ಈ ಬಾರಿ ಮುಂಗಾರು ಈಗಾಗಲೇ ಆರಂಭವಾಗಿದ್ದು, ವಾತಾವರಣವೂ ಸಹ ಕೊಂಚ ತಂಪನ್ನೆರೆದಿದೆ. ಆದರೆ, ಇನ್ನು ಮುಂದೆ ಆರಂಭವಾಗುವ ಮಳೆಗಾಲ ಸಂತೋಷ ತರುವ ಜೊತೆಯಲ್ಲಿ ಸಮೃದ್ಧಿಯನ್ನೂ ತರುವುದು. ಬೇಸಿಗೆಯ ಸುಡು ಬಿಸಿಲು, ತಡೆಯಲಾಗದ ಬೆವರು, ಎಷ್ಟು ಕುಡಿದರು ತಡೆಯಲಾಗದ ಬಾಯಾರಿಕೆ, ಮೈ ತುಂಬ ತುರಿಕೆ, ಹಲವು ಧಗಧಗ ಚರ್ಮಕಾಯಿಲೆಯ ಯಾತನೆಯಿಂದ ಮುಕ್ತಿ ಎಂದುಕೊಂಡು ನಿಟ್ಟುಸಿರು ಬಿಡುವ ಜನತೆಗೆ ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು ಇನ್ನು ಹಲವು ರೀತಿಯಲ್ಲಿ ಭಾದಿಸುವುದು ಸಹಜ.
ಬೇಸಿಗೆಯ ಬಿಸಿಯ ಬೇಯ್ಗೆ, ಬಿಸಿ ಒಣಹವೆಯ ವಾತಾವರಣದ ಜೊತೆಗೆ, ಬದಲಾದ ತಂಪು ಪಸೆುಂದ ಕೂಡಿದ ವಾತಾವರಣ ಚರ್ಮದಲ್ಲಿ ಪರಿವರ್ತನೆಯನ್ನು ತಂದು ಚರ್ಮದ ಸೋಂಕು ಹಾಗೂ ಹಲವು ಬಗೆಯ ಚರ್ಮಕಾಯಿಲೆಗೆ ಕಾರಣವಾಗುತ್ತದೆ.
ಮಳೆಗಾಲದಲ್ಲಿ ಹಲವು ಬಗೆಯ ಚರ್ಮದ ಸೊಂಕು ಮನುಷ್ಯನನ್ನು ಕಾಡುತ್ತದೆ. ಅದರಲ್ಲು ಫಂಗಸ್ ಸೊಂಕು ಅತಿಹೆಚ್ಚಾಗಿ ಕಾಣ ಸಿಗುತ್ತದೆ. ಅಷ್ಟೆ ಅಲ್ಲದೇ ಪರಜೀಗಳ ಹಾಗೂ ಬಾಕ್ಟೀರಿಯಗಳ ಸೋಂಕು ಸಹ ಕಾಣಬಹುದು.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಚರ್ಮವ್ಯಾಧಿಗಳು:
- ಹುಳಕಜ್ಜಿ ಅಥವಾ ಗಜಕರ್ಣ
- ಒಣಚರ್ಮದ ಉರಿಊತ
- ಇಸುಬು
- ಮೊಡವೆ
- ಸೊರಿಯಾಸಿಸ್
- ಉದರ್ದ
- ಬೆರಳು ಸಂಧಿ ಸೋಂಕು
- ಉಗುರಿನ ಸೋಂಕು
ಹೀಗೆ ಹಲವು ಬಗೆಯ ಚರ್ಮದ ಸಮಸ್ಯೆಗಳು ಸಾಮಾನ್ಯ.
