ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಅನೇಕ ಕುಟುಂಬಗಳ ಸಂತೋಷದ ಕ್ಷಣಗಳನ್ನು ಶಾಶ್ವತ ನೆನಪಾಗಿ ಉಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಕರಾವಳಿಯ ಫೋಟೋಗ್ರಫಿಯಲ್ಲಿ ತಮ್ಮದೇ ಆದ ಮುದ್ರೆಯನ್ನು ಛಾಪಿಸಿರುವ ಉದಯ್ಶಂಕರ್ ಪಡಿಯಾರ್ ಸೃಜನಾತ್ಮಕ ಕಲಾವಿದನಾಗಿ ಹಾಗೂ ತಮ್ಮ ಕ್ಷೇತ್ರದಲ್ಲಿಯೇ ಅದ್ಭುತ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ.
ಕರಾವಳಿ ಪ್ರದೇಶದ ಬೈಂದೂರಿನ #Byndoor ಸುತ್ತಮುತ್ತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಹೆಸರು ಎಂದರೆ ಅದು ಉದಯ್ಶಂಕರ್ ಪಡಿಯಾರ್. ಬೈಂದೂರಿನ ಪ್ರಸಿದ್ಧ ಶೃಂಗಾರ್ ಸ್ಟುಡಿಯೋ ಮಾಲಕರಾಗಿರುವ ಅವರು, ಕ್ಯಾಮೆರಾ ಕಲೆಯನ್ನು ತಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಂಡು ಅನೇಕ ವರ್ಷಗಳಿಂದ ಹಲವರ ಸಾವಿರಾರು ನೆನಪುಗಳನ್ನು ಶಾಶ್ವತಗೊಳಿಸುತ್ತಿದ್ದಾರೆ.
#Photography ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ #Videography ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಕಲೆ. ಈ ಕಲೆಯನ್ನು ಅತ್ಯಂತ ಪ್ರೀತಿ ಮತ್ತು ಸಮರ್ಪಣೆಯಿಂದ ಅಳವಡಿಸಿಕೊಂಡು ಬಂದವರು ಉದಯ್ಶಂಕರ್ ಪಡಿಯಾರ್. ಮದುವೆ ಸಮಾರಂಭ, ಧಾರ್ಮಿಕ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ನಡೆಯುವ ಅನೇಕ ವಿಶೇಷ ಕ್ಷಣಗಳನ್ನು ಅತ್ಯಂತ ನೈಪುಣ್ಯದಿಂದ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಅವರ ವಿಡಿಯೋಗ್ರಫಿಯ ವಿಶೇಷತೆ ಎಂದರೆ ಕೇವಲ ದೃಶ್ಯಗಳನ್ನು ದಾಖಲಿಸುವುದಲ್ಲ; ಆ ಕ್ಷಣದ ಭಾವನೆ, ಸಂತೋಷ ಮತ್ತು ಸೌಂದರ್ಯವನ್ನು ಜೀವಂತವಾಗಿ ಉಳಿಸುವ ಸಾಮರ್ಥ್ಯವಾಗಿದೆ. ಅದಕ್ಕಾಗಿಯೇ ಅವರ ಕ್ಯಾಮೆರಾದಲ್ಲಿ ಸೆರೆಹಿಡಿದ ಕ್ಷಣಗಳು ಎಷ್ಟೋ ಕುಟುಂಬಗಳಲ್ಲಿ ಅಮೂಲ್ಯ ನೆನಪುಗಳಾಗಿ ಉಳಿದಿವೆ.
ಬೈಂದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೃಂಗಾರ್ ಸ್ಟುಡಿಯೋ ಒಂದು ವಿಶ್ವಾಸಾರ್ಹ ಹೆಸರಾಗಿ ಬೆಳೆದಿದೆ. ಈ ಯಶಸ್ಸಿನ ಹಿಂದೆ ಉದಯ್ ಶಂಕರ್ ಪಡಿಯಾರ್ ಅವರ ಪರಿಶ್ರಮ, ಅನುಭವ ಮತ್ತು ಕಲಾತ್ಮಕ ದೃಷ್ಟಿಯೇ ಮುಖ್ಯ ಕಾರಣವಾಗಿದೆ. ಕಾಲದೊಂದಿಗೆ ಬರುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಕೆಲಸದಲ್ಲಿ ಸದಾ ಹೊಸತನ ತರುವ ಪ್ರಯತ್ನವನ್ನು ಅವರು ಮುಂದುವರೆಸುತ್ತಿದ್ದಾರೆ.
