ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿತರಿಗೆ ದೈಹಿಕ ಚಿಕಿತ್ಸೆ ಎಷ್ಟು ಮುಖ್ಯವೋ, ಮಾನಸಿಕ ಸ್ಥೈರ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಸುವುದೂ ಸಹ ಅಷ್ಟೇ ಮುಖ್ಯ ಎಂಬುದನ್ನು ಅಕ್ಷರಶಃ ಕಾರ್ಯಗತಗೊಳಿಸುತ್ತಿದೆ ನಗರದ ಪ್ರತಿಷ್ಠಿತ ಮ್ಯಾಕ್ಸ್ ಆಸ್ಪತ್ರೆ.
ಹೌದು… ತೀರ್ಥಹಳ್ಳಿ ರಸ್ತೆಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಜೊತೆಯಲ್ಲೇ ಆತ್ಮಸ್ಥೈರ್ಯವೇ ಸರ್ವಸ್ವ, ಧೈರ್ಯವೇ ಮುಖ್ಯ ಎಂಬುದನ್ನು ತಿಳಿಸಿಕೊಡಲಾಗುತ್ತಿದೆ.
ತಾವು ಕೋವಿಡ್ ಸೋಂಕಿತರು ಎಂದು ತಲೆ ಮೇಲೆ ಕೈ ಹೊತ್ತು ಕುಳಿತವರಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನು ಆಡುವ ಜೊತೆಯಲ್ಲಿ, ಸೋಂಕನ್ನು ಗೆಲ್ಲಲು ಯೋಗಾಸನ, ಪ್ರಾಣಾಯಾಮಗಳು ಎಷ್ಟು ಮುಖ್ಯವಾಗುತ್ತವೆ ಎಂಬುದನ್ನು ತಿಳಿಸಿ, ರೋಗಿಗಳು ಕುಳಿತಲ್ಲಿಯೇ ವಿವಿಧ ಆಸನ ಹಾಗೂ ಸರಿಯಾದ ಉಸಿರಾಟದ ಕ್ರಮಗಳನ್ನು ಅಭ್ಯಾಸ ಮಾಡಿಸಲಾಯಿತು.
ಮ್ಯಾಕ್ಸ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮಗಳು ಹೇಗೆಲ್ಲೇ ದೈಹಿಕ ಆರೋಗ್ಯಕ್ಕೆ ಪರಿಣಾಮಕಾರಿಯಾಗಿ ಸಹಕಾರಿಯಾಗಿವೆ ಎಂಬುದನ್ನು ಯೋಗ ಗುರುಗಳು ಹಾಗೂ ಹಿರಿಯ ಯೋಗಾಭ್ಯಾಸಿಗಳ ಮೂಲಕ ತಿಳಿಸಿಕೊಡಲಾಗಿದೆ. ಈ ವೈದ್ಯರು ಹಾಗೂ ಸಿಬ್ಬಂದಿಗಳು ತಾವು ತಿಳಿದುಕೊಂಡ ಮಾಹಿತಿಗಳನ್ನು ವಾರ್ಡ್’ಗಳಲ್ಲಿ ಸೋಂಕಿತರಿಗೆ ತಿಳಿಸಿ ಹೇಳುವ ಜೊತೆಯಲ್ಲಿ ವಿವಿಧ ದೈಹಿಕ ವ್ಯಾಯಾಮ, ಪ್ರಾಣಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿಸುತ್ತಿದ್ದಾರೆ.
ಪ್ರಾಣಾಯಾಮದ ಮೂಲಕ ಉಸಿರಾಟದ ಮೇಲೆ ಹಿಡಿತ ಸಾಧಿಸಿ, ಆ ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಯೋಗ ಹಾಗೂ ಧ್ಯಾನವನ್ನು ಮಾಡುವುದರಿಂದ ಆತ್ಮಸ್ಥೈರ್ಯ ಜೊತೆಯಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಸಹ ವೃದ್ಧಿಸಿಕೊಳ್ಳಬಹುದು ಎಂಬುದನ್ನು ಸೋಂಕಿತರಿಗೆ ತಿಳಿಸಿಕೊಡಲಾಯಿತು.
ಸ್ಪೂರ್ತಿಯ ಮಾತುಗಳು
ಮನಸ್ಸಿನಲ್ಲಿ ನೊಂದುಕೊಂಡು ಹಾಗೂ ಆತಂಕದಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದುಕೊಳ್ಳದೇ, ಪಿಕ್ನಿಕ್ ಬಂದಿದ್ದೇವೆ ಎಂದು ತಿಳಿದುಕೊಂಡು ಅರಾಮವಾಗಿ ಇರಿ. ಏನು ಆಗುವುದಿಲ್ಲ, ಬಿ ಹ್ಯಾಪಿಯಾಗಿರಿ ಎಂದು ವೈದ್ಯರುಗಳು ಸೋಂಕಿತರಿಗೆ ಸ್ಪೂರ್ತಿಯ ಮಾತುಗಳನ್ನು ಆಡಿದರು.