1. ಹುಳಕಡ್ಡಿ ಅಥವಾ ಗಜಕರ್ಣ:
ಇದನ್ನು ರಿಂಗ್’ವರ್ಮ್ ಎಂದು ಕರೆಯುವುದು ಸಹಜ, ಹುಳಕಡ್ಡಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಮಾನ್ಯ ಕಾಯಿಲೆಯಾಗಿದೆ. ಪ್ರಪಂಚದ ಶೇ.20%ರಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಾಣಿಗಳಿಂದಲು ಇದು ಹರಡುವ ಸಾಧ್ಯತೆ ಹೆಚ್ಚು. ತ್ರೆûಕೊಫೈಲಟೊನ್ ಮೈಕ್ರೊಸ್ಪೊರಮ್ ಮತ್ತು ಎಪಿಡರ್ಮೊಪೈಟಾನ್ ಎಂಬ ರೋಗಾಣುಗಳಿಂದ ಹರಡುವ ರೋಗ. ಈ ರೋಗಾಣುಗಳು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಪಸೆಯುಕ್ತ ವಾತಾವರಣದಲ್ಲಿ ಬಹುಬೇಗ ಹರಡುತ್ತದೆ. ಅಲ್ಲದೇ, ಮಕ್ಕಳಲ್ಲಿ ಇದು ಸುಲಭದಲ್ಲಿ ಹಬ್ಬುತ್ತದೆ.
ಲಕ್ಷಣಗಳು: ಕೆಂಪಾದ ತುರಿಕೆಯಿಂದ ಕೂಡಿದ ಹರಡಿದ ವೃತ್ತಾಕಾರದ ಸುತ್ತಳತೆಯನ್ನು ಹೊಂದಿರುವ ಚರ್ಮದ ಸೊಂಕು.
ತೊಡೆ ಸಂಧಿ, ಕಾಲು, ಕೈ, ಸ್ಥನ ಕುತ್ತಿಗೆ ತಲೆ ಹೀಗೆ ಹೆಚ್ಚು ಪಸೆ, ತಂಪಾದ ದೇಹದ ಭಾಗಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಳೆಯದಾದದಂತೆ, ಚರ್ಮವು ದಪ್ಪಗಾಗಿ, ಕಪ್ಪಾಗಿ ಹಾಗೂ ಗಾಯಗಳನ್ನು ಹೊಂದಿರುತ್ತದೆ.
2. ಒಣ ಚರ್ಮದ ಉರಿಊತ:
ಚರ್ಮವು ಪ್ರಕೃತಿಯಲ್ಲಾಗುವ ಬದಲಾವಣೆಗಳಿಂದ ಒಣಗಿದಂತಾಗಿ, ತುರಿಕೆಯಿಂದ ಕೂಡಿರುತ್ತದೆ. ತುರಿಕೆಯು ಎಷ್ಟರ ಮಟ್ಟಿಗೆ ಇರುತ್ತದೆಂದರೆ ತುರಿಸುತ್ತಾ ತುರಿಸುತ್ತಾ ಗಾಯವಾಗುವ ಸಾಧ್ಯತೆಗಳು ಹೆಚ್ಚು. ನಂತರ ಇದರಿಂದ ಇನ್ನಿತರ ಸೋಂಕುಗಳಾಗುವುದು ಸಹಜ.
ಕಾರಣಗಳು: ಅಲರ್ಜಿ, ನೀರಿನ ದೋಷ, ವ್ಯಾಧಿಕ್ಷಮತ್ವದ ಕೊರತೆ, ಸೋಂಕು, ರಕ್ತನಾಳಗಳ ಸಮಸ್ಯೆಗಳಿಂದ ಈ ತೊಂದರೆ ಬಂದೊದಗುತ್ತದೆ.
ಲಕ್ಷಣಗಳು: ಕೆಂಪಾದ, ಒಣಗಿದ ಚರ್ಮ, ಕೆಲವೊಮ್ಮೆ ಊತ, ಗಾಯಾ ಕಾಣಸಿಗುತ್ತದೆ. ತುಂಬಾ ದಿನಗಳ ನಂತರ ಆ ಜಾಗವು ಕಪ್ಪಾಗುವ ಸಾಧ್ಯತೆಗಳು ಹೆಚ್ಚು.. ಕಾರಣಕ್ಕೆ ತಕ್ಕಂತೆ ದೇಹದ ಯಾವ ಭಾಗದಲ್ಲಾದರು ಈ ಸಮಸ್ಯೆ ಕಾಣಸಿಗುತ್ತದೆ.
