ಕಲ್ಪ ಮೀಡಿಯಾ ಹೌಸ್
ಪಡಿಗಾರು (ಉಡುಪಿ): ಬಾಲ್ಯದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಬಾರದು. ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ತಪಸ್ಸಿನಂತೆ ನಡೆಸಬೇಕು. ಈ ಮೂಲಕ ನಾವು ಪಡೆದ ವಿದ್ಯೆಯೇ ನಮಗೆ ಉನ್ನತ ಸ್ಥಾನವನ್ನು ನೀಡುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಇ. ದೇವನಾಥನ್ ಹೇಳಿದರು.
ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ನೇತೃತ್ವದಲ್ಲಿ ಪಾಡಿಗಾರಿನ ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಮಾರು 35 ವರ್ಷಗಳ ಹಿಂದೆ ನಾನು ಉನ್ನತಾಭ್ಯಾಸಕ್ಕಾಗಿ ನವದೆಹಲಿಯಲ್ಲಿದ್ದಾಗ ಶ್ರೀ ಪುತ್ತಿಗೆ ಶ್ರೀಪಾದರ ಸನ್ನಿಧಿಯಲ್ಲಿ ವೇದಾಂತ ಪರೀಕ್ಷೆಯನ್ನು ಕೊಟ್ಟಿದ್ದೆ. ಅಂದು ಶ್ರೀಗಳು ನನ್ನನ್ನು ವಿಶೇಷವಾಗಿ ಅನುಗ್ರಹಿಸಿದ್ದರು. ಇದೆಲ್ಲದರ ಫಲವಾಗಿ ಇಂದು ಈ ಉನ್ನತ ಪದವಿ ದೊರೆತಿದೆ. ಆದ್ದರಿಂದ ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ನಡೆಸಿ ಎಂದು ಸಲಹೆ ನೀಡಿದರು.
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಆಶೀರ್ವಚನ ನೀಡಿ, ಪ್ರೊ. ದೇವನಾಥನ್ ಅವರ ವಿದ್ವತ್ತು ಜೊತೆಗೆ ಅವರ ಸರಳತೆಯು ಎಲ್ಲರಿಗೂ ಆದರ್ಶ ಎಂದರು.
ಸಂಸ್ಕೃತದ ಉನ್ನತ ವಿದ್ವಾಂಸರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಆಗಮಿಸಿದ್ದರಿಂದ ಸಂಸ್ಕೃತ ಕ್ಷೇತ್ರವು ಇನ್ನೂ ವ್ಯಾಪಕವಾಗಿ ಬೆಳಗಲಿ ಎಂದು ಅಭಿನಂದಿಸಿದರು.
ಕುಲಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಶ್ರೀ ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಸುನೀಲ್ ಆಚಾರ್ಯ, ವಿದ್ವಾನ್ ಶ್ರೀಪತಿ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಬಿ. ಗೋಪಾಲಾಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post