ಈ ಭಾನುವಾರದಂದು ಇಡೀ ಜಾಗತಿಕ ಕ್ರೈಸ್ತ ಸಮುದಾಯ ಈಸ್ಟರ್ ಹಬ್ಬದ ಆಚರಣೆ ಮಾಡುವ ತಯಾರಿಯಲ್ಲಿದೆ. ಇದರ ಕುರಿತ ಒಂದು ಲೇಖನದ ಜೊತೆ ನಿಮ್ಮೆದುರು ಬಂದಿದ್ದೇನೆ.
ಕ್ರೈಸ್ತ ಜನಾಂಗದ ಮೂಲ ಆಧಾರವೇ ಈ ಇಸ್ಟರ್ ಹಬ್ಬ. ಅರ್ಥಾತ್ ಕ್ರೈಸ್ತ ಸಮುದಾಯದ ಪಾಲಿಗೆ ಈಸ್ಟರ್ ಅತೀ ದೊಡ್ಡ ಹಬ್ಬವಾಗಿದೆ. ಈಸ್ಪರ್ ಹಬ್ಬ ಇಲ್ಲದ ಕ್ರೈಸ್ತ ಮತವನ್ನು ಊಹಿಸಲು ಸಹ ಅಸಾಧ್ಯ. ಕ್ರಿಸ್ಮಸ್ ಹಬ್ಬಕ್ಕಿಂತ ಈಸ್ಟರ್ ಹಬ್ಬ ಅತೀ ದೊಡ್ಡ ಹಬ್ಬವಾಗಿದೆ. ಹೀಗಾಗಿ ಇದನ್ನು ಹಬ್ಬಗಳ ಹಬ್ಬ ಎಂದು ಕರೆಯಲಾಗುತ್ತದೆ.
ಈಸ್ಟರ್ ಹಬ್ಬ ಇಂದು ನಿನ್ನೆಯದಲ್ಲ. ಇದರ ಮೂಲ ಇರುವುದು ಇಸ್ರೇಲ್ ಅಥವಾ ಯಹೂದಿ ಸಮುದಾಯದಲ್ಲಿ. ಇದನ್ನು ಈಜಿಫ್ಟ್ ದೇಶದ ಗುಲಾಮಗಿರಿಯಿಂದ ಬಿಡುಗಡೆ ಹೊಂದಿ ಸ್ವಂತ ದೇಶಕ್ಕೆ ಮರಳಿದ ಸಂಭ್ರಮದ ನೆನಪಿಗೆ ಇದನ್ನು ಆಚರಣೆ ಮಾಡಲಾಗುತ್ತಿತ್ತು. ಇಂದಿಗೂ ಯಹೂದಿ ಸಹೋದರ ನಡುವೆ ಈ ಸಂಪ್ರದಾಯ ಇದೆ.
ಪ್ರಭು ಕ್ರಿಸ್ತರು ಮಾನವ ಕುಲದ ಪಾಪದ ಪರಿಹಾರಕ್ಕೆ ತಾವೇ ಮರಣ ಹೊಂದಿ ಮರಳಿ ಜೀವಂತರಾಗಿ ಪಾಪದ ಪ್ರತಿಫಲದಂತಿದ್ದ ಮರಣದ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆ ಮಾಡಿದ ಸಂಭ್ರಮದ ಸಂಕೇತ ಎಂಬಂತೆ ಕ್ರೈಸ್ತ ಸಮುದಾಯದಲ್ಲಿ ಆಚರಣೆ ಮಾಡಲಾಗುತ್ತದೆ.
