ಇಲ್ಲೊಂದು ವಿಶಿಷ್ಠ ಪರಿಕಲ್ಪನೆ, ಆಧ್ಯಾತ್ಮ, ಸಮಾಜ, ಕಲೆಗಳ ಸಮ್ಮಿಲನ. ರಾಜ್ಯದ ಪ್ರಸಿದ್ದ ಚಿತ್ರಕಲಾವಿದರು ವಿಭಿನ್ನ ಶೈಲಿಯಲ್ಲಿ ಕೃಷ್ಣನನ್ನು ಚಿತ್ರಿಸಿದ ಕಲಾಕೃತಿಗಳ ಸಮೂಹಚಿತ್ರ ಪ್ರದರ್ಶನವನ್ನು ಬೆಂಗಳೂರು ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಸಮೀಪದ ಕಾಕೋಳಿನಲ್ಲಿ ಅಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯಕ್ಷೇತ್ರಗಳ ಸೇವಾಸಂಘಟನೆ ‘‘ಪಾಂಚಜನ್ಯ ಪ್ರತಿಷ್ಠಾನ’’ದ ಪಾಂಚಜನ್ಯ ಸಭಾಂಗಣದಲ್ಲಿ ಕಣ್ತುಂಬಿಕೊಳ್ಳಬಹುದು.
ಕಲಾವಿದರಿಗೆ ಕೃಷ್ಣ ಯಾವತ್ತೂ ಸಮ್ಮೋಹಕ, ಕೃಷ್ಣನಿಗೂ ಕಲೆಗೂ ಅವಿನಾಭಾವ ನಂಟು ಐತಿಹಾಸಿಕ ಹಿನ್ನೆಲೆಯ ವೇಣುಗೋಪಾಲಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಅಷ್ಟ ದಶಮಾನೋತ್ಸವದ ಪ್ರಯುಕ್ತ ಕಲಾಜಾತ್ರೆಯಲ್ಲಿ ಆಹ್ವಾನಿತ 11 ಜನ ಕಲಾವಿದರು ಭಾಗವಹಿಸಿ ತಮ್ಮ ಪರಿಕಲ್ಪನೆಯಲ್ಲಿ ಮೂಡಿದ ಕೃಷ್ಣನಿಗೆ ಬಣ್ಣದ ಚಿತ್ತಾರದ ಮೂಲಕ ರೂಪ ನೀಡಿರುತ್ತಾರೆ.
ಪಾಂಚಜನ್ಯ ಪ್ರತಿಷ್ಠಾನದವರ ವಿಭಿನ್ನ ಪ್ರಯತ್ನವಾಗಿ ಇಂತಹದೊಂದು ವೈವಿಧ್ಯಮಯ ದೃಶ್ಯರೂಪಕವನ್ನು ಪ್ರಸ್ತುತಪಡಿಸಲು ಕಲಾವಿದರನ್ನು ಕೋರಿದಾಗ ಅವರಿಂದ ದೊರಕಿದ ಪ್ರತಿಕ್ರಿಯೆ ಅದ್ಭುತ.
ಕಲೆ ಮನಸಿನ ಪ್ರತಿಬಿಂಬ, ಕಲಾವಿದರಿಗೆ ಕೃಷ್ಣನೆಂದರೆ ಅಪಾರ ವ್ಯಾಮೋಹ ,ಅವರು ಅಕ್ಕರೆಯಿಂದ ಅನಂತರೂಪನ ಅನನ್ಯ ವರ್ಣಚಿತ್ತಾರವನ್ನು ಶ್ರೀಮದ್ ಭಾಗವತ ಕಥಾನಕ ಆಧರಿಸಿ ರಚಿಸಿರುವ ಕಲಾಕೃತಿ ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಯೋಜನೆಯ ಸಮನ್ವಯಕಾರರಾದ ಡಾ. ಗುರುರಾಜ ಪೋಶೆಟ್ಟಿಹಳ್ಳಿ ವಿವರಿಸುತ್ತಾರೆ.
