ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈ ಸೃಷ್ಠಿಯಲ್ಲಿ ಮಾನವ ಜನ್ಮವು ಸರ್ವ ಶ್ರೇಷ್ಠವಾದುದೆಂದು ಪರಿಗಣಿಸಲ್ಪಟ್ಟಿದೆ. ಇಂತಹ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಅನೇಕ ಸಂಸ್ಕಾರಗಳನ್ನು ಆಚರಣೆಗೆ ತರಬೇಕಾಗಿದೆ. ಅವುಗಳಲ್ಲಿ ಷೋಡಶ ಸಂಸ್ಕಾರಗಳು ಪ್ರಮುಖವಾದವು. ಅಂತಹ ಷೋಡಶ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವೂ ಸಹ ಒಂದು ಮತ್ತು ಅತಿ ಪ್ರಮುಖವಾದುದು.
ವಿವಾಹವೆಂದರೆ ಅದು ಕೇವಲ ಒಂದು ಸಂಭ್ರಮವಲ್ಲ, ಅದು ಜವಾಬ್ಧಾರಿ. ವಿವಾಹ ಅಥವಾ ಮದುವೆ ಎಂದರೆ ಅದು ಎಲ್ಲಾ ಸ್ತ್ರೀಪುರುಷರ ಜೀವನದಲ್ಲಿ ಮುಖ್ಯವಾದ ಒಂದು ಘಟ್ಟ. ಸಂಸ್ಕೃತದಲ್ಲಿ ‘‘ವಿವಾಹ’’ ವೆಂದರೆ ‘‘ವಿಶೇಷೇಣ ವಹತೀತಿ ವಿವಾಹಃ’’ ಎಂದು ಹೇಳಬಹುದು, ಹೀಗೆಂದರೆ ವಿಶೇಷವಾದ ಭಾರವನ್ನು ಹೊರುವುದು ಎಂದರ್ಥ. ಈ ವಿಶೇಷವಾದ ಭಾರವೆಂದರೆನೆಂದು ಪರ್ಯಾಲೋಚಿಸಿದರೆ ಮದುವೆಯಾದ ಗಂಡಾಗಲಿ ಹೆಣ್ಣಾಗಲಿ ಗೃಹಸ್ಥರಾದೊಡನೆ ಪತಿ-ಪತ್ನಿ, ಸಂಸಾರಗಳ ಗಂಟು ಬೀಳುತ್ತವೆ, ಮಕ್ಕಳಾಗುತ್ತವೆ, ಅವನ್ನು ಮುಂದಕ್ಕೆ ತರುವ ಜವಾಬ್ಧಾರಿ ಜೊತೆಗೆ ಮನೆಗೆ ನಾನಾ ತರದ ಅತಿಥಿಗಳು ಬಂಧುಗಳು ಬರುತ್ತಾರೆ. ಅವರನ್ನು ಸತ್ಕರಿಸುವ ಜವಾಬ್ಧಾರಿ ಹೀಗೆ ಅನೇಕ ವಿಧವಾದ ಜವಾಬ್ಧಾರಿಗಳು ಒದಗುತ್ತವೆ. ಅವೆಲ್ಲವನ್ನೂ ನಿಭಾಯಿಸಬೇಕಾದ್ದರಿಂದ ವಿಶೇಷವಾದ ಭಾರವೆಂದು ಹೇಳುತ್ತಾರೆ.
