ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಹೊಸ ಮಾರಕ ರೋಗ ಸೃಷ್ಟಿಯಾದರೆ ಸಾಕು. ಆಗ ಅದಕ್ಕೆ ವೇದದಲ್ಲಿ ಹಾಗೆ ಹೇಳಿದೆ, ಹೀಗೆ ಹೇಳಿದೆ, ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಇದೆ. ತಾಳೆಗರಿ ಗ್ರಂಥದಲ್ಲಿ ಹೀಗೆ ಬರೆದಿದೆ, ಆ ಔಷಧಿ ಕಂಡು ಹಿಡಿದಿದ್ದೇನೆ ಎಂದು ಪ್ರಜೆಗಳ ಮನಸ್ಸನ್ನು ತಮ್ಮತ್ತ ಬಳಸಿಕೊಳ್ಳುವವರಿಗೇನೂ ಕಡಿಮೆ ಇಲ್ಲ. ಇದನ್ನು ಸಮಸ್ಯೆಗಳ Encashment ಎಂದು ಹೇಳಿದರೆ ತಪ್ಪಾಗದು. ಅವರಿಗೂ ಕಾಳಜಿ ಇಲ್ಲ ಎಂದು ಹೇಳುತ್ತಿಲ್ಲ. ಆದರೆ ರೋಗ ಬಾರದಂತಹ ಚಿಕಿತ್ಸೆ, ಔಷಧಿ ಪ್ರಯೋಗವನ್ನು ತಿಳಿಸಬೇಕಾಗಿದೆ. ಬಂದ ಮೇಲೆ ಔಷಧಿ ಮಾಡುವ, ಕೊಡುವ ಪ್ರಯತ್ನವನ್ನು ವೈದ್ಯರೂ ಮಾಡುತ್ತಾರೆ, ರೋಗಿಯೂ ಮಾಡಿಕೊಳ್ತಾನೆ ಬಿಡಿ. ಆದರೆ ನಮ್ಮ ಧರ್ಮಶಾಸ್ತ್ರದಲ್ಲಿ ಇರುವ ಅನೇಕ ವೃತ ನಿಯಮಗಳು, ಆಚರಣೆಗಳು, ಆಹಾರ ನಿಯಮಗಳ ಬಗ್ಗೆ ಆಗಾಗ ತಿಳಿಸುವಂತಹ ಕೆಲಸಗಳಾಗಬೇಕಿದೆ.
ಈಗ ಒಂದು ಮಹಾರೋಗಾಣು ಕರೋನ ವೈರಸ್ ಎಂಬುದು ಚೀನಾ ದೇಶದಲ್ಲಿ ಹುಟ್ಟಿ ಜಗತ್ತಿಗೇ ಮಾರಕವಾಗುತ್ತಿದೆ.
ಹುಳ ಹುಪ್ಪಟೆಯಿಂದ ಹಿಡಿದು, ಗೋವಿನವರೆಗೆ ಹಿಂಸೆ ನೀಡಿ ಭಕ್ಷಣೆ ಮಾಡಿದರೆ ಇಂತಹ ದರಿದ್ರ ಮಾರಕ ರೋಗ ಬರುತ್ತದೆ ಎಂಬುದನ್ನು ಈಗ ಚೈನಾ ದೇಶ ತೋರಿಸಿದಂತಾಗಿದೆ. ಈಗ ಇಲ್ಲಿಯೂ ಚೈನೀಸ್ ಫುಡ್ ಎಂದು ಮರುಳಾಗುವ ಗಿರಾಕಿಗಳಿಗೇನೂ ಕಡಿಮೆ ಇಲ್ಲ ಬಿಡಿ. ಹಾಗೆಯೇ ಮಾರಕ ರೋಗ ತಗುಲುವ ಜನರೂ ಬರಲಿದ್ದಾರೆ ಎಂಬ ಸೂಚನೆ ಇದು.
