ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕರ್ನಾಟಕದಲ್ಲಿ ನಾಟಕದ ಚುನಾವಣೆಗಳಿಗೆನು ಕಮ್ಮಿ ಇಲ್ಲ, ಪ್ರತಿ ಚುನಾವಣೆಯಲ್ಲೂ ಹಲವು ನಾಟಕ, ಕಣ್ಣೀರು, ಜನನ ಮರಣ, ಕೊನೆ ಚುನಾವಣೆ, ಮತ ಭಿಕ್ಷೆ, ಅಪ್ಪ – ಮಕ್ಕಳು, ಅನುಕಂಪ ಎಲ್ಲಾ ತರಹದ ಜನರನ್ನು ಮರಳುಮಾಡುವ ಮಾತುಗಳನ್ನಾಡಿ ಭಾಷಣ ಮಾಡುವುದು ಕರಗತ ಮಾಡಿಕೊಂಡಿರುವ ರಾಜಕಾರಣಿಗಳು ಜನರನ್ನು ಭಾವನಾತ್ಮಕವಾಗಿ ಸೆಳೆದು ತಮ್ಮ ಭಾಷಣದಲ್ಲಿ ಜನರನ್ನು ಮರಳು ಮಾಡಿ ಮತ ಪಡೆಯುತ್ತಾರೆ. ಇಂತಹ ರಾಜಕೀಯ ಭಾವನಾತ್ಮಕ ವಿಷಯಕ್ಕೆ ಇತ್ತೀಚೆಗೆ ಸೇರ್ಪಡೆ ವೇದಿಕೆಯಲ್ಲಿ ಶಿರಸಾಷ್ಠಾಂಗ ನಮಸ್ಕಾರ ಮಾಡುವುದು, ಮಂಡಿಯೂರಿ ನಮಸ್ಕರಿಸುವುದು, ಸೆರಗೊಡ್ಡಿ ಬೇಡುವುದು, ಕೈ ಮುಗಿದು ನಿಮ್ಮ ಊರ ಮಗ-ಮಗಳು-ಸೊಸೆ-ಅಳಿಯ ಪದಗಳು. ಈ ತರಹದ ಮಾತುಗಳು, ವ್ಯಕ್ತಿತ್ವ ತೋರಿಸಿವುದು ಜನರಿಗೆ ಇವ ನಮ್ಮವ ಅನ್ನೊ ಭಾವನೆ ಬರಿಸುತ್ತದೆ, ಆದರೆ ಚುನಾವಣೆ ಮುಗಿದೊಡನೆ ಈ ಎಲ್ಲಾ ಪದಗಳು ಕೇವಲ ಪದಗಳಾಗಿ ಪತ್ರಿಕೆಗಳಲ್ಲಿ ಮಾತ್ರ ಸಿಗುತ್ತವೆ ಎಂಬುದು ವಾಸ್ತವ ಸತ್ಯ.
2018 ರ ಚುನಾವಣೆಯ ಪ್ರಚಾರಗಳು ಚುನಾವಣಾ ರಣಾಂಗದ ಚಿತ್ರಣವನ್ನೇ ಬದಲಿಸಿತು, ಲೋಕಸಭೆಯ ಚುನಾವಣೆ ಪ್ರಚಾರ ಮತ್ತಷ್ಟು ಚುನಾವಣಾ ಪ್ರಚಾರವನ್ನೇ ಹೊಲಸು ಮಾಡಿತು. ಸೈದ್ಧಾಂತಿಕ , ವೈಚಾರಿಕ ಟೀಕೆಗಳನ್ನು ಮೀರಿ ವೈಯಕ್ತಿಕ ಟೀಕೆಗಳತ್ತ ತಿರುಗಿತು, ಮಂಡ್ಯ ಕದನವಂತು ಹಲವು ಮಜ್ಜಲುಗಳನ್ನು ತೋರಿಸಿತು. ಜನರು ಈ ಚುನಾವಣಾ ಪ್ರಚಾರ ಭಾಷಣಗಳನ್ನು ಅಸಹ್ಯವಾಗಿ ನೋಡಲು ಪ್ರಾರಂಭವಾಯಿತು. ಇಬ್ಬರು ಮೂವರು ವ್ಯಕ್ತಿಗಳ ಸುತ್ತಾ ಸುತ್ತುತ್ತಾ ಭಾಷಣ ಮುಗಿಸುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ, ದೇವೆಗೌಡರು ಈಗ ಬೊಮ್ಮಾಯಿ ಇಷ್ಟೆ ಇಂದಿನ ಚುನಾವಣೆ ಭಾಷಣದ ವಿಷಯ. ಚುನಾವಣೆಯ ವಿಷಯಗಳು ಕೇವಲ ವಯಕ್ತಿಕ ನಿಂದನೆಗಳು, ಅವರ ಸಂಸಾರಿಕ ಗುಟ್ಟು, ಜಾತಿ, ಅನೈತಿಕ ಸಂಬಂಧಗಳ ಚರ್ಚೆಗೆ ಸೀಮಿತವಾಯಿತು. ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮಗಿರುವ ಅಭೂತ ಪೂರ್ವ ಶಕ್ತಿ, ಸಾಮರ್ಥ್ಯ ಹಾಗೂ ಜನ ಬೆಂಬಲವನ್ನು ಕೇವಲ ಪರರ ನಿಂದನೆ, ಏಕವಚನ ಪ್ರಯೋಗ, ದರ್ಪದ ಮಾತುಗಳಿಗೆ ಸೀಮಿತಗೊಳಿಸಿ ಅವರ ಸಾಮಾರ್ಥ್ಯವನ್ನು ಅನ್ಯತ ವ್ಯರ್ಥ ಮಾಡುತ್ತಿದ್ದಾರೆ. ಅವರ ಮಾತುಗಳೇ ಅವರಿಗೆ ಮುಳುವಾಗಿ ಚಾಮುಂಡೇಶ್ವರಿ ವಿಧಾನಸಭೆಯಲ್ಲಿ ಸೋತರು ಅವರು ಬದಲಾಗದಿರುವುದು ಶೋಚನೀಯ. ಅವರ ಮಾತುಗಳು, ನಡವಳಿಕೆಗಳನ್ನೇ ಆಧಾರವಾಗಿಟ್ಟು ಅವರ ವಿರುದ್ಧ ಪ್ರತ್ಯಸ್ತ್ರ ಹೂಡಿ ಅವರನ್ನು ಸೋಲಿಸಿದರು, ಅಪ್ಪಿ ತಪ್ಪಿ ಬಾದಾಮಿ ಅವರನ್ನು ಕೈ ಹಿಡಿಯದಿದ್ದರೆ ಸ್ವಕ್ಷೇತ್ರದಲ್ಲಿ ಸೋತ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನಲ್ಲಿ ಒಂದು ಗುಂಪು ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿ ಕೂರಿಸುತ್ತಿದ್ದರು. ಅದೃಷ್ಟ ಬಾದಾಮಿಯ ಬನಶಂಕರಿ ಅನ್ನಭಾಗ್ಯ, ಕ್ಷೀರಭಾಗ್ಯ ನೋಡಿ ಕೈಹಿಡಿದಳು. ಒಬ್ಬ ನುರಿತ ರಾಜಕಾರಣಿ ಚುನಾವಣೆಯ ದಿಕ್ಕು ಬದಲಿಸಬಹುದು. ಆ ಅನುಭವ ಮತ್ತು ಸಾಮರ್ಥ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಇದೆ. ಆದರೆ ಅವರು ಇತ್ತೀಚೆಗೆ ಸಭೆಯ ಶಿಳ್ಳೆ, ಚಪ್ಪಾಳೆಗಳಿಗೆ ಸಿನಿಮಾ ಮಂದಿಯವರಂತೆ ಆಸೆ ಪಟ್ಟು ತೃಪ್ತಿ ಪಡುತ್ತಿರಬಹುದು.