ಇದನ್ನು ಈ ಕಾಲಮಾನಕ್ಕೆ ತಕ್ಕಂತೆ ಹೇಳುವುದಾದರೆ ಇದು ಗಂಡು-ಹೆಣ್ಣು ಒಟ್ಟಿಗೆ ಬಾಳಲು ಇರುವ ಪರವಾನಿಗೆ ಅಂದರೆ ಲೈಸೆನ್ಸ್ ಎಂದು ಬಹುತೇಕ ಯುವಕ ಯುವತಿಯರು ಭಾವಿಸಿದ್ದಾರೆ. ಈ ಪರವಾನಿಗೆ ಸಮಾಜಕ್ಕೂ ಒಳಿತು ಮತ್ತು ತಮಗೂ ಹಿತ, ಈ ಪರವಾನಿಗೆ ಇಲ್ಲದಿದ್ದರೆ ಇದು ಸ್ತ್ರೀಪುರುಷರ ಸ್ವಚ್ಛಂದತೆಗೆ ಬಿಟ್ಟರೆ ಇದು ಮೃಗರಾಜ್ಯವಾದೀತು! ಆದ್ದರಿಂದ ಸಮಾಜ ಒಪ್ಪುವಂತೆ ಪತಿ-ಪತ್ನಿಯರನ್ನಾಗಿ ಮಾಡುವುದೇ ವಿವಾಹ. ಈ ವಿವಾಹ ಸಂಸ್ಕಾರದ ಮುಖ್ಯ ಉದ್ದೇಶಗಳು ಆತ್ಮೋನ್ನತಿ ಮತ್ತು ಧರ್ಮ ಪ್ರಜಾಸಂಪತ್ತಿ.
ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ ಅವು 1) ಬ್ರಾಹ್ಮವಿವಾಹ 2) ದೈವ 3) ಆರ್ಷ 4) ಪ್ರಜಾಪತ್ಯ 5) ಅಸುರ 6) ಗಾಂಧರ್ವ 7) ರಾಕ್ಷಸ 8) ಪೈಶಾಚ ವಿವಾಹವೆಂಬುದಾಗಿ ವಿಂಗಡಿಸಲಾಗಿದೆ.
1.ಬ್ರಾಹ್ಮ ವಿವಾಹ: ಕನ್ಯೆಯ ತಂದೆಯು ತಾನಾಗಿ ವರನಿಗೆ ಕನ್ಯಾದಾನ ಮಾಡುವುದು.
2.ದೈವ ವಿವಾಹ: ಯಜ್ಞಯಾಗಾದಿಗಳನ್ನು ಮಾಡುವಾಗ, ದೈವಿಕಸಂಬಂಧಿ ಕಾರ್ಯಗಳನ್ನು ಮಾಡುವಾಗ ಕನ್ಯಾದಾನ ಮಾಡುವುದು.
3.ಆರ್ಷ ವಿವಾಹ: ವರನಿಂದ ಒಂದು ಅಥವಾ ಎರಡು ಗೋಮಿಥುನವನ್ನು (ಹಸು ಮತ್ತು ಎತ್ತು) ಪಡೆದು ಕನ್ಯಾದಾನ ಮಾಡುವುದು.
4.ಪ್ರಜಾಪತ್ಯ ವಿವಾಹ: ವಧು-ವರರನ್ನು ಜೊತೆಯಾಗಿ ಬಾಳಿರಿ ಎಂದು ಹೇಳುತ್ತಾ ವರನನು ಪೂಜಿಸಿ ಆಧರಿಸಿ ಕನ್ಯಾದಾನ ಮಾಡುವುದು. ಈಗ ನಾವು ಭಾರತೀಯ ಸಂವಿಧಾನದ ಹಿಂದೂ ವಿವಾಹ ಪದ್ದತಿಯೂ ಇದೆಯಾಗಿದೆ.
5.ಅಸುರ ವಿವಾಹ: ಶಕ್ತ್ಯಾನುಸಾರ ಕನ್ಯೆಯ ಮಾತಾಪಿತೃಗಳಿಗೆ ಹಾಗೂ ಸಂಬಂಧಿಕರಿಗೆ ಮತ್ತು ಕನ್ಯೆಗೂ ಸಹ ಧನವನ್ನು ಕೊಟ್ಟು ಸ್ವಚ್ಛಂದದಿಂದ ಮದುವೆಯಾಗುವುದು.
6.ಗಾಂಧರ್ವ ವಿವಾಹ: ಕನ್ಯೆಯು ಹಾಗೂ ವರನು ತಾವೇ ಪರಸ್ಪರವಾಗಿ ಇಚ್ಛಾಪೂರ್ವಕವಾಗಿ, ಅನ್ಯೋನ್ಯವಾಗಿ ಸಂಗಮಿಸಿ ಮಾಡಿಕೊಳ್ಳುವ ವಿವಾಹ.