ಇನ್ನೂ ಇದಕ್ಕೂ ಮುನ್ನ ಕ್ಯಾಥೋಲಿಕ್ ಧರ್ಮ ಸಭೆಯು ನಲವತ್ತು ದಿನಗಳ ಕಾಲ ತಪಸ್ಸು ಕಾಲ ಎಂದು ಆಚರಣೆ ಮಾಡುತ್ತದೆ.(ಯೇಸು ತಮ್ಮ ಪ್ರವಚನ ಮತ್ತು ಭೋಧನೆಗಳನ್ನು ನೀಡುವ ಮುನ್ನ 40 ದಿನಗಳ ಕಾಲ ಅರಣ್ಯದಲ್ಲಿ ಪ್ರಾರ್ಥನೆ ಮಾಡುತ್ತಾ ಉಪವಾಸ ಮಾಡಿದ್ದರು. ಇದರ ಸಂಕೇತವಾಗಿ)
ಈ ದಿನಗಳಲ್ಲಿ ಕ್ಯಾಥೋಲಿಕ್ ಸಭೆಯ ಪ್ರತಿಯೊಬ್ಬರೂ ಕೇವಲ ಸಸ್ಯಾಹಾರ ಸೇವನೆ ಮಾಡಬೇಕು ಪ್ರತೀ ಶುಕ್ರವಾರ ಉಪವಾಸ ಮಾಡಬೇಕು ಎಂಬ ನಿಯಮಗಳು ಇವೆ.(ಈ ನಿಯಮದಿಂದ 18 ವರ್ಷದ ಕೆಳಗೆ ಮತ್ತು 60 ವರ್ಷದ ಮೇಲ್ಪಟ್ಟವರಿಗೆ ದೂರ ಪ್ರಯಾಣಿಸುವರಿಗೆ ಮತ್ತು ರೋಗಿಗಳಿಗೆ ವಿನಾಯಿತಿ ಇದೆ.) ಈ ದಿನಗಳಲ್ಲಿ ಮಹಿಳೆಯರು ಹೂ ಮುಡುಯುವುದಿಲ್ಲ. ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ. ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರಾರ್ಥನೆ ಮತ್ತು ದಾನಧರ್ಮ ಮಾಡುತ್ತಾರೆ. ಪಾಪ ನಿವೇದನೆ ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಂದ ವಿಮುಖರಾಗುತ್ತಾರೆ.ಈ ಮೂಲಕ ತಮ್ಮ ಪಾಪಗಳಿಗೆ ಪಶ್ಚಾತಾಪ ಮಾಡಿ ದೈವಿಕ ಪ್ರೀತಿಯ ಅನುಭವ ಪಡೆಯುತ್ತಾರೆ. ಬೂದಿ ಬುಧವಾರದಿಂದ ಈ ದಿನಗಳು ಆರಂಭಿಸಿ ಪಾಸ್ಖ ಅರ್ಥಾತ್ ಇಸ್ಟರ್ ಹಬ್ಬದೊಂದಿಗೆ ಈ ದಿನಗಳು ಮುಗಿಯುತ್ತವೆ.
ಇನ್ನೂ ಈ 40 ದಿನಗಳಲ್ಲಿ 4 ಪ್ರಮುಖ ದಿನಗಳಿವೆ.
1. ಬೂದಿ ಬುಧವಾರ – ಈ ದಿನದಂದು ಯಾಜಕರು ಪ್ರತಿಯೊಬ್ಬರ ಹಣೆಯ ಮೇಲೆ ಬೂದಿಯಿಂದ ಶಿಲುಬೆಯ ಗುರುತು ಹಾಕುತ್ತಾರೆ.(ಯಹೂದಿ ಸಂಪ್ರದಾಯದಲ್ಲಿ ಮಾಡಿದ ಪಾಪಗಳ ಪಶ್ಚಾತಾಪಕ್ಕೆ ತಲೆಯ ಮೇಲೆ ಬೂದಿ ಹಾಕಿಕೊಂಡು ಗೋಣಿಯ ಬಟ್ಟೆ ಉಡುವ ಪದ್ಧತಿ ಇದೆ) ಈ ಮೂಲಕ ತಪಸ್ಸು ಕಾಲ ಆರಂಭವಾಗುತ್ತದೆ. ಅಂದು ಕ್ಯಾಥೋಲಿಕ್ ಧರ್ಮಸಭೆ ಉಪವಾಸ ಮಾಡಲು ಕರೆ ನೀಡುತ್ತದೆ.
