ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿರಿಯೂರು: ತಾಲೂಕಿನ ಸುಪ್ರಸಿದ್ಧ ಶ್ರೀ ಪಾರ್ಥಲಿಂಗೇಸ್ವಾಮಿ ಕಾಳ ಹಬ್ಬ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಸಂಪನ್ನಗೊಂಡಿದೆ.
ತಾಲೂಕಿನ ಜವಗೊಂಡನಹಳ್ಳಿ ಹೋಬಳಿಯ ಕಾಟನಾಯಕನಹಳ್ಳಿ ಗ್ರಾಮದ ಗುಡಿಕಟ್ಟಿನ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಪಾರ್ಥಲಿಂಗೇಶ್ವರ ಕಾಳಹಬ್ಬ ವಿಶೇಷವಾಗಿ ನಡೆಯುತ್ತದೆ.
ಶ್ರೀ ರಾಮದೇವರಿಗೆ 101 ಎಡೆಗಳ ಪೂಜೆ ಹಾಗೂ ವಿವಿಧ ಪೂಜೆ ಕೈಂಕಾರ್ಯಗಳು ನಡೆದಿದ್ದು, ಕಳೆದ ಭಾನುವಾರ ರಾತ್ರಿ ಶ್ರೀ ದೇವರುಗಳಿಗೆ ಅಣ್ಣ ತಮ್ಮಂದಿರು ಹಾಗೂ ಭಕ್ತರಿಂದ ಕಾಳಿನ ನೈವೇದ್ಯ ಪೂಜೆ ನಡೆದವು.
ಆನಂತರ ಸ್ವಾಮಿಗೆ ಪಟ್ಟಾಭಿಷೇಕ ಮತ್ತು ದೇವಸ್ಥಾನದಲ್ಲಿ ಬೇಯಿಸಿದ ಕಾಳು ಭಕ್ತರಿಗೆ ವಿತರಿಸಲಾಗಿದೆ. ಇನ್ನು, ಗುರುವಾರ ಅಣ್ಣ-ತಮ್ಮಂದಿರುಗಳು ಮತ್ತು ಭಕ್ತರಿಂದ ಅಕ್ಕಿ ಮೀಸಲು ಮತ್ತು ವೆಚ್ಚವನ್ನು ತೆಗೆದುಕೊಂಡಿದ್ದು, ಶ್ರೀ ರಾಮದೇವರು, ಶ್ರೀಪಾರ್ಥಲಿಂಗಸ್ವಾಮಿ ಮತ್ತು ಹಳ್ಳಿ ಕರಿಯಮ್ಮ ದೇವರುಗಳಿಗೆ ವಿಶೇಷ ಪೂಜೆ ದೇವಸ್ಥಾನ ದೀಪಾಲಾಂಕಾರದಿಂದ ಶೃಂಗರಿಸಲಾಗಿತ್ತು.
ವಿಶೇಷವಾಗಿ ನಿನ್ನೆ ಬೆಳಗ್ಗೆ ದೇವರುಗಳ ಹೂವಿನ ಹರಾಜು ಮಾಡಲಾಯಿತು. ಭಕ್ತರು ತಂಬಿಟ್ಟುಗಳನ್ನು ತಯಾರು ಮಾಡಿಕೊಂಡು ಬಂದಿದ್ದರು. ಹಬ್ಬದ ವಿಶೇಷ ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ತಂಬಿಟ್ಟು ತಯಾರು ಮಾಡಿ ಆರತಿ ಬೆಳಗುವುದು ಇಲ್ಲಿ ವಿಶೇಷವಾಗಿರುತ್ತದೆ. ಅಕ್ಕಿ ಹಿಟ್ಟು ಯಂತ್ರಗಳ ಸಹಾಯ ಇಲ್ಲದೇ ಬೀಸುವ ಕಲ್ಲುಗಳಿಂದ ಹಿಟ್ಟು ತಯಾರು ಮಾಡಿಕೊಳ್ಳುತ್ತಾರೆ. ಸಾಕಷ್ಟು ಯಂತ್ರಗಳು ಬಂದರು ಈ ಗ್ರಾಮದಲ್ಲಿ ಮಾತ್ರ ಅಕ್ಕಿ ಹಿಟ್ಟುನ್ನು ಬೀಸುವಕಲ್ಲುಗಳಿಂದ ಬೀಸುತ್ತಾರೆ.
ಅನಾದಿ ಕಾಲದಿಂದಲೂ ನಡೆದು ಬಂದ ಪದ್ದತಿಯಂತೆ ಭಕ್ತರು ಬೆಳಗ್ಗೆ ಮಡಿ ಸ್ನಾನ ಮುಗಿಸಿ, ಊಟ ಸೇವಿಸದೆ ಬೀಸುವ ಕಲ್ಲುಗಳನ್ನು ತೊಳೆದು ಪೂಜೆ ಮಾಡಿ ದೇವಸ್ಥಾನದ ಉಗ್ರಾಣದಲ್ಲಿ ಬೀಸುವ ಕಲ್ಲಿನಿಂದ ಅಕ್ಕಿ ಬೀಸುತ್ತಾರೆ. ಅಕ್ಕಿ ಬೀಸುವಾಗ ಮಾತನಾಡಬಾರದು ಎನ್ನುವ ಉದ್ದೇಶ ಮತ್ತು ಪದ್ದತಿಯಂತೆ ಬಾಯಿಗೆ ಬಟ್ಟೆ ಕಟ್ಟಿಕೊಂಡು ಅಕ್ಕಿ ಬೀಸುವುದು ವಿಶೇಷ.