ಮಾನ್ಯ ಸಿದ್ದರಾಮಯ್ಯನವರೇ, ನೀವು ಜನ ನಾಯಕ ಸಿನಿಮಾ ನಾಯಕನಲ್ಲ ಕೇವಲ ಈ ಶಿಳ್ಳೆ ಚಪ್ಪಾಳೆಗಳ ವ್ಯಾಮೋಹಕ್ಕೆ ಮಾತನಾಡಿ ಜನರೆದುರು ಚಿಕ್ಕವರಾಗಬೇಡಿ ಎಂಬುದು ನಿಮ್ಮ ನೈಜ ಅಭಿಮಾನಿಗಳ ಮನದಾಳದ ಮಾತು. ನೀವು ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಟೀಕಿಸುವಾಗ ಅದರಲ್ಲೂ ಏಕವಚನದಲ್ಲಿ ಪ್ರಶ್ನಿಸಿದಾಗ ನಿಮ್ಮನ್ನು ಮತ್ತಷ್ಟು ಹುರಿದುಂಬಿಸುವ ಮಂದಿ ನಿಮ್ಮನ್ನು ಹಳ್ಳಕ್ಕೆ ತಳ್ಳುತ್ತಿರುವವರು ಎಂದು ನಿಮಗೆ ತಿಳಿದಿರಲಿ. ಪ್ರಧಾನಮಂತ್ರಿಗಳನ್ನು ಟೀಕಿಸುವ ಸಾಮರ್ಥ್ಯ ನಿಮಗೆ ಮಾತ್ರ ಎಂಬ ಹಸಿ ಹಸಿ ಸುಳ್ಳನ್ನು ಹೇಳಿ ನಿಮ್ಮನ್ನು ಉಬ್ಬಿಸಿ ಭಾಷಣದಲ್ಲಿ ಬಯ್ಯಿಸುವ ಮಂದಿ ನಿಮ್ಮಿಂದ ನಂತರದ ತಮಾಷೆಗಳನ್ನು ನೋಡಿ ವಿಕೃತ ಆನಂದ ಪಡೆಯುವವರು ಎಂಬುದು ನಿಮ್ಮ ನೆನಪಿನಲ್ಲಿರಲಿ.
ಮಾನ್ಯ ಪ್ರಧಾನಮಂತ್ರಿಗಳನ್ನು, ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ನಿಮ್ಮ ಬಳಿ ಸಾವಿರ ವಿಷಯಗಳಿವೆ, ಆದರೆ ನೀವು ಟೀಕಿಸುವ ಮಾರ್ಗದ ಆಯ್ಕೆ ಉತ್ತಮವಲ್ಲ ಅಷ್ಟೆ ನೀವು ಟೀಕಿಸುವ ರೀತಿ ಅದರ ಮೌಲ್ಯವನ್ನೇ ಹಾಳು ಮಾಡುತ್ತದೆ. ಬೆಲೆ ಏರಿಕೆ, ಖಾಸಗಿಕರಣ, ಇಂಧನದ ಬೆಲೆಗಳು, ಅಡುಗೆ ಅನಿಲ , ಬ್ಯಾಂಕ್ ನ ಬಡ್ಡಿದರಗಳ ಇಳಿಕೆ, ಜಿ.ಎಸ್.ಟಿ, ರಾಜ್ಯ ಮತ್ತು ಕೇಂದ್ರದ ಹಣಕಾಸು ನಿರ್ವಹಣೆ ಇವುಗಳನ್ನು ಸಮರ್ಥವಾಗಿ ಜನರ ಮುಂದಿಟ್ಟು ಇವುಗಳನ್ನು ಚರ್ಚೆಗೆ ತರಬಹುದಿತ್ತು. ಕೊರೋನ ರೋಗದ ಆರಂಭಿಕ ನಿಯಂತ್ರಣ ಅದರ ವೈಫಲ್ಯ, ಲಸಿಕೆಯ ನೀಡುವಿಕೆ ಅದರ ಆರಂಭಿಕ ಕೊರತೆ ಇವುಗಳನ್ನು ಚುನಾವಣೆಯ ವಿಷಯ ಮಾಡಬಹುದಿತ್ತು. ಸ್ಥಳಿಯ ಆಡಳಿತ, ಅಭಿವೃದ್ಧಿ, ಭಾ.ಜ.