ಯಾವೆಲ್ಲಾ ಆಸನ, ಧ್ಯಾನದ ಬಗ್ಗೆ ತಿಳಿಸಲಾಯಿತು?
ಮುಖ್ಯವಾಗಿ 5 ಯೋಗ ವ್ಯಾಯಾಮದ ಹಂತಗಳನ್ನು ಪ್ರತಿನಿತ್ಯ ಅಭ್ಯಾಸದಲ್ಲಿರಿಸಿಕೊಳ್ಳುವುದರಿಂದ ಶ್ವಾಸಕೋಶದ ಸದೃಢತೆ ಸುಧಾರಿಸುತ್ತದೆ. ಮತ್ತು ಸರಾಗವಾದ ಉಸಿರಾಟಕ್ಕೆ ಸಹಾಯವಾಗುತ್ತದೆ. ಕೋವಿಡ್ 19 ಕಾಯಿಲೆ ಹೆಚ್ಚು ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿತ ಕಾಯಿಲೆ ಆಗಿರುವುದರಿಂದ ಯೋಗ ಮತ್ತು ಧ್ಯಾನದ ಮೂಲಕವಾಗಿ ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಣ ಮಾಡಬೇಕು ಎಂದು ತಿಳಿಸಲಾಯಿತು.
ಪ್ರಮುಖವಾಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ರಕ್ತದೊತ್ತಡವನ್ನು ನಿಯಂತ್ರಿಸಲು, ನಿದ್ರೆಯ ಕೊರತೆಯನ್ನು ದೂರ ಮಾಡಲು ಸಹಾಯ ಮಾಡುವ ಅನುಲೋಮ-ವಿಲೋಮ ಪ್ರಾಣಾಯಾಮದ ಬಗ್ಗೆ ತಿಳಿಸಿಕೊಡಲಾಯಿತು.
ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು, ಏಕಾಗ್ರತೆ, ಸ್ವಚ್ಛವಾದ ಉಸಿರಾಟದ ಜೊತೆಗೆ ದೇಹ ಸದೃಢವಾಗಿರಲು ಆ ಆಸನ ಮಹತ್ವದ್ದಾಗಿರುವ ವೃಕ್ಷಾಸನದ ಬಗ್ಗೆ ತಿಳಿಸಲಾಯಿತು.
ಶ್ವಾಸಕೋಶಗಳು ಹಿಗ್ಗಿಸುವ ಉಸಿರಾಟ ಸಂಬಂಧಿತ ತೊಂದರೆ ಇರುವವರಿಗೆ ಸಹಾಯಕವಾಗುವ, ಉಸಿರಾಟ ಕ್ರಿಯೆ ಸರಾಗಗೊಳಿಸುವ ಮತ್ತು ಹೃದಯ ಚೈತನ್ಯಗೊಳ್ಳಲು ಸಹಾಯಕವಾಗಿರುವ ಭುಜಂಗಾಸ, ಅಸ್ತಮಾ, ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ, ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಉಸಿರಾಟವನ್ನು ನಿರಾಳವಾಗಿಸುವ, ಹೊಟ್ಟೆ ಮತ್ತು ಗಂಟಲಿನ ಭಾಗವನ್ನು ಹಿಗ್ಗಿಸುವ ಮತ್ಸಾಸನದ ಬಗ್ಗೆ ತಿಳಿಸಲಾಯಿತು.
ಹಾಗೂ ಉಸಿರಾಟ ಕ್ರಿಯೆ ಸರಾಗವಾಗಿ ನಡೆಸಲು ಸಹಕಾರಿಯಾಗುವ, ನಿದ್ರಾಹೀನತೆ ಖಿನ್ನತೆಗೆ ಉತ್ತಮ ಮಾರ್ಗವಾಗಿರುವ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿರುವ ಪಶ್ಚಿಮೋತ್ತಾಸನ ಸೇರಿದಂತೆ ಹಲವು ಸರಳ ಆಸನ, ಉಸಿರಾಟ ಕ್ರಿಯೆಯ ಮೇಲಿನ ಹಿಡಿತ ಸಾಧಿಸುವ ಕುರಿತಾಗಿ ಸೋಂಕಿತರಿಗೆ ತಿಳಿಸಿಕೊಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post