ಬೀಸಲಾದ ಅಕ್ಕಿಯ ಗಂಟನ್ನು ಹೊತ್ತುಕೊಂಡು, ದೇವರ ಪಲ್ಲಕ್ಕಿ ಜೊತೆಯಲ್ಲಿ ಬರಿಗಾಲಿನಲ್ಲಿ ಸಿರಾ ತಾಲೂಕಿನ ದಂಡಿಕೆರೆ ಗ್ರಾಮದ ವೀರದಂಡಣ್ಣ ದೇವರ ಸನ್ನಿಧಿಗೆ ತೆರಳುತ್ತಾರೆ. ಅಲ್ಲಿಗೆ ಬರುವ ಭಕ್ತರು ಎತ್ತಿನ ಬಂಡಿಗಳಲ್ಲಿ, ಟ್ಯಾಕ್ಕರ್ ಮೂಲಕ ಟಾಟಾ ಏಸುಗಳಲ್ಲಿ ಭಕ್ತರು ಬಂದು ಸೇರುತ್ತಾರೆ. ನಂತರ ದೇವಸ್ಥಾನದ ಸಮೀಪ ಇರುವ ಸುವರ್ಣ ಮುಖಿಯಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಅಕ್ಕಿ ಹಿಟ್ಟಿನಲ್ಲಿ ಪಡಿಯಾರತಿ ಮಾಡುತ್ತಾರೆ. ನಂತರ ವೀರದಂಡಣ್ಣ ದೇವರಿಗೆ ವಿಶೇಷ ಪೂಜೆ ಮುಗಿಸಿ ನಿಂಗಣ್ಣ ದೇವಸ್ಥಾನದ ಹತ್ತಿರ ಭಕ್ತರೆಲ್ಲರು ತೆರಳುತ್ತಾರೆ. ದೇವಸ್ಥಾನದಲ್ಲಿ ಹುಂಡೆ ಮಂಡೆ ಮುಗಿಸಿ ದೇವರಿಗೆ ಆರತಿ ಬೆಳಗಿ ಕಟ್ಟಿಕೊಂಡ ಬಂದ ಬುತ್ತಿಯನ್ನು ಸ್ವೀಕರಿಸಿ, ನಂತರ ಭಕ್ತರು ಕಾಟನಾಯಕನಹಳ್ಳಿ ಗ್ರಾಮಕ್ಕೆ ಹಿಂದಿರುಗುತ್ತಾರೆ. ಆನಂತರ ಪಲ್ಲಕ್ಕಿ ಉತ್ಸವ ಮತ್ತು ಕುದುರೆ ಅರಿಸೇವೆ ನಂತರ ಬಾಳೆ ಹಣ್ಣು ಸಕ್ಕರೆ ತುಪ್ಪದಿಂದ ತಯಾರು ಮಾಡಿ ಪ್ರಸಾದ ಹಂಚಲಾಯಿತು.
ಸೋಮವಾರ ಭಕ್ತರಿಗೆ ಅಣ್ಣತಮ್ಮಂದಿರರಿಗೆ ಹಣ್ಣು ಕಾಯಿ ಪ್ರಸಾದ ವಿತರಿಸಲಾಗುತ್ತದೆ. ಬೇರೆ ಬೇರೆ ಊರುಗಳಿಂದ ಬಂದ ಅಣ್ಣ-ತಮ್ಮಂದಿರರು ತಮ್ಮ ಗ್ರಾಮಗಳಿಗೆ ತೆರಳುತ್ತಾರೆ.
ಹಲವು ತಲಮಾರುಗಳಿಂದ ಈ ಗ್ರಾಮದಲ್ಲಿ ಶ್ರೀ ಪಾರ್ಥಲಿಂಗೇಶ್ವರ ಸ್ವಾಮಿ ಕಾಳಹಬ್ಬವನ್ನು ಅಣ್ಣತಮ್ಮಂದಿರು ಭಕ್ತರು ಸೇರಿ ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಬೀಸುವಕಲ್ಲಿನಿಂದ ಅಕ್ಕಿಬೀಸಿ ಹಿಟ್ಟು ತಯಾರಿಸಿ ಪಡಿ ಆರತಿ ಮಾಡಿ ದೇವರಿಗೆ ಬೇಳಗುವ ಪದ್ದತಿ ಇಲ್ಲಿ ನಾವು ಕಾಣಬಹುದು.
-ಮೂಡಲಗಿರಿಯಪ್ಪ, ಭಕ್ತಪಾರ್ಥಲಿಂಗೇಶ್ವರಸ್ವಾಮಿ ಹಿಂದೆ ಉಪ್ಪಾರ ನಿಂಗಣ್ಣಯನ್ನು ಭಕ್ತಿನಿಗೆ ಒಳಿದಿತ್ತು ಅವರ ಮನೆಯಲ್ಲಿ ನಿಂಗಣ್ಣನ ಮನೆಯಲ್ಲೂ ಬಂಗಾರ ತುಂಬಿ ತುಳುಕುತ್ತಿತ್ತು. ನಿಂಗಣ್ಣನಿಗೆ ಭಕ್ತಿ ಕಡಿಮೆಯಾಗಿ, ಗೊಲ್ಲರ ಒಲಿದು ಈ ಗ್ರಾಮದಲ್ಲಿ ನೆಲಿಸಿತು. ಬಹಳ ಶಕ್ತಿಯುತವಾದ ದೇವರು ಎಂದು ನಮ್ಮ ತಂದೆಯವರು ಹೇಳುತ್ತಿದ್ದರು.
-ಪೂಜಾರ್ ಪಾತಣ್ಣ, ಕಾಟನಾಯಕನಹಳ್ಳಿ
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post