ಯಾರೋ ಒಬ್ಬ ಗುರೂಜಿಯು, ಗೋಮೂತ್ರದಿಂದ ಗುಣವಾಗುತ್ತದೆ, ಅದಕ್ಕೆ ಇನ್ನೂ ಅನೇಕ ಗಿಡ ಮೂಲಿಕೆಗಳನ್ನು ಸೇರಿಸಿ ಕುಡಿಯಬೇಕು ಎಂದು ತಾಳೆಗರಿ ಗ್ರಂಥದಲ್ಲಿ ಉಲ್ಲೇಖಿಸಿದೆ ಎಂದರು. ಮುಂದೊಂದು ದಿನ ಆ ಔಷಧಿ ತಯಾರಾಗಿದೆ. ಬನ್ನಿ ಕುಡಿದು ರೋಗ ಮುಕ್ತರಾಗಿರಿ ಎಂದು ಬಾಟ್ಲಿಗಳಲ್ಲಿ ತುಂಬಿಸಿ ಮಾರುಕಟ್ಟೆಗೆ ವಿತರಿಸಿ ಧನ ಸಂಪಾದನೆಯನ್ನೂ ಮಾಡಬಹುದು. ಇದು ರೋಗ ಪೀಡಿತನಿಂದ ಪಡೆಯುವ ಲಾಭ (Encashment) ಬುದ್ಧಿವಂತಿಕೆಯೂ ಆಗುತ್ತದೆ. ಆದರೆ ಈ ಸಲಹೆ ನೀಡಿರುವವರು ಯಾವ ಗ್ರಂಥಗಳ ಆಧಾರ ಎಂದು ಹೇಳುವುದಿಲ್ಲ ಅಥವಾ ಅಂತಹ ಔಷಧೀಯ ಪ್ರಯೋಗ ಇದೆಯೋ ಇಲ್ಲವೋ ಅದೂ ಗೊತ್ತಿಲ್ಲ.
ಜಗತ್ತಿನಲ್ಲಿ ರೋಗ ಜನಕ ಸಸ್ಯಗಳೂ ಇವೆ, ರೋಗ ನಿವಾರಕವೂ ಇದೆ. ರೋಗ ಜನಕದಿಂದಲೂ ಕೆಲ ಸಂದರ್ಭದಲ್ಲಿ ರೋಗ ನಿವಾರಣಾ ಔಷಧಿಯೂ ಸಿಗಬಹುದು. ರೋಗ ಹರಣ ಔಷಧಿಯಲ್ಲೂ ರೋಗ ಸೃಷ್ಟಿಯೂ ಆಗಬಹುದು. ಅದಕ್ಕೇ ಧನ್ವಂತರಿಯಲ್ಲಿ ಯಾವ ಕಾಲಕ್ಕೆ ಯಾವುದು ಸೂಕ್ತ ಎಂಬುದನ್ನೂ ತಿಳಿಸಿದ್ದಾರೆ.
ನಾಸ್ತಿ ಮೂಲ ಮನೌಷಧಿಂ. ಸಂಯೋಜಕ ಸ್ತತ್ರ ದುರ್ಲಭ ಎಂಬಂತೆ ಸಂಯೋಜನೆಯು ಸರಿ ಇರಬೇಕು. ಆದರೆ ಸರ್ವಕಾಲಿಕ ರೋಗ ನಿರೋಧಕ ಶಕ್ತಿ ವೃದ್ಧಿ ಮಾಡುವ ಒಂದು ಪದ್ಧತಿಯು ನಮ್ಮ ಸನಾತನದಲ್ಲಿದೆ.
ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬ ತತ್ವದಲ್ಲಿ ನಮ್ಮ ಎಲ್ಲಾ ಪೂಜಾ ಕಾರ್ಯಗಳು, ಯಜ್ಞ ಯಾಗಾದಿ ಕರ್ಮಗಳು ನಡೆಯುವ ಮೊದಲ ಹಂತವೇ ಪುಣ್ಯಾಹ ವಾಚನ, ಪಂಚಗವ್ಯ ಶುದ್ಧಿಯಾಗಿರುತ್ತದೆ. ಈಗೀಗ ಪಂಚಗವ್ಯ ಸ್ಯಾಶೆಗಳಲ್ಲಿ, ಬಾಟ್ಲಿಗಳಲ್ಲಿ ತುಂಬಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದು ವ್ಯಾಪಾರಕ್ಕೇ ಸೀಮಿತ.
ಆದರೆ ನಿಜವಾದ ಪಂಚಗವ್ಯ ಮಿಶ್ರಣದ ರೂಪವೇ ಬೇರೆ. ಗ್ರಂಥಗಳಲ್ಲಿ ಹೇಳುವ ಕ್ರಮದಲ್ಲಿ ಮಾಡಲು ಈಗಿನ ಕಾಲದಲ್ಲಿ ಅಸಾಧ್ಯ. ಆದರೂ ನಾನಿಲ್ಲಿ ಅದರ ಮಿಶ್ರಣದ ಪ್ರಮಾಣ, ಮಂತ್ರಗಳ ಬಗ್ಗೆ ಸ್ವಲ್ಪ ತಿಳಿಸಬೇಕಾಗುತ್ತದೆ.
