ನವದೆಹಲಿ: ಗಡಿಯಲ್ಲಿ ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಿದ್ದವಿದೆ ಎಂದು ಜಮ್ಮು ಪ್ರಾಂತ್ಯದ ಬಿಎಸ್ಎಫ್ ಎಡಿಜಿ ಕಮಲನಾಥ್ ಚೌದರಿ ಹೇಳಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೇ ಪಾಕ್ ಸೇನೆಯ ಗುಂಡಿಗೆ ನಾಲ್ವರು ಯೋಧರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಎಂತಹುದ್ದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ದರಿದ್ದೇವೆ. ಕದನ ವಿರಾಮ ಇರಲಿ ಅಥವಾ ಇಲ್ಲದೆ ಇರಲಿ. ಗಡಿಯಲ್ಲಿ ನಮ್ಮ ಕಣ್ಗಾವಲು ಸದಾ ಇರುತ್ತದೆ. ಗಡಿಯಲ್ಲಿ ಅಗತ್ಯವಿರುವ ಎಲ್ಲ ಸಾಧನಗಳನ್ನು ನಾವು ಬಳಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಕದನ ವಿರಾಮ ಎಂದಿಗೂ ದ್ವಿಪಕ್ಷೀಯ ಒಪ್ಪಂದವೇ ಆಗಿರುತ್ತದೆ. ಈಗಾಗಲೇ ಏರ್ಪಟ್ಟಿರುವ ಕದನ ವಿರಾಮದ ಒಪ್ಪಂದಕ್ಕೆ ನಾವು ಬದ್ದರಾಗಿದ್ದೇವೆ. ಆದರೆ, ಪಾಕಿಸ್ಥಾನ ಮಾತ್ರ ಪದೇ ಪದೇ ಇದನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

