3. ಇಸುಬು ಅಥವಾ ಹುಳಕಜ್ಜಿ:
ಕಣ್ಣಿಗೆ ಕಾಣದ ಸಣ್ಣ ಹುಳುಗಳಿಂದ ಇಸುಬು ಹರಡುತ್ತದೆ. ಸರ್ಕೊಪ್ಟಸ್ ಸ್ಕೇಬೀಸ್ ಎಂದು ಅದರ ಹೆಸರು. ಈ ರೋಗದ ಮತ್ತೊಂದು ಹೆಸರು ಸ್ಕೇಬೀಸ್ ಎಂದು. ಮಳೆಗಾಲದ ಅನುಕೂಲ ವಾತಾವರಣ ಅವುಗಳು ಹರಡಲು ಸಹಾಯಕವಾಗಿದೆ. ಹತ್ತು ಕೋಟಿಗೂ ಅಧಿಕ ಜನ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಚರ್ಮವನ್ನು ಕೊರೆದು ಒಳಕ್ಕೆ ನುಸುಳುವ ಸಾಮರ್ಥ್ಯವನ್ನು ಈ ರೋಗಾಣುಗಳು ಹೊಂದಿರುತ್ತವೆ. ಚರ್ಮದ ಕೆಳಭಾಗದಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಅಲ್ಲಿ ಮೊಟ್ಟೆಗಳನ್ನು ಇಟ್ಟು ಪೋಷಿಸುತ್ತದೆ. ರಾತ್ರಿಯ ಹೊತ್ತಿನಲ್ಲಿ ಹೆಚ್ಚು ಜಾಗೃತವಾಗಿರುವ ಈ ಹುಳಗಳು ಹಲವಾರು ಚರ್ಮ ಸಮಸ್ಯೆಯನ್ನು ಉಂಟುಮಾಡುತ್ತವೆ.
ಲಕ್ಷಣಗಳು: ತುರಿಕೆ, ಕೆಂಪಾದ ಮೊಡವೆಯ ರೀತಿಯ ಚರ್ಮದ ಆಕಾರ, ಚರ್ಮ ಕಿತ್ತಿದಂತಾಗುವುದು, ಅಲ್ಲಲ್ಲೆ ಚರ್ಮದಲ್ಲಿ ಕೊರೆದಂತೆ ಕಾಣುತ್ತದೆ. ಕೈ, ಕಾಲು, ಗುಪ್ತಾಂಗ, ಮುಖದ ಪ್ರದೇಶ, ಕುತ್ತಿಗೆ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
4. ಸೋರಿಯಾಸಿಸ್:
ಚರ್ಮರೋಗಗಳ ರಾಜ ಎಂದೇ ಪ್ರಖ್ಯಾತಿ ಹೊಂದಿರುವ ವ್ಯಾಧಿಕ್ಷಮತ್ವದ ಕೊರತೆಯಿಂದ ಕಾಣಿಸಿಕೊಳ್ಳುವ ರೋಗ ಸೊರಿಯಾಸಿಸ್. ಜನ್ಮಕ್ಕೆ ಅಂಟಿದ ರೋಗವೇನೊ ಎಂಬಂತೆ ಬಾಧಿಸುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ದೇಹದ ಪ್ರಕೃತಿಯಲ್ಲಾಗುವ ವ್ಯತ್ಯಾಸ ಹಾಗೂ ವಂಶವಾಹಿನಿಯ ದೋಷದಿಂದ ಈ ರೋಗವನ್ನು ತರುತ್ತದೆ. ಮಳೆ ಚಳಿಗಾಲದ ಹವಾಮಾನ, ಮಾನಸಿಕ ಹಿಂಸೆ, ನೋವು ನಿವಾರಕ ಮಾತ್ರೆಗಳು, ಬಿಪಿಗೆಂದು ತೆಗೆದುಕೊಳ್ಳುವ ಕೆಲವು ಮಾತ್ರೆಗಳು ಈ ರೋಗವನ್ನು ಉಲ್ಬಣಗೊಳಿಸುತ್ತದೆ.
