ಕಲ್ಪ ಮೀಡಿಯಾ ಹೌಸ್ | ಉಡುಪಿ |
ಭಾರತೀಯ ಜನತಾ ಪಾರ್ಟಿ ಈಗ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಸಿದ್ದಾಂತದ ಪಕ್ಷವಾಗಿ ಉಳಿಯದೇ ಜಾತಿ, ಹಣ ಇರುವವರ ಹಾಗೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹಿಂದೆ ಸುತ್ತುವವರಿಗೆ ಮಣೆ ಹಾಕುವ ಪಕ್ಷವಾಗಿ ಬದಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ, ರಾಷ್ಟ್ರೀಯತೆಯ ಸಿದ್ದಾಂತಕ್ಕೆ ರಾಜ್ಯ ಬಿಜೆಪಿ ಈಗ ತಿಲಾಂಜಲಿ ಇಟ್ಟಿದೆ. ಈ ಅಂಶಗಳಿಗಾಗಿ ಮಾತನಾಡುವ ಹಾಗೂ ಹೋರಾಡುವವರನ್ನು ದೂರ ಇರಿಸಲಾಗುತ್ತಿದೆ. ಬದಲಾಗಿ, ಅಪ್ಪ-ಮಕ್ಕಳ ಕೈಗೆ ಸಿಲುಕಿರುವ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ #B S Yadiyurappa ಹಾಗೂ ವಿಜಯೇಂದ್ರ #Vijayendra ಅವರ ಹಿಂದೆ ಸುತ್ತುವವರಿಗೆ, ತಮ್ಮ ಜಾತಿಯವರಿಗೆ, ಹಣ ಇರುವವರಿಗೆ ಮಣೆ ಹಾಕುವ ಹಾಗೂ ಟಿಕೇಟ್ ನೀಡುವ ಪಕ್ಷವಾಗಿ ಬದಲಾಗಿದೆ ಎಂದು ನೇರವಾಗಿಯೇ ಹೇಳುತ್ತೇನೆ ಎಂದರು.
30 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದವರಿಗೆ ಟಿಕೇಟ್ ಕೊಡದೇ ವಂಚಿಸಲಾಗಿದೆ. ಜನಸಂಘದ ಕಾಲದಿಂದಲೇ ಯಾರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ ಅವರೆಲ್ಲರ ತಪಸ್ಸಿಗೆ ಬೆಲೆ ಸಿಗಬೇಕಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಪಕ್ಷ ನಿಷ್ಠೆ, ರಾಷ್ಟ್ರೀಯತೆ, ಹಿಂದುತ್ವದ ಸಿದ್ದಾಂತಕ್ಕೆ ತಿಲಾಂಜಲಿ ಇರಿಸಿದ್ದು, ತಮ್ಮ ಜಾತಿಯವರಿಗೆ, ಹಣ ಇರುವವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ದೂರಿದರು.
Also read: ಪ್ರಧಾನಿ ಮೋದಿ ಮೈಸೂರು ಭೇಟಿ ವೆಚ್ಚ 80 ಲಕ್ಷ ರೂ. | ಇದನ್ನು ಯಾರು ಭರಿಸಲಿದ್ದಾರೆ ಗೊತ್ತಾ?
ರಾಜ್ಯ ಬಿಜೆಪಿ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದೆ. ಹಿಂದೆ ಬಹಳಷ್ಟು ನಾಯಕರು ಸೇರಿ ಸಾಮೂಹಿಕ ನೇತೃತ್ವದಲ್ಲಿ ಪಕ್ಷವನ್ನು ಕಟ್ಟಿದ್ದೇವೆ. ಆದರೆ, ಈಗ ಅಧಿಕಾರ ದೊರೆಯುತ್ತಿರುವ ಕಾಲದಲ್ಲಿ ಎಲ್ಲರನ್ನೂ ಮೂಲೆಗುಂಪು ಮಾಡಿ ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ, ತಮ್ಮ ಜಾತಿಯವರಿಗೆ ಹಾಗೂ ಹಣ ಇರುವವರಿಗೆ ಮಾತ್ರ ಅವರು ಹೇಳಿದಂತೆಯೇ ಟಿಕೇಟ್ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಅನ್ಯಾಯವನ್ನು ತಡೆಯಬೇಕು, ಈ ಕುರಿತಂತೆ ರಾಜ್ಯದಲ್ಲಿ ಚರ್ಚೆ ಆಗಲೇಬೇಕು ಎಂಬ ಉದ್ದೇಶದಿಂದಲೇ ನಾನೂ ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು. ಇದೇ ಕಾರಣಕ್ಕಾಗಿಯೇ ರಘುಪತಿ ಭಟ್ ಅವರೂ ಸಹ ಸ್ವತಂತ್ರವಾಗಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದರು.
ರಘುಪತಿ ಭಟ್ ಅವರನ್ನು ಗೆಲ್ಲಿಸಿ
ಜೀವಮಾನದಾದ್ಯಂತ ಹಿಂದುತ್ವ, ಪಕ್ಷ ನಿಷ್ಠೆ, ಸಂಘದ ಹಿರಿಯರ ಮಾರ್ಗದರ್ಶನದಂತೆಯೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ರಘುಪತಿ ಭಟ್ #Raghupathi Bhat ಅವರು ನಿಶ್ಚಿತವಾಗಿಯೇ ಗೆಲ್ಲುತ್ತಾರೆ. ಮತದಾರರು ರಘುಪತಿ ಭಟ್ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