ಹಿಂದೆ ಶ್ರೀಮಂತ ಕುಟುಂಬ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಚಿತ್ರಕಲೆಯನ್ನು ಸಾಮಾನ್ಯ ಜನತೆ ನೋಡಿ ಆಸ್ವಾದಿಸಿ, ಚಿತ್ರಕಲೆಯ ಬಗ್ಗೆ ಒಲವು ಬೆಳಸಿಬೇಕೆನ್ನುವುದು ಈ ಸಮೂಚಿತ್ರ ಪ್ರದರ್ಶನದ ಒಟ್ಟು ಆಶಯವಾಗಿದೆ.
ಅಧ್ಯಾತ್ಮಕ್ಕೆ ಕಲೆಯ ಸ್ಪರ್ಷ ನೀಡಿದ ಕಲಾವಿದರು:
ಶ್ರೀಪಾದರಾಜರು ಅರ್ಕಾವತಿ ನದಿ ತೀರದಲ್ಲಿ ಪೂಜಿಸುತ್ತಿರುವ ಬೃಂದಾವನದಲ್ಲಿನ ವೇಣುಗೋಪಾಲ ನೈಜ ಶೈಲಿಯ ರೂಪಕಲ್ಪನೆಯನ್ನು ಹೊಂದಿ ಮಿನೇಚರ್ ಚಿತ್ರಕಲಾವಿದ ಕುಂಚ ಬ್ರಹ್ಮ ಎಚ್.ಎನ್. ಹರೀಶ್ ಕ್ಷೇತ್ರ ಪುರಾಣವನ್ನು ಆಧರಿಸಿ ಚಿತ್ರಿಸಿರುವುದನ್ನು ಕಣ್ಮನ ಸೆಳೆಯುತ್ತದೆ.
ಮತ್ತೋರ್ವ ಕಲಾಪ್ರವೀಣರಾದ ಓರಿಯಂಟಲ್ ಶೈಲಿ ಕಲಾವಿದ ಕೆ. ಸೋಮಶೇಖರ್ ಕುಂಚದಿಂದ ಚಿತ್ರಿತಗೊಂಡಿರುವ ಗೋಪಿಕಾಸ್ತ್ರೀಯರು ಭಕ್ತಿ ತನ್ಮಯತೆಯಿಂದ ಕೃಷ್ಣನ ಪಾವನ ಪಾದಪದುಮಗಳಿಗೆ ಪುಷ್ಪಾರ್ಚನೆಯ ಕೃತಿ ಭಿನ್ನತೆಯಿಂದ ಜನಮನಸೂರೆಗೊಳ್ಳುವಂತಿದೆ.
ಹಿರಿಯ ಅಂತಾರಾಷ್ಟ್ರೀಯ ಖ್ಯಾತಿಯ ಕಲಾಕಸ್ತೂರಿ ಡಾ. ಮೀರಾಕುಮಾರ್ ರವರ ಮೈಸೂರು ಸಾಂಪ್ರದಾಯಿಕ ಶೈಲಿಯ ಅಪೂರ್ವ ಕೃತಿ ನವನೀತ ಚೋರ. ಹಸ್ತಕೌಶಲ ಮೆರೆದು ಸೂಕ್ಷ್ಮ ವಿವರಗಳಿಂದ ಗಮನ ಸೆಳೆಯುತ್ತದೆ.
ಕಲಾಕೋವಿದ ಮಟ್ಟಿ ರಾಮಚಂದ್ರ ರಾವ್ ಅಕ್ರೆಲಿಕ್ ಕ್ಯಾನ್ವಾಸ್’ನಲ್ಲಿ ರಚಿಸಿರುವ ಯಮಾಳಾರ್ಜುನ ಭಂಜನ ಕೃತಿ ಕಲಾಪ್ರೇಮಿಗಳ ಚಿತ್ತ ಪರಿಧಿಯಲ್ಲಿ ಭಕ್ತಿ ಪ್ರಚೋದಿಸುತ್ತದೆ.
