ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಡಿಯ ದೇಶವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಹಾಗೂ ಲಾಕ್ ಡೌನ್’ನಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳ ಮಂದಿ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಿಂದ ಕಲಾವಿದರೂ ಸಹ ಹೊರತಾಗಿಲ್ಲ, ಅದರಲ್ಲೂ ಯಕ್ಷಗಾನ ಕಲಾವಿದರು. ಇಂತಹ ಕರಾವಳಿಯ ಗಂಡು ಕಲೆ ಯಕ್ಷಗಾನ ಕಲಾವಿದರ ಬದುಕು ದಿನದಿಂದ ದಿನಕ್ಕೆ ದುರ್ಬರವಾಗುತ್ತಿದೆ ಎಂಬ ಆತಂಕದ ನಡುವೆಯೇ, ಈ ಪರಿಸ್ಥಿತಿಯನ್ನು ಸಮಾಜ ಹಾಗೂ ಸರ್ಕಾರಕ್ಕೆ ತಿಳಿಸುವ ಕಾರ್ಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕಲ್ಪ ನ್ಯೂಸ್ ಟಿಜಿಟಲ್ ಮೀಡಿಯಾ ಇಂತಹ ಪ್ರಯತ್ನಕ್ಕೆ ಕೈಹಾಕಿದ್ದು, ಪ್ರತಿ ಭಾನುವಾರ ಹಾಗೂ ಗುರುವಾರ ಒಬ್ಬೊಬ್ಬರ ಯಕ್ಷಗಾನ ಕಲಾವಿದರ ಕುರಿತಾಗಿ ಪರಿಚಯ ಮಾಡಿಕೊಡಲಿದೆ.
ಓಡಿ ಎಂಬ ಬಡ ಭಕ್ತನ ನಿಜ ಭಕ್ತಿಗೆ ಒಲಿದು ಓಡೀಲು ಎಂಬ ಪುಣ್ಯ ಕ್ಷೇತ್ರದಲ್ಲಿ ನೆಲೆನಿಂತ ಮಹಾಲಿಂಗೇಶ್ವರನ ಪುಣ್ಯದ ಸಾನಿಧ್ಯ ಬೆಳ್ತಂಗಡಿಯಲ್ಲಿರುವ ಐತಿಹಾಸಿಕ ತಾಣವೆ ಗುರುವಾಯನಕೆರೆ.
ಈ ಗುರುವಾಯನಕೆರೆಯ ಪರಿಸರದಲ್ಲಿ ಅದೆಷ್ಟೋ ಸಾಧಕರು, ಹೋರಾಟಗಾರರು, ಕಲಾವಿದರು. ಅಂತಹ ಸಾಧಕರ ಸಾಲಿಗೆ ಸೇರುವ ಗುರುವಾಯನಕೆರೆಯ ಅಪ್ಪಟ ಯಕ್ಷಗಾನೀಯ ಪ್ರತಿಭೆ ನಮ್ಮ ಪ್ರಜ್ವಲ್ ಕುಮಾರ್ ಗುರುವಾಯನಕೆರೆಯವರು.
ಬೇಬಿ ಶೆಟ್ಟಿ ಮತ್ತು ಸಂಪಾವತಿ ಎಂಬ ಬಡ ದಂಪತಿಗಳ ಈರ್ವರು ಮಕ್ಕಳಲ್ಲಿ ಕೊನೆಯವರಾಗಿ 1987 ಏಪ್ರಿಲ್ 10 ರಂದು ಗುರುವಾಯನಕೆರೆ ಶಕ್ತಿನಗರ ಎಂಬ ಪುಟ್ಟ ಊರಿನಲ್ಲಿ ಮುಂದೆ ಯಕ್ಷರಂಗದಿ ಸವ್ಯಸಾಚಿ ಕಲಾವಿದನಾಗಿ ಪ್ರಜ್ವಲಿಸುವ ಪ್ರಜ್ವಲ್ ಕುಮಾರ್ ಗುರುವಾಯಕೆರೆ ಯವರ ಜನನ. ತನ್ನ ಬಾಲ್ಯದಲ್ಲೇ ತನ್ನ ದೊಡ್ಡಪ್ಪನಾದ ಯಕ್ಷ ಲೋಕ ಕಂಡ ಅದ್ಭುತ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರ ಬಗೆಯ ಬಗೆಯ ಯಕ್ಷ ವೇಷಗಳನ್ನು ಕಂಡು ಪ್ರಭಾವಿತರಾಗಿ ಯಕ್ಷ ರಂಗದತ್ತ ತಮ್ಮ ಚಿತ್ತವನ್ನು ಹರಿಸಿದರು. ಪರಿಣಾಮವಾಗಿ ಐದನೆ ತರಗತಿಯಲ್ಲಿಯೇ ತನ್ನ ವಿಧ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ತನ್ನ 11ನೆಯ ಎಳವೆಯ ಪ್ರಾಯದಲ್ಲೇ ಧರ್ಮಸ್ಥಳ ಲಲಿತ ಕಲಾ ಕೇಂದ್ರ ದಲ್ಲಿ ಸೇರಿ ಗುರುಗಳಾದ ತಾರನಾಥ ಬಲ್ಯಾಯ ಹಾಗೂ ದಿವಾಣ ಶಿವಶಂಕರ ಭಟ್ ಇವರಿಂದ ಯಕ್ಷಾಭ್ಯಾಸವನ್ನು ಆರಂಬಿಸಿ ತನ್ನ ಕನಸಿನ ಯಕ್ಷ ಚಿಗುರಿಗೆ ಅವಿರತ ಪ್ರಯತ್ನ ಎಂಬ ನೀರೆರೆದು ತನ್ನ ಪ್ರತಿಭೆಯನ್ನು ಹೆಮ್ಮರವಾಗಿ ಬೆಳೆಸಿದವರು ಪ್ರಜ್ವಲಣ್ಣ.