ತಂದೆ ಉಪ್ಪುಂದದ ದೇವಿದಾಸ್ ಪಡಿಯಾರ್, ತಾಯಿ ಸುಗುಣಾ ಪಡಿಯಾರ್ ಅವರ ಮಗನಾಗಿ 1966 ರಲ್ಲಿ ಜನಿಸಿದ ಉದಯ್ಶಂಕರ್ ಅವರು ತಮ್ಮ ಬಾಲ್ಯವನ್ನು ಉಪ್ಪುಂದದಲ್ಲಿಯೇ ಕಳೆದರು. ವಿದ್ಯಾಭ್ಯಾಸ ಮುಗಿಸಿ ಮುಂದಿನ ಜೀವನ ನಿರ್ವಹಣೆಯ ಕನಸುಕಂಡಿದ್ದು ಛಾಯಾಗ್ರಹಣ ಕ್ಷೇತ್ರದಲ್ಲಿ. ಸಾಗರದ ಬಾಬುರಾವ್ ಅವರ ಬಸಂತ್ ಸ್ಟುಡಿಯೋ ಸೇರಿ, ಅಲ್ಲಿನ ಪ್ರಭಾಕರ್ ಅವರಲ್ಲಿ ಪ್ರಾಥಮಿಕ ಹಂತ ಕಲಿತು, ನಂತರ ಧಾರವಾಡದ ಶ್ರೀ ಚಂದ್ರಶೇಖರ್ ಚಿಕ್ಕೋಡಿ ಅವರ ಶೃಂಗಾರ್ ಸ್ಟುಡಿಯೋದಲ್ಲಿ ಛಾಯಾಗ್ರಹಣ ಕಲೆಯನ್ನ ಕಲಿತ ಅವರು 1984ರಲ್ಲಿ ಊರಿಗೆ ಬಂದು ಬೈಂದೂರಿನಲ್ಲಿ ಶೃಂಗಾರ್ ಸ್ಟುಡಿಯೋ ಎಂಬ ಹೆಸರಿನಲ್ಲೇ ತಮ್ಮ ವೃತ್ತಿಜೀವನ ಆರಂಭಿಸಿದರು.
1987ರಲ್ಲಿ ಪ್ರಥಮಬಾರಿಗೆ ವಿಡಿಯೋ ಚಿತ್ರೀಕರಣಕ್ಕಾಗಿ ವಿಡಿಯೋ ಕೆಮೆರಾ ತಂದ ಹೆಗ್ಗಳಿಕೆ ಸ್ಥಳೀಯವಾಗಿ ಇವರಿಗೇ ದೊರೆಯುತ್ತದೆ. ಅಂದು ಆ ಭಾಗದಲ್ಲಿ ಯಾರಲ್ಲೂ ವಿಡಿಯೋ ಕೆಮೆರಾ ಇಲ್ಲವಾಗಿತ್ತು.
ಹಿಂದಿನ ತಮ್ಮ ವೃತ್ತಿ ಜೀವನದ ಅನುಭವಗಳನ್ನ ಹಂಚಿಕೊಳ್ಳುತ್ತಾ, ಹಿಂದೆ ಸಾಮಾನ್ಯರು ಈ ಕಲೆಗೆ ಬೇಕಾದ ವೆಚ್ಚ ಭರಿಸುವ ಶಕ್ತಿವಂತರಾಗಿ ಇರಲಿಲ್ಲವಾಗಿತ್ತು. ಛಾಯಾಚಿತ್ರ ಎಂದರೆ ಅದು ಯಾವುದೋ ಮಹತ್ತರವಾದ ಸಭೆಯದೋ, ಶಾಲಾ ಮಕ್ಕಳ ಸಮೂಹ ಚಿತ್ರವೋ ಆಗಿರುತ್ತಿದ್ದ ಕಾಲ. ಅಂದೆಲ್ಲ ಒಬ್ಬ ಛಾಯಾಗ್ರಾಹಕನಿಗೆ ತನ್ನದೇ ಆದ ವೃತ್ತಿಗೌರವ ಇರುತ್ತಿತ್ತು ಎನ್ನುವುದಕ್ಕೆ ಒಂದೊಂದು ಶಾಲೆಗಳಿಗೆ ಒಂದೊಂದು ದಿನ ನಿಗಧಿ ಮಾಡಿ ಅವರಿಗೆ ಸಮಯ ಕೊಡುತ್ತಿದ್ದುದು ಛಾಯಾಗ್ರಾಹಕನೇ ಆಗಿತ್ತು ಎಂಬುದೇ ಸಾಕ್ಷಿ. ದಾರಿಯೇ ಇಲ್ಲದ ಶಾಲೆಗಳಿಗೆ ತಲುಪಲು ನಡೆದೇ ಹೋಗಬೇಕಿದ್ದ ಅನಿವಾರ್ಯತೆಯ ಕಾಲವದು. ವಾಹನ ಇಳಿದ ಸ್ಥಳಗಳಿಂದ ಶಾಲೆಯ ಅಧ್ಯಾಪಕರುಗಳೇ ಸ್ವತಃ ಬಂದು ಕೆಮೆರಾ ಪೆಟ್ಟಿಗೆ ಹೊತ್ತೊಯ್ದು ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದ ಕಾಲದಿಂದ ಇಂದು ಜನಸಾಮಾನ್ಯರಿಗೂ ಕೈಗೆಟುಕುವಂತೆ ತಂತ್ರಜ್ಞಾನಗಳು ಮುಂದುವರಿದಿದೆ.