ಲಕ್ಷಣಗಳು: ಸಾಮಾನ್ಯವಾಗಿ ಈ ರೊಗವು ಕೈ ಗಂಟಿನ ಹಿಂಬಾಗ, ಮಂಡಿ ಮುಂಭಾಗ, ಹೊಕ್ಕಳ ಸುತ್ತ, ತಲೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಕೆಂಪಾದ, ತುರಿಕೆಯುಕ್ತವಾದ, ಹೊಟ್ಟಿನಂತೆ ಚರ್ಮ ಉದುರುವ ಸಾಮಾನ್ಯ ಲಕ್ಷಣಗಳನ್ನು ಈ ರೋಗವು ಹೊಂದಿದೆ. ರೋಗವು ಹೆಚ್ಚಾದಂತೆ ಗಂಟು ಸಂಧಿ ನೋವುಗಳು ಹೆಚ್ಚಾಗುತ್ತದೆ. ಸೋರಿಯಾಟಿಕ್ ಆರ್ಥರೈಟೀಸ್ ಎಂದು ಇದನ್ನು ಕರೆಯುತ್ತಾರೆ. ಉಗುರಿನಲ್ಲಿ ತೂತ ಬೀಳುವುದನ್ನು ಈ ರೋಗದಲ್ಲಿ ಕಾಣಬಹುದು.
5. ಉದರ್ದ:
ಆಹಾರದ ವ್ಯತ್ಯಾಸ, ಮಳೆ ಚಳಿಯ ಹವಾ ಗುಣ ದೇಹದಲ್ಲಿ ಕೆಲವೊಂದು ವ್ಯತ್ಯಾಸವನ್ನು ತರುತ್ತದೆ. ಅಂತಹ ವ್ಯತ್ಯಾಸದವು ಚರ್ಮದಲ್ಲಾಗುವ ಉದರ್ದ ಕಾಯಿಲೆಯು ಒಂದು. ಪ್ರಪಂಚದಲ್ಲಿ 20 ಪ್ರತಿಷತದಷ್ಟು ಜನ ಇದರಿಂದ ಬಳಲುತ್ತಿದ್ದಾರೆ.
ಲಕ್ಷಣಗಳು: ಇರುವೆ ಕಡಿದಂತೆ ದೇಹದ ಭಾಗಗಳಲ್ಲಿ ಚರ್ಮವು ತಕ್ಷಣಕ್ಕೆ ಎದ್ದು ನಿಲ್ಲುತ್ತದೆ. ತುರಿಕೆ, ನೋವು, ಗಾಯ ಆಗುತ್ತದೆ. ಹೆಚ್ಚಾದಂತೆಲ್ಲಾ ಹೊಟ್ಟೆ ನೋವು, ವಾಂತಿ, ಉಸಿರಾಟದ ತೊಂದರೆ ಕಾಣಸಿಗುತ್ತದೆ.
6. ಬೆರಳಿನ ಸೊಂಕು ಅಥವಾ ಕೆಸರು ಹುಣ್ಣು:
ಮಳೆಗಾಲದಲ್ಲಿ ಕೆಸರಿನ ಸಂಪರ್ಕ ಸಾಮಾನ್ಯ, ಎಚ್ಚರ ವಸದೆ, ಶುಚಿತ್ವವನ್ನು ಕಾಪಾಡುವಲ್ಲಿ ವಿಫಲವಾದಾಗ ಬೆರಳಿನ ಸೋಂಕು ಉಂಟಾಗುತ್ತದೆ.
ಸದಾ ನೀರು, ಕೆಸರಿನಲ್ಲಿ ಕೆಲಸ ಮಾಡುವವರು, ಆಟಗಾರರು, ಕೂಲಿ ಕಾರ್ಮಿಕರು, ರೈತರು ಈ ರೋಗಕ್ಕೆ ಸುಲಭದಲ್ಲಿ ತುತ್ತಾಗುತ್ತಾರೆ.
ಲಕ್ಷಣಗಳು: ಬೆರಳು ಸಂಧಿಗಳ ಚರ್ಮ ಒಡೆದಂತಾಗುವುದು, ತೇವವಾದ ನೋವಿನಿಂದ ಕೂಡಿದ ಬೆರಳು ಸಂಧಿ, ಬಿಳಿಯಾದ ಸುಕ್ಕುಕಟ್ಟಿ ಪೊಟತೆಯಂತಾಗುವ ಬೆರಳು ಸಂಧಿಗಳಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತದೆ. ಬಾಕ್ಟೀರಿಯಾ, ಫಂಗಸ್ಗಳಿಂದ ಇದು ಉಂಟಾಗುತ್ತದೆ. ಸಕ್ಕರೆ ಕಾಯಿಲೆ, ವಯಸ್ಸಾದವರು, ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವವರು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ.
