಿಸಿತು.

ಸಂಗೀತ ಪ್ರಪಂಚದ ಮಟ್ಟಿಗೆ ಶ್ರೀಪುರಂದರದಾಸರನ್ನು ಕರ್ನಾಟಕ ಸಂಗೀತ ಪಿತಾಮಹ #FatherofCarnaticMusic ಎಂದೇ ಪರಂಪರೆ ಗುರುತಿಸಿದೆ. ತ್ಯಾಗರಾಜರಂತಹ ಸಂಗೀತ ಕ್ಷೇತ್ರದ ರಸ ಋಷಿಗಳು ಶ್ರೀಪುರಂದರದಾಸರನ್ನು ಮಹಾನುಭಾವರೆಂದು ಕೊಂಡಾಡಿರುವುದು ಅವರ ಸಂಗೀತ ಕ್ಷೇತ್ರದ ಸಾಧನೆಯ ಬಗೆಗಿನ ಉಜ್ವಲ ನಿದರ್ಶನ.
ಸಂಗೀತದ #Music ಸಕಲ ಸಾಧ್ಯತೆಗಳನ್ನು ತೆರೆದಿಟ್ಟ ಶ್ರೇಯಸ್ಸು ಸಹ ಶ್ರೀಪುರಂದರದಾಸರದು. ಕೀರ್ತನೆ ಉಗಾಭೋಗ, ಸುಳಾದಿ, ವೃತ್ತನಾಮ ಮೊದಲಾದ ಮುಖ್ಯಪ್ರಾಕಾರಗಳಿಗೆಲ್ಲ ಶ್ರೀಪುರಂದರದಾಸರ ಕೊಡುಗೆ ಸಂದಿದೆ. ಆ ಅರ್ಥದಲ್ಲಿ ಶ್ರೀಪುರಂದರದಾಸರದು ದಾಸಸಾಹಿತ್ಯದ ಮೇರು ಸಾಧನೆ.
Also Read>> ಸೊರಬ | ಪಾರಂಪರಿಕ ಕಾಡಿಗೆ ದುಷ್ಕರ್ಮಿಗಳ ಲಗ್ಗೆ | ಅಪಾರ ಪ್ರಮಾಣದ ಮರಗಳ ಮಾರಣ
ಸಂಖ್ಯೆಯಲ್ಲೂ ಶ್ರೀಪುರಂದರದಾಸರ ಕೃತಿಗಳಿಗೆ ಅಗ್ರಸ್ಥಾನ. ಅವರೇ ತಿಳಿಸಿರುವಂತೆ ಹಾಗೂ ಮುಂದೆ ಶ್ರೀವಿಜಯದಾಸರಂತಹ ಶ್ರೇಷ್ಠ ದಾಸವರೇಣ್ಯರು ತಿಳಿಸಿರುವಂತೆ ಅವರ ಕೃತಿಗಳ ಸಂಖ್ಯೆ ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ. ಕನ್ನಡದ ಮಟ್ಟಿಗೆ ಇದೊಂದು ದಾಖಲೆ. ಕನ್ನಡದ ಬೇರಾವ ಕೃತಿಕಾರರು ಇಷ್ಟು ವ್ಯಾಪಕವಾದ ರಚನೆಯನ್ನು ಮಾಡಿದ ದಾಖಲೆ ಕಂಡುಬರುವುದಿಲ್ಲ. ವೈವಿಧ್ಯದಲ್ಲೂ ಶ್ರೀಪುರಂದರದಾಸರ ಕೃತಿಗಳಿಗೆ ಅಗ್ರಸ್ಥಾನ ಎಂಬುದು ಶ್ರೀಪ್ರಸನ್ನವೇಂಕಟದಾಸರ ಕೃತಿಯೊಂದರಿಂದ ತಿಳಿಯುತ್ತದೆ `ಗೀತಾಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತ ಪ್ರಬಂಧ ರಚಿಸಿ ವಿಟ್ಠಲನ ಪ್ರೀತಿ ಪಡಿಸಿ ಪ್ರತ್ಯಕ್ಷ ಕಂಡು ನಲಿವ ವೈಷ್ಣವನಾಥ ಪ್ರಸನ್ನವೇಂಕಟಕೃಷ್ಣ ಪ್ರಿಯನ’.
ಶ್ರೀಕೃಷ್ಣಲೀಲೆಗಳನ್ನು ಕುರಿತ ಶ್ರೀಪುರಂದರದಾಸರ ಕೃತಿಗಳು ಶ್ರೀಮದ್ಭಾಗವತವನ್ನು ಕನ್ನಡ ದಶಮಸ್ಕಂಧದ ಸಂಗೀತ ರೂಪಕವನ್ನಾಗಿಸಿದೆ. ಪುರಾಣ ಪ್ರಪಂಚದ ಮಹೋನ್ನತ ವಿಚಾರಗಳನ್ನೂ ಕಥೆ ಉಪಕಥೆಗಳನ್ನೂ ಕನ್ನಡದಲ್ಲಿ ಸಂಗೀತಬದ್ಧವಾಗಿ ಒದಗಿಸಿದ ಶ್ರೇಯಸ್ಸು ಹರಿದಾಸ ಸಾಹಿತ್ಯದ್ದು. ಆ ಕೀರ್ತಿಯ ಸಿಂಹಪಾಲು ಶ್ರೀಪುರಂದರದಾಸರದು.