ಪ ರಾಜ್ಯ ಸರ್ಕಾರದ ವೈಫಲ್ಯ, ಹಗರಣ ಮುಖ್ಯಮಂತ್ರಿ ಬದಲಾವಣೆ, ಕೊರೋನ ಕಾಲದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ, ಸರ್ಕಾರದ ಪಾತ್ರ, ಮಳೆ ಮತ್ತು ಬರಗಾಲದ ಅವಾಂತರಗಳು, ಅದರ ದುಷ್ಪರಿಣಾಮಗಳು ಈ ಚುನಾವಣೆಯ ನಿಮ್ಮ ಪ್ರಬಲ ಅಸ್ತ್ರವಾಗಬೇಕಿತ್ತು. ಆದರೆ ಅದನ್ನು ಬಿಟ್ಟು ನೀವು ಕುರಿ, ಕಂಬಳಿ, ಬೊಮ್ಮಾಯಿ, ಅವರ ಅಪ್ಪ ಎಂದು ಅದರ ಸುತ್ತ ಸುತ್ತುತ್ತಾ ಚುನಾವಣೆಯ ವಿಷಯ, ವಿಚಾರ ಮತ್ತು ಅದರ ಗಾಂಭೀರ್ಯ ಎಲ್ಲವನ್ನು ಅನವಶ್ಯಕವಾಗಿ ಬದಲಾಯಿಸಿ ಚುನಾವಣೆಯ ವಿಷಯವನ್ನೇ ವಿಷಯಾಂತರ ಮಾಡಿದಿರಿ. ಇದರಿಂದ ಚರ್ಚೆಗೆ ಬರಬೇಕಾದ ವಿಷಯಗಳೇ ಮರೆಮಾಚಿದವು.
ಇನ್ನು ಚುನಾವಣೆಗೆ ತಮ್ಮ ಬಳಿ ವಿಷಯವೇ ಇಲ್ಲದವರಂತೆ ರಾಜಕೀಯದ ರಾಜಕಾರಣಿಗಳ ತಯಾರಿಕ ಘಟಕ ಜಾತ್ಯತೀತ ಜನತದಳದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅದರ ವಿಚಾರಗಳನ್ನು ಟೀಕಿಸುತ್ತಾ ಮುಸಲ್ಮಾನರನ್ನು ಒಲೈಸಿ ಕೊಳ್ಳಬಹುದೆಂಬ ಕಲ್ಪನೆಯಲ್ಲಿ ವಿಚಾರ ಕೆದಕೆದರು. ಇದರಿಂದ ಅವರಿಗೆ ಒಂದೂ ಓಟು ಸಹ ಅವರಿಗೆ ಸಿಗುವುದಿಲ್ಲ ಎಂಬುದು ಅವರ ಅರಿವಿಗೆ ಇತ್ತೋ ಇಲ್ಲವೋ ಅನ್ನುವುದೇ ಅನುಮಾನ, ನಗರ ಪ್ರದೇಶದಿಂದ ದೂರ ವಿರುವ ಹಳ್ಳಿಗಳಲ್ಲಿ ಸಂಘದ ಕೆಲಸ ಕಾರ್ಯಗಳು ಎಂದೂ ಮತದಾನದ ವಿಷಯವೇ ಅಲ್ಲ. ಸುಮ್ಮನೆ ಬೇಡದ ವಿಷಯವನ್ನು ಕೆಣಕಿ ತಮ್ಮ ಹಾಗೂ ತಮ್ಮ ಕುಟುಂಬದವರ ಮೇಲೆ ಹಲವಾರು ಟೀಕೆಗಳನ್ನು ಸ್ವತಃ ಆಹ್ವಾನಿಸಿದರು. ತಮ್ಮ ಜೊತೆಗಿದ್ದವರೆ ಇಂದು ಬೇರೊಂದು ಪಕ್ಷದ ವೇದಿಕೆಯಿಂದ ನಿಮ್ಮ ವೈಯಕ್ತಿಕ ವಿಚಾರಗಳಾದ ಎರಡನೆಯ ವಿವಾಹ, ಕುಟುಂಬದ ಬಿರುಕುಗಳು, ನಿಮ್ಮ ಮತ್ತು ನಿಮ್ಮ ತಂದೆಯವರ ಸಂಬಂಧಗಳನ್ನೇ ಮಾತನಾಡಿದರು.