ಕಾಣ ಬನ್ನಿ ಕಾಕೋಳಿನಲ್ಲಿ ಕಲಾಕಾರರು ಕಂಡ ಕೃಷ್ಣನ!
ಕಲಾಸಮಾರಾಧನೆಗೆ ವಿದ್ವಾನ್ ಆರ್.ಕೆ. ಪದ್ಮನಾಭ ಚಾಲನೆ ನೀಡಿ ಚಿತ್ರ ಕಲಾವಿದರನ್ನು ಅತ್ಯಂತ ಆಪ್ತವಾಗಿಸುವ ವಿಷಯಗಳಲ್ಲಿ ಕೃಷ್ಣನಿಗೆ ಅಗ್ರಸ್ಥಾನ. ಅನನ್ಯ ಸೃಜನ ಶೀಲತೆಯಿಂದ ರಚನೆಗೊಂಡಿರುವ ಈ ಕಲಾಕೃತಿಗಳ ಗುಣಾತ್ಮಕ ಅಂಶವೆಂದರೆ ಹೃದಯದ ಆಳದಲ್ಲಿ ಪ್ರಭಾವಿಸುವಂತಹ ವರ್ಣಮೇಳ ಎಂದು ಶ್ಲಾಘಿಸಿರುತ್ತಾರೆ.
ಬಹುರಾಷ್ಟ್ರೀಯ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾಚತುರೆ ಶ್ರೀಮತಿ ರೂಪಶ್ರೀಸಂಜೀವ್ ಚಿತ್ರಿಸಿರುವ ‘‘ಶೇಷಾಸನ ಪರವಾಸುದೇವ’’, ಆಂಧ್ರಪ್ರದೇಶ ತಾಡಪತ್ರಿಯ ಕಲಾಪರಿಣತ ಡಿ. ಶ್ರೀನಿವಾಸರಾವ್ ರವರ ತೈಲವರ್ಣದ ಶ್ರೀ ಕೃಷ್ಣ ಮಾಯ, ನಾನಾವಿಧದ ಮಣ್ಣನ್ನು ಬಳಸಿ ಚಿತ್ರಿಸಿರುವ ನೆಲಮಂಗಲ ಮಾಕಳಿಯ ಕಲಾತಪಸ್ವಿ ಶ್ರೀಮತಿ ಸುಮಿತ್ರ ರವರ ಬಕಾಸುರ ವಧೆ, ನೋಡುಗರಲ್ಲಿ ಅಧ್ಯಾತ್ಮಿಕ ತರಂಗಗಳನ್ನು ಜಾಗೃತಗೊಳಿಸಿ ಬೇರೆಯದೆ ಲೋಕಕ್ಕೆ ಕರೆದ್ಯೊಯುತ್ತದೆ.
ಹರಿದಾಸ ಸಾಹಿತ್ಯದ ನುಡಿಸಿಂಚನಗಳೊಂದಿಗೆ ಮುದ್ರಿಸಿರುವ ವೇಣು ವರ್ಣ ಅಪರಿಮಿತನ ಅವತರಣ- ಎಂಬ ಶೀರ್ಷಿಕೆಯ ಅಪರೂಪದ ಚಿತ್ರ ಸಂಪುಟ(ಪ್ರತಿಗಳು ಬೇಕಿದ್ದಲ್ಲಿ: ಕರೆಮಾಡಿ 9035618076) ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ, ಪ್ರಣವ ರವರ ಕಲಾಪೋಷಣೆಯ ಕಾರ್ಯ ಮಾದರಿ ಎಂಬುದು ಚಿತ್ರಾಕ್ಷರ ಒದಗಿಸಿದ ಕಪಿಲಾಶ್ರೀಧರ್ ಅನಿಸಿಕೆ.