ಪಂಚಗವ್ಯ ಸಾಹಿತ್ಯಗಳು-
ಗೋ ಮೂತ್ರ
ಗೋಮಯ
ಗೋ ಕ್ಷೀರ
ಗೋ ಘೃತ
ಗೋ ದಧಿ.
ದರ್ಬೆ, ಅಶ್ವತ್ಥದ ಚಿಗುರು, ಮಾವಿನ ಚಿಗುರು, ಹಲಸಿನ ಚಿಗುರು, ಸ್ವರ್ಣ, ಪೂಗ ಫಲ, ತೆಂಗಿನ ಕಾಯಿ, ವೀಳ್ಯದೆಲೆ, ತುಳಸಿ ಇತ್ಯಾದಿ.
ಇಲ್ಲಿ ಉಲ್ಲೇಖಿಸಿದ ಗೋ ಸಾಹಿತ್ಯ(products) ಬಗ್ಗೆ ಹೇಳುವುದಾದರೆ- ಜರ್ಸಿ, ಹಾಸ್ಟಿನ್, ರೆಡ್ಡೆನ್ ಇತ್ಯಾದಿ ನವೀನ ತಳಿ ಗೋವುಗಳಲ್ಲ. ಪೂರ್ಣ ಕಪಿಲೆ ಹಸುವಾಗಿರಬೇಕು. ಇಲ್ಲಿಯೂ ಕಪಿಲ ವರ್ಣದ ಹಸುವಿನ ಬಗ್ಗೆ ಇನ್ನೂ ಆಳವಾದ ವಿಚಾರವಿದೆ. ಕಪ್ಪು ದನದ ಕರು ಕಪಿಲೆ ವರ್ಣದಲ್ಲಿ ಹುಟ್ಟಿ, ಅದರ ಕರು ಕಪ್ಪುವರ್ಣದಲ್ಲಿ ಹುಟ್ಟಿ ಏಳನೆಯ ಸಂತತಿಯ ಕಪಿಲ ವರ್ಣದ್ದಾದರೆ ಅದಯ ಪೂರ್ಣ ಕಪಿಲಾ ಕಾಮಧೇನುವಾಗುತ್ತದೆ. ಆದರೆ ಇದೆಲ್ಲ ಸಾಧ್ಯವಾಗದ್ದು ಬಿಡಿ. ಔಷಧಿಯ ವಿಚಾರದಲ್ಲಿ ಇಂತದ್ದನ್ನು ಹೇಳಿದೆ.
ಈಗಿನ ಗಿರ್ ತಳಿ, ಮಲೆನಾಡು ಗಿಡ್ಡ, ಹಳ್ಳಿಗಾರ್, ಪೊಂಗನಾರ್ ತಳಿ ಇತ್ಯಾದಿಗಳು ಕಪಿಲೆ ಅಲ್ಲದಿದ್ದರೂ ನೈಜ ಗೋತಳಿಯಾಗುತ್ತದೆ. ಈ ತಳಿಗಳ ಗೋ ಮೂತ್ರ, ಗೋಮಯ, ಗೋಕ್ಷೀರ, ಗೋ ಘೃತ, ಗೋ ದಧಿ ಔಷದೀಯ ಗುಣ ಉಳ್ಳದ್ದು. ಸಮ ಪ್ರಮಾಣ ಆದರೆ ಔಷಧಿ. ಹೆಚ್ಚಾದರೆ ಬೇಧಿ ರೋಗ!
ಈ ಸಾಹಿತ್ಯಗಳನ್ನು ಮೇಲನಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ವೇದಮಂತ್ರ ಪಠಿಸುತ್ತಾ ಮೇಲನಗೊಳಿಸಬೇಕು. ಮೇಲನ ಎಂದರೆ mixing. ಮೇಲನಕ್ಕೆ ಕುಡುಗೋಲು ಬೇಕು. ಅದು ಪವಿತ್ರ ಬಂಧದಲ್ಲಿ ಮಾಡಿದ ಹಸಿ ದರ್ಭೆಯ ಕುಡುಗೋಲು ಆಗಬೇಕು. ಶಾಸ್ತ ಪ್ರಮಾಣ-
ಉದಾಃ 1 ltr ಬೇಕಿದ್ದಾಗ ಗೋಮೂತ್ರ, ಗೋಮಯ, ಗೋ ಘೃತ, ಗೋ ಕ್ಷೀರ, ಗೋ ದಧಿ ಕ್ರಮವಾಗಿ
1:0.5:1:7:3 ಈ ratio ಬೇಕು.