2. ಪವಿತ್ರ ಗುರುವಾರ – ಈ ದಿನ ಯೇಸು ತಮ್ಮ 12 ಶಿಷ್ಯರ ಜೊತೆ ತಮ್ಮ ಅಂತಿಮ ಭೋಜನ ಮಾಡಿದ ದಿನ. ಈ ದಿನದಂದು ಗುರುವಾದ ಯೇಸು ತಮ್ಮ ಶಿಷ್ಯರ ಪಾದಗಳನ್ನು ಸ್ವತಃ ತೊಳೆದು ಈ ಮೂಲಕ ತಾನು ನಿಮ್ಮ ಒಡೆಯನಲ್ಲ, ಸೇವಕನೆಂದೂ ಮತ್ತು ಪರಸ್ಪರ ಸೇವೆ ಮಾಡಿ ಎಂಬ ಸಂದೇಶವಿತ್ತರು. ಈ ಸಂಪ್ರದಾಯ ಇಂದಿಗೂ ಜೀವಂತವಾಗಿದ್ದು ಪವಿತ್ರ ಗುರುವಾರದ ದಿನ ಕ್ಯಾಥೋಲಿಕ್ ಧರ್ಮ ಸಭೆಯ ಯಾಜಕರಾದಿಯಾಗಿ ಪರಮ ಶ್ರೇಷ್ಠ ಗುರುಗಳಾದ ಪೋಪ್’ರು ಸಹ ಸಾಮಾನ್ಯ ಜನರ ಪಾದ ತೊಳೆಯುತ್ತಾರೆ.
ಶಿಷ್ಯರೊಂದಿಗೆ ಊಟ ಮುಗಿಸಿ ಪ್ರಾರ್ಥನೆ ಮಾಡಲು ಹೋದ ಯೇಸುವನ್ನು ಯಹೊದಿಗಳೇ ಬಂಧಿಸುತ್ತಾರೆ. ಇಂದು ಆರಾಧನಾ ವಿಧಿಯನ್ನು ಮಾಡಲಾಗುತ್ತದೆ.
3. ಶುಭ ಶುಕ್ರವಾರ ದಿನದಂದು ಬಂಧನಕ್ಕೊಳಪಟ್ಟ ಯೇಸುವನ್ನು ಶಿಲುಬೇರಿಸಿ ಮರಣದಂಡನೆ ನೀಡುತ್ತಾರೆ. ಈ ಮೂಲಕ ಯೇಸು ಜನರ ಪಾಪದ ಪರಿಹಾಕ್ಕೆ ತಮ್ಮ ಪ್ರಾಣ ನೀಡುತ್ತಾರೆ. ಹೀಗಾಗಿ ಆ ಶುಕ್ರವಾರ ಮಧ್ಯಾಹ್ನದಿಂದ ಮರುದಿನದವರೆಗೆ ಯೇಸುವಿನ ಮೂರ್ತಿಯನ್ನು ಮುಚ್ಚಲಾಗಲಾಗುತ್ತದೆ. ಸಾಯುವ ಸಮಯದಲ್ಲಿ ಸಹ ತಮ್ಮನ್ನು ಸಾಯಿಸುವವರಿಗೆ ಕ್ಷಮಾದಾನ ಕೊಡುವಂತೆ ದೇವಪಿತನಲ್ಲಿ ಕೇಳುತ್ತಾರೆ. ಈ ಮೂಲಕ ಕ್ಷಮೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ. ಯೇಸುವಿನ ಶರೀರವನ್ನ ಶಿಲುಬೆಯಿಂದಿಳಿಸಿ ಸಮೀಪದಲ್ಲಿ ಸಮಾಧಿ ಮಾಡಲಾಗುತ್ತದೆ.