120 ಎಂ. ಎಂ. ಹಾಗೂ 35 ಎಂ. ಎಂ. ನೆಗೆಟಿವ್ನಲ್ಲಿ ಛಾಯಾಗ್ರಹಣದ ಕಷ್ಟಕರವಾದ ಸವಾಲಿನ ಕೆಲಸಗಳನ್ನ ತಮ್ಮ ಕೌಶಲ್ಯದಿಂದ ಕರಗತ ಮಾಡಿಕೊಂಡು ನಡೆದವನು ಮಾತ್ರ ವೃತ್ತಿಯಲ್ಲಿ ಹೆಸರು ಮಾಡಲು ಸಾಧ್ಯವಾಗಿತ್ತು. ಹೀಗೆ ಕಪ್ಪು-ಬಿಳುಪು ಛಾಯಾಚಿತ್ರಗಳ ಕಾಲಗಳ ವೈಭವವನ್ನ ನೆನಪುಮಾಡಿಕೊಳ್ಳುತ್ತಾರೆ. ಹೀಗೆ ಸವಾಲಿನ ಕಾರ್ಯಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಕಲಿಯುವಿಕೆಗೆ ಬೇಕಾಗಿ ಮನುಷ್ಯನ ದೇಹದ ಅತಿ ಸೂಕ್ಷ್ಮ ಅಂಗಾಗಳ ಚಿತ್ರೀಕರಣವನ್ನೂ ಮಾಡಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ನಿರಂತರ ಕಲಿಕೆಯಿಂದಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಕರಗತಮಾಡಿಕೊಂಡು ಮುನ್ನಡೆಯುವಲ್ಲಿ ಉದಯ್ ಪಡಿಯಾರ್ ಅವರು ಯಶಸ್ವಿಯಾಗಿದ್ದಾರೆ.
ಇದರೊಂದಿಗೆ ಕನ್ನಡದ ಹಲವು ಪತ್ರಿಕೆಗಳಿಗೆ ಚುಟುಕು ಹಾಗೂ ಕವನಗಳನ್ನ ಬರೆಯುವ ಹವ್ಯಾಸವನ್ನೂ ಬೆಳೆಸಿಕೊಂಡಿರುವುದು ಇವರ ಸಾಹಿತ್ಯಾಸಕ್ತಿಯನ್ನು ತೋರಿಸುತ್ತದೆ.
ಪ್ರಸ್ತುತ ಬೈಂದೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದರೊಂದಿಗೆ ಸ್ಥಳೀಯ ಧಾರ್ಮಿಕ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸಾರಭಾರತಿ #PrasaraBharathi ಕೊಡಮಾಡುವ ಉತ್ತಮ ವರದಿಗೆ ರಾರಾಷ್ಟ್ರೀಯ ಪ್ರಶಸ್ತಿಯ ಗೌರವ, ಉತ್ತಮ ವರದಿಗಾರಿಕೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೆಯೇ ಈ ಟಿವಿಯ ಅನ್ನದಾತ ಕಾರ್ಯಕ್ರಮದಲ್ಲಿ ಸ್ಥಳೀಯ ಕುಂದಾಪುರ ಸೇರಿದಂತೆ #UttaraKannada ಉತ್ತರಕನ್ನಡದ ಕಾರವಾರ, ಯಲ್ಲಾಪುರ. ಹೊನ್ನಾವರ ಹಾಗೂ ಭಟ್ಕಳ ತಾಲೂಕು ಹಾಗೂ #Shivamogga ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಪ್ರಾಮಾಣಿಕ ವರದಿ ಹಾಗೂ ಅಪ್ರತಿಮ ಚಿತ್ರೀಕರಣದಿಂದಾಗಿ 150 ರಿಂದ 200ರ ವರೆಗೆ ಅನ್ನದಾತ ಕಾರ್ಯಕ್ರಮ ನಿರ್ವಹಿಸಿ ಗೌರವ ಸಂಪಾದಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.
ಸತತ 29 ವರ್ಷಗಳಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಅವರ ಕಾರ್ಯನಿಷ್ಠೆಗೆ ಸಂದ ಗೌರವ ಎನ್ನಬಹುದು.
ಇಂದು ಅವರು ಕೇವಲ ಸ್ಟುಡಿಯೋ ಮಾಲಕರಷ್ಟೇ ಅಲ್ಲ, ಸೃಜನಾತ್ಮಕ ಕಲಾವಿದನಾಗಿ ಹಾಗೂ ತಮ್ಮ ಕ್ಷೇತ್ರದಲ್ಲಿಯೇ ಅದ್ಭುತ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಅನೇಕ ಕುಟುಂಬಗಳ ಸಂತೋಷದ ಕ್ಷಣಗಳನ್ನು ಶಾಶ್ವತ ನೆನಪಾಗಿ ಉಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕರಾವಳಿಯ ಫೋಟೋಗ್ರಫಿ ಕ್ಷೇತ್ರದಲ್ಲಿ ತಮ್ಮದೇ ಆದ ಮುದ್ರೆಯನ್ನು ಛಾಪಿಸಿರುವ ಉದಯ್ಶಂಕರ್ ಪಡಿಯಾರ್ ಅವರ ಸಾಧನೆ, ಮುಂದಿನ ತಲೆಮಾರಿನ ಯುವಕರಿಗೆ ಪ್ರೇರಣೆಯಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