7. ಉಗುರಿನ ಸೋಂಕು
ನೀರಿನಲ್ಲಿ ಹೆಚ್ಚುಕಾಲ ಕಳೆಯುವುದರಿಂದ, ಬಹಳ ಕಾಲ ಹಸಿಯಾದ ಕೈ, ಕಾಲು ಚೀಲಗಳನ್ನು ಬಳಸುವುದರಿಂದ, ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಈ ರೋಗವು ಉಂಟಾಗುತ್ತದೆ. ವಯಸ್ಸಾದ ಹಾಗೂ ಸಣ್ಣಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಫಂಗಸ್ ಹಾಗೂ ಬಾಕ್ಟೀರಿಯಾಗಳು ಈ ರೋಗಕ್ಕೆ ಮುಖ್ಯಕಾರಣ.
ಲಕ್ಷಣಗಳು: ಉಗುರು ಊದಿದಂತಾಗುವುದು, ಉಗುರು ಒಣಗಿದ, ತುಂಡಾದಂತೆ, ದಪ್ಪಗಾದಂತೆ ಕಾಣುತ್ತದೆ. ಹಳದಿಯ ಬಣ್ಣವು ಉಗುರಿನ ತುದಿಯಲ್ಲಿ ಕಂಡುಬರುತ್ತದೆ. ಉಗುರು ಉದುರುವುದು, ನೋವು, ಕೆಟ್ಟವಾಸನೆ ಮುಂತಾದ ಲಕ್ಷಣಗಳು ಕಂಡುಬರುತ್ತದೆ.
ಮುನ್ನೆಚ್ಚರಿಕೆಗಳು:
- ಸಾಕುಪ್ರಾಣಿಗಳನ್ನು ಮಕ್ಕಳಿಂದ ದೂರವಿಡಿ ಹಾಗೂ ಅವುಗಳನ್ನು ಮುಟ್ಟಿದ ನಂತರ ಶುಚಿತ್ವವನ್ನು ಕಾಪಾಡಿ
- ಮಳೆಯಲ್ಲಿ ನೆನೆದ ತತಕ್ಷಣ ಬಟ್ಟೆಗಳನ್ನು ಬದಲಾಯಿಸುವುದು ಹಾಗೂ ಶುಚಿತ್ವವನ್ನು ಕಾಪಾಡುವುದು, ಪಸೆ ನಿಲ್ಲದ ಹಾಗೆ ನೋಡಿಕೊಳ್ಳಿ
- ಕೆಸರಿನಿಂದ ಕೊಳೆಯಾದ ತತಕ್ಷಣ ಶುದ್ಧ ನೀರಿನಿಂದ ತೊಳೆಯಿರಿ
- ಮಕ್ಕಳನ್ನು ಮಣ್ಣಿನಲ್ಲಿ ಬಹುಕಾಲ ಆಡದಂತೆ ಮುನ್ನೆಚ್ಚರಿಕೆ ವಹಿಸಿ.
- ರೋಗಲಕ್ಷಣಗಳು ಕಂಡ ತತಕ್ಷಣ ವೈದ್ಯರ ಸಲಹೆ ಪಡೆಯಿರಿ
- ನೀರಿನಲ್ಲಿ ಹೆಚ್ಚುಕಾಲ ಕಳೆಯುವವರು ರಬ್ಬರ್ ಕೈ ಚೀಲ ಹಾಗೂ ಕಾಲುಚೀಲಗಳನ್ನು ಬಳಸಿರಿ
- ಮನೆಯ ಸುತ್ತಮುತ್ತ ಕೆಸರು ನಿಲ್ಲದಂತೆ ನೋಡಿಕೊಳ್ಳಿ.
- ಚಳಿಗಾಳಿಗೆ ಮೈ ಒಡ್ಡದಿರಿ
- ಬರಿಕಾಲಿನಲ್ಲಿ ಓಡಾಡದಿರಿ
ಆಯುರ್ವೇದದ ಪರಿಹಾರ:
- ಮಳೆಗಾಲ ಎಂದರೆ ವರ್ಷಋತುವೆಂದು ಕರೆಯುತ್ತಾರೆ. ಮಳೆಗಾಲದಲ್ಲಿ ಮಳೆಯ ಪ್ರಭಾವದಿಂದ ವಾತ ದೋಷವು ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದ ತ್ವಚೆಯು ರೂಕ್ಷತೆಯನ್ನು ಹೊಂದುತ್ತದೆ. ರೂಕ್ಷತ್ವಚೆಯ ಕಾರಣ ದೇಹವು ಹಲವು ಸೋಂಕು ಹಾಗೂ ವಾತಜ ಚರ್ಮರೋಗಗಳು ಬರುತ್ತವೆ.
- ಮಳೆಗಾಲದಲ್ಲಿ ಪ್ರತೀ ದಿನವು ಎಣ್ಣೆ ಸ್ನಾನ ಮಾಡುವುದರಿಂದ ತ್ವಚೆಯ ಸ್ನಿಗ್ದತೆ ಸಮತೋಲನಗೊಳ್ಳುತ್ತದೆ.
- ಮಳೆಗಾಲದಲ್ಲಿ ಹಳೆ ಅಕ್ಕಿ, ಹಳೆಯ ದ್ವಿಧಳ ಧಾನ್ಯಗಳನ್ನು ಬಳಸುವುದು ಸೂಕ್ತ. ಇದರಿಂದ ಸೊಂಕು ದೇಹದಲ್ಲಿ ಹರಡದಂತೆ ಕಾಪಾಡುತ್ತದೆ.
- ಮಳೆಗಾಲದಲ್ಲಿ ಜೇನುತುಪ್ಪದ ಬಳಕೆ ಚರ್ಮದ ಉಷ್ಣತ್ವನ್ನು ಹೆಚ್ಚಿಸಿ ಚರ್ಮವನ್ನು ಕಾಂತಿಯುತವಾಗಿಯೂ ಸೋಂಕುರಹಿತವಾಗಿಯೂ ಕಾಪಾಡುತ್ತದೆ.
- ಮಳೆಗಾಲದಲ್ಲಿ ಸುಗಂಧ ದ್ರವ್ಯಗಳಾದ ಚಂದನ, ನಿಗುಂಡಿ, ಎಲ, ಕರ್ಪೂರ ಮುಂತಾದವುಗಳಿಂದ ಮಾಡಿದ ಲೇಪವು ಚರ್ಮ ಕಾಂತಿ, ಹೆಚ್ಚಿಸಿ ಸೋಂಕು, ಪರಜೀವಿಗಳು ಹರಡದಂತೆ ಕಾಪಾಡುತ್ತದೆ.
- ಮಳೆಗಾಲದ ಚರ್ಮರೋಗವನ್ನು ಹೋಗಲಾಡಿಸುವಲ್ಲಿ ಚಂದನ, ಕುಟಜ, ರಾಸ್ನ, ನಿಂಬ, ಅಮೃತ, ಎರಂಡ, ಸಾಲರಿವ, ಮಂಜಿಷ್ಟ, ಉಶಿರ, ನಿಶಾ, ಹರೀತಕಿ, ಬಾಕುಚಿ, ಚರ್ಕಮರ್ದ, ಕರಂಜ, ಆರಗ್ವದ, ಬಲ್ಲಾತಕ, ಗಂಧಕ, ಗೈರಿಕ, ತುತ್ತ, ತಂಕಣ, ಶಂಖ ಹೀಗೆ ಹಲವಾರು ದ್ರವ್ಯಗಳನ್ನು ಬಳಸಲಾಗುತ್ತದೆ.
- ನೀರಿನ ಸದ್ಬಳಕೆ, ಉಟೋಪಚಾರದ ನೀತಿ ಹಾಗೂ ಸಮತೋಲಿತ ನಿದ್ದೆಯು ಚರ್ಮದ ಸೌಂದರ್ಯದ ರಹಸ್ಯ.
ಲೇಖನ: ಡಾ.ಸುದರ್ಶನ್ ಆಚಾರ್,
ಉದ್ಗೀಥ ಆಯುರ್ವೇದ ಕ್ಲಿನಿಕ್
ಭದ್ರಾವತಿ
Discussion about this post