ಯೇಸುವಿನ ಈ ಸಾವಿನ ಕುರಿತು. ಯೇಸು ಹುಟ್ಟುವ 800-900 ವರ್ಷಗಳ ಮುನ್ನವೇ ಅದೆಷ್ಟೋ ಪ್ರವಾದಿಗಳು ಪ್ರವಾದನೆ ಮಾಡಿದ್ದರು.
ಇಲ್ಲಿ ಒಂದು ಮಾತನ್ನು ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇನೆ. ಅದೇನೆಂದರೆ ನಾನು ಶಾಲಾ ಪಠ್ಯದಲ್ಲಿ ಓದಿದ್ದು ಗುಡ್ ಫ್ರೈಡೆ ಕ್ರೈಸ್ತರ ಹಬ್ಬವೆಂದು. ಆದರೆ ಇದು ಶುದ್ಧ ಸುಳ್ಳು. ಏಕೆಂದರೆ ಎಂದಾದರೂ ಮನೆಯ ಯಜಮಾನ ಸತ್ತ ದಿನ ಎಲ್ಲಾಯಾದರೂ ಹಬ್ಬ ಆಚರಿಸುವ ಸಂಪ್ರದಾಯ ಇದೆಯಾ?? ಏಕೆ ಈ ಪ್ರಶ್ನೆ ಎಂದರೆ ಯೇಸು ಕ್ರೈಸ್ತ ಸಮುದಾಯ ಎಂಬ ಮನೆಯ ಯಜಮಾನ. ಹಾಗಿರಲಾಗಿ ಎಲ್ಲಾದರೂ ಅವರ ಮರಣದ ದಿನವನ್ನು ಹಬ್ಬವಾಗಿ ಆಚರಿಸಲು ಸಾಧ್ಯವೇ..? ಉತ್ತರ ನಿಮಗೆ ಬಿಟ್ಟದ್ದು.
ಅಂದು ಸಹ ಕ್ಯಾಥೋಲಿಕ್ ಸಭೆ ಉಪವಾಸ ಮಾಡಲು ಕರೆ ನೀಡುತ್ತದೆ. ಯೇಸುವಿನ ಕಷ್ಟ ನೆನೆಯುವ ಸಲುವಾಗಿ ಶಿಲುಬೆಯ ಹಾದಿಯನ್ನು ಮಾಡಲಾಗುತ್ತದೆ.
4. ಪವಿತ್ರ ಶನಿವಾರ
ಈ ದಿನ ಯೇಸು ತಮ್ಮ ಸಮಾಧಿಯಲ್ಲೇ ವಿಶ್ರಾಂತಿ ಪಡೆದರು. ಹೀಗಾಗಿ ಈ ದಿನದಂದು ಶಾಂತಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಮನೋರಂಜನೆಗೆ ಈ ದಿನ ನಿಷೇಧವಿದೆ. ಈ ಹಿನ್ನೆಲೆಯಲ್ಲಿ ಟಿವಿ ಮತ್ತು ಮೊಬೈಲ್ ಬಳಸಲಾಗುವುದಿಲ್ಲ.
ಈಸ್ಟರ್- ಅಂದು ಯೇಸು ಮರಣದಿಂದ ಪುನರುತ್ಥಾನರಾಗಿ ಈ ಮೂಲಕ ಮರಣದ ಆಳ್ವಿಕೆಗೆ ಅಂತ್ಯ ಹಾಡಿದರು. ಅದಾದ ಬಳಿಕ 40 ದಿನಗಳ ಕಾಲ ತಮ್ಮ ಶಿಷ್ಯರೂ ಸೇರಿದಂತೆ ಬಹಳಷ್ಟು ಜನರಿಗೆ ಕಾಣಿಸಿಕೊಂಡರು. ಬಳಿಕ ಮರಳಿ ದೇವಪಿತನ ಬಳಿಗೆ ಸ್ವರ್ಗಕ್ಕೆ ಹೋದರು.