ತಮ್ಮ ಜೀವನದ ಸುಮಾರು 40ರ ಪ್ರಾಯದಲ್ಲಿ ಅಧ್ಯಾತ್ಮಕ್ಕೆ ತೆರೆದುಕೊಂಡ ಶ್ರೀದಾಸರು ಅನಂತರದ ಸುಮಾರು 40 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ ಕನ್ನಡದಲ್ಲಿ ಅಭೂತಪೂರ್ವ ಎನ್ನಿಸಿತು. ತಾವು ಮಾತ್ರವಲ್ಲದೇ ತಮ್ಮ ಪತ್ನಿಪುತ್ರರೂ ಸಹ ಹರಿದಾಸರಾಗುವಂತೆ ಪ್ರೇರೇಪಿಸಿದ್ದು ಶ್ರೀದಾಸರ ಮತ್ತೊಂದು ಸಾಧನೆ.
ಶ್ರೀವ್ಯಾಸರಾಜರು, ಶ್ರೀವಾದಿರಾಜರು ಮೊದಲಾದ ಯತಿಶೇಖರರೊಂದಿಗೂ, ಕೃಷ್ಣದೇವರಾಜನಂತಹ ಅರಸನೊಂದಿಗೂ, ಶ್ರೀಕನಕದಾಸರಂತಹ ಶ್ರೀಹರಿದಾಸರೊಂದಿಗೂ ಶ್ರೀಪುರಂದರದಾಸರ ಒಡನಾಟ ಅವರ ಬಹುಮುಖ ಹಿರಿಮೆಗೆ ದ್ಯೋತಕ.
ವಿದ್ಯೆಯ ಮೇರುವೆನ್ನಿಸಿದ್ದ ಶ್ರೀವ್ಯಾಸರಾಜರಿಂದ `ದಾಸರೆಂದರೆ ಪುರಂದರ-ದಾಸರಯ್ಯ’ ಎನ್ನಿಸಿಕೊಂಡ ಶ್ರೀಪುರಂದರದಾಸರದು ಪರಮ ಸಾರ್ಥಕ ಜೀವನ. ಅವರ ಕೃತಿಗಳಲ್ಲಿ ವೇದಾಂತದ ಸಾರ ತುಂಬಿದೆ. ಪುರಂದರೋಪನಿಷತ್ತು ಎಂದು ಕರೆಯುವ ಮೂಲಕ ಅವುಗಳ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೀವ್ಯಾಸರಾಜರ ಹೃದಯವೈಶಾಲ್ಯ ಐತಿಹಾಸಿಕ ಮಹತ್ತ್ವದ್ದು.
ಶ್ರೀವಿಜಯದಾಸರಿಗೆ ಸ್ವಪ್ನದಲ್ಲಿ ಶ್ರೀಪುರಂದರದಾಸರ ರೂಪದಲ್ಲಿಯೇ ಅಂಕಿತವನ್ನು ಅನುಗ್ರಹಿಸುವ ಮೂಲಕ ಅವರ ಸ್ಥಾನವನ್ನು ಅಜರಾಮರವನ್ನಾಗಿ ಶ್ರೀಹರಿ ಮಾಡಿದ. ದಾಸಕೂಟದ ವ್ಯಾಪಕ ಪ್ರಸಾರಕ್ಕೆ ಹೀಗೆ ಪರೋಕ್ಷವಾಗಿಯೂ ಪುರಂದರದಾಸರ ಕೊಡುಗೆ ಅಪಾರವಾದುದು.
ಶ್ರೀಪುರಂದರದಾಸರು ಶ್ರೀಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು ಎಂಬ ರಾಜತ್ರಯರಾದ ಮುನಿತ್ರಯರ ಅನಂತರ ಒಬ್ಬ ಗೃಹಸ್ಥವರೇಣ್ಯರಾಗಿ ಶ್ರೀಹರಿದಾಸಸಾಹಿತ್ಯವನ್ನು ಉತ್ತುಂಗಕ್ಕೆ ಒಯ್ದರು. ಅವರ ಸಾಧನೆ ನಿಜವಾದ ಅರ್ಥದಲ್ಲಿ ಶ್ರೀವ್ಯಾಸರಾಜರು ಹೇಳಿದಂತೆ `ಪೂತಾತ್ಮ ಪುರಂದರದಾಸರಿವರಯ್ಯ’ ಎನ್ನಿಸಿದೆ.
ತಮ್ಮ ಪ್ರಧಾನ ಕಾರ್ಯಕ್ಷೇತ್ರವಾದ ಹಂಪಿಯಲ್ಲಿಯೇ ಅವರು ತಮ್ಮ ಕೊನೆಯ ದಿನಗಳನ್ನು ಕಳೆದರು. ಅವರು ಹರಿಪುರಕ್ಕೆ ತೆರಳಿದ್ದು ಸಹ ಹಂಪೆಯಲ್ಲಿಯೇ ಎಂಬುದು ಅವರ ಪುತ್ರ ಮಧ್ವಪತಿದಾಸರ ಕೃತಿಯಿಂದ ತಿಳಿಯುತ್ತದೆ.









Discussion about this post