೧ ಭಾಗ ಗೋ ಮೂತ್ರ
ಅದರ ಅರ್ಧ ಭಾಗ ಗೋಮಯ
ಗೋಮೂತ್ರದ ಸಮಭಾಗ ಆಕಳ ತುಪ್ಪ
ಇದರ ಏಳು ಪಟ್ಟು ಹಾಲು
ಇದರ ಮೂರು ಪಟ್ಟು ಮೊಸರು.
(1+ .05+ 1+ 7+3.).
ಇಷ್ಟನ್ನು ಮಂತ್ರೋಕ್ತವಾಗಿ ತಯಾರಿಸಿ ರೋಗಗ್ರಸ್ತನಿಗೆ ಮೊದಲು ಸಪ್ತತೀರ್ಥ ಕಲಶದ ಮೂಲಕ ಸ್ನಾನ ಮಾಡಿಸಿ ನಂತರ ಇದನ್ನು ಪ್ರಾಶನ ಮಾಡಿಸಬೇಕು. ಇನ್ನೊಂದು ವಿಧಾನದಲ್ಲಿ ದೊಡ್ಡ ಹಂಡೆಯೊಳಗೆ ಯಜಮಾನನನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ ಈ ದ್ರವ್ಯೌಷಧಿಯನ್ನು ಅಭಿಷೇಕ ಮಾಡಬೇಕು ಎಂದೂ ಹೇಳಿದೆ. ಸಾಮಾನ್ಯವಾಗಿ ಈಗ ಇಲ್ಲಿ ಹೇಳಿದ ಪ್ರಮಾಣಾನುಸಾರ ಮಾಡುವುದಿಲ್ಲ. ಆದರೂ ಮಂತ್ರೋಕ್ತ ಪೂರಣ ಮೂಲಕ ಆಯಾಯ ದ್ರವ್ಯಗಳ ಅಭಿಮಾನಿ ದೇವತೆಗಳನ್ನು ಆವಾಹಿಸಿ ಕಲಶ ಪೂಜನ ಮಾಡಿ ಪ್ರಾಶನ ಮಾಡಿಸುತ್ತಾರೆ. ಪ್ರಾಶನವೂ ಮಾವಿನ ಎಲೆಯ ಮೂಲಕವೇ ಆಗಬೇಕು.
ಇಲ್ಲಿ ಹೇಳಿರುವ ಅಶ್ವತ್ಥ, ಹಲಸು, ಮಾವಿನ ತುದಿ(ಚಿಗುರು)ಗಳನ್ನು ಈ ಪಂಚಗವ್ಯ ಮಿಶ್ರಣದಲ್ಲಿ ಇಡಬೇಕು. ಅಂದರೆ ಕತ್ತರಿಸಿದ ಭಾಗ ಈ ಮಿಶ್ರಣದೊಳಗೆ ಮುಳುಗಿರಬೇಕು. ಇದರಲ್ಲಿ ವಿಶೇಷವಾದ liquid oxygen ಇರುತ್ತದೆ. ಅದು ಈ ಮಿಶ್ರಣದಲ್ಲಿ ಸೇರಿಕೊಂಡಾಗ, ಮಂತ್ರದ ಕಂಪನ(vibration)ದಲ್ಲಿ ಪಂಚಗವ್ಯ ಕಲಶಕ್ಕೆ ಶಕ್ತಿ ಬರುತ್ತದೆ.