7.ರಾಕ್ಷಸ ವಿವಾಹ: ವಿವಾಹಕ್ಕೆ ವಿರೋಧಿಸುವ ಕನ್ಯೆಯ ಸಂಬಂಧಿಗಳನ್ನು ಹಿಂಸಿಸಿ ಅವರ ಮೇಲೆ ದೌರ್ಜನ್ಯ ಮಾಡಿ ಕನ್ಯೆಯನ್ನು ಅಪಹರಿಸಿ ವಿವಾಹವಾಗುವುದು.
8.ಪೈಶಾಚ ವಿವಾಹ: ಕನ್ಯೆಯ ಶೀಲಭಂಗ ಮಾಡಿ ಮದುವೆಯಾಗುವುದು. ಇದು ಪಾಪಕಾರವು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.
ಈ ವಿವಾಹಗಳಲ್ಲಿ ನಾವು ಈಗ ಆಚರಿಸುವ ಪ್ರಜಾಪತ್ಯ ವಿವಾಹದಲ್ಲಿರುವ ಆಚರಣೆಗಳು ಮತ್ತು ಅದರ ಹಿನ್ನಲೆಯ ಬಗ್ಗೆ ಗಮನ ಹರಿಸೋಣ. ಹದಿನಾರು ಬಗೆಯ ವಿಧಿಗಳಿಂದ ವಿವಾಹವನ್ನು ಮಾಡಲಾಗುತ್ತದೆ. ಅವುಗಳೆಂದರೆ
1) ಸಂಕಲ್ಪ – ಗಣಪತಿ ಪೂಜೆ, ಪುಣ್ಯಾಃ, ನಾಂದಿ
2) ವರಪೂಜೆ
3) ನಿಶ್ಚಿತಾರ್ಥ/ವಾಜ್ಞಿಶ್ಚಯ
4) ಮಧುಪರ್ಕ
5) ಗೌರೀಪೂಜೆ
6) ನಿರೀಕ್ಷಣೆ/ಮುಹೂರ್ತ
7) ಕನ್ಯಾದಾನ
8) ಮಾಂಗಲ್ಯ
9) ಅಕ್ಷತಾರೋಪಣ
10) ಲಾಜಾಹೋಮ
11) ಸಪ್ತಪದಿ
12) ಐರಣೀ ದಾನ
13) ಅರುಂದತಿ ದರ್ಶನ
14) ಗೃಹಪ್ರವೇಶ
15) ದೇವತೋತ್ಥಾಪನ
16) ಔಪಾಸನ ಉಪಕ್ರಮ
ಸಂಕಲ್ಪ
ಗಣಪತಿ ಪೂಜೆ, ಪುಣ್ಯಾಃ, ನಾಂದಿ. ಇಲ್ಲಿ ವರನ ತಂದೆ-ತಾಯಿ ಮತ್ತು ಮನೆಯವರು ತಮ್ಮ ಗುರುಹಿರಿಯರಲ್ಲಿ ಹಾಗೂ ದೇವ ವರ್ಗ ಮತ್ತು ಪಿತೃವರ್ಗಗಳಲ್ಲಿ ಸರ್ವವೂ ಮಂಗಳವಾಗಲಿ ಎಂದು ಪ್ರಾರ್ಥಿಸಿ ಎಲ್ಲವೂ ನಿರ್ವಿಘ್ನವಾಗಿ ನೆಡೆಯಲಿ ಎಂದು ಮಹಾಗಣಪತಿಯನ್ನು ಪ್ರಾರ್ಥಿಸುತ್ತಾ ಕರ್ಮ ದೀಕ್ಷೆಯನ್ನು ಸ್ವೀಕರಿಸುವುದೇ ಸಂಕಲ್ಪ.
