ಕಲ್ಪ ಮೀಡಿಯಾ ಹೌಸ್ | ವಿಜಯಪುರ |
“ಜಮೀರ್ ಅಹ್ಮದ್ #Zameer Ahmed ಬಾಂಬ್ ಬೆನ್ನಿಗೆ ಕಟ್ಟಿಕೊಂಡು ಪಾಕ್ಗೆ ಹೋಗಬೇಕಿಲ್ಲ. ಭಾರತೀಯ ಸೇನೆ ಮೇಲೆ ವಿಶ್ವಾಸವಿರಿಸಿ ಸುಮ್ಮನಿದ್ದರೆ ಸಾಕು. ದೇಶಕ್ಕೆ ಅದೇ ಅವರ ದೊಡ್ಡ ಸೇವೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Union Minister Pralhad Joshi ಪ್ರತಿ ಕ್ರಿಯಿಸಿದರು.
ವಿಜಯಪುರದ ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಚಿವ ಜಮೀರ್ ಪಾಕಿಸ್ತಾನದ ಜತೆ ಯುದ್ಧಕ್ಕೆ ಹೋಗಬೇಕಿಲ್ಲ. ಬದಲಾಗಿ ನಮ್ಮ ದೇಶದ ಸೇನೆ ಮೇಲೆ ನಂಬಿಕೆಯಿಟ್ಟು ಶಾಂತವಾಗಿದ್ದರೆ ಅದೇ ದೇಶಕ್ಕೆ ಸಲ್ಲಿಸುವ ಅತಿ ದೊಡ್ಡ ಸೇವೆ ಎಂದು ಟಾಂಗ್ ಕೊಟ್ಟರು.

ಜಮೀರ್ ದೊಡ್ಡ ತ್ಯಾಗಿ ಅನ್ನೋದು ಗೊತ್ತಿದೆ: “ಪ್ರಧಾನಿ ಮೋದಿ ಅವರು ಅವಕಾಶ ಕೊಟ್ಟರೆ ಪಾಕ್ ವಿರುದ್ಧ ಯುದ್ಧಕ್ಕೆ ನಾನು ರೆಡಿʼ ಎಂದಿರುವ ಹಮೀರ್ ಅಹ್ಮದ್ ದೊಡ್ಡ ತ್ಯಾಗಿ ಎನ್ನುವುದು ಗೊತ್ತಿದೆ. ಅವರಂಥ ಮಹಾನ್ ತ್ಯಾಗಿ ಯಾರೂ ಇಲ್ಲ. ನಮ್ಮ ಸೈನ್ಯದ ಮೇಲೆ ನಂಬಿಕೆಯಿಟ್ಟು ಸುಮ್ಮನಿದ್ದರೆ ಸಾಕಷ್ಟೇ ಎಲ್ಲವನ್ನೂ ಸೈನ್ಯವೇ ನಿಭಾಯಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.

ಪಾಕ್ ಮೇಲೆ ಅಟ್ಯಾಕ್ ಮಾಡಿ ಅಂತಿದ್ದಾರೀಗ: ಪಹಲ್ಗಾಮ್ ದಾಳಿಯಾಗುತ್ತಲೇ ಪಾಕಿಸ್ತಾನದ ವರಸೆಯಲ್ಲಿ ಮಾತನಾಡಿದ ಕಾಂಗ್ರೆಸ್ಸಿಗರು, ಜನರ ಬಾಯಿಗೆ ಆಹಾರವಾದರು. ಈಗ ಪಾಕಿಸ್ತಾನದ ಮೇಲೆ ಅಟ್ಯಾಕ್ ಮಾಡಬೇಕು ಅಂತಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ನಿಲುವಿಗೆ ಬದ್ಧ ಎಂದರೆ, ಇಲ್ಲಿ ಗುಪ್ತಚರ ದಳ ವೈಫಲ್ಯ ಎಂದು ದೂರುತ್ತಿದ್ದಾರೆ. ಆದರೆ, ಯುಪಿಎ ಅವಧಿಯಲ್ಲಾದ ಮುಂಬೈ ದಾಳಿಯಂತಹ ಭಯೋತ್ಪಾದನಾ ಚಟುವಟಿಕೆ ದೇಶದಲ್ಲೆಲ್ಲೂ ನಡೆಯಲು ಬಿಟ್ಟಿಲ್ಲ. ಸಂಪೂರ್ಣ ನಿಗ್ರಹಿಸುತ್ತಿದ್ದೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ತೇವೆ: ದೇಶದಲ್ಲಿ ಭಯೋತ್ಪಾದನೆ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನಿಲುವು ಮುಖೇನ ಸ್ಟ್ರೋಕ್ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ನವರು ಸಿಂಧು ನದಿ ನೀರು ಎಲ್ಲಿ ಹಿಡಿದಿಟ್ಟುಕೊಳ್ಳುತ್ತೀರಿ? ಎನ್ನುತ್ತ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬಿಡುವಂತೆ ಹೇಳುತ್ತಿದ್ದಾರೆ. ಸಿಂಧು ನದಿ ನೀರಿಲ್ಲದಿದ್ರೆ ಏನಾಗುತ್ತದೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಿದೆ. ಆದರೆ ಈ ಕಾಂಗ್ರೆಸ್ನವರಿಗೆ ಗೊತ್ತಾಗುತ್ತಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಪ್ರಕ್ಶುಬ್ಧತೆ: ರಾಜ್ಯದಲ್ಲಿ ಸದ್ಯಕ್ಕೆ ಪ್ರಕ್ಶುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ಯೆ, ಕೊಲೆ-ಸುಲಿಗೆ, ಅತ್ಯಾಚಾರ, ಗುಂಪು ಘರ್ಷಣೆಯಿಂದಾಗಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೆಲ್ಲ ವೋಟ್ ಬ್ಯಾಂಕ್ ರಾಜಕಾರಣ ಮತ್ತು ರಾಜ್ಯ ಸರ್ಕಾರದ ತುಷ್ಟೀಕರಣದ ಪ್ರಭಾವ ಎಂದು ಪ್ರಲ್ಹಾದ ಜೋಶಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post