ಪ್ರತಿಭಾನ್ವಿತ ಬಾಲ ಕಲಾವಿದ ಹೃತಿಕ್ ಶ್ರೀಧರ್ ರಚಿಸಿರುವ ಮಯೂರ ಕೃಷ್ಣ, ಪದವಿ ವಿದ್ಯಾರ್ಥಿ ಕಲಾಕಿಶೋರ ಮುರಳಿ ಕೃಷ್ಣ ಕುಂಚದಲ್ಲಿ ಮೂಡಿಬಂದಿರುವ ಪಾಂಚಜನ್ಯ ಕೃಷ್ಣ, ಉತ್ತಮ ವರ್ಣ ಸಂಯೋಜನೆಯಿಂದ ಮೋಡಿ ಮಾಡಿ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.
ವಿಶಿಷ್ಟ ಪ್ರಕಾರವಾದ ಕಾಗದ ಕತ್ತರಿ ಕಲೆಯ ಸಾಂಝಿ ಕಲಾವಿದ ಎಸ್.ಎಫ್. ಹುಸೇನಿ ರವರ ಗೋಪಾಲ ಚಿತ್ರಣ ದಲ್ಲಿ ಭಕ್ತಿಯ ದೈವೀಕ ಧ್ಯಾನದ ದರ್ಶನವಿದೆ. ಚಿತ್ರಕಲಾ ಅಕಾಡೆಮಿಯ ರೂವಾರಿ ಕಲಾಕಣ್ಮಣಿ ಮರಿಯಪ್ಪ ಗುಳೆಜ್ಜಿಯ ರಥೋತ್ಸವ ಚಿತ್ರ ವಾಸ್ತವ ಮತ್ತು ಕಾಲ್ಪನಿಕತೆಗಳ ಸಮ್ಮಿಲನವಾಗಿದೆ.
ಚಿತ್ರಕಲೆಯಂತು ಭಾವನೆಗಳಿಗೆ ಮೂರ್ತರೂಪ ಕೊಡುವ ಅಪ್ರತಿಮ ಮಾಧ್ಯಮ, ಅದರಲ್ಲೂ ಕೃಷ್ಣ ಕಲಾವಿದರ ಕುಂಚದಲ್ಲಿ ಲೀಲಾಜಾಲವಾಗಿ ಆಡಬಲ್ಲ ಮುದ್ದುಗೂಸು. ಚಿತ್ರಕಲೆ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಪ್ರದೇಶದ ಕಲಾಪ್ರೇಮಿಗಳಿಗೂ ಮುಟ್ಟುವಂತೆ ಮಾಡುವುದು ಹಾಗೂ ನಾಡಿನ ಉದಯೋನ್ಮುಖ ಕಲಾಕಾರರುಗಳನ್ನು ಪ್ರೋತ್ಸಾಹಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ ಈ ಕಲಾಪ್ರದರ್ಶನ ವನ್ನು ಹಮ್ಮಿಕೊಂಡು ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಎನ್ನುತ್ತಾರೆ ಆಯೋಜಕರಾದ ಮುರಳಿ ಎಸ್. ಕಾಕೋಳು.
ಪರಿಚಯ: ಕೆ.ವಿ. ಪದ್ಮಾವತಿ, ಬೆಂಗಳೂರು
ವಿ.ಸೂ: ಈ ಕಲಾಕೃತಿಗಳ ಹಕ್ಕುಗಳು ಪಾಂಚಜನ್ಯ ಪ್ರತಿಷ್ಠಾನದ್ದು. ಈ ಲೇಖನವಲ್ಲದೆ ಬೇರೆಯದಕ್ಕೆ ಉಪಯೋಗಿಸುವುದನ್ನು ನಿರ್ಬಂಧಿಸಲಾಗಿದೆ.
Discussion about this post