ಪುಣ್ಯಾಃವೆಂದರೆ ಅಲ್ಲಿ ನೆರೆದಿರುವ ಪುರೋಹಿತವರ್ಗ ಮೂರು ವೇದಗಳ ಮಂಗಳ ಸಂಜ್ಞಕಗಳನ್ನು ಹೇಳಿ ಪುಣ್ಯಾಃ, ಸ್ವಸ್ತಿ, ವೃಧ್ಧಿ, ಶ್ರೀಗಳು ಬಂದು ಒದಗಲಿ ಎಂದು ಆಶೀರ್ವದಿಸುವ ಕ್ರಮ.
ನಾಂದಿ ಎಂದರೆ ನಮ್ಮ ಪೂರ್ವಿಕರ ಸ್ಮರಣಾರ್ಥ ಆಶೀರ್ವಾದ ಅಪೇಕ್ಷೆ ಅದಕ್ಕಾಗಿ ಮಾಡುವ ಪೂಜೆ ಇದರಲ್ಲಿ ಲೌಕಿಕ ಮತ್ತು ಅಲೌಕಿಕ ಪಿತೃಸಂಭಂದಗಳನ್ನು ಆರಾಧಿಸುವುದು.
ವರಪೂಜೆ
ಕನ್ಯಾರ್ಥಿಯಾಗಿ ಬರುವ ವರನನ್ನು ಮತ್ತು ಅವರ ಬಂಧು ಬಳಗವನ್ನು ಆಹ್ವಾನಿಸಿ ವರನಿಗೆ ಉಪಚರಿಸುವ ವಿಧಾನವೇ ವರಪೂಜೆ.
ನಿಶ್ಚಿತಾರ್ಥ/ವಾಜ್ಞಿಶ್ಚಯ
ತ್ರಿಪುರುಷ ನಾಮಗಳನ್ನು(ತಂದೆ, ತಾತ ಮತ್ತು ಮುತ್ತಾತರ ಹೆಸರುಗಳು) ಹೇಳಿ ಇಂತಹ ಹೆಸರಿನ ವಧುವನ್ನು ಇಂತಹ ಹೆಸರಿನ ವರನಿಗೆ ದೇವ-ದ್ವಿಜ ಸನ್ನಿದಾನದಲ್ಲಿ ವಿವಾಹಮಾಡಿಕೊಡುತ್ತೇನೆ ಎಂದು ಕನ್ಯೆಯ ಪಿತೃವು ಹೇಳುವುದೇ ವಾಜ್ಞಿಶ್ಚಯ/ನಿಶ್ಚಿತಾರ್ಥ.
ಮಧುಪರ್ಕ
ಮಧುವೆಂದರೆ ಜೇನುತುಪ್ಪ, ವರನನ್ನು ಆಸನದಲ್ಲಿ ಕೂರಿಸಿ ಅವನ ಕೈಕಾಲು ತೊಳೆದು ಆಚಮನಮಾಡಿಸಿ ಜೇನುತುಪ್ಪವನ್ನು ಕುಡಿಸುವುದೇ ಮಧುಪರ್ಕ.
ಗೌರೀಪೂಜೆ
ಕನ್ಯೆಯು ತನಗೆ ಉತ್ತಮವಾದ ವರಸಿಗಲಿ ಮತ್ತು ದೀರ್ಘಸುಮಂಗಲಿತನವು ಲಭಿಸಲಿ ಎಂದು ಶಚಿದೇವಿಯನ್ನು ಪೂಜೆಸಿ ಸುಮಂಗಲಿಯರಿಗೆ ಬಾಗೀನವನ್ನು ನೀಡುವುದೇ ಗೌರೀಪೂಜೆ.