ಒಬ್ಬ ಸಾಮಾನ್ಯ ಪ್ರಜೆಗೆ ಅಥವಾ ನಿಮ್ಮದೇ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನಿಗೆ ನೀವು ಚರ್ಚಿಸಿದ, ಹರಿಬಿಟ್ಟ ವಿಷಯಗಳು ಉಪಯೋಗವಿದಯೇ ಎಂಬುದನ್ನು ಒಮ್ಮೆ ವಿಮರ್ಶಿಸಿ. ಕೇವಲ ಸಿದ್ದರಾಮಯ್ಯ, ಸಂಘ, ಜಮೀರ್ ನಿಮ್ಮ ವಿಷಯವೇ? ತಮ್ಮ ಮಗನನ್ನು ರಾಜಕೀಯದ ಮುನ್ನಲೆಗೆ ತರಲು ಪ್ರಯತ್ನಿಸುತ್ತಿರುವ ನೀವು ನಿಮ್ಮ ಮಗನಿಗೆ ಮಾಡುತ್ತಿರುವ ರಾಜಕೀಯ ಉಪದೇಶ ಇದೇನಾ? ಮಾನ್ಯ ಮಾಜಿ ಪ್ರಧಾನಿಗಳಾದ ದೇವೆಗೌಡರು ಒಂದು ರಾಜಕೀಯ ಫ್ಯಾಕ್ಟರಿಯನ್ನೇ ಕಟ್ಟಿದವರು. ಆದರೆ ಅವರ ಮುಂದಿನ ತಲೆಮಾರು ಅವರ ಸ್ವಂತ ಪಕ್ಷ ಉಳಿಸಿಕೊಳ್ಳಲು ಬಹಳ ಕಷ್ಟ ಪಡುತ್ತಿರುವುದು ವಿಪರ್ಯಾಸ. ಇಂದಿನ ಈ ಪರಿಸ್ಥಿತಿಗೆ ನಿಮ್ಮ ನಡವಳಿಕೆ, ಮಾತುಗಳೇ ಕಾರಣವೆಂದು ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ಬಳಿ ಹೇಳುವ ಧೈರ್ಯವಿಲ್ಲದಿರಬಹುದು. ಆದರೆ ಜನಸಾಮಾನ್ಯರ ಭಾವನೆ ಒಮ್ಮೆ ಆ ರೀತಿ ಬಂದರೆ ಅದನ್ನು ಬದಲಿಸಲಾಗದು. ವಿಷಯದ ಆಯ್ಕೆ ಮತ್ತು ಅದರ ಮಂಡನೆಯಲ್ಲಿ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಚುನಾವಣೆಯ ಅವಧಿಯಿಂದ ಎಡವಿದ್ದಾರೆ ಎಂಬುದು ಮಾತ್ರ ಸತ್ಯ. ನೀವು ನಿಮ್ಮ ಶಾಸಕರ ವಿಶ್ವಾಸಗಳನ್ನು ಕಳೆದುಕೊಂಡರು ಜನರು ನಿಮಗೆ ಕುಮಾರಣ್ಣ ಎಂದು ನೀಡಿರುವ ಮನೆಮಗನ ವಿಶ್ವಾಸ ಶಾಶ್ವತ. ಇದರ ಬಗ್ಗೆ ನಿಮ್ಮ ಗಮನವಿರಬೇಕು ಅದನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟ ಸಾಧ್ಯವಲ್ಲ. ಜಾತಿ ಮತ್ತು ರೈತ ಸಮುದಾಯದ ಅತೀವ ಬೆಂಬಲವಿರುವ ನಿಮಗೆ ಚುನಾವಣೆ ಒಂದು ವಿಷಯವೇ ಅಲ್ಲ. ಆದರೂ ಈ ರಾಜಕೀಯ ಹಿನ್ನಡೆಯ ಕಾರಣದ ಸ್ವಯಂ ವಿಮರ್ಷೆ ಮತ್ತು ತಿದ್ದುಪಡಿ 2023 ರ ಚುನಾವಣೆಯ ದಿಕ್ಕನ್ನೇ ಬದಲಿಸಬಹುದು, ಸೂಕ್ತ ಮಾರ್ಗದರ್ಶಕರ ಅವಶ್ಯಕತೆ ಯುವ ಪಡೆಗೆ ನೀಡಿ.
ಈ ಎರಡು ರಾಜಕೀಯ ಪಕ್ಷದ ವಿಷಯ ಒಂದಾದರೆ ಈ ಶಿಸ್ತಿನ ಪಕ್ಷದ ವಿಚಾರ ಇತ್ತೀಚೆಗೆ ಅಧೋಗತಿ. ಶಿಸ್ತು, ಸಂಸ್ಕಾರ, ಧರ್ಮ, ದೇಶ, ದೇಶಾಭಿಮಾನ ಎಂದೆಲ್ಲಾ ಪುಂಗಾನು ಪುಂಗವಾಗಿ ಮಾತನಾಡುವ ಭಾರತೀಯ ಜನತ ಪಕ್ಷಕ್ಕೆ ಈಗ ಸೂಕ್ತವಾದ ಶಿಕ್ಷಕ ಬೇಕಿದ್ದಾರೆ ಅನ್ನಿಸುತ್ತದೆ. ಈ ಸಾಮಾಜಿಕ ಜಾಲತಾಣ ಮತ್ತು ಈ ಟ್ವೀಟರ್ ಅಕೌಂಟ್ ನಿರ್ವಹಿಸುವವರಿಗೆ ಮೊದಲು ಸಂಸ್ಕಾರದ ಪಾಠ ಕಲಿಸಬೇಕಿದೆ. ತಮ್ಮ ಇಡೀ ಬುದ್ಧಿ ಮತ್ತು ಡಾಟವನ್ನು ಕೇವಲ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿಯವರ ಟೀಕೆಗೆ, ಬಯ್ಯುವಿಕೆಗೆ, ರಾಹುಲ್ ರನ್ನು ಹಂಗಿಸಲೇ ಸೀಮಿತವಾಗಿರುವಂತೆ ಇದ್ದಾರೆ ಅನ್ನಿಸುತ್ತದೆ. ಇತ್ತೀಚೆಗೆ ಸಂಘದ ಹಿನ್ನೆಲೆಯಿಂದ ಬಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ. ರವಿಯವರ ಸಾಮಾಜಿಕ ಜಾಲತಾಣದ ಟೀಕೆಗಳು ಇದೇನಾ ಇವರು ಸಂಘದಲ್ಲಿ ಕಲಿತ ಶಿಕ್ಷಣ ಎಂದು ಕೇಳುವಂತೆ ಮಾಡಿದೆ. ಕಂಬಳಿ, ಟೋಪಿಗಳ ವಿಚಾರವಾಗಿ ನೀವು ಬಳಸುವ ಭಾಷೆ, ಪದಗಳು ನಿಮಗೆ ನಿಜವಾಗಲೂ ಸಮಂಜಸವೇ ಎಂದು ಒಮ್ಮೆ ಯೋಚಿಸಿ? ಒಬ್ಬ ಮಾಜಿ ಮುಖ್ಯಮಂತ್ರಿಯ ಜನನದ ಬಗ್ಗೆ ಪ್ರಶ್ನಿಸುವ ನೀವು ನಿಜವಾಗಲೂ ನಿಮ್ಮ ಹುದ್ದೆಯಿಂದ ಆಡುವ ಮಾತುಗಳೇ? ಇನ್ನು ಭಾಜಪದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೂ ಸಹ ಸಿದ್ದರಾಮಯ್ಯನವರಂತೆ ಶಿಳ್ಳೇ ಚಪ್ಪಾಳೆಗಳ ಆಸೆ ಹುಟ್ಟಿರಬಹುದು. ಅನಾವಶ್ಯಕವಾಗಿ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಬಾಯಿಗೆ ಬಂದಂತೆ ಮಾತನಾಡಿ ಎದುರಿಗೆ ಕುಳಿತಿರುವ ಮೂರು ಮತ್ತೊಂದು ಹುಡುಗರ ಹತ್ರ ಚಪ್ಪಾಳೆ ಪಡೆಯುವ ಹಂಬಲವಿರಬೇಕು.
ಒಂದು ಶಿಸ್ತಿನ ಪಕ್ಷದ ಮೌಲ್ಯವನ್ನು ಮೂರ್ನಾಲ್ಕು ಮಂದಿ ತಮ್ಮ ಮಾತುಗಳಲ್ಲಿ ಕಳೆಯುತ್ತಿದ್ದಾರೆ. ಅದೇ ಪಕ್ಷದಿಂದ ಪ್ರಧಾನಿ ಮತ್ತು ಸಂತೋಷ್ ಮಾತನಾಡುತ್ತಾರೆ, ಜನರಿಗೆ ತಲುಪುವ ರೀತಿ ಮಾತನಾಡುತ್ತಾರೆ, ನೀವುಗಳು ಯಾವುದೋ ಹಳ್ಳಿ ಕಟ್ಟೆಯ ಕುಡುಕರು ಮಾತನಾಡುವಂತೆ ಮಾತನಾಡುತ್ತೀರಿ. ಈ ಉಪ ಚುನಾವಣೆಯಲ್ಲಿ ನೀವು ಮಾಡಿದ ಅಭಿವೃದ್ಧಿ, ಕೊರೋನಾ ನಿರ್ವಹಣೆ, ಲಸಿಕೆಯ ಯಶಸ್ವಿ, ಅತಿವೃಷ್ಠಿ, ಅನಾವೃಷ್ಠಿ, ಬರಗಾಲ, ಆಕ್ಸಿಜನ್ ನಿರ್ವಹಣೆ, ಚಾಮರಾಜನಗರದಲ್ಲಿ ಆದ ಆಕ್ಸಿಜನ್ ಕೊರತೆಯ ಪಾಠ ಅದರಿಂದ ಆದ ತಿದ್ದುಪಡಿಗಳು, ಖಾತೆ ಕಂದಾಯದ ಸರಳೀಕರಣ, ಜಿಲ್ಲಾ ರಸ್ತೆಗಳ ಅಭಿವೃದ್ಧಿಗಳ ವಿಷಯಗಳನ್ನು ನೀವು ಚರ್ಚಿಸಬೇಕಿತ್ತು. ಆದರೆ ನಿಮ್ಮ ಎಲ್ಲಾ ಸಂಘಟನಾ ಶಕ್ತಿಯನ್ನು ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಸಂಘಟಿಸಿದಿರಿ. ನೀವು ಅವರೊಬ್ಬರನ್ನೇ ಟೀಕಿಸುವುದು ಬೈಯ್ಯುಯುವುದು ಅವರನ್ನು ಜನಗಳ ಮುಂದೆ ನಿಮ್ಮ ಪಕ್ಷಕ್ಕಿಂತ ದೊಡ್ಡವರಂತೆ ಬಿಂಬಿಸುವಂತಾಗುವುದಿಲ್ಲವೇ?
ಒಟ್ಟಿನಲ್ಲಿ ಮೂರು ಪಕ್ಷಗಳೂ ಸಹ ಈ ಬೈ ಎಲೆಕ್ಷನ್ ಅನ್ನು ಬಯ್ಯುವ ಎಲೆಕ್ಷನ್ ಹಾಗೂ ಚ್ಠಿ ಎಲೆಕ್ಷನ್ ಆಗಿ ಮಾರ್ಪಡಿಸಿದ್ದೀರಿ. ಈ ಎಲೆಕ್ಷನ್ ಬೊಮ್ಮಾಯಿಯವರ ಮುಂದಿನ ಭವಿಷ್ಯ ಹಾಗೂ ಮುಂದಿನ ಅವಧಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯ ಅಳತೆಗೋಲಾಗಬಹುದಾಗಿತ್ತು. ಪಕ್ಷದ ಒಳಗೆ ಹೊಸ ನಾಯಕತ್ವದ ಬೆಳವಣಿಗೆ ಎಲ್ಲವನ್ನೂ ಪರೀಕ್ಷಿಸಬಹುದಿತ್ತು. ಇನ್ನು ವಿರೋಧ ಪಕ್ಷಗಳಿಗೆ ಮುಂದಿನ ಚುನಾವಣೆಗೆ ಈಗಿನಿಂದಲೆ ವೇದಿಕೆ ಸಿದ್ದಪಡಿಸಕೊಳ್ಳಬಹುದಿತ್ತು. ಸರ್ಕಾರದ ವಿರುದ್ದದ ಜನಾಭಿಪ್ರಾಯದ ಕ್ರೋಢೀಕರಣ, ಅದರ ಸೂಕ್ತ ಮಂಡಿಕೆ ಮಾಡಿ ಒಂದಷ್ಟು ಮತಗಳನ್ನು ಭದ್ರಗೊಳಿಸಬೇಕಿತ್ತು. ಆದರೆ ಚುನಾವಣೆಯನ್ನು ನ್ಯಾಯಯುತವಾಗಿ ಗೆಲ್ಲುವ ಯಾವ ಹಂಬಲವೂ ಈ ಪಕ್ಷಗಳಿಗಿಲ್ಲ ಎಂದು ಅನ್ನಿಸುತ್ತದೆ. ಕೇವಲ ಮುಖಸ್ತುತಿಯ ಮಾತುಗಳು, ಪರರ ನಿಂದನೆಗಳು, ಟೀಕೆಗಳು, ಬೈಯ್ಯುವಿಕೆ, ಪ್ರಚೋದನೆ, ಪ್ರಲಾಪನೆ, ಹಂಗಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸುವುದು, ಸರ್ಕಾರ ವಿರುದ್ಧ ಮಾತನಾಡಿದರೆ ಆತನನ್ನು ಕಾಂಗಿ, ದೇಶದ್ರೋಹಿ ಎಂದು ಬಿಂಬಿಸುವುದು ಇಷ್ಟಕ್ಕೆ ಸೀಮಿತವಾಗಿದೆ ರಾಜ್ಯ ಭಾ.ಜ.ಪ ಎಂಬುದು ವಿಪರ್ಯಾಸ.
ಈ ಬೈಯ್ಯುವ ವಿಚಾರಗಳಿಂದ ಜನರಿಗೆ ಏನು ಉಪಯೋಗವಿಲ್ಲ, ಸಿದ್ದಾಂತ, ಕೆಲಸ ಕಾರ್ಯಗಳು, ನಿಮ್ಮ ಯೋಜನೆಗಳು, ನಿಮ್ಮ ಭವಿಷ್ಯದ ಯೋಚನೆಗಳು ಜನರಿಗೆ ತಲುಪಬೇಕು. ವೈಯಕ್ತಿಕ ಟೀಕೆಗಳನ್ನು, ಏಕವಚನ ಪ್ರಯೋಗಗಳಿಂದ ಹೊರಬಂದು ಜನರಿಗೆ ಉಪಯುಕ್ತವಾದ ಮಾಹಿತಿನೀಡಿ, ಚುನಾವಣಾ ಪ್ರಚಾರಗಳು ಈಗ ದೃಶ್ಯಮಾಧ್ಯಮವೊಂದರ ಹಾಸ್ಯ ಕಾರ್ಯಕ್ರಮದಂತೆ ಮನರಂಜನೆ ನೀಡುತ್ತಿದೆ ಅನ್ನುವುದು ವಾಸ್ತವ ಸತ್ಯ. ವೇದಿಕೆಯ ಮೇಲೆ ಪರರನ್ನು ಟೀಕಿಸಿ ಸಾರ್ವಜನಿಕವಾಗಿ ಚಿಕ್ಕವರಾಗುತ್ತಿದ್ದಾರೆ ಜನನಾಯಕರು. ಯುವ ರಾಜಕಾರಣಿಗಳು ಇಂತಹ ಭಾಷಣಗಳಿಗೆ ಚಪ್ಪಾಳೇ ಶಿಳ್ಳೇ ಹಾಕಿ ಅವರ ನಾಯಕರನ್ನೇ ಹಾಳು ಮಾಡುತ್ತಿದ್ದಾರೆ. ಜನನಾಯಕನ ಮಾತು, ಸಂಸ್ಕಾರ, ಸಂಸಾರ ಮತ್ತು ನಡವಳಿಕೆ ಉನ್ನತವಾಗಿರಬೇಕೆಂಬುದು ನಾಡಿನ ಜನರ ಬಯಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post