ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಜಲಾಶಯದಿಂದ 39017 ಕ್ಯೂಸೆಕ್ ಹೊರ ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾವತಿಯ ಹೊಸ ಸೇತುವೆ ಮೇಲ್ಬಾಗದ ಹಂತಕ್ಕೆ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ.
ಇಂದು ಬೆಳಿಗ್ಗೆ ಹೊಸ ಸೇತುವೆ ಮೇಲ್ಬಾಗದ ಹಂತಕ್ಕೆ ನದಿ ನೀರು ಹರಿಯುತ್ತಿದ್ದು, ಈ ಕಾರಣದಿಂದ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರವಾಹ ಭೀತಿ ಸೃಷ್ಟಿಸಿದೆ.ಎಷ್ಟು ನೀರು ಹರಿವು?
ಅಣೆಕಟ್ಟೆಗೆ ಅಪಾರ ಪ್ರಮಾಣದ ಒಳಹರಿವು ಇರುವುದರಿಂದ ಕ್ರಸ್ಟ್ ಗೇಟ್ ಮೂಲಕ 34306 ಕ್ಯೂಸೆಕ್ಸ್ ಬಿಡುಗಡೆ ಮಾಡಲಾಗುತ್ತಿದೆ.
ಭದ್ರಾ ಡ್ಯಾಂಗೆ 39017 ಕ್ಯೂಸೆಕ್ಸ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ಜಲಾಶಯದಿಂದ ನೀರು ಹೊರಗಡೆ ಬಿಡಲಾಗುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 180.6 ಅಡಿ ಆಗಿದ್ದು, ಜಲಾಶಯ ಭರ್ತಿಗೆ ಕೇವಲ 5.4 ಅಡಿ ಮಾತ್ರ ಬೇಕು. ಜಲಾಶಯಕ್ಕೆ ಸುಮಾರು 39 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಬರುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಷ್ಟೇ ನೀರು ಹೊರಗಡೆ ಬಿಡಲಾಗುತ್ತಿದೆ.
ಜಲಾಶಯದ ಇಂದಿನ ನೀರಿನ ಮಟ್ಟ 180.6 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 178 ಅಡಿ ಇತ್ತು.
ಭದ್ರಾ ಡ್ಯಾಂ ಭರ್ತಿಗೆ ಕ್ಷಣಗಣನೆ ಶುರುವಾಗಿದೆ. ಡ್ಯಾಂ ಭರ್ತಿಗೆ ಇನ್ನು ಕೇವಲ 5.4 ಅಡಿ ನೀರು ಬೇಕಿದೆ. ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ಅಂತ್ಯದಲ್ಲೇ ಅತಿ ಹೆಚ್ಚು ನೀರು ಹರಿದು ಬಂದಿದೆ.
ಇನ್ನು, ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಈಗಾಗಲೇ ನಾಗರೀಕರಿಗೆ ಸೂಕ್ತ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಕವಲುಗುಂದಿಯಲ್ಲಿ ಸುಮಾರು 15 ಮನೆಗಳಿಗೆ ನೀರು ನುಗಿದ್ದು, ಸ್ಥಳೀಯ ನಿವಾಸಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post