ನಿರೀಕ್ಷಣೆ/ಮುಹೂರ್ತ
ಶುಭ ಮುಹೂರ್ತದಲ್ಲಿ ಧಾನ್ಯರಾಶಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ವರ ಮತ್ತು ಪಶ್ಚಿಮಾಭಿಮುಖವಾಗಿ ನಿಂತಿರುವ ವಧು ಅಂತರ್ಪಟದಿಂದಾಚೆಗೆ ಮೊದಲ ಬಾರಿ ಪರಸ್ಪರ ಮುಖನೋಡುವುದೇ ನಿರೀಕ್ಷಣೆ. ಈ ಸಂದರ್ಭದಲ್ಲಿ ಜೀರ್ಗೆ, ಮಾಲೆಗಳನ್ನು ಪರಸ್ಪರ ಹಾಕುವುದು ಸಂಪ್ರದಾಯವಾಗಿದೆ.
ಕನ್ಯಾದಾನ
ವರನ ಗೋತ್ರ ಪ್ರವರ ತ್ರಿಪುರುಷರ ನಾಮವನ್ನು ಹೇಳಿ ಚತುರ್ಥ್ಯಂತ್ಯವಾಗಿ ವರನ ಹೆಸರು ಹೇಳಿ ಹಾಗೆಯೆ ಕನ್ಯೆಯ ಹೆಸರನ್ನು ದ್ವಿತಿಯಾಂತ್ಯವಾಗಿ ಹೇಳಿ ನಾರಾಯಣ ಸ್ವರೂಪಿಯಾದ ವರನಿಗೆ ಲಕ್ಷ್ಮೀಸ್ವರೂಪಿಯಾದ ವಧುವನ್ನು ಪ್ರಜೋತ್ಪಾದನೆಗಾಗಿ ಸಮರ್ಪಿಸುತ್ತಿದ್ದೇನೆ ಎಂದು ವಧುವಿನ ತಂದೆ ದಾರೆಯೇರೆಯುವುದೇ ಕನ್ಯಾದಾನ.
ಮಾಂಗಲ್ಯ
ಹರಿದ್ರಾ ಕುಂಕುಮ ಸೌಭಾಗ್ಯಾವತಿಯಾಗಿ ಶೋಭಿತವಾಗಿರುವ ವಧುವಿಗೆ ‘‘ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂಶತಂ॥’’ ಎಂದು ಮೂರು ಬಾರಿ ಉಚ್ಛರಿಸಿ ಕರಿಮಣಿ ಮಂಗಲ ಸೂತ್ರವನ್ನು ವಧುವಿನ ಕಂಠದಲ್ಲಿ ಧಾರಣೆ ಮಾಡುವುದೇ ಮಾಂಗಲ್ಯ.
ಅಕ್ಷತಾರೋಪಣ
ವಧು ವರರು ಆಯುವೃದ್ಧಿಕರವಾದ ಹರಿದ್ರಾಶ್ವೇತಾಕ್ಷತೆಯನ್ನು ಪರಸ್ಪರ ತಲೆಯ ಮೇಲೆ ಹಾಕಿಕೊಳ್ಳುವುದೇ ಅಕ್ಷತಾರೋಪಣ.
ಲಾಜಾಹೋಮ
ವರನು ವಧುವಿನ ತಮ್ಮನಿಂದ ಎರಡು ಮುಷ್ಠಿ ಲಾಜವನ್ನು ಪಡೆದು ಅದಕ್ಕೆ ಆಜ್ಯವನ್ನು ಬೆರೆಸಿ ವಧುವಿನ ಅಂಜಲಿಯನ್ನು ಹಿಡಿದು ಯಜ್ಞಕ್ಕೆ ಸಮರ್ಪಿಸಿ ನಂತರ ವಧು-ವರರು ಪಾಣಿಗ್ರಹಿತರಾಗಿ ಹೋಮದ ಪ್ರದಕ್ಷಿಣೆ ಮಾಡುವುದು ಲಾಜಾಹೋಮ.
