ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಾವೂ ಶ್ರೀರಾಮನ ಭಕ್ತರೇ! ಆದರೆ, ಕ್ರೀಡೆಯಲ್ಲಿ ಕ್ರೀಡಾ ಮನೋಭಾವನೆಯಿರಬೇಕೇ ಹೊರತು, ಧಾರ್ಮಿಕತೆಯ ತಳುಕು ಹಾಕುವುದು ಸರಿಯಲ್ಲ. ಇದನ್ನೇ ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಅವರು ಹೇಳಿದ್ದಾರೆ.
‘ಜೈಶ್ರೀರಾಮ್ ಘೋಷಣೆ ಕೂಗುವವರು ಕಿಡಿಗೇಡಿಗಳು’ ಎಂದು ಶಾಸಕರು ವಿಧಾನಸಭೆಯಲ್ಲಿ ಹೇಳಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಸ್ವತಃ ಮಾತನಾಡಿದ ಶಾಸಕರು ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಪಂದ್ಯಾವಳಿಯ ಫೈನಲ್ ದಿನದಂದು ಯಾವುದೇ ಧರ್ಮದ ಹೆಸರನ್ನು ಅಲ್ಲಿ ಹೇಳದಂತೆ ನಾವು ಆರಂಭದಲ್ಲೇ ಮನವಿ ಮಾಡಿದ್ದೆವು. ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಮಾತ್ರ ನೋಡಬೇಕು. ಅಲ್ಲಿ, ಎಲ್ಲ ಧರ್ಮದ ಸ್ಪರ್ಧಿಗಳೂ ಇರುತ್ತಾರೆ. ಹೀಗಾಗಿ, ಕ್ರೀಡಾ ಸ್ಥಳದಲ್ಲಿ ಧರ್ಮದ ಹೆಸರನ್ನು ತರುವುದು ಬೇಡ ಎಂದು ಸೂಚಿಸುವ ಜೊತೆಯಲ್ಲಿ ವಿನಂತಿ ಸಹ ಮಾಡಿದ್ದೆವು. ಆದರೆ, ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾನು, ನಾವೂ ಸಹ ಶ್ರೀರಾಮನ ಭಕ್ತರೇ. ರಾಮ ಎಲ್ಲಿ ಇರಬೇಕೋ ಅಲ್ಲಿಯೇ ಇರಬೇಕು. ಇಲ್ಲಿ ಇಂತಹ ಘೋಷಣೆಗಳು ಬೇಡ ಎಂದು ಹೇಳಿದ್ಧೇನೆಯೋ ಹೊರತು ಬೇರಾವುದೇ ದುರುದ್ದೇಶ ಇರಲಿಲ್ಲ. ನಮಗೆ ಅಲ್ಲಿ ಕ್ರೀಡಾ ಸ್ಪೂರ್ತಿ ಮಾತ್ರವೇ ಆದ್ಯತೆಯಾಗಿತ್ತು ಎಂದಿದ್ದಾರೆ.
ನಾನು ಇದೇ ವಿಚಾರವನ್ನು ವಿಧಾನಸಭೆಯಲ್ಲಿಯೂ ಸಹ ಉಲ್ಲೇಖ ಮಾಡಿದ್ದೇನೆ ಅಷ್ಟೆ. ಆದರೆ, ಕೆಲವರು ನಾನು ಮಾತನಾಡಿದ ಪೂರ್ಣ ಮಾಹಿತಿಯನ್ನು ಹಾಕದೇ ‘ಜೈ ಶ್ರೀರಾಮ್ ಘೋಷಣೆ ಕೂಗಿದವರು ಕಿಡಿಗೇಡಿಗಳು ಎಂದು ಶಾಸಕರು ಹೇಳಿದ್ದಾರೆ’ ಎಂಬುದಷ್ಟನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಬೇಸರದ ಸಂಗತಿ ಎಂದರು.
ನಾನು ನನ್ನ ರಾಜಕೀಯ ಜೀವನದಲ್ಲಿ ಎಲ್ಲ ಜಾತಿ ಹಾಗೂ ಧರ್ಮದವರನ್ನು ಒಂದೇ ರೀತಿಯಲ್ಲಿ ಗೌರವಿಸುತ್ತಾ, ಸಮಾಜ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೀಗಾಗಿಯೇ, ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ.
ಇಂತಹ ಅಪೂರ್ಣ ಪೋಸ್ಟ್’ಗಳಿಂದ ಸಮಾಜದಲ್ಲಿ ಅನಾವಶ್ಯಕ ಗೊಂದಲಗಳು ಸೃಷ್ಠಿಯಾಗುವ ಜೊತೆಯಲ್ಲಿ ವೈಮನಸ್ಯಗಳಿಗೆ ದಾರಿಯಾಗುತ್ತದೆ. ಇಂತಹ ಪೋಸ್ಟ್’ಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸುತ್ತದೆ. ದಯಮಾಡಿ ಯಾರೂ ಸಹ ಇಂತಹ ಪೋಸ್ಟ್’ಗಳನ್ನು ಹಾಕದೇ, ಪೂರ್ಣ ಹಾಗೂ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post