ಈಸ್ಟರ್ ಹಬ್ಬದ ಪ್ರಯುಕ್ತ ಶನಿವಾರ ಮಧ್ಯರಾತ್ರಿಯ ಸಮಯದಲ್ಲಿ ವಿಶೇಷ ಮತ್ತು ಸುದೀರ್ಘ ಪ್ರಾರ್ಥನೆ ನಡೆಸಲಾಗುತ್ತದೆ. ಪರಸ್ಪರ ಈಸ್ಟರ್ ಹಬ್ಬದಂದು ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಮನೆಗಳಲ್ಲಿ ಸಹ ಸಂತಸಕೂಟಗಳು ಏರ್ಪಡುತ್ತವೆ.
ಯೇಸು ಭೂಮಿಗೆ ಬಂದದ್ದು ಅಥವಾ ಶಿಲುಬೆಯ ಮರಣವನ್ನು ಹೊಂದಿದ್ದು ಕೇವಲ ಯಹೂದಿಗಳಿಗೋಸ್ಕರ ಅಥವಾ ಕ್ರೈಸ್ತರಿಗೊಸ್ಕರವಲ್ಲ. ಹೊರತು ಇಡೀ ಮನುಕುಲಕ್ಕಾಗಿ.
ಯೇಸು ಬೋಧಿಸಿದ್ದು ಮಾನವೀಯತೆಯತೆ ಮತ್ತು ಕ್ಷಮೆಯನ್ನು ಹೊರತು ಧರ್ಮವನ್ನಲ್ಲ. ಅವರು ಕ್ರೈಸ್ತ ಮತ ಪ್ರಚಾರಕ್ಕಾಗಲಿ ಅಥವಾ ಮತ ಸ್ಥಾಪನೆ ಮಾಡುವ ಸಲುವಾಗಿ ಬಂದವರೂ ಅಲ್ಲ. ಬದಲಾಗಿ ದೇವರ ಇಚ್ಛೆ ಪೂರ್ಣ ಮಾಡಲು ಬಂದವರು.
ಪಾಪರಹಿತ ಜೀವನ ಮತ್ತು ಪಾಪಗಳಿಗೆ ಪಶ್ಚಾತಾಪ ಪಟ್ಟು ಈ ಮೂಲಕ ದೇವರ ಪ್ರೀತಿ ಮತ್ತು ಮರಣದ ಬಂಧನದಿಂದ ನಿತ್ಯ ಜೀವನ ಪಡೆಯಿರಿ ಎಂದು ಸಂದೇಶವಿತ್ತರು. ಹೀಗಾಗಿ ಯೇಸು ಕೇವಲ ಒಂದು ಮತಕ್ಕೆ ಸೇರಿದ ದೇವರು ಎಂಬ ಚೌಕಟ್ಟಿನಲ್ಲಿ ಬಂಧಿಸುವುದು ತಪ್ಪಾಗುತ್ತದೆ.
ಪುನುರುತ್ಥಾನವಾದ ಪ್ರಭು ಯೇಸು ತಮ್ಮೆಲ್ಲರ ಬದುಕನ್ನು ಶಾಂತಿ ಮತ್ತು ಸಮೃದ್ಧಿಯಿಂದ ಜೊತೆಗೆ ತಮ್ಮ ಅಪರಮಿತ ಕೃಪಾವರಗಳಿಂದ ತುಂಬಲಿ ಎನ್ನುವ ಅಶಯದೊಂದಿಗೆ ನನ್ನ ಈ ಲೇಖನಕ್ಕೆ ಪೂರ್ಣ ವಿರಾಮ ಇಡುತ್ತೇನೆ.
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
Discussion about this post