ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸತತವಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ತಾಲೂಕು ಆಡಳಿತ, ಆರೋಗ್ಯ ಸಿಬ್ಬಂದಿ, ಪೊಲೀಸರು, ಮತ್ತು ಈ ನಿಯಂತ್ರಣದಲ್ಲಿ ತೊಡಗಿಸಿಕೊಂಡ ಎಲ್ಲಾ ವ್ಯಕ್ತಿಗಳು ಅತಿ ಹೆಚ್ಚಿನ ಕೆಲಸದ ಒತ್ತಡದಿಂದ ಸುಸ್ತಾಗಿದ್ದಾರೆ. ಇಲ್ಲಿಯವರೆಗೂ ನಿಯಂತ್ರಣದಲ್ಲಿದ್ದ ರೋಗ ಈಗ ನಿಧಾನವಾಗಿ ಹರಡುವ ಮುನ್ಸೂಚನೆ ನೀಡುತ್ತಿದ್ದು ನಾವೇ ಸ್ವತಃ ಇದನ್ನು ತಡೆಯಬೇಕಾಗಿದೆ.
ಒಮ್ಮೆ ಸೋಂಕು ನಿಯಂತ್ರಣ ತಪ್ಪಿ ಹರಡಲು ಪ್ರಾರಂಭಿಸಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಳ್ಳಿ. ಈ ಮೂಲಕ ಸಿಬ್ಬಂದಿಗಳ ಮೇಲಿನ ಅತಿ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಸೋಂಕು ಹರಡುವುದನ್ನು ತಡೆಯೋಣ.
ಅತಿ ಅವಶ್ಯಕವಿದ್ದಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ನಮ್ಮ ಮನೆಯಿಂದ ಹೊರ ಹೋಗುವ ಅಭ್ಯಾಸ ಮಾಡಿಕೊಳ್ಳಿ. ನಮ್ಮ ಕೇರಿ ನಮ್ಮ ಬೀದಿಗೆ ನಾವೇ ರಕ್ಷಕರಾಗಿ ಕೆಲಸ ಮಾಡೋಣ. ನಮ್ಮ ಬೀದಿ, ಕೇರಿಗಳಲ್ಲಿ ಅನಗತ್ಯವಾಗಿ ತಿರುಗುವವರಿಗೆ ಗದರುವ ಮೂಲಕ ಮನೆಯಲ್ಲಿರುವಂತೆ ಒತ್ತಡ ಹಾಕುವ ಕೆಲಸ ಮಾಡಿ.
ಹುಡುಗರು ಯುವಕರು ಸಣ್ಣ ಸಣ್ಣ ಕೆಲಸಗಳಿಗೆ ಪದೇಪದೇ ಓಡಾಡುವುದನ್ನು ಅದೇ ಬೀದಿಯಲ್ಲಿರುವ ಹಿರಿಯರು ಗಮನಿಸಿ ಅವರಿಗೆ ಬುದ್ಧಿ ಹೇಳಿ ಅವರನ್ನು ನಿಯಂತ್ರಿಸಬೇಕು. ಇದನ್ನು ಮೀರಿ ಹೊರಗೆ ಸುತ್ತಾಡಿದರೆ ಅದನ್ನು ಪಟ್ಟಿ ಮಾಡಿ ಪೊಲೀಸರಿಗೆ ತಿಳಿಸಿ.
ಬೇರೆ ಊರುಗಳಿಂದ ಜನರು ಬಂದು ಸದ್ದಿಲ್ಲದಂತೆ ಮನೆಯೊಳಗೆ ಸೇರಿಕೊಂಡು ಇರುವ ಸಾಧ್ಯತೆ ಹೆಚ್ಚಿದೆ. ಪ್ರತಿ ಬೀದಿಯಲ್ಲೂ ಹೊರಗಿನಿಂದ ಬಂದವರ ಮೇಲೆ ಸೂಕ್ಷ್ಮವಾಗಿ ನಿಗಾ ವಹಿಸಿ ಅವರ ವಿವರಗಳನ್ನು ತಕ್ಷಣ ಪೊಲೀಸರಿಗೆ ತಿಳಿಸಿ.
ಹೋಂ ಕ್ವಾರಂಟೈನ್ ನಲ್ಲಿದ್ದವರು ಮನೆಯಿಂದ ಹೊರಗೆ ಬಂದರೆ ಅಕ್ಕಪಕ್ಕದ ಮನೆಯವರು ಯಾವುದೇ ಮುಲಾಜಿಲ್ಲದೆ ಮನೆಯೊಳಗೆ ಇರುವಂತೆ ತಿಳಿಸಬೇಕು. ಅದನ್ನು ಮೀರಿ ಹೊರಗೆ ಸುತ್ತಾಡಿದರೆ ಅವರ ವಿವರವನ್ನು ಕೊರೋನ ನಿಯಂತ್ರಣ ಪಡೆಗೆ ತಕ್ಷಣ ತಿಳಿಸಿ.
ಎಲ್ಲಾ ವ್ಯವಸ್ಥೆಯನ್ನು ಸರ್ಕಾರವೇ ಮಾಡಿಕೊಡಲು ಸಾಧ್ಯವಿಲ್ಲ. ತಹಸಿಲ್ದಾರರು, ಪೊಲೀಸರು, ವೈದ್ಯರು, ಸರ್ಕಾರಿ ಅಧಿಕಾರಿಗಳು ಎಲ್ಲರೂ ಮನುಷ್ಯರೇ. ಎಲ್ಲವನ್ನೂ ಅವರೇ ಮಾಡಲಿ ಅವರೇ ನಿಭಾಯಿಸಲು ಎಂಬ ಮನೋಭಾವನೆಯನ್ನು ಬಿಟ್ಟು ನಾವು ಅವರ ಕೆಲಸಕ್ಕೆ ಸಹಕರಿಸೋಣ.
ನಮ್ಮ ಮನೆಯ ಜೊತೆಗೆ ನಮ್ಮ ಬೀದಿಯನ್ನು ಸೋಂಕಿನಿಂದ ಮತ್ತು ಸೋಂಕು ಹರಡುವ ಹೊರಗಿನ ವ್ಯಕ್ತಿಗಳಿಂದ ರಕ್ಷಿಸಿ ಕೊಳ್ಳೋಣ.
(ಲೇಖನ: ಸೋನು ಜೈನ್, ಸೊರಬ)
Get in Touch With Us info@kalpa.news Whatsapp: 9481252093
Discussion about this post