ಬಾಗ್ಫಾತ್: ತಮ್ಮ ಪುತ್ರನ ಅಸ್ವಾಭಾವಿಕ ಸಾವನ್ನು ಕೊಲೆಯಲ್ಲ ಆತ್ಮಹತ್ಯೆ ಎಂದು ಪೊಲೀಸ್ ಇಲಾಖೆ ಪರಿಗಣಿಸಿದ್ದ ಹಿನ್ನೆಲೆಯಲ್ಲಿ ಬೇಸತ್ತ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ.
ಉತ್ತರಪ್ರದೇಶದ ಬಾಗ್ಫತ್ನ ಬದರ್ಖಾ ಗ್ರಾಮದಲ್ಲಿ ಈ ಬೆಳವಣಿಗೆ ನಡೆದಿದ್ದು, 12 ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮಾತ್ರವಲ್ಲದೆ ಧರ್ಮವನ್ನು ಬದಲಿಸಬೇಕು ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕುಟುಂಬದ ಮುಖ್ಯಸ್ಥ ಅಖ್ತರ್, ಪೊಲೀಸರು ತಮ್ಮ ಪುತ್ರನ ಸಾವಿನ ಬಗ್ಗೆ ನಿಖರ ತನಿಖೆ ನಡೆಸಲು ತಮ್ಮ ಮತಾಂತರ ಪ್ರೇರಣೆಯಾಗಲಿದೆ. ನಾವು ಧರ್ಮವನ್ನು ಬದಲಾಯಿಸುವುದರಿಂದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬಹುದು ಎಂದಿದ್ದಾರೆ.
ಮುಸ್ಲಿಂ ಕುಟುಂಬ ಕೇಸರಿ ಪಟ್ಟಿಗಳನ್ನು ಹಣೆಗೆ ಕಟ್ಟಿಕೊಂಡು ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಹಿಂದು ಧರ್ಮ ಸ್ವೀಕರಿಸಿದ್ದು, ಅವರನ್ನು ಹಿಂದೂ ಪರ ಸಂಘಟನೆಯ ಸದಸ್ಯರು ತಿಲಕವಿಟ್ಟು ಬರಮಾಡಿಕೊಂಡಿದ್ದಾರೆ. ಬಳಿಕ ಹವನ ಮಾಡಿಸಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಲಾಗಿದೆ.
ಪುತ್ರನ ಸಾವಿನ ಬಗ್ಗೆ ಪೊಲೀಸರ ತನಿಖೆಯ ಬಗ್ಗೆ ಬೇಸತ್ತ ಕುಟುಂಬ ತಮ್ಮ ಧರ್ಮದ ಜನರ ಸಹಾಯ ಕೋರಿದೆ. ಆದರೆ ಯಾರೂ ಸಹಾಯಕ್ಕೆ ಮುಂದಾಗದ ಕಾರಣ ಇಡೀ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ವರದಿಯಾಗಿದೆ.
Discussion about this post