ಸಪ್ತಪದಿ
ಅಗ್ನಿಯ ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲ್ಪಟ್ಟ ಧಾನ್ಯದ ರಾಶಿಯ ಮೇಲೆ ವಧುವಿನ ಹೆಜ್ಜೆಯನ್ನು ವರನು ಇರಿಸುತ್ತಾ ಅನ್ನಕ್ಕಾಗಿ, ಬಲಕ್ಕಾಗಿ, ಧನಸಮೃಧ್ಧಿಗಾಗಿ, ಸುಖಕ್ಕಾಗಿ, ಪ್ರಜೆಗಳಿಗಾಗಿ, ಋತುಗಳಿಗಾಗಿ, ಅನುಗಾಲ ಮೈತ್ರಿಗಾಗಿ ಕ್ರಮವಾಗಿ ಧಾನ್ಯದ ಮೇಲೆ ಇಡುವ ಹೆಜ್ಜೆಯೆ ಸಪ್ತಪದಿ. ಭಾರತೀಯ ಸಂವಿಧಾನದಲ್ಲಿ ಹಿಂದೂ ವಿವಾಹ ಪದ್ದತಿಯಲ್ಲಿ ಈ ಸಪ್ತಪದಿ ಪ್ರಮುಖ ಸ್ತಾನ ಪಡೆದಿದೆ.
ಐರಣೀ ದಾನ
ವಧುವಿನ ತಂದೆ-ತಾಯಿ ವರನ ತಂದೆ ತಾಯಿಗೆ ದೀಪಗಳನ್ನು ದಾನಮಾಡಿ, ವಧುವಿನ ತಾಯಿಯು ಬಾಗಿನ ನೀಡಿ ವರನಿಗೆ ಒಪ್ಪಿಸುವುದೇ ಐರಣೀ ದಾನ.
ಅರುಂದತಿ ದರ್ಶನ
ವಿವಾಹ ವ್ರತದಲ್ಲಿರುವ ವಧು-ವರರು ಸಪ್ತಋಷಿ ನಕ್ಷತ್ರ ಪುಂಜ ಮತ್ತು ಅರುಂದತಿ ನಕ್ಷತ್ರ ದರ್ಶನ ನಂತರ ವಿವಾಹ ವ್ರತದಿಂದ ವಿಮುಕ್ತರಾಗುತ್ತಾರೆ.
ಗೃಹಪ್ರವೇಶ
ವಿವಾಹ ನಂತರ ವರನು ವಧುವಿನ ಬೈತಲೆಗೆ ಸಿಂಧೂರವನ್ನು ಹಚ್ಚಬೇಕು, ನಂತರ ಆಕೆ ಸುಮಂಗಲಿ, ಹೀಗೆ ಸುಮಂಗಲಿಯಾದ ವಧುವು ವರನ ಗೃಹವನ್ನು ಧಾನ್ಯತುಂಬಿದ ಸೇರನ್ನು ಒದ್ದು ಈ ಮನೆಯು ಲಕ್ಷ್ಮೀ ನಿವಾಸವಾಗಲಿ ಎಂದು ಪ್ರಾರ್ಥೀಸಿ ಪ್ರವೇಶಿಸುವುದೇ ಗೃಹಪ್ರವೇಶ.
ದೇವತೋತ್ಥಾಪನ
ಗೃಹಪ್ರವೇಶವಾದೊಡನೆ ವಿವಾಹ ಸಂಪನ್ನವಾಗುತ್ತದೆ, ಇದಾದ ನಂತರ ಆಹ್ವಾನಿಸಿದ ದೇವಗಣ ಮತ್ತು ಪಿತೃಗಣವನ್ನು ವಿಸರ್ಜಿಸಿ ಯತಾಸ್ಥಾನಕ್ಕೆ ಮರಳಿಸುವುದೇ ದೇವತೋತ್ಥಾಪನ.
ಔಪಾಸನ ಉಪಕ್ರಮ
ಬ್ರಹ್ಮಚಾರಿಯಾಗಿದ್ದ ವರನು ವಿವಾಹನಂತರ ಗೃಹಸ್ಥನಾಗುತ್ತಾನೆ ತದನಂತರ ಪತಿ ಪತ್ನಿಯರು ಒಟ್ಟಿಗೆ ಮಾಡುವ ಹೋಮವೇ ಔಪಾಸನ.
Get in Touch With Us info@kalpa.news Whatsapp: 9481252093
Discussion about this post