ನಂತರ ಎರಡು ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಮೇಳದಲ್ಲಿ ನಿತ್ಯವೇಷ, ಹೊಗಳಿಕೆ ಮಾಡುವುದರ ಮೂಲಕ ತನ್ನ ಯಕ್ಷ ಕಲಾಜೀವನವನ್ನು ಆರಂಭಿಸಿ.
ನಂತರ ದಿನಗಳಲ್ಲಿ ಕಟೀಲು ಮೇಳದಲ್ಲಿ 1 ವರ್ಷ, ಕುಂಟಾರ್ ಮೇಳ 2 ವರ್ಷ, ಎಡನೀರು ಮೇಳ 2 ವರ್ಷ, ಹೊಸನಗರ ಮೇಳದಲ್ಲಿ 10 ವರ್ಷದ ಯಕ್ಷ ತಿರುಗಾಟದ ಕಲಾ ಪಯಣದಲ್ಲಿ ಬಣ್ಣದ ವೇಷ, ಸ್ತ್ರೀ ವೇಷ, ಪುಂಡು ವೇಷ, ಕಿರೀಟ ವೇಷ ಅಲ್ಲದೆ ಹಾಸ್ಯ ಪಾತ್ರಗಳನ್ನೂ ಮಾಡಿ ಸೈ ಎನಿಸಿ, ಕಲಾಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯನ್ನೂ ಪಡೆದು ತಾನೋರ್ವ ಯಕ್ಷ ರಂಗದ ಸವ್ಯಸಾಚಿ ಕಲಾವಿದ ಎಂಬುದಾಗಿ ತನ್ನ ಪ್ರತಿಭೆಯ ಮೂಲಕ ತೋರಿಸಿ ಕೊಟ್ಟವರಿದ್ದಾರೆ.
ಪ್ರಸ್ತುತ ಕಳೆದ ನಾಲ್ಕು ವರ್ಷದಿಂದ ಹನುಮಗಿರಿ ಮೇಳದಲ್ಲಿ ತಾನೋರ್ವ ಸರ್ವಾಂಗೀಣ ಕಲಾವಿದರಾಗಿ ಮೇಳದಲ್ಲಿ ತನ್ನ ಅಗತ್ಯತೆಯನ್ನು ತನ್ನ ವಿಭಿನ್ನ ಪಾತ್ರ ನಿರ್ವಹಣೆಯೊಂದಿಗೆ ತೋರಿಸಿ ಕೊಟ್ಟಿದ್ದಾರೆ.
ರಾವಣ, ಇಂದ್ರಜೀತು, ವಿದ್ಯುನ್ಮಾಲಿ, ಕೌರವ, ದುಶ್ಯಾಸನ ಹಾಗೂ ಹಲವು ಹಾಸ್ಯ ಪಾತ್ರಗಳೂ ಇವರಿಗೆ ಉತ್ತಮ ಹೆಸರನ್ನೂ, ಪ್ರಸಿದ್ದಿಯನ್ನು ಹಾಗೂ ಅಪಾರ ಅಭಿಮಾನಿಗಳನ್ನು ಒದಗಿಸಿ ಕೊಟ್ಟಿದೆ.
ಕೇವಲ ಯಕ್ಷಗಾನ ಕಲಾವಿದನಲ್ಲದೆ ತನ್ನ ಮಾತಿನ ವೈಖರಿ ಹಾಗೂ ಪ್ರಸಂಗ ಜ್ಞಾನದಿಂದ ತಾಳಮದ್ದಲೆ ಕ್ಷೇತ್ರದಲ್ಲೂ ಸೈ ಎನಿಸಿಕೊಂಡವರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ.
ನಮ್ಮ ಜೀವನದ ಅನುಭವ ನಮ್ಮ ಬದುಕಿಗೆ ಪಾಠ ಎಂಬಂತೆ ತನ್ನ ಕಲಾ ಜೀವನದ ಪಯಣದಲ್ಲಿ ದುಶ್ಚಟಕ್ಕೆ ಬಲಿಯಾಗಿ ಜೀವನ್ಮರಣದ ದುಸ್ಥಿತಿಗೆ ತಲುಪಿದರೂ ಅಪಾರ ಕಲಾವಿದರ ಶುಭ ಹಾರೈಕೆಯಿಂದ, ಆಶೀರ್ವಾದದಿಂದ ಆರೋಗ್ಯವಂತರಾಗಿ ಹೊರಬಂದು ಎಲ್ಲ ದುಶ್ಚಟವನ್ನು ತ್ಯಜಿಸಿ ಸಂಪೂರ್ಣವಾಗಿ ಉತ್ತಮ ಶಿಸ್ತಿನ ಜೀವನವನ್ನು ನಡೆಸಿ ಅನ್ಯರಿಗೂ ಮಾದರಿಯಾಗಿ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬಂದು ತನ್ನ ಕಲಾ ಜೀವನವನ್ನು ಮುಂದುವರಿಸಿಕೊಂಡು ಬಂದರು.
ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿಯ ಹಲವು ನಗರಗಳಲ್ಲಿ ಅಲ್ಲದೆ ಕುವೈಥ್, ಬೆಹರಿನ್, ಒಮನ್ ನಂತಹ ಹೊರದೇಶದಲ್ಲೂ ತನ್ನ ಕಲಾ ಪ್ರದರ್ಶನವನ್ನು ಪ್ರಜ್ವಲ್ ಗುರುವಾಯನಕೆರೆಯವರು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಕಲಾಭಿಮಾನಿ ಬಳಗವನ್ನು ಪಡೆದಿರುತ್ತಾರೆ.
ಇವರ ಈ ಎಲ್ಲಾ ಕಲಾಸಾಧನೆಯನ್ನು ಗುರುತಿಸಿ ಯಕ್ಷ ಮಿತ್ರರು ಕೈಕಂಬ ಸಿದ್ಧಿ ವಿನಾಯಕ ನಾಟ್ಯ ಕೇಂದ್ರ ಸುರತ್ಕಲ್ ಕುವೈಥ್ ಬಂಟರ ಸಂಘ ಬೆಂಗಳೂರು ಕಲಾಭಿಮಾನಿ ಬಳಗಪುತ್ತೂರು ಶ್ರೀಧರ ಭಂಡಾರಿ ಪ್ರತಿಷ್ಠಾನ ಅಲ್ಲದೆ ಇನ್ನೂ ಹತ್ತು ಹಲವು ಸಂಘ ಸಂಸ್ಥೆಗಳು ಸನ್ಮಾನವನ್ನು ಮಾಡಿ ಈ ಯಕ್ಷ ಸವ್ಯಸಾಚಿ ಕಲಾವಿದನನ್ನು ಗೌರವಿಸಿದೆ.
ಇವರ ಸಾಧನೆಯ ಮುಕುಟಕ್ಕೆ ಗರಿಯಿತ್ತಂತೆ ಇತ್ತೀಚೆಗೆ ತುಳುಭವನದಲ್ಲಿ ನಡೆದ ಐದು ದಿವಸದ ಆಟದ ಆಯನ ಯಕ್ಷಗಾನ ಪ್ರದರ್ಶನದಲ್ಲಿ ಇವರ ವೇಶ್ಯೆ, ದುಗ್ಗಣ್ಣ ಕೊಂಡೆ, ಯಮ, ವಾವರ, ಕುಮುದ ಪ್ರಿಯ, ಚಂದಗೋಪದಂತಹ ಐದು ವಿಭಿನ್ನ ಪತ್ರಗಳು ಉತ್ಕೃಷ್ಟ ರೀತಿಯಲ್ಲಿ ಮೂಡಿ ಬಂದು ವೀಕ್ಷಕರಿಂದಲೂ, ಕಲಾಭಿಮಾನಿಗಳಿಂದಲೂ ಅಮೋಘ ಪ್ರಶಂಸೆಯನ್ನು ಪಡೆದು ಇವರ ಈ ಪ್ರತಿಭೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇವರನ್ನು ಸನ್ಮಾನಿಸಿದ್ದು ಇವರನ್ನು ಇನ್ನಷ್ಟು ಜನಪ್ರಿಯ ಕಲಾವಿದನನ್ನಾಗಿ ಮಾಡಿದೆ.
23 ವರ್ಷ ಸಾರ್ಥಕತೆಯ ಯಕ್ಷಗಾನ ತಿರುಗಾಟವನ್ನು ಪೂರೈಸಿ ತನ್ನ ಕಲಾಜೀವನದ ರಜತ ಸಂಭ್ರಮದ ಸನಿಹಕ್ಕೆ ಸಾಗುತ್ತಿರುವ ಪ್ರಜ್ವಲ್ ಗುರುವಾಯನಕೆರೆ ಇವರ ಮುಂದಿನ ಜೀವನವು ಇನ್ನಷ್ಟೂ ಉತ್ತುಂಗಕ್ಕೆ ಏರಸಿ ಕಲಾಭಿಮಾನಿಗಳ ಹೃದಯ ಸಿಂಹಾಸದಲ್ಲಿ ತಮ್ಮ ಪ್ರತಿಭೆಯ ಮೆರಗು ರಾರಾಜಿಸುತ್ತಿರಲಿ ಎಂದು ಹಾರೈಸುತ್ತೇನೆ.
Get In Touch With Us info@kalpa.news Whatsapp: 9481252093
Discussion about this post