ಈ ಗೋ ಸಾಹಿತ್ಯದಲ್ಲಿರುವ ಅಭಿಮಾನಿ ದೇವತೆಗಳು-ಗೋಮೂತ್ರದಲ್ಲಿ ಸವಿತೃ(ರವಿ) ಇದ್ದು, ಧೀಶಕ್ತಿವರ್ಧನೆ ಮಾಡುತ್ತಾನೆ. ಗೋಮಯದಲ್ಲಿ ವಾಯುದೇವರ ಸಾನ್ನಿಧ್ಯ ಇದ್ದು, ಗ್ರಹಣ ಸಾಮರ್ಥ್ಯ ಹೆಚ್ಚಿಸುತ್ತಾನೆ. ಗೋ ಕ್ಷೀರ( ಹಾಲು)ದಲ್ಲಿ ಸೋಮ ದೇವತೆಗಳಿದ್ದು ಔಷಧಿಯ ತತ್ವದಲ್ಲಿ ಇರುತ್ತಾರೆ. ಗೋ ದಧಿ(ಮೊಸರು)ಯಲ್ಲಿ ಶುಕ್ರ ಸಾನ್ನಿಧ್ಯ ಇದ್ದು ಆಯುಸ್ಸನ್ನು ವೃದ್ಧಿ ಮಾಡುತ್ತಾರೆ. ಗೋ ಘೃತದಲ್ಲಿ ಅಗ್ನಿದೇವರ ಸಾನ್ನಿಧ್ಯ ಇದ್ದು ತೇಜಸ್ಸು ಕಾರಕತ್ವ ಹೆಚ್ಚಾಗುತ್ತದೆ. ಸವಿತೃವನ್ನು ರವಿ ಗ್ರಹದಿಂದ, ಸೋಮನನ್ನು ಚಂದ್ರಗ್ರಹದಿಂದ, ಮೊಸರಿನಲ್ಲಿ ಶುಕ್ರಗ್ರಹವನ್ನು, ವಾಯುವಿನಿಂದ ಶನಿಯನ್ನು, ಅಗ್ನಿಯಿಂದ ಕುಜನನ್ನು ತಿಳಿಯಬೇಕು. ಪಂಚಾಮೃತ, ಪಂಚಗವ್ಯಗಳಲ್ಲಿ ಸಪ್ತಗ್ರಹ ತತ್ವಗಳಿವೆ. ಇದು ಪಂಚಭೂ ತತ್ವಗಳಾಗುತ್ತದೆ. ಈ ಮಿಶ್ರಣದಲ್ಲಿ ತುಳಸಿಗೆ ಬಹಳ ಪ್ರಾಶಸ್ತ್ಯ ಇದೆ. ತುಳಸಿಯಿಂದ ಅರ್ಚನೆ ಆರಾಧನೆ ಮಾಡುತ್ತಾರೆ. ಅಲ್ಲದೆ ಕಲಶದೊಳಗೂ ತುಳಸೀದಳ ಹಾಕಬೇಕು. ತುಳಸಿಯು ಬುಧಗ್ರಹನ ತತ್ವವಾಗುತ್ತದೆ.
ಇಂತಹ ಪಂಚಗವ್ಯ ಪ್ರಾಶನ ಪ್ರತೀ ಪಕ್ಷದಲ್ಲಿ ಏಕಾದಶಿ, ಉಪವಾಸಾದಿ ವೃತಗಳನ್ನು ಸಮಾಪನಗೊಳಿಸಿದ ಮೇಲೆ ಪ್ರಾಶನ ಮಾಡಬೇಕು. ಇದು ಅಸಾಧ್ಯವಾದರೆ, ಪ್ರತಿ ತಿಂಗಳು ಅಥವಾ ಪರ್ವಾದಿ ದಿನಗಳು, ಆಯನಾರಂಭಗಳಲ್ಲಿ ಪ್ರಾಶನ ಮಾಡಿದರೆ ಉತ್ತಮ. ಅದೂ ಅಸಾಧ್ಯವಾದರೆ ವರ್ಷಕ್ಕೊಮ್ಮೆಯಾದರೂ ಮಾಡಬೇಕು. ಪಾಪ ಇಷ್ಟು ಖರ್ಚು ಮಾಡಲು ಅಸಾಧ್ಯವಾದ ಬಡವನಿಗೇನು ಪರಿಹಾರ? ಪಕ್ಕದ ದೇವಸ್ಥಾನಗಳಲ್ಲಿ ಪರ್ವಾದಿ ದಿನಗಳಲ್ಲಿ ಮಾಡುತ್ತಾರೆ. ಅಲ್ಲೇ ಹೋಗಿ ದೇವರನ್ನು ಸ್ಮರಿಸಿ ಪ್ರಾಶನ ಮಾಡಿದರಾಯ್ತು.
ಪ್ರಾಶನಾ ಮಂತ್ರಃ
ಯತ್ವಗಸ್ಥಿ ಸ್ಥಿತಂ ಪಾಪಂ
ದೇಹೇ ತಿಷ್ಢತಿ ಮಾಮಕೇ|
ಪ್ರಾಶನಾತ್ ಪಂಚಗವ್ಯಸ್ಯ
ದಹತ್ಯಗ್ನಿರಿವೇಂಧನಂ ||
ಸರ್ವೇ ಜನಾಃ ಸುಖಿನೋ ಭವಂತು.
ರೋಗಮುಕ್ತ ಜೀವನಂ ಪ್ರಾಪ್ತಿರಸ್ತು
Get in Touch With Us info@kalpa.news Whatsapp: 